ಕಂಠಿ ಸಿನಿಮಾದ ಮೂಲಕ ಕನ್ನಡ ಸಿನಿರಂಗದಲ್ಲಿ ಭರವಸೆಯ ನಿರ್ದಶಕ ಎಂದು ಹೆಸರು ಮಾಡಿದ್ದ ನಿರ್ದೇಶಕ ಭರತ್ ನಿಧನರಾಗಿದ್ದಾರೆ. ಅವರು ಕಿಡ್ನಿ ವೈಫಲ್ಯದಿಂದ ಕಳೆದ ಒಂದು ವಾರದಿಂದ ಚಾಮರಾಜನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅದೇ ಸಮಯದಲ್ಲಿ ಕೊರೊನಾ ಸೋಂಕು ಬಾಧಿಸಿದ್ದರಿಂದ ಡಿ.24ರ ರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಶ್ರೀ ಮುರುಳಿ, ನಟಿ ರಮ್ಯಾ ಅಭಿನಯದ ಕಂಠಿ ಎಂಬ ಸೂಪರ್ ಹಿಟ್ ಚಿತ್ರ ನಿರ್ದೇಶಿಸಿ ನಂತರ ಚಿತ್ರರಂಗದಿಂದ ಕೆಲಕಾಲ ಕಣ್ಮರೆಯಾಗಿದ್ದ ಭರತ್, ಹಿರಿಯ ನಟ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ಸಾಹೇಬ (2017) ಚಿತ್ರದ ಮೂಲಕ ಮತ್ತೆ ನಿರ್ದೇಶಕರ ಕ್ಯಾಪ್ ಧರಿಸಿದ್ದರು.
ರಾಮನಗರ ಚಿಕ್ಕಮುಳುವಾಡಿ ಗ್ರಾಮದವರಾಗಿದ್ದ ಭರತ್ ಹಲವು ವರ್ಷಗಳಿಂದ ಬೆಂಗಳೂರಿನ ವಿಜಯನಗರದ ಅತ್ತಿಗುಪ್ಪೆಯಲ್ಲಿ ನೆಲೆಸಿದ್ದರು. ಕೊರೊನಾದಿಂದ ಮೃತರಾದವರ ಅಂತಿಮ ಸಂಸ್ಕಾರ ಮಾಡಲು ನಿಗದಿಪಡಿಸಲಾಗಿರುವ ಕೆಂಗೇರಿಯ ಬಿಜೆಎಸ್ ಆಸ್ಪತ್ರೆಯ ಬಳಿ ನಿರ್ದೇಶಕ ಭರತ್ ಅವರ ಅಂತಿಮ ಸಂಸ್ಕಾರ ನಡೆಯಲಿದೆ.
ನಿರ್ದೇಶಕ ಭರತ್, ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಅವರು ಹೊಸ ಚಿತ್ರವೊಂದರ ತಯಾರಿಯಲ್ಲಿದ್ದರು ಎಂದು ಹೇಳಲಾಗಿದೆ.
ಇದನ್ನೂ ಓದಿ: ಪ್ರಧಾನಿ ವಿರುದ್ಧ ದನಿಯೆತ್ತಿದರೆ ಮೋಹನ್ ಭಾಗವತ್ ಕೂಡಾ ಭಯೋತ್ಪಾದಕರೇ! – ರಾಹುಲ್ ಗಾಂಧಿ