Homeಮುಖಪುಟಭೂ ಹಗರಣ, ಬ್ರಾಹ್ಮಣರ ಮತಗಳು ಕೈ ತಪ್ಪುವ ಭಯ: ಅಯೋಧ್ಯೆಯ ಟಿಕೆಟ್‌ ಯೋಗಿ ಕಳೆದುಕೊಳ್ಳಲು ಕಾರಣವೇ?

ಭೂ ಹಗರಣ, ಬ್ರಾಹ್ಮಣರ ಮತಗಳು ಕೈ ತಪ್ಪುವ ಭಯ: ಅಯೋಧ್ಯೆಯ ಟಿಕೆಟ್‌ ಯೋಗಿ ಕಳೆದುಕೊಳ್ಳಲು ಕಾರಣವೇ?

- Advertisement -
- Advertisement -

ಉತ್ತರ ಪ್ರದೇಶದ ಅಯೋಧ್ಯೆ ವಿಧಾನಸಭಾ ಕ್ಷೇತ್ರದಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್‌ ಅವರು ಸ್ಪರ್ಧಿಸುತ್ತಾರೆಂಬ ಸುದ್ದಿ ಹರಡಿತ್ತು. ಆದರೆ ಗೋರಖ್‌ಪುರದಿಂದ ಸ್ಪರ್ಧಿಸುವುದು ಖಚಿತವಾಗಿದ್ದು, ಕೈತಪ್ಪಿದ ಪ್ರತಿಷ್ಠಿತ ಅಯೋಧ್ಯೆ ಕ್ಷೇತ್ರದಿಂದಾಗಿ ಆದಿತ್ಯನಾಥ್‌ ಅವರು ಹಿಂದುತ್ವದ ನಾಯಕನಾಗುವ ಮಹತ್ವಾಕಾಂಕ್ಷೆಗೆ ಹಿನ್ನಡೆಯಾಗಬಹುದು.

ಆದಿತ್ಯನಾಥ್ ಅವರು ಐದು ಬಾರಿ ಸಂಸದರಾಗಿ ಆಯ್ಕೆಯಾದ ಗೋರಖ್‌ಪುರದ ತವರು ನೆಲಕ್ಕೆ ಕಳುಹಿಸುವ ಮೂಲಕ ಅವರ ರೆಕ್ಕೆಗಳನ್ನು ಕತ್ತರಿಸಿರಬಹುದು ಎಂದು ಪಕ್ಷದ ಮೂಲಗಳೇ ಹೇಳುತ್ತವೆ.

ಆದಿತ್ಯನಾಥ್ ಅವರು ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅಯೋಧ್ಯೆಯ ಟಿಕೆಟ್ ನಿರಾಕರಣೆಯು ಉತ್ತರ ಪ್ರದೇಶದ ನಾಯಕನಾಗುವ ಆದಿತ್ಯನಾಥ್ ಅವರ ಆಸೆಗೂ ತಣ್ಣೀರೆರಚಬಹುದು. ಕೇಂದ್ರದ ನಾಯಕರು ಯೋಗಿ ಆದಿತ್ಯನಾಥ್‌ ಅವರನ್ನು ಗೋರಖ್‌ಪುರದ ಗಡಿಯೊಳಗೆ ಬಂಧಿಸಿದ್ದಾರೆ.

ಚುನಾವಣಾ ಋತುವಿನ ಆರಂಭದಿಂದಲೂ, ಆದಿತ್ಯನಾಥ್ ಅವರು ಅಯೋಧ್ಯೆ ಅಥವಾ ಮಥುರಾದಿಂದ ಸ್ಪರ್ಧಿಸುತ್ತಾರೆ ಎಂದು ವ್ಯಾಪಕವಾಗಿ ಊಹಿಸಲಾಗಿತ್ತು. ಅಯೋಧ್ಯೆಗೆ ಮುಖ್ಯಮಂತ್ರಿಗಳ ರಾಯಭಾರಿ ಸಂಜೀವ್ ಸಿಂಗ್ ಅವರ ಎರಡು ದಿನಗಳ ಭೇಟಿ ಈ ಊಹಾಪೋಹವನ್ನು ತೀವ್ರಗೊಳಿಸಿತ್ತು.

ಈ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತರಾದ ಎ.ಕೆ. ಶರ್ಮಾ ಅವರು ರಾಜ್ಯ ಸಚಿವ ಸಂಪುಟಕ್ಕೆ ಬಂದಾಗ ಆದಿತ್ಯನಾಥ್‌ಗೆ ದುಬಾರಿಯಾಗಿ ಪರಿಣಮಿಸಿದರು.

