ಇಂದು (ನವೆಂಬರ್ 9) ಕನ್ನಡ ಚಿತ್ರರಂಗದ ಅಪ್ರತಿಮ ಕಲಾವಿದ, ಅದ್ಬುತ ನಿರ್ದೇಶಕ, ನಿರ್ಮಾಪಕ ಶಂಕರ್ ನಾಗ್ ಅವರ ಜನ್ಮದಿನ. ಕನ್ನಡಿಗರ ನೆಚ್ಚಿನ ಆಟೋರಾಜ ನಮ್ಮಿಂದ ಭೌತಿಕವಾಗಿ ದೂರವಾಗಿ 31 ವರ್ಷಗಳು ಕಳೆದಿವೆ. ಆದರೆ, ಅವರ ಸಾಧನೆಯ ಮೂಲಕ ಜನಮಾನಸದಲ್ಲಿ ಮರೆಯದ ಛಾಪು ಮೂಡಿಸಿದ್ದಾರೆ.
ಶಂಕರ್ನಾಗ್ ಬದುಕಿದ್ದು 36 ವರ್ಷ, ಆದರೆ ಅವರ ಸಾಧನೆ ಇಂದಿಗೂ ಅಮರ. 12 ವರ್ಷಗಳಲ್ಲಿ ಶಂಕರ್ನಾಗ್, ಬರೋಬ್ಬರಿ 98 ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅವುಗಳಲ್ಲಿ 90 ಸಿನಿಮಾಗಳಲ್ಲಿ ನಟನಾಗಿ ಕಾಣಿಸಿಕೊಂಡಿದ್ದಾರೆ.
ಶಂಕರ್ ನಾಗ್ ನವೆಂಬರ್ 9, 1954ರಲ್ಲಿ ಕರ್ನಾಟಕದ ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿದರು. ಮುಂಬೈನಲ್ಲಿದ್ದ ಶಂಕರ್ನಾಗ್ ತಮಗರಿವಿಲ್ಲದಂತೆ ಮರಾಠಿ ರಂಗಭೂಮಿ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಾ ಮರಾಠಿ ರಂಗಭೂಮಿಯಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದರು. ಭಾರತೀಯ ರಾಷ್ಟ್ರೀಯ ಪ್ರಶಸ್ತಿ ವಿಜೇತ ಮರಾಠಿ ಚಿತ್ರ ‘22 ಜೂನ್ 1897’ ಕ್ಕೆ ಚಿತ್ರಕಥೆ ಬರೆದಿದ್ದರು.
ಇದನ್ನೂ ಓದಿ: ಕನ್ನಡ ಚಿತ್ರರಂಗಕ್ಕೆ ಹೊಸ ಕ್ರಿಯಾಶೀಲತೆ ತಂದುಕೊಟ್ಟ ’ಅಪ್ಪು ಡ್ಯಾನ್ಸ್’
1978 ರಲ್ಲಿ ತೆರೆಕಂಡ ಗಿರೀಶ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಶಂಕರ್ ನಾಗ್, ಹಿಂತಿರುಗಿ ನೋಡಿದ್ದೇ ಇಲ್ಲ. ನಟನಾಗಿ ಪದಾರ್ಪಣೆ ಮಾಡಿದ ಎರಡೇ ವರ್ಷಕ್ಕೆ 1980 ರಲ್ಲಿ ತಮ್ಮ 27ರ ವಯಸ್ಸಿನಲ್ಲಿ ‘ಮಿಂಚಿನ ಓಟ’ ಚಿತ್ರವನ್ನ ನಿರ್ದೇಶಿಸಿ, ನಿರ್ಮಾಣ ಮಾಡುವ ಮೂಲಕ ತಾನೊಬ್ಬ ಒಳ್ಳೆಯ ನಿರ್ದೇಶಕ ಅನ್ನೋದನ್ನ ನಿರೂಪಿಸಿದ್ದರು. ’ಮಿಂಚಿನ ಓಟ ’ದಂಥ ದರೋಡೆಕೋರರ ಸಿನಿಮಾ ನಿರ್ದೇಶಿಸಿ, ಏಳು ರಾಜ್ಯಪ್ರಶಸ್ತಿಗಳನ್ನು ಶಂಕರ್ನಾಗ್ ಬಾಚಿಕೊಂಡರು. ಬರೀ ಕನ್ನಡ ಚಿತ್ರರಂಗವಲ್ಲದೆ, ಮರಾಠಿ, ಹಿಂದಿ ಮತ್ತು ಇಂಗ್ಲಿಷ್ ಚಿತ್ರರಂಗದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.
