ಕೊರೊನಾ ಸೋಂಕಿತರಿಗಾಗಿ ಬರುತ್ತಿದ್ದ ಆಮ್ಲಜನಕದ ವಾಹನಗಳನ್ನು ರೈತರು ದೆಹಲಿಯ ಗಡಿಗಳಲ್ಲಿ ತಡೆ ಹಿಡಿಯುತ್ತಿದ್ದಾರೆ ಎಂಬ ಬಿಜೆಪಿ ಸಂಸದನ ಆರೋಪಕ್ಕೆ ಬ್ಯಾರಿಕೇಡ್ ಹಾಕಿರುವುದು ಸರ್ಕಾರ, ರೈತರಲ್ಲ ಎನ್ನುವ ಮೂಲಕ ಪ್ರತಿಭಟನಾ ನಿರತ ರೈತರು ತಿರುಗೇಟು ನೀಡಿದ್ದಾರೆ.
ಕೇಂದ್ರದ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರಿಂದ ದೆಹಲಿಗೆ ವೈದ್ಯಕೀಯ ಬಳಕೆಯ ಆಮ್ಲಜನಕದ ಸಾಗಣೆಗೆ ತೊಂದರೆಯಾಗಿದೆ ಎಂದು ಬಿಜೆಪಿ ಸಂಸದ ಪರ್ವೇಶ್ ವರ್ಮಾ ಮಂಗಳವಾರ ಆರೋಪಿಸಿದ್ದರು.
ಸಂಸದ ಪವೇಶ್ ವರ್ಮಾ ಆರೋಪಕ್ಕೆ ಪ್ರತಿಕ್ರಿಯಿಸಿರುವ ರೈತರು, ’ಪ್ರತಿಭಟನೆ ನಡೆಸುತ್ತಿರುವ ರೈತರು ವೈದ್ಯಕೀಯ ಆಮ್ಲಜನಕ ವಾಹಕಗಳನ್ನು ದೆಹಲಿಗೆ ಬಿಡುತ್ತಿಲ್ಲ ಎಂದು ಅಪ್ರಪ್ರಚಾರ ಮಾಡಲಾಗುತ್ತಿದೆ. ನಾವು ಯಾವುದೇ ಅಗತ್ಯ ಸೇವೆಗೆ ಅಡ್ಡಿಪಡಿಸಿಲ್ಲ’ ಎಂದು ರೈತರು ಆರೋಪಗಳನ್ನು ತಿರಸ್ಕರಿಸಿದರು.
ಇದನ್ನೂ ಓದಿ: ರೈತ ಹೋರಾಟ ತೀವ್ರಗೊಳಿಸಲು ನಿರ್ಧಾರ: ಮೇ 10 ರಂದು `ರೈತರ ರಾಷ್ಟ್ರೀಯ ಸಮಾವೇಶ’
Protesting farmers have never halted any emergency commutation since day 1, still false propoganda continues.
It is the ruthless govt. who had put strong barricades & tried everything to harm farmers
Appropriate action must be taken against such elements.#FarmersVsModiVirus— Kisan Ekta Morcha (@Kisanektamorcha) April 21, 2021
ರೈತ ಸಂಘಗಳ ಪ್ರತಿನಿಧಿ ಸಂಸ್ಥೆಯಾದ ಸಂಯುಕ್ತ ಕಿಸಾನ್ ಮೋರ್ಚಾ ಬುಧವಾರ, ತಮ್ಮ ಆಂದೋಲನ ಆರಂಭವಾದಾಗಿನಿಂದ ತುರ್ತು ಸೇವೆಗಳಿಗೆ ಒಂದು ರಸ್ತೆಯನ್ನು ತೆರೆದಿಟ್ಟಿದೆ ಎಂದು ಹೇಳಿದೆ.
“ಒಂದೇ ಒಂದು ಆಂಬ್ಯುಲೆನ್ಸ್ ಅಥವಾ ಅಗತ್ಯ ಸರಕುಗಳ ಸೇವೆಯನ್ನು ನಿಲ್ಲಿಸಲಾಗಿಲ್ಲ. ಸರ್ಕಾರವೇ ಬಲವಾದ ಮತ್ತು ಬಹುಪದರದ ಬ್ಯಾರಿಕೇಡ್ಗಳನ್ನು ರಸ್ತೆಗಳಲ್ಲಿ ಹಾಕಿದೆ, ರೈತರಲ್ಲ. ರೈತರು ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಪ್ರತಿಭಟನೆ ನಡೆಸುತ್ತಿರುವ ಪ್ರತಿಯೊಬ್ಬರು ಮಾನವ ಹಕ್ಕುಗಳನ್ನು ಬೆಂಬಲಿಸುತ್ತಾರೆ” ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.
’ಸರ್ಕಾರವೇ ರಸ್ತೆಗಳನ್ನು ನಿರ್ಬಂಧಿಸಿದ್ದಾರೆ. ಆದರೆ ದೆಹಲಿಗೆ ಆಮ್ಲಜನಕವನ್ನು ಬಿಡುವುದಿಲ್ಲ ಎಂದು ರೈತರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸಂಪೂರ್ಣವಾಗಿ ಸುಳ್ಳು ಸುದ್ದಿ. ನಾವು ಪ್ರತಿಭಟಿಸುತ್ತಿದ್ದೇವೆ ನಿಜ. ಆದರೆ ಅದು ಕೊರೊನಾ ರೋಗಿಗಳು, ಕೊರೊನಾ ವಾರಿಯರ್ಸ್ ಅಥವಾ ಸಾಮಾನ್ಯ ನಾಗರಿಕರ ವಿರುದ್ಧ ಅಲ್ಲ. ಕೃಷಿಯ ಬಗ್ಗೆ ಸರ್ಕಾರದ ತಾರತಮ್ಯ ನೀತಿಯ ವಿರೋಧಿ ಪ್ರತಿಭಟಿಸುತ್ತಿದ್ದೇವೆ” ಎಂದು ರೈತ ಸಂಘಟನೆ ಹೇಳಿದೆ.
ಕಳೆದ ಸೆಪ್ಟೆಂಬರ್ನಲ್ಲಿ ಒಕ್ಕೂಟ ಸರ್ಕಾರ ಜಾರಿ ಮಾಡಿದ ವಿವಾದಿತ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಕೋರಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ ಸೇರಿದಂತೆ ಹಲವಾರು ರಾಜ್ಯಗಳ ಲಕ್ಷಾಂತರ ರೈತರು ಕಳೆದ ನವೆಂಬರ್ನಿಂದ ದೆಹಲಿಯ ವಿವಿಧ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಸೋಂಕಿನಿಂದ ತತ್ತರಿಸಿರುವ ರಾಜ್ಯಗಳಿಗೆ ನೆರವಿನ ಹಸ್ತ ಬೇಕಿದೆ, ಬುರುಡೆ ಮಾತಲ್ಲ: ಪ್ರಧಾನಿಗೆ ಸಿದ್ದರಾಮಯ್ಯ