Homeಕರ್ನಾಟಕಮೇ 23 ಮುಗಿದೋಯ್ತು, ಬಿಜೆಪಿ ಗೆದ್ದಾಯ್ತು: ರಾಜ್ಯ ಸರ್ಕಾರದ ಭವಿಷ್ಯವೇನು?

ಮೇ 23 ಮುಗಿದೋಯ್ತು, ಬಿಜೆಪಿ ಗೆದ್ದಾಯ್ತು: ರಾಜ್ಯ ಸರ್ಕಾರದ ಭವಿಷ್ಯವೇನು?

ಬಿಜೆಪಿ ಪರವಾಗಿ ತುತ್ತೂರಿ ಊದುತ್ತಲೇ ಇರುವ ಮಾಧ್ಯಮಗಳು ಸದಾಕಾಲ ಮೈತ್ರಿ ಸರ್ಕಾರದ ವಿರುದ್ಧ ಅರ್ಧ ಸತ್ಯ ಮತ್ತು ಸುಳ್ಳುಗಳನ್ನು ಹೊಸೆಯುತ್ತಲೇ ಇರುತ್ತವೆ.

- Advertisement -
- Advertisement -

| ನೀಲಗಾರ |

ಮೇ 23ರಂದು ಎಚ್.ಡಿ.ಕುಮಾರಸ್ವಾಮಿಯವರ ಸರ್ಕಾರ ಉರುಳುತ್ತದೆ ಎಂದು ಯಡಿಯೂರಪ್ಪನವರು ಮತ್ತು ಬಿಜೆಪಿಯವರು ಆಗಿಂದಾಗ್ಗೆ ಹೇಳುತ್ತಿದ್ದರು. ಭಿನ್ನಮತೀಯರೆಂದು ಹೇಳಲಾದ ಕೆಲವು ಕಾಂಗ್ರೆಸ್ ಶಾಸಕರು ಲೋಕಸಭಾ ಚುನಾವಣೆಯಲ್ಲೂ ತಟಸ್ಥರಾಗಿದ್ದರು ಅಥವಾ ಸರಿಯಾಗಿ ಪ್ರಚಾರಕ್ಕಿಳಿಯಲಿಲ್ಲ. ಹೀಗಾಗಿ ಚುನಾವಣೆಯ ನಂತರ ಅವರುಗಳ ನಡೆಯೇನಾಗಿರಬಹುದು ಎಂಬ ಸೂಚನೆಯನ್ನು ಕೊಟ್ಟಿದ್ದರು.

ಇದೀಗ ದೇಶದಲ್ಲಿ ಬಿಜೆಪಿ ಹಿಂದಿಗಿಂತ ಹೆಚ್ಚು ಬಲದೊಂದಿಗೆ ಅಧಿಕಾರಕ್ಕೆ ಬಂದಿದೆ ಮತ್ತು ಕರ್ನಾಟಕದಲ್ಲಿ ಬಿಜೆಪಿಗೆ ಭಾರೀ ಗೆಲುವು ಸಿಕ್ಕಿದೆ. ಯಾವ ಪ್ರಮಾಣದ ಗೆಲುವೆಂದರೆ, ಸ್ವತಃ ಬಿಜೆಪಿಯೇ ನಿರೀಕ್ಷೆ ಮಾಡದಿದ್ದ ಗೆಲುವು. ಎಕ್ಸಿಟ್ ಪೋಲ್‍ನಲ್ಲಿ ಈ ಸುಳಿವು ಸಿಕ್ಕ ನಂತರ ಶಿವಾಜಿನಗರದ ಶಾಸಕ ರೋಷನ್‍ಬೇಗ್ ಕಾಂಗ್ರೆಸ್ ನಾಯಕತ್ವದ ವಿರುದ್ಧ ವಾಗ್ದಾಳಿ ನಡೆಸಿದರು.

ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರುಗಳು ಮೈತ್ರಿಧರ್ಮವನ್ನು ಪಾಲಿಸಲಿಲ್ಲ ಎಂಬುದು ಸ್ಪಷ್ಟವಾಗಿತ್ತು. ಅದರ ಪರಿಣಾಮವಾಗಿ ಚುನಾವಣೆಯ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರುಗಳು ಪರಸ್ಪರ ಬೈದಾಡಿಕೊಂಡರು. ಇನ್ನೂ ಸರಿಯಾಗಿ ಹೇಳಬೇಕೆಂದರೆ, ಚುನಾವಣೆ ಆಗುವವರೆಗೂ ಕಾಂಗ್ರೆಸ್‍ನವರು ಜೆಡಿಎಸ್ ಮೇಲೆ ಕಿಡಿಕಾರುತ್ತಿದ್ದರೆ, ಚುನಾವಣೆಯ ನಂತರ ಜೆಡಿಎಸ್‍ನವರು ಕಾಂಗ್ರೆಸ್ ನಾಯಕರ ಅದರಲ್ಲೂ ಸಿದ್ದರಾಮಯ್ಯನವರ ಮೇಲೆ ವಾಗ್ದಾಳಿ ನಡೆಸಿದರು. ಎರಡು ದಿನಗಳ ಕೆಳಗೆ ರಾಹುಲ್‍ಗಾಂಧಿ ಕಾಂಗ್ರೆಸ್ ಧುರೀಣರನ್ನು ಕರೆಸಿಕೊಂಡು ಮೈತ್ರಿ ಮುಂದುವರೆಸಲು ಬೇಕಾದ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದಾರಾದರೂ, ಅದರ ಪರಿಣಾಮ ಎಷ್ಟಿರುತ್ತದೆಂದು ಹೇಳಲಾಗದು.

ಮೈತ್ರಿಯಿಂದ ಯಾವ ಒಳಿತೂ ಆಗಲಿಲ್ಲ ಎಂಬುದನ್ನೂ ಚುನಾವಣಾ ಫಲಿತಾಂಶವು ತೋರಿಸುತ್ತಿದೆ. ವಾಸ್ತವದಲ್ಲಿ ಮೈತ್ರಿಯಿಂದ ಬಿಜೆಪಿಗೆ ಹಲವು ರೀತಿಯ ಲಾಭಗಳಾಗಿವೆ. ನಾವು ಇದನ್ನೇ ಹೇಳುತ್ತಿದ್ದದ್ದು ಎಂದು ಕಾಂಗ್ರೆಸ್‍ನಲ್ಲಿನ ಮೈತ್ರಿ ವಿರೋಧಿಗಳು ಹೇಳುವ ಸಾಧ್ಯತೆಗಳಿವೆ. ಇವೆಲ್ಲಾ ಕಾರಣಗಳಿಂದ ಮುಂದಿನ ಸಾಧ್ಯತೆಗಳೇನಾಗಿರಬಹುದು ಎಂಬುದನ್ನು ವಿಶ್ಲೇಷಿಸುವ ಮುನ್ನ, ಅಂಕಿ-ಸಂಖ್ಯೆಗಳತ್ತ ಒಮ್ಮೆ ನೋಡೋಣ.

225 ಸದಸ್ಯ ಬಲದ ವಿಧಾನಸಭೆಯಲ್ಲಿ ಒಬ್ಬರು ಆಂಗ್ಲೋ ಇಂಡಿಯನ್ ಸದಸ್ಯರನ್ನು ಮೈತ್ರಿ ಪಕ್ಷ ನೇಮಕ ಮಾಡಿಕೊಂಡಿರುತ್ತದೆ. ನಿರ್ಣಾಯಕ ಸಂದರ್ಭದಲ್ಲಿ ಸ್ಪೀಕರ್ ಸರ್ಕಾರದ ಪರವಾಗಿಯೇ ಮತ ಹಾಕುತ್ತಾರೆಂದುಕೊಳ್ಳೋಣ. ಇವೆರಡನ್ನು ಹೊರತುಪಡಿಸಿದರೆ, ಈಗಿನ ಬಲಾಬಲ ಹೀಗಿವೆ. ಬಿಜೆಪಿ 104+ ಚಿಂಚೋಳಿ+ ಇಬ್ಬರು ಪಕ್ಷೇತರರು ಸೇರಿ 107. ಮೈತ್ರಿ ಪಕ್ಷಗಳದ್ದು, ಕಾಂಗ್ರೆಸ್‍ನ 78 + ಕುಂದಗೋಳ+ ಜೆಡಿಎಸ್‍ನ 37 ಸೇರಿದರೆ 116. ಅಂತಹ ಸಂದರ್ಭ ಬಂದರೆ ಬಿಎಸ್‍ಪಿಯ ಎನ್.ಮಹೇಶ್ ಅವರು ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ಭಾವಿಸಿದರೆ ಒಟ್ಟು 117.