ಇದನ್ನೂ ಓದಿ: ಪುನೀತ್ ರಾಜಕುಮಾರ್ ನುಡಿನಮನ; ಮುಗ್ಧ ನಗುವೊಂದರ ಕಣ್ಮರೆ
ನಂತರ ಸಂಗೀತ ಮಾಂತ್ರಿಕ ಇಳಯ ರಾಜಾರನ್ನು ಕರೆ ತಂದು ಸಂಗೀತ ಕೊಡಿಸಿದ ‘ಜನ್ಮ ಜನ್ಮದ ಅನುಬಂಧ’, ‘ಗೀತಾ’ದಂಥ ಸಿನಿಮಾಗಳ ಹಾಡುಗಳು ಇಂದಿಗೂ ಜನಪ್ರಿಯ. ಶಂಕರ್ ನಿರ್ದೇಶನಕ್ಕೆ ಮನಸೋತ ರಾಜ್ಕುಮಾರ್ ಕೂಡ ತಮ್ಮ ಇಮೇಜಿನ ಹಂಗು ತೊರೆದು, ‘ಒಂದು ಮುತ್ತಿನ ಕಥೆ’ಯಲ್ಲಿ ಅಭಿನಯಿಸಿದ್ದರು.
ಸೀತಾರಾಮು, ಆಟೋರಾಜ, ಸಾಂಗ್ಲಿಯಾನ, ನೋಡಿ ಸ್ವಾಮಿ ನಾವಿರೋದೇ ಹೀಗೆ, ಆ್ಯಕ್ಸಿಡೆಂಟ್, ಸಿಬಿಐ ಶಂಕರ್, ಮೂಗನ ಸೇಡು, ತರ್ಕ, ಗೀತಾ, ನ್ಯಾಯಾ ಎಲ್ಲಿದೆ ಚಿತ್ರಗಳು ಸೇರಿ 90 ಚಿತ್ರಗಳ ಮೂಲಕ ಜನರ ಮನ ಗೆದ್ದವರು. ತಮ್ಮ ’ಮುನಿಯನ ಮಾದರಿ’ ಚಿತ್ರದ ಮೂಲಕ ರೈತರ, ಹಳ್ಳಿಗರ ಸಮಸ್ಯೆಗಳಿಗೆ ದನಿಯಾದರು.
ಕಿರುತೆರೆಯಲ್ಲಿ ತನ್ನದೆ ಛಾಪು ಮೂಡಿಸಿದ್ದ ‘ಮಾಲ್ಗುಡಿ ಡೇಸ್’ನಂತಹ ಗಟ್ಟಿ ಧಾರಾವಾಹಿಯನ್ನು ನೀಡಿದ ಕೀರ್ತಿ ಶಂಕರ್ ನಾಗ್ ಅವರಿಗೆ ಸಲ್ಲುತ್ತದೆ. 1986ರಲ್ಲಿ ಪ್ರಸಾರವಾದ ಈ ಧಾರವಾಹಿಯ ಕ್ರೇಜ್ ಎಷ್ಟಿತ್ತು ಎಂಬುದಕ್ಕೆ ಉದಾಹರಣೆಯೆಂದರೆ ಕಳೆದ ವರ್ಷ ಝೀ ಕನ್ನಡ ಇದರ ಕನ್ನಡ ಅವತರಣಿಕೆ ಪ್ರಸಾರ ಮಾಡಿತ್ತು.
ನಟ ಶಂಕರ್ ನಾಗ್ ನಮ್ಮನಗಲಿದ್ದು ಸೆಪ್ಟೆಂಬರ್ 30, 1990 ರಂದು. ಅಂದು ಭಾರತೀಯ ಚಿತ್ರರಂಗವೇ ಆಘಾತಕ್ಕೆ ಒಳಗಾದ ದಿನ. ಇಡೀ ಚಿತ್ರರಂಗ ಒಬ್ಬ ಅಪ್ರತಿಮ ಕಲಾವಿದ, ನಟ, ನಿರ್ದೇಶಕ, ನಿರ್ಮಾಪಕ, ರಂಗಭೂಮಿ ಕಲಾವಿದ, ಕರಾಟೆ ಕಿಂಗ್ ಎಂದು ಖ್ಯಾತರಾಗಿದ್ದ ಶಂಕರ್ ನಾಗ್ ಅವರನ್ನು ಕಳೆದುಕೊಂಡಿತ್ತು.