ಆದಿತ್ಯನಾಥ್‌ ಅಷ್ಟು ಮುಖ್ಯವಲ್ಲ ಎಂಬುದನ್ನು ಮೋದಿಯವರು ಅನೇಕ ಸಂದರ್ಭದಲ್ಲಿ ಸ್ಪಷ್ಟಪಡಿಸುತ್ತಿದ್ದಾರೆ. ಕಾಶಿ ವಿಶ್ವನಾಥ್ ಕಾರಿಡಾರ್ ಉದ್ಘಾಟನೆಗೆ ಮೋದಿ ವಾರಣಾಸಿಗೆ ಆಗಮಿಸಿದಾಗ, ಉತ್ತರ ಪ್ರದೇಶ ಮುಖ್ಯಮಂತ್ರಿಯವರ ಭಾವಚಿತ್ರವು ಪತ್ರಿಕೆಗಳಲ್ಲಿ ಪ್ರಕಟವಾದ ಪೂರ್ಣ ಪುಟದ ಸರ್ಕಾರಿ ಜಾಹೀರಾತಿಗಳಲ್ಲಿ ಕಾಣೆಯಾಗಿತ್ತು!

ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯ ಸಂದರ್ಭದಲ್ಲಿ ಆದಿತ್ಯನಾಥ್ ಅವರು ಮೋದಿಯವರ ಕಾರಿನ ಹಿಂದೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದನ್ನು ನೋಡಿದ ಜನರು ಕೂಡ ದಿಗ್ಭ್ರಮೆಗೊಂಡಿದ್ದರು.

ಇದನ್ನೂ ಓದಿರಿ: ಯುಪಿ: ಹಿಂದುತ್ವದ ಐಕಾನ್‌ ಆಗಿದ್ದ ಯೋಗಿ ತಮ್ಮ ಚರಿಷ್ಮಾ ಕಳೆದುಕೊಂಡಿದ್ದಾರಾ?

ಬಿಜೆಪಿ ಹಾಗೂ ಪ್ರಧಾನಿಯವರು ಅಯೋಧ್ಯೆಯನ್ನು ಹಿಂದುತ್ವದ ರಾಜಕೀಯ ಕೇಂದ್ರವಾಗಿ ನೋಡುತ್ತಾರೆ. ಪಕ್ಷದ ಉನ್ನತ ನಾಯಕರಲ್ಲದೆ ಬೇರೆಯವರು ಅಯೋಧ್ಯೆ ಮೇಲೆ ಹಿಡಿತ ಸಾಧಿಸುವುದಕ್ಕೆ ಬಿಡುವುದಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ದೇವಸ್ಥಾನಗಳು ಮತ್ತು ಹಿಂದುತ್ವ ರಾಜಕಾರಣದ ಇನ್ನೊಂದು ಪಟ್ಟಣವಾದ ವಾರಣಾಸಿಯಲ್ಲಿ ಮೋದಿಯವರೇ ಸಂಸದರಾಗಿದ್ದಾರೆ. ಈ ಹಿಂದೆಯೂ ಅಯೋಧ್ಯೆಯಿಂದ ಬಿಜೆಪಿಯ ಯಾವುದೇ ಪ್ರಮುಖ ನಾಯಕರು ಸ್ಪರ್ಧಿಸಿರಲಿಲ್ಲ.

ಬಿಜೆಪಿ ಅಯೋಧ್ಯೆ ಕ್ಷೇತ್ರದಲ್ಲಿ ಸೋಲುವ ಭೀತಿಯಲ್ಲಿರುವಂತೆಯೂ ಕಾಣುತ್ತಿದೆ. ಇದು ಬ್ರಾಹ್ಮಣ ಸಮುದಾಯ ಪ್ರಾಬಲ್ಯವಿರುವ ಕ್ಷೇತ್ರವಾಗಿದೆ. ಠಾಕೂರ್ ಸಮುದಾಯದ ಮುಖ್ಯಮಂತ್ರಿ ವಿರುದ್ಧ ಬ್ರಾಹ್ಮಣರು ಭ್ರಮನಿರಸನವಾಗಿದ್ದಾರೆ. ಈ ಅಪಾಯವನ್ನು ಬಿಜೆಪಿ ತೆಗೆದುಕೊಳ್ಳಲು ಸಿದ್ಧವಿಲ್ಲ.