ಕಾಂಗ್ರೆಸ್ ಮತ್ತು ಜೆಡಿಎಸ್‍ನ ಒಟ್ಟು 11 ಜನ ಶಾಸಕರನ್ನು ರಾಜೀನಾಮೆ ಕೊಡಿಸಿದರೆ, ಮೈತ್ರಿಯ ಬಲ 106ಕ್ಕೆ ಇಳಿದು ಬಿಜೆಪಿಗೆ ಸರಳ ಬಹುಮತ ಬಂದಂತಾಗುತ್ತದೆ. ಆ 11 ಜನ ಯಾರು ಎಂಬುದೇ ಈಗಿನ ಲೆಕ್ಕಾಚಾರ. ರಮೇಶ್ ಜಾರಕಿಹೊಳಿ, ಕುಮಟಳ್ಳಿ ಮತ್ತು ನಾಗೇಂದ್ರ ಈಗಾಗಲೇ ಆ ಕಡೆಗೆ ಹೋಗಲು ಸಿದ್ಧರಿದ್ದಾರೆಂಬುದು ಸ್ಪಷ್ಟವಾಗಿದೆ. ಬಿಜೆಪಿ ಸರ್ಕಾರದಿಂದ ದಾಳಿಗೊಳಗಾಗುವ ಭೀತಿಯಲ್ಲಿರುವ ಆನಂದ್‍ಸಿಂಗ್, ತೀರ್ಮಾನ ಮಾಡಿಕೊಂಡೇ ಕಾಂಗ್ರೆಸ್ ನಾಯಕರ ವಿರುದ್ಧ ಮಾತಾಡುತ್ತಿರುವ ರೋಷನ್ ಬೇಗ್ ಇಬ್ಬರೂ ಬಿಜೆಪಿ ಪರ ನಿಲ್ಲುವ ಸಾಧ್ಯತೆಯಿದೆ. ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಲೋಕಸಭಾ ಚುನಾವಣೆಯಲ್ಲೂ ಕಡೆಯಲ್ಲಿ ಮೊಯ್ಲಿ ಪರವಾಗಿ ಕೆಲಸ ಮಾಡಲಿಲ್ಲ; ಮತ ಎಣಿಕೆಗೆ ಮುನ್ನ ವೀರಪ್ಪ ಮೊಯ್ಲಿಯವರು ಕರೆದಿದ್ದ ಏಜೆಂಟರ ಸಭೆಗೆ ಸುಧಾಕರ್ ಹಿಂಬಾಲಕರ್ಯಾರೂ ಹೋಗಿರಲಿಲ್ಲ.

ಈ 6 ಜನರ ಹೊತ್ತಿಗೆ, ಸಚಿವ ಸ್ಥಾನ ಸಿಗದೇ ಅಸಮಾಧಾನದಲ್ಲಿರುವ ಬಿ.ಸಿ.ಪಾಟೀಲ್ ಥರದ ಹಲವರು ಹೊಸ್ತಿಲು ದಾಟುವ ಎಲ್ಲಾ ಸಾಧ್ಯತೆ ಇದೆ. ಎಲ್ಲಕ್ಕಿಂತ ಮುಖ್ಯವಾಗಿ, ದೇಶದಲ್ಲಿ ಬಿಜೆಪಿ ಪಡೆದುಕೊಂಡಿರುವ ಗೆಲುವು ಐತಿಹಾಸಿಕ ಗೆಲುವಾಗಿದ್ದು, 1984ರ ಚುನಾವಣೆಯ ನಂತರ ಯಾವುದೇ ಪಕ್ಷ ಸಾಧಿಸಿರುವ ಎರಡನೇ ಸತತ ಗೆಲುವು ಇದಾಗಿದೆ. ಹೀಗಾಗಿ ಇದು ಉಂಟು ಮಾಡುವ ಆತಂಕ ಮತ್ತು ಅನಿಶ್ಚಿತತೆಗಳು ಹಲವರನ್ನು ಬೇಲಿ ದಾಟಿಸುತ್ತವೆ.