ದಾವಣಗೆರೆ ಬಳಿಯ ಆನಗೋಡಿನ ಬಳಿ ಶಂಕರ್ನಾಗ್ ಕಾರು ಅಪಘಾತದಲ್ಲಿ ನಿಧನರಾದರು. ಜೋಕುಮಾರಸ್ವಾಮಿ ಚಿತ್ರದ ಚಿತ್ರೀಕರಣ ಸಮಯದಲ್ಲಿ ನಡೆದ ಈ ದುರ್ಘಟನೆಯಿಂದ ಇಡೀ ಕರುನಾಡೇ ಆಘಾತಕ್ಕೆ ಒಳಗಾಗಿತ್ತು.
ತಮ್ಮ 12 ವರ್ಷಗಳ ಸಿನಿ ಜೀವನದಲ್ಲಿ ಆಟೋ ಚಾಲಕರ ಹೀರೋ ಆಗಿ, ಯುವ ನಿರ್ದೇಶಕರ ಸ್ಪೂರ್ತಿಯಾಗಿ ಶಂಕರ್ನಾಗ್ ಇಂದಿಗೂ ರಾರಾಜಿಸುತ್ತಿದ್ದಾರೆ. ಇವರ ನೆನಪಲ್ಲಿ ಸ್ಥಾಪಿಸಲಾದ ‘ರಂಗಶಂಕರ’ ನಾಟಕ ರಂಗ, ಅದೆಷ್ಟೋ ಯುವ ಪ್ರತಿಭೆಗಳಿಗೆ ವೇದಿಕೆಯಾಗಿದೆ. ನಟ ಶಂಕರ್ ನಾಗ್ ಪತ್ನಿ ಅರುಂಧತಿ ನಾಗ್ ರಂಗಶಂಕರದ ಹೊಣೆ ಹೊತ್ತಿದ್ದಾರೆ.
ರಂಗಶಂಕರದ ಮೂಲಕ ತಮ್ಮ ರಂಗತಂಡದ ಕನಸು ಕಟ್ಟಿಕೊಂಡ ರಂಗಕರ್ಮಿ ರಾಜ್ಗುರು ನಾನುಗೌರಿ.ಕಾಂ ಜೊತೆ ಶಂಕರ್ ನಾಗ್ ಅವರು ಇವರಲ್ಲಿ ತುಂಬಿದ ಸ್ಪೂರ್ತಿ ಬಗ್ಗೆ ಹಂಚಿಕೊಂಡಿದ್ದು ಹೀಗೆ.
“ಕಾಲೇಜಿನ ದಿನಗಳಲ್ಲಿ ರಂಗಶಂಕರದ ವೇದಿಕೆಯಲ್ಲಿ ನಾನು ಅಭಿನಯಿಸುವಾಗ ಮುಂದಿನ ಸಾಲಿನಲ್ಲಿ ಕೂತಿದ್ದ ಅರುಂಧತಿ ಅಮ್ಮ “ನೀನು ಶಂಕ್ರನ ಥರಾ ಬಿಹೇವ್ ಮಾಡ್ತಿಯಾ ಕಣೋ” ಅಂದಿದ್ರು, ಈಗದು ಅವರಿಗೆ ನೆನಪಿನಲ್ಲಿರುತ್ತದೊ ಇಲ್ಲವೋ ಗೊತ್ತಿಲ್ಲಾ. ಆದರೆ, ಸತತ 15 ವರ್ಷಗಳಿಂದ ಶಂಕ್ರಣ್ಣ ನನ್ನ ಸಾತ್ವಿಕ ಮತ್ತು ರಂಗಪಯಣ ತಂಡಗಳನ್ನು ಹೇಗೆ ಆವರಿಸಿದ್ದಾರೆ ಎಂದರೆ… ಸಾತ್ವಿಕದಲ್ಲಿ “S” ಮೊದಲಕ್ಷರ, ರಂಗಪಯಣದಲ್ಲಿ “NA” ಕೊನೆ ಅಕ್ಷರ ಎರಡು ತಂಡದ ಪ್ರಾರಂಭದಿಂದ ಅಂತ್ಯದವರೆಗೂ ಅವರಿದ್ದಾರೆ”
–ರಾಜ್ಗುರು, ರಂಗಕರ್ಮಿ
“ಅವರ ಎಷ್ಟೋ ಸಮುದ್ರದಷ್ಟು ಕನಸುಗಳನ್ನು ನಾವು ನನಸು ಮಾಡಲಾಗದೆ ಇದ್ದರು ಸಾಸಿವೆಯಷ್ಟಾದರು ನೆರವೇರಿಸುವ ಕಾಯಕದಲ್ಲಿ ನಾವು ತೊಡಗಿದ್ದೇವೆ. ಮತ್ತು ಯಶಸ್ಸು ಕಂಡಿದ್ದೇವೆ. ಆ ಯಶಸ್ಸಿನ ಸಿಂಹಪಾಲು ಶಂಕ್ರಣ್ಣನಿಗೆ. ನಾವು ನಾಮಕಾವಸ್ತೆ ಅಷ್ಟೇ” ಎಂದು ಶಂಕರ್ ನಾಗ್ ಅವರಿಗೆ ನಮನ ಸಲ್ಲಿಸುತ್ತಾರೆ.