“ಪವನ್ ಪಾಂಡೆ” ಎಂದೇ ಖ್ಯಾತರಾಗಿರುವ ಸಮಾಜವಾದಿ ಪಕ್ಷದ ತೇಜ್ ನಾರಾಯಣ ಪಾಂಡೆ ಅವರು 2012ರ ಚುನಾವಣೆಯಲ್ಲಿ ಬಿಜೆಪಿಯನ್ನು ಅಯೋಧ್ಯೆಯಲ್ಲಿ ಮಣಿಸಿದ್ದರು. ಪಾಂಡೆಯವರನ್ನು ಅಯೋಧ್ಯೆಯ ಬ್ರಾಹ್ಮಣರು ದೊಡ್ಡ ಮಟ್ಟದಲ್ಲಿ ಬೆಂಬಲಿಸಿದ್ದರು.

ಆದಿತ್ಯನಾಥ್ ಅವರು ಮಥುರಾದಿಂದ ಟಿಕೆಟ್ ಪಡೆಯಲಿಲ್ಲ. ಏಕೆಂದರೆ ಆದಿತ್ಯನಾಥ್‌ ಅವರಿಗೆ ಮಥುರಾದಲ್ಲಿ ಅಗಾಧ ಬೆಂಬಲ ಸಿಗುವ ಸಾಧ್ಯತೆ ಇಲ್ಲ. ಉತ್ತರ ಪ್ರದೇಶದ ಮುಖ್ಯಮಂತ್ರಿಯವರು ನಾಥ ಧಾರ್ಮಿಕ ಪಂಥಕ್ಕೆ ಸೇರಿದ್ದಾರೆ. ಮಥುರಾ ಪ್ರದೇಶದಲ್ಲಿ ಪ್ರಾಬಲ್ಯ ಹೊಂದಿರುವ ಕೃಷ್ಣನ ಅನುಯಾಯಿಗಳು ನಾಥ ಪಂಥದೊಂದಿಗೆ ಯಾವುದೇ ಧಾರ್ಮಿಕ ಸಂಬಂಧವನ್ನು ಹೊಂದಿಲ್ಲ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದ್ದರೂ ಕೇಸರಿ ಪಾಳೆಯದ ವಿರುದ್ಧ ಸ್ಥಳೀಯರಲ್ಲಿ ಭ್ರಮನಿರಸನವಿದೆ. ದೇವಸ್ಥಾನ ವಿಸ್ತರಣೆ ಹೆಸರಿನಲ್ಲಿ ಶತಮಾನಗಳಷ್ಟು ಹಳೆಯದಾದ ತಮ್ಮ ಅಂಗಡಿಗಳನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಸಣ್ಣ ವ್ಯಾಪಾರಿಗಳು ಬಿಜೆಪಿಯೊಂದಿಗೆ ಬೇಸರಗೊಂಡಿದ್ದಾರೆ ಎಂದು ಸ್ಥಳೀಯ ಪತ್ರಕರ್ತ ಅರ್ಷದ್ ಅಫ್ಜಲ್ ಖಾನ್ ಹೇಳುತ್ತಾರೆ. “ಇದು ಅವರ ಜೀವನೋಪಾಯಕ್ಕೆ ಸಂಬಂಧಿಸಿದ ವಿಷಯವಾದ ಕಾರಣ, ಜನರು ಆಡಳಿತದ ವ್ಯವಸ್ಥೆಯ ವಿರುದ್ಧ ತಮ್ಮ ಮತ ಚಲಾಯಿಸಲು ಪ್ರೇರೇಪಿಸಿರಬಹುದು” ಎನ್ನುತ್ತಾರೆ ಖಾನ್‌.

‘ದಿ ವೈರ್‌’ ಜಾಲತಾಣದೊಂದಿಗೆ ಮಾತನಾಡಿರುವ ಬಿಜೆಪಿ ನಾಯಕ ರಾಕೇಶ್‌ ತ್ರಿಪಾಠಿ, “ರಾಜ್ಯದ ಬಿಜೆಪಿ ನಾಯಕರು ಸೀಟು ಹಂಚಿಕೆ ವಿಚಾರದಲ್ಲಿ ಪಟ್ಟು ಹಿಡಿದಿದ್ದಾರೆ. ಬಿಜೆಪಿಯ ಕೇಂದ್ರ ನಾಯಕರು ಸೀಟುಗಳು ಮತ್ತು ಟಿಕೆಟ್‌ಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ” ಎಂದು ತಿಳಿಸಿದ್ದಾರೆ.