11 ಶಾಸಕರ ರಾಜೀನಾಮೆಯ ಅಗತ್ಯವಿರುವುದು, ಈಗಿಂದೀಗಲೇ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಬೇಕಾದರೆ ಮಾತ್ರ. ಇಲ್ಲದಿದ್ದರೆ 6 ಶಾಸಕರು ರಾಜೀನಾಮೆ ಕೊಟ್ಟು, ಆ ಕ್ಷೇತ್ರಗಳಲ್ಲಿ ಚುನಾವಣೆ ನಡೆದು ಎಲ್ಲಾ ಕಡೆ ಬಿಜೆಪಿ ಗೆದ್ದರೂ ಬಹುಮತ ಇಲ್ಲವಾಗುತ್ತದೆ. ರಾಜೀನಾಮೆ ಅಂಗೀಕಾರವಾದ ಕೂಡಲೇ ಚುನಾವಣೆ ಘೋಷಣೆ ಮಾಡಿಸುವುದು ಬಿಜೆಪಿಗೆ ಕಷ್ಟದ ಕೆಲಸವೇನಲ್ಲ. ಹೇಗೂ ಚುನಾವಣಾ ಆಯೋಗವು ಈಗ ಸ್ವತಂತ್ರ ಸಂಸ್ಥೆಯಾಗಿ ಉಳಿದಿಲ್ಲ.

ಶಾಸಕರು ವಲಸೆ ಹೋಗುವುದಾದರೆ ಅದಕ್ಕೆ ಮುಖ್ಯ ಕಾರಣ ಬಿಜೆಪಿಯಲ್ಲ; ಬದಲಿಗೆ ಮೈತ್ರಿ ಸರ್ಕಾರದಲ್ಲಿನ ಅಭದ್ರತೆ. ಹೀಗೇ ಮುಂದುವರೆದರೆ ಮೈತ್ರಿ ಸರ್ಕಾರವು ತನ್ನಂತೆ ತಾನೇ ಬಿದ್ದು ಚುನಾವಣೆ ನಡೆದರೆ ತಾವು ಈಗಿರುವ ಪಕ್ಷದಿಂದ ಗೆಲ್ಲದೇ ಹೋಗಬಹುದು ಎಂಬ ಭಯ ಹಲವರಲ್ಲಿ ಇದೆ. ಅದರ ಬದಲಿಗೆ ಮತ್ತೆ ಸಾರ್ವತ್ರಿಕ ಚುನಾವಣೆ ನಡೆಯದೇ, ಈಗಲೇ ಪಕ್ಷಾಂತರ ಮಾಡಿ ಬಿಜೆಪಿಯಿಂದ ಸ್ಪರ್ಧಿಸಿದರೆ ಗೆಲ್ಲುವ ಸಾಧ್ಯತೆ ಹೆಚ್ಚು ಎನ್ನುವ ಲೆಕ್ಕಾಚಾರ ಹಲವರನ್ನು ಬಿಜೆಪಿಯ ಕಡೆಗೆ ತಳ್ಳುತ್ತದೆ.
ಈ ಮನೋಭಾವ ಕೇವಲ ಕಾಂಗ್ರೆಸ್ ಶಾಸಕರದ್ದಲ್ಲ. ಬಿಜೆಪಿಗೆ ಹೋಗಿ ಮರಳಿ ಜೆಡಿಎಸ್‍ಗೆ ಬಂದಿರುವ ಜಿ.ಟಿ.ದೇವೇಗೌಡರಿಗೆ ಹೊಸ ಸರ್ಕಾರದಲ್ಲೂ ಸಚಿವ ಸ್ಥಾನ ಖಾತರಿಯಾದರೆ ಹೋಗುತ್ತಾರೆಂಬುದು ಅವರ ಆಪ್ತ ವಲಯದ ಹೇಳಿಕೆಯಾಗಿದೆ. ಖಾತೆ ಹಂಚಿಕೆಯ ಸಂದರ್ಭದಲ್ಲೇ ತೀವ್ರ ಅಸಮಾಧಾನ ಹೊಂದಿದ್ದ ಜಿಟಿಡಿ ಮೈತ್ರಿ ಸರ್ಕಾರ ಉಳಿಯಲು ಬಯಸುವುದಿಲ್ಲ. ಸ್ವತಃ ಕಾಂಗ್ರೆಸ್‍ನ ಹಲವಾರು ನಾಯಕರಿಗೆ, ಕೆಲವು ಸಚಿವರಿಗೂ ಸಹ ‘ಈ ಸರ್ಕಾರವು ಉಳಿಯಬಾರದು’ ಎಂಬ ಅನಿಸಿಕೆ ನಾಲ್ಕೈದು ತಿಂಗಳಿಂದ ಇದೆ.