ನಮ್ಮ ಮೆಟ್ರೋ ಯೋಜನೆ ಶಂಕರ್ ನಾಗ್ ಅವರ ಕನಸಿನ ಕೂಸಾಗಿತ್ತು. ಒಬ್ಬ ವ್ಯಕ್ತಿ ತಮ್ಮ ಪೂರ್ತಿ ಜೀವನದಲ್ಲಿ ಸಾಧಿಸಲಾಗದ ಅಗಾಧ ಕೆಲಸಗಳನ್ನು ಶಂಕರ್ ನಾಗ್ 36 ವರ್ಷಗಳಲ್ಲಿ ಸಾಧಿಸಿದ್ದಾರೆ.
ಶಂಕರ್ ನಾಗ್ ಅವರ ಜನ್ಮದಿನದ ಹಿನ್ನೆಲೆ ಚಿತ್ರರಂಗದ ಕಲಾವಿದರು, ಅಭಿಮಾನಿಗಳು, ಗಣ್ಯರು ನಟನನ್ನು ನೆನಪಿಸಿಕೊಂಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ’ಇಂದು ಕನ್ನಡ ಚಿತ್ರರಂಗದ ಅಪೂರ್ವ ನಟ, ನಿರ್ದೇಶಕ, ಅಪ್ರತಿಮ ದೂರದೃಷ್ಟಿಯುಳ್ಳ ತಾಂತ್ರಿಕ ನಿಪುಣರಾಗಿದ್ದ ಶಂಕರ್ ನಾಗ್ ಅವರ ಜಯಂತಿ. ಅವರಿಗೆ ನನ್ನ ಶ್ರದ್ಧಾಪೂರ್ವಕ ನಮನಗಳು. ಸಿನಿಮಾ, ರಂಗಭೂಮಿಯಲ್ಲಿ ಬೆರಗು ಮೂಡಿಸುವ ಅನೇಕ ಪ್ರಯೋಗಗಳನ್ನು ನಡೆಸಿದ್ದ ಅವರು ಸದಾ ಚೈತನ್ಯ ಚಿಲುಮೆ ಆಗಿದ್ದರು” ಎಂದು ಟ್ವೀಟ್ ಮಾಡಿದ್ದಾರೆ.
ಇಂದು ಕನ್ನಡ ಚಿತ್ರರಂಗದ ಅಪೂರ್ವ ನಟ, ನಿರ್ದೇಶಕ, ಅಪ್ರತಿಮ ದೂರದೃಷ್ಟಿಯುಳ್ಳ ತಾಂತ್ರಿಕ ನಿಪುಣರಾಗಿದ್ದ ಶಂಕರನಾಗ್ ಅವರ ಜಯಂತಿ. ಅವರಿಗೆ ನನ್ನ ಶ್ರದ್ಧಾಪೂರ್ವಕ ನಮನಗಳು. ಸಿನಿಮಾ, ರಂಗಭೂಮಿಯಲ್ಲಿ ಬೆರಗು ಮೂಡಿಸುವ ಅನೇಕ ಪ್ರಯೋಗಗಳನ್ನು ನಡೆಸಿದ್ದ ಅವರು ಸದಾ ಚೈತನ್ಯ ಚಿಲುಮೆ ಆಗಿದ್ದರು.#ಶಂಕರನಾಗ್ pic.twitter.com/amAboJllvy
— H D Kumaraswamy (@hd_kumaraswamy) November 9, 2021