Homeಚಳವಳಿಕನ್ನಡಿಗರಿಗೆ ಉದ್ಯೋಗ: ಸಮಸ್ಯೆಯ ಮೂಲಕ್ಕೆ ಹೋಗಿ ಪರಿಹಾರ ಹುಡುಕೋಣ

ಕನ್ನಡಿಗರಿಗೆ ಉದ್ಯೋಗ: ಸಮಸ್ಯೆಯ ಮೂಲಕ್ಕೆ ಹೋಗಿ ಪರಿಹಾರ ಹುಡುಕೋಣ

- Advertisement -
| ಬಿ. ಶ್ರೀಪಾದ ಭಟ್ |
- Advertisement -

ಓದುಗರಿಗೆ ಸೂಚನೆ:
ಈ ಲೇಖನದ ನಿರೂಪಣೆ ಡಿ.ಎನ್.ಶಂಕರಬಟ್ ಅವರ ಬಾಶಾ ಪ್ರಯೋಗಕ್ಕೆ ಒಳಪಟ್ಟಿದೆ. ಮಹಾಪ್ರಾಣದ ಬಳಕೆ, ಷ-ಶ ಬಳಕೆ ಸೇರಿದಂತೆ ಕೆಲವು ಹೊಸ ಸಂಗತಿಗಳನ್ನು ಅವರು ಬಲವಾಗಿ ಪ್ರತಿಪಾದಿಸುತ್ತಿದ್ದು, ಕೆಲವು ಲೇಕಕರು ಅದನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಈ ಲೇಕನದಲ್ಲಿನ ಬಾಶೆಯ ಬಳಕೆಯಲ್ಲಿ ನಿಮಗೆ ಕಂಡುಬರುವ ವ್ಯತ್ಯಾಸವನ್ನು, ಪ್ರೂಫ್ ವ್ಯತ್ಯಾಸ ಎಂದು ಬಗೆಯಬಾರದೆಂದು ಕೋರುತ್ತೇವೆ.

ಸ್ಥಳೀಯರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ಕೊಡಬೇಕು, ಕರ್ನಾಟಕದಲ್ಲಿ ಕನ್ನಡಿಗರಿಗೆ ಮೊದಲು ಅವಕಾಶ ಕೊಡಬೇಕು ಎನ್ನುವ ಮಾತಿನಲ್ಲಿ ಸಹಮತ ಇದೆ. ಆದ್ರೆ ಇದು ಕೇವಲ ಬಾವನಾತ್ಮಕ ನೆಲೆಯ ಮಾದರಿಗೆ ಸೀಮಿತಗೊಂಡರೆ ಉಪಯೋಗವಿಲ್ಲ. ಇದು ಸಮಾಜೋ-ಆರ್ಥಿಕ ಆಯಾಮಗಳನ್ನ ಒಳಗೊಳ್ಳಬೇಕು. ಮೊನ್ನೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅದಿಕಾರಿಗಳು ಹಿರಿಯ ಪ್ರಾಥಮಿಕ ಶಾಲೆಗಳಿಗೆ 10,000 ಶಿಕ್ಷಕರ ನೇಮಕಾತಿ ಸಾದ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಇದಕ್ಕೆ ಅವರು ಗುಣಮಟ್ಟದ ಅಬ್ಯರ್ಥಿಗಳು ದೊರೆಯುತ್ತಿಲ್ಲ ಎಂದು ಕಾರಣ ನೀಡಿದರು.