ಇಡೀ ದೇಶದಲ್ಲೂ, ಕರ್ನಾಟಕದಲ್ಲೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಿಕ್ಕಿರುವ ಗೆಲುವಿನ ಹೊಡೆತವು ಮೈತ್ರಿ ಸರ್ಕಾರವನ್ನು ಉಳಿಯಲು ಬಿಡುವುದಿಲ್ಲ. ಎಕ್ಸಿಟ್ ಪೋಲ್ ಬಂದ ತಕ್ಷಣವೇ ಮಧ್ಯಪ್ರದೇಶದಲ್ಲಿ ಬಿಜೆಪಿ ನಾಯಕರ ನಿಯೋಗ ರಾಜಭವನಕ್ಕೆ ಹೋಗಿತ್ತು. ಅಲ್ಲಿನ ಸರ್ಕಾರವು ಅಲ್ಪಮತಕ್ಕಿಳಿದಿರುವುದರಿಂದ ವಿಶ್ವಾಸಮತ ಯಾಚನೆಗೆ ಮುಂದಾಗಬೇಕು ಎಂದು ಅಲ್ಲಿ ಕೇಳಿದ್ದರು. ಒಂದು ಪಕ್ಷದ ಸರ್ಕಾರವಿರುವಾಗಲೇ ಅಂತಹ ಪರಿಸ್ಥಿತಿ ಇರುವಾಗ, ಕರ್ನಾಟಕದಲ್ಲಿ ನೂರೆಂಟು ಗಂಟುಗಳಿರುವ ಮೈತ್ರಿಕೂಟ ಉಳಿಯುವುದು ಕಷ್ಟವೇ ಕಷ್ಟ.

ಇವೆಲ್ಲವನ್ನೂ ದಾಟಿ ಉಳಿಯಬೇಕೆಂದರೆ, ಎರಡೂ ಪಕ್ಷಗಳಿಗೆ ಸರ್ವೈವಲ್ ಇನ್‍ಸ್ಟಿಂಕ್ಟ್ ಕಾಡಬೇಕು. ಅಂದರೆ, ಈ ಸರ್ಕಾರವನ್ನಾದರೂ ಉಳಿಸಿಕೊಳ್ಳದಿದ್ದರೆ ತಮಗೆ ಉಳಿಗಾಲವಿಲ್ಲ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಎಲ್ಲಾ ಹಿರಿಯ ನಾಯಕರಿಗೂ ಅನ್ನಿಸಬೇಕು. ಆ ಸಾಧ್ಯತೆ ಕಾಣುತ್ತಿಲ್ಲ. ಏಕೆಂದರೆ, ಅಂತಹ ಸೂಚನೆಗಳು ಸಿಕ್ಕಿ ಬಹಳ ದಿನಗಳಾಗಿವೆ. ಮೈತ್ರಿ ಮಾಡಿಕೊಂಡಿದ್ದೇ ಬಿಜೆಪಿಯನ್ನು ಹಿಮ್ಮೆಟ್ಟಿಸಲು. ಆದರೆ, ಎರಡೂ ಪಕ್ಷಗಳ ದೊಡ್ಡ ನಾಯಕರು ನಡೆದುಕೊಂಡಿದ್ದು ತಮ್ಮ ವ್ಯಕ್ತಿಗತ ಸ್ವಾರ್ಥದ ದೃಷ್ಟಿಯಿಂದ ಮಾತ್ರ. ಬಿಜೆಪಿಯ ಈ ಗೆಲುವು ಅಂಥದ್ದೇನಾದರೂ ತರುತ್ತದಾ ಎಂಬುದನ್ನು ಕಾದು ನೋಡಬೇಕು.
ಅಂತಹ ಯಾವ ಸಾಧ್ಯತೆಗಳೂ ಗೋಚರಿಸುತ್ತಿಲ್ಲ. ಏಕೆಂದರೆ, ನರೇಂದ್ರ ಮೋದಿಯವರನ್ನು ನರಹಂತಕ ಎಂದು ಬಹಿರಂಗವಾಗಿ ಕರೆಯುವಷ್ಟು ಸೆಕ್ಯುಲರ್ ಆದ ಸಿದ್ದರಾಮಯ್ಯನವರಿಗೆ ಈ ಮೈತ್ರಿ ಇಷ್ಟವಿಲ್ಲ. ಆ ಕಾರಣದಿಂದಲೂ, ಮೂರ್ನಾಲ್ಕು ಸೀಟುಗಳನ್ನು ಮೈತ್ರಿ ಕಳೆದುಕೊಂಡಿದೆ. ಅದಲ್ಲದೇ ಮನಸ್ಸಿಟ್ಟು ಕೆಲಸ ಮಾಡಿದ್ದರೆ ಪಡೆಯಬಹುದಾಗಿದ್ದ ಇನ್ನೂ ಮೂರ್ನಾಲ್ಕು ಸೀಟುಗಳನ್ನೂ ಈ ಪಕ್ಷಗಳು ಕಳೆದುಕೊಂಡಿವೆ. ಹಾಗಿದ್ದ ಮೇಲೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು, ಅದರ ವೈಫಲ್ಯತೆಯಿಂದ ಮತ್ತೆ ಅಧಿಕಾರಕ್ಕೆ ಬರುವ ದೂರಾಲೋಚನೆಯಷ್ಟೇ ಹೊಂದಿರುತ್ತಾರೆ.

ಎಲ್ಲಕ್ಕಿಂತ ಮಿಗಿಲಾಗಿ ಕಳೆದ ಒಂದು ವರ್ಷದಿಂದ ಈ ಸರ್ಕಾರದ ಸಾಧನೆಯೇನು ಎಂಬುದು ಜನರ ಗಮನಕ್ಕೆ ಬಂದಿಲ್ಲ. ಬಿಜೆಪಿ ಪರವಾಗಿ ತುತ್ತೂರಿ ಊದುತ್ತಲೇ ಇರುವ ಮಾಧ್ಯಮಗಳು ಸದಾಕಾಲ ಮೈತ್ರಿ ಸರ್ಕಾರದ ವಿರುದ್ಧ ಅರ್ಧ ಸತ್ಯ ಮತ್ತು ಸುಳ್ಳುಗಳನ್ನು ಹೊಸೆಯುತ್ತಲೇ ಇರುತ್ತವೆ. ಹೀಗಿರುವಾಗ ಮುಂದೊಂದು ದಿನ ಸರ್ಕಾರವು ಬಿದ್ದು ಬಿಜೆಪಿಯು ದೊಡ್ಡ ಪ್ರಮಾಣದಲ್ಲಿ ಅಧಿಕಾರಕ್ಕೆ ಬರುವ ಬದಲು, ಈಗಲೇ ಒಂದಷ್ಟು ಶಾಸಕರು ಕಿತ್ತುಕೊಂಡು ಹೋಗಿ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗುವುದೇ ಲೇಸೆಂಬ ಅನಿಸಿಕೆ ಪ್ರಾಮಾಣಿಕ ಕಾರ್ಯಕರ್ತರಲ್ಲೂ ಇದೆ.

ಇದಕ್ಕೆ ಕಾರಣ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗಿಂತ ಹೆಚ್ಚಾಗಿ ಮೈತ್ರಿ ನಾಯಕರ ಬೇಜವಾಬ್ದಾರಿಯೇ ಆಗಿದೆ. ಬಿಜೆಪಿಯಂತಹ ಪಕ್ಷವು ದೇಶದಲ್ಲೂ, ರಾಜ್ಯದಲ್ಲೂ ಅಧಿಕಾರ ಹಿಡಿಯುವುದರ ಅಪಾಯದ ಅರಿವು ಈ ಪಕ್ಷಗಳಿಗಿರುವ ಯಾವುದೇ ಲಕ್ಷಣ ತೋರುತ್ತಿಲ್ಲ. ಸಮಾಜದಲ್ಲಿ ಕೋಮುವಾದಿ ಶಕ್ತಿಗಳು ಬೆಳೆಯುತ್ತಿರುವಾಗ, ಸರ್ಕಾರದಲ್ಲಾದರೂ ಆ ಶಕ್ತಿಗಳು ಇಲ್ಲದಿದ್ದರೆ ಒಂದು ಮಟ್ಟಿಗಿನ ತಡೆ ಇರುತ್ತದೆ; ಇಲ್ಲದಿದ್ದರೆ ಸಾಂವಿಧಾನಿಕ ಸಂಸ್ಥೆಗಳೂ ದುರ್ಬಲಗೊಂಡು ಬಿಡುತ್ತವೆ. ಬಹುಶಃ ಕರ್ನಾಟಕವು ಅಂತಹ ದುರಂತದ ಸ್ಥಿತಿಗೆ ಪ್ರವೇಶ ಪಡೆಯುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳದ ಸೋಲಿನ ಬಳಿಕ ‘ಇಂಡಿಯಾದ ಆಸರೆ’ ಬಯಸಿದ ಮಮತಾ