ಕರ್ನಾಟಕದಲ್ಲಿಯೆ ಪದವಿ ಶಿಕ್ಷಣ ಪಡೆದು, ನಂತರ ಬಿಎಡ್ ಮುಗಿಸಿ ನಂತರ ಟಿಇಟಿ ಮುಗಿಸಿ ನಂತರ ಸಿಇಟಿ ಅರ್ಹತಾ ಪರೀಕ್ಷೆ ಬರೆಯುವ ಲಕ್ಷಾಂತರ ಕನ್ನಡಿಗರಲ್ಲಿ ಅರ್ಹತೆ ಇರುವವರು ದೊರಕುತ್ತಿಲ್ಲ ಎಂದರೆ ಇದು ಉಡಾಫೆ ಮತ್ತು ಬೇಜವಬ್ದಾರಿಯ ಮಾತು. ಅಬ್ಯರ್ಥಿಗಳು ಎಲ್ಲಾ ಹಂತದ ಶಿಕ್ಷಣವನ್ನು ಕರ್ನಾಟಕದಲ್ಲಿಯೆ ಪಡೆದುಕೊಳ್ಳುತ್ತಾರೆ. ಆದರೆ ಗುಣಮಟ್ಟದ ಅಬ್ಯರ್ಥಿಗಳು ದೊರಕುತ್ತಿಲ್ಲವೆಂದರೆ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸರಕಾರ ತಾನು ನೀಡುತ್ತಿರುವ ಶಿಕ್ಷಣವೆ ಕಳಪೆ ಗುಣಮಟ್ಟದ್ದು ಎಂದು ಒಪ್ಪಿಕೊಳ್ಳುತ್ತಿದ್ದಾರೆಯೆ? ಗುಣಮಟ್ಟದ ಅಬ್ಯರ್ಥಿಗೋಸ್ಕರ ಇನ್ನೂ ಎಶ್ಟು ಹಂತದ ಪರೀಕ್ಷೆಗಳನ್ನ ನಡೆಸುತ್ತಾರೆ? ಇಲ್ಲಿ ಸರಕಾರದ ನಿಜದ ಉದ್ದೇಶವೇನು? ಇಲ್ಲಿ ಕನ್ನಡಿಗ ಅಬ್ಯರ್ಥಿಗಳಿದ್ದರೂ ನೇಮಕಾತಿ ಆಗುತ್ತಿಲ್ಲ. ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಸಾವಿರಾರು ಬ್ಯಾಕ್ ಲಾಗ್ ಹುದ್ದೆಗಳು (ಪ್ರವರ್ಗ) ಖಾಲಿ ಇವೆ. ಆದರೆ ಅವುಗಳಿಗೆ  ನೇಮಕಾತಿ ಮಾಡಿಕೊಳ್ಳುತ್ತಿಲ್ಲ. ಇಲ್ಲಿ ಅಬ್ಯರ್ಥಿಗಳೆಲ್ಲರೂ ಸಹಜವಾಗಿಯೆ ಕನ್ನಡಿಗರು ಆಗಿರುತ್ತಾರೆ. ಇದನ್ನು ಪ್ರಶ್ನಿಸಿ ಹೋರಾಟ ಮಾಡಬೇಕು. ಈ ಬಿಕ್ಕಟ್ಟು ಬಗೆಹರಿಯದೆ  ಕನ್ನಡಿಗರಿಗೆ ಮಾತ್ರ ಉದ್ಯೋಗ ಎನ್ನುವುದು ಮೇಲ್ಮಟ್ಟದಲ್ಲಿ ಉಳಿದುಕೊಂಡುಬಿಡುತ್ತದೆ.
ಮತ್ತೊಂದೆಡೆ ದುಡಿಯುವ ವರ್ಗದ ಜನರು ಯಾಕೆ ತಮ್ಮ ಹುಟ್ಟಿದ ಊರನ್ನು ತೊರೆದು ಹೊಟ್ಟೆಪಾಡಿಗೆ ಬೇರೆ ಊರಿಗೆ, ಬೇರೆ ರಾಜ್ಯಕ್ಕೆ ವಲಸೆ ಹೋಗುತ್ತಾರೆ? ಇಲ್ಲಿ ಸರಕಾರದ ವೈಫಲ್ಯದ ಪಾತ್ರವೆಶ್ಟು? ಅದರ ದಿವಾಳಿ ಎದ್ದ ಆರ್ಥಿಕ ನೀತಿಗಳು ಈ ನಿರುದ್ಯೋಗಕ್ಕೆ, ವಲಸೆಗೆ ಮೂಲ ಕಾರಣ. ಇದಕ್ಕೆ ಮೊದಲು ಪರಿಹಾರ ಕಂಡುಕೊಳ್ಳಬೇಕು. ಇನ್ನು ಸರಕಾರಗಳು ಸ್ಥಳೀಯವಾಗಿ ಪರ್ಯಾಯ ಉದ್ಯೋಗಗಳನ್ನ ಸೃಶ್ಟಿ ಮಾಡದೆ ಇರುವುದು ಅಲ್ಲಿನ ಸ್ಥಳೀಯರು ವಲಸೆ ಹೋಗಲು ಮುಖ್ಯ ಕಾರಣಗಳಲ್ಲೊಂದು. ಉದಾಹರಣೆಗೆ ಕಲ್ಬುರ್ಗಿ ಜಿಲ್ಲೆಯ ಮುಖ್ಯ ಬೆಳೆ ತೊಗರಿ. ಆದರೆ ಬೆಳೆದ ತೊಗರಿಯನ್ನು ಬೇಳೆಯಾಗಿ ಪರಿವರ್ತಿಸಲು ಪಕ್ಕದ ಮಹರಾಶ್ಟ್ರ ರಾಜ್ಯಕ್ಕೆ ಕಳುಹಿಸಬೇಕು. ಅದರ ಬದಲು ಸರಕಾರವು ಈ ತೊಗರಿಯ ಬೇಳೆಯಾಗಿ ಪರಿವರ್ತಿಸುವ ಉದ್ಯಮವನ್ನ ಕಲ್ಬುರ್ಗಿಯಲ್ಲಿಯೆ ಸ್ಥಾಪಿಸಬೇಕು. ಆಗ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ದೊರಕುತ್ತದೆ. ಅವರು ಬೇರೆ ಊರು, ರಾಜ್ಯಗಳಿಗೆ ವಲಸೆ ಹೋಗುವುದು ತಪ್ಪುತ್ತದೆ. ಇದು ಬೇರೆ ರಾಜ್ಯಗಳಿಂದ ಬರುವ ವಲಸಿಗರಿಗೂ ಅನ್ವಯಿಸುತ್ತದೆ. ಇದೊಂದು ಉದಾಹರಣೆ. ಇಂತಹ ನೂರಾರು ಅವಕಾಶಗಳಿವೆ. ಉದ್ಯೋಗ ಅವಕಾಶಗಳ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಬೇಕು.
ಇನ್ನು ಸರಕಾರಿ ಉದ್ಯೋಗ ಅವಕಾಶಗಳ ಪ್ರಮಾಣವೆಶ್ಟು? ಶೇಕಡ 2% ಕ್ಕಿಂತಲೂ ಕಡಿಮೆ. ನಿರುದ್ಯೋಗಿ  ಕನ್ನಡಿಗರೆಶ್ಟು? ಲಕ್ಷಗಳ ಸಂಖ್ಯೆಯಲ್ಲಿದ್ದಾರೆ. ಹಾಗಿದ್ದಲ್ಲಿ ಉದ್ಯೋಗ ಅವಕಾಶ ಮತ್ತು ಉದ್ಯೋಗಾಂಕ್ಷಿಗಳ ಅನುಪಾತದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಇದಕ್ಕೆ ಪರಿಹಾರವೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳದೆ ಹೋದರೆ ಮಿಕ್ಕಂತೆ ಎಲ್ಲವೂ ರಬಸದ ಹಾಗೆ ಬಂದು ಹೀಗೆ ತೇಲಿ ಹೋಗುವ ಮಾತುಗಳಾಗುತ್ತವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...