2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸೋಲಿನ ನಂತರ ಮಮತಾ ಬ್ಯಾನರ್ಜಿ ಅವರು ಇದ್ದಕ್ಕಿದ್ದಂತೆ ‘ಇಂಡಿಯಾ’ (INDIA) ಒಕ್ಕೂಟ ಮತ್ತು ರಾಷ್ಟ್ರೀಯ ಮಟ್ಟದ ವಿರೋಧ ಪಕ್ಷಗಳ ಒಗ್ಗಟ್ಟಿಗೆ ಇಷ್ಟೊಂದು ಪ್ರಾಮುಖ್ಯತೆ ನೀಡುತ್ತಿರುವುದು ಏಕೆ? ದೀರ್ಘಕಾಲದವರೆಗೆ...

ಪಶ್ಚಿಮ ಬಂಗಾಳ| ಮತದಾರರ ಪಟ್ಟಿಯಿಂದ ಡಿಲೀಟ್‌ ಆದವರಿಗೆ ಪಡಿತರ ಪ್ರಯೋಜನಗಳಿಲ್ಲ

ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಯಿಂದಾಗಿ ಪಶ್ಚಿಮ ಬಂಗಾಳದ ಚುನಾವಣಾ ಪ್ರಕ್ರಿಯೆಯಿಂದ ಹೊರಗುಳಿದವರಿಗೆ ಈಗ ಎರಡು ಹೊಡೆತ ಎದುರಾಗಿದೆ. ರಾಜ್ಯ ಸರ್ಕಾರವು ಈಗ ಅವರ ಪಡಿತರ ಚೀಟಿಗಳನ್ನು ಸಹ ನಿಷ್ಕ್ರಿಯಗೊಳಿಸಲು...

ಇಂಡಿಯಾ ಮೈತ್ರಿಕೂಟದ ಸಭೆ: ಎಸ್‌ಐಆರ್, ಬೆಲೆ ಏರಿಕೆ, ನಿರುದ್ಯೋಗದ ಕುರಿತು ಖರ್ಗೆ ಕಳವಳ; ಒಗ್ಗಟ್ಟಿನ ಹೋರಾಟಕ್ಕೆ ಕರೆ

ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ವಿದೇಶಾಂಗ ನೀತಿ ರಂಗಗಳಲ್ಲಿ ಮೋದಿ ಸರ್ಕಾರದ ವೈಫಲ್ಯಗಳನ್ನು ಎದುರಿಸಲು ತನ್ನ ಒಗ್ಗಟ್ಟನ್ನು ಬಲಪಡಿಸಿಕೊಳ್ಳುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ (ಜೂ.8) ಇಂಡಿಯಾ ಮೈತ್ರಿಕೂಟಕ್ಕೆ ಕರೆ...

ಟೆಹ್ರಾನ್ ಮೇಲಿನ ದಾಳಿಗೆ ಪ್ರತೀಕಾರ: ಇಸ್ರೇಲ್ ಮೇಲೆ ಕ್ಷಿಪಣಿ ಹಾರಿಸಿದ ಇರಾನ್

ಟೆಹ್ರಾನ್, ತಬ್ರಿಜ್ ಮತ್ತು ಇಸ್ಫಹಾನ್‌ ಮೇಲಿನ ದಾಲಿಗಳಿಗೆ ಪ್ರತೀಕಾರವಾಗಿ, ಇರಾನ್ ಸೇನೆಯು ಇಸ್ರೇಲ್‌ ಮೇಲೆ ಎರಡನೇ ತರಂಗದ ಕ್ಷಿಪಣಿಗಳನ್ನು ಹಾರಿಸಿದೆ. ದೇಶಾದ್ಯಂತ ಸೈರನ್‌ಗಳು ಮೊಳಗುತ್ತಿವೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ ಎಂದು ಅಂತರಾಷ್ಟ್ರೀಯ...

ಭಾರತದಲ್ಲಿ ಬೆಂಕಿ ದುರಂತ ‘ದಿನವೊಂದಕ್ಕೆ ಬಲಿಯಾಗುತ್ತಿವೆ 16 ಜೀವಗಳು’ NCRB ವರದಿ

ಇತ್ತೀಚೆಗೆ ದೆಹಲಿಯ ಮಾಳವೀಯ ನಗರದ ಹೋಟೆಲ್‌ ಒಂದರಲ್ಲಿ ನಡೆದ ಭೀಕರ ಬೆಂಕಿ ದುರಂತ (ಇದರಲ್ಲಿ 22 ಜನರು ಸಜೀವ ದಹನವಾಗಿದ್ದರು) ಇಡೀ ದೇಶವನ್ನೇ ನಡುಗಿಸಿದೆ. ಈ ದುರಂತದ ಬೆನ್ನಲ್ಲೇ ಕರ್ನಾಟಕದಲ್ಲೂ ವಾಣಿಜ್ಯ ಮತ್ತು...

ಈದ್ ಹಬ್ಬದ ವೇಳೆ ಮುಸ್ಲೀಮರನ್ನು ಗುರಿಯಾಗಿಸಿ 46 ದ್ವೇಷ ಅಪರಾಧಗಳು, ಮೂವರ ಹತ್ಯೆ: APCR ಆತಂಕಕಾರಿ ವರದಿ

ಇತ್ತೀಚಿನ ಬಕ್ರೀದ್ (ಈದ್ ಉಲ್-ಅಧಾ) ಹಬ್ಬದ ಆಚರಣೆಯ ಸಂದರ್ಭದಲ್ಲಿ ದೇಶದ ವಿವಿಧೆಡೆ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆದ ಕೋಮು ಕಿರುಕುಳ, ದ್ವೇಷ ಭಾಷಣ ಹಾಗೂ ಹಿಂಸಾಚಾರದ ಘಟನೆಗಳ ಕುರಿತು 'ನಾಗರಿಕ ಹಕ್ಕುಗಳ ರಕ್ಷಣಾ ಸಂಘ'...

ಗ್ರೇಟ್ ನಿಕೋಬಾರ್ : ಕಾರ್ಪೊರೇಟ್ ಹಿತಾಸಕ್ತಿಗೆ ಬಲಿಯಾಗುತ್ತಿರುವ ಪರಿಸರ, ಆದಿವಾಸಿಗಳ ಅಸ್ತಿತ್ವ

ಬಂಗಾಳಕೊಲ್ಲಿಯಲ್ಲಿರುವ ಭಾರತದ ದಕ್ಷಿಣ ತುದಿಯ ದ್ವೀಪದ ಸಮಗ್ರ ಅಭಿವೃದ್ಧಿಯ ಹೆಸರಿನಲ್ಲಿ ಕೇಂದ್ರ ಸರ್ಕಾರ ಬರೋಬ್ಬರಿ 72 ಸಾವಿರದಿಂದ 81 ಸಾವಿರ ಕೋಟಿ ರೂಪಾಯಿ ವೆಚ್ಚದ ’ಗ್ರೇಟ್ ನಿಕೋಬಾರ್ ದ್ವೀಪ ಅಭಿವೃದ್ಧಿ ಯೋಜನೆ’ಯನ್ನು ರೂಪಿಸಿದೆ.ಈ...

ಅಸ್ಸಾಂನ ನಾಲ್ವರು ಮುಸ್ಲಿಂ ಮಹಿಳೆಯರ ಗಡೀಪಾರು ಪ್ರಕ್ರಿಯೆಗೆ ಸುಪ್ರೀಂ ತಡೆ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟಿಸ್‌

ಅಸ್ಸಾಂನಲ್ಲಿ 'ವಿದೇಶಿಯರು' ಎಂದು ಘೋಷಿತರಾಗಿ ಗಡೀಪಾರು ಭೀತಿ ಎದುರಿಸುತ್ತಿದ್ದ ನಾಲ್ವರು ಮುಸ್ಲಿಂ ಮಹಿಳೆಯರ ವಿಚಾರದಲ್ಲಿ ಭಾರತದ ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಪ್ರವೇಶ ಮಾಡಿದೆ. ಈ ಮಹಿಳೆಯರನ್ನು ದೇಶದಿಂದ ಹೊರಹಾಕುವ (ಗಡೀಪಾರು ಮಾಡುವ) ಪ್ರಕ್ರಿಯೆಗೆ...

ದೆಹಲಿಗೆ ಬಂದಿಳಿದ ಕಾಕ್ರೋಚ್ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ : ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸಲು ಪೊಲೀಸರಿಂದ ಅನುಮತಿ

ಶನಿವಾರ (ಜೂ.6) ಬೆಳಿಗ್ಗೆ ದೆಹಲಿಗೆ ಆಗಮಿಸಿದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದು, ಯೋಜಿತ ಆಂದೋಲನಕ್ಕಾಗಿ ನೇರವಾಗಿ ಜಂತರ್ ಮಂತರ್‌ನಲ್ಲಿ...

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...