“ಗೋರಕ್‌ಪುರದಿಂದ ಹಲವು ಬಾರಿ ಸಂಸದರಾಗಿ ಆಯ್ಕೆಯಾದ ಕಾರಣ ಪಕ್ಷವು ಗೋರಖ್‌ಪುರ ಕ್ಷೇತ್ರವನ್ನು ಮುಖ್ಯಮಂತ್ರಿಯರಿಗೆ ಆಯ್ಕೆ ಮಾಡಿದೆ” ಎಂದು ತ್ರಿಪಾಠಿ ಹೇಳುತ್ತಾರೆ.

ಇದನ್ನೂ ಓದಿರಿ: ವಿಶ್ಲೇಷಣೆ: ಯುಪಿಯಲ್ಲಿ ಒಬಿಸಿ ನಾಯಕರು ಬಿಜೆಪಿ ತೊರೆಯುತ್ತಿರುವುದು ಏತಕ್ಕೆ? ಎಸ್‌ಪಿಗೆ ಗೆಲುವು ಸುಲಭವೇ?

ಅಯೋಧ್ಯೆಯಿಂದ ಆದಿತ್ಯನಾಥ್ ಅವರನ್ನು ಕಣಕ್ಕಿಳಿಸದಿರುವುದರ ಹಿಂದೆ ಸಮಾಜಶಾಸ್ತ್ರೀಯ ಅಂಶಗಳು ಅಡಗಿದೆ ಎಂದು ರಾಜಕೀಯ ವಿಶ್ಲೇಷಣೆಗಳು ಹೇಳುತ್ತವೆ. “ಅರ್ಧಕ್ಕಿಂತ ಹೆಚ್ಚು ಮತದಾರರು ಬ್ರಾಹ್ಮಣರಿರುವ ಕ್ಷೇತ್ರದಲ್ಲಿ ಠಾಕೂರ್ ನಾಯಕರನ್ನು ಕಣಕ್ಕಿಳಿಸುವ ಅಪಾಯವನ್ನು ಬಿಜೆಪಿ ತೆಗೆದುಕೊಳ್ಳಲು ಬಯಸುವುದಿಲ್ಲ” ಎಂದು ಪತ್ರಕರ್ತ ಸಮೀರಾತ್ಮಜ್ ಮಿಶ್ರಾ ಅಭಿಪ್ರಾಯಪಡುತ್ತಾರೆ.

2012ರಲ್ಲಿ ಅಯೋಧ್ಯೆ ಕ್ಷೇತ್ರದಲ್ಲಿನ ಸೋಲಿನ ಜೊತೆಗೆ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಭೂ ಹಗರಣದ ಬಗ್ಗೆ ಸ್ಥಳೀಯರಲ್ಲಿ ಅಸಮಾಧಾನ ಹುಟ್ಟಿಕೊಂಡಿದೆ. ಪತ್ರಕರ್ತ ಮಿಶ್ರಾ, “ಈ ಭೂ ಖರೀದಿ ಹಗರಣವು ಕೇಸರಿ ಪಕ್ಷದ ಇಮೇಜ್‌ಗೆ ಧಕ್ಕೆ ತಂದಿದೆ” ಎನ್ನುತ್ತಾರೆ.

ಆದಿತ್ಯನಾಥ್ ಅವರನ್ನು ಅಯೋಧ್ಯೆಯಿಂದ ಕಣಕ್ಕಿಳಿಸಬೇಕು ಎಂದು ಹೇಳುತ್ತಿದ್ದ ಸ್ಥಳೀಯ ಬಿಜೆಪಿ ನಾಯಕರು, ಕೇಂದ್ರದ ನಾಯಕತ್ವದ ನಿರ್ಧಾರದ ನಂತರ ಮೌನಕ್ಕೆ ಸರಿದಿದ್ದಾರೆ.

ಅಯೋಧ್ಯೆ ಮೇಯರ್ ರಿಷಿಕೇಶ್ ಉಪಾಧ್ಯಾಯ ಅವರು ‘ದಿ ವೈರ್‌’ನೊಂದಿಗೆ ಮಾತನಾಡಿ, “ಅಯೋಧ್ಯೆ ಸೀಟಿನ ಉಮೇದುವಾರಿಕೆಗೆ ನಾವು ಸಿಎಂ ಯೋಗಿ ಅವರ ಹೆಸರನ್ನು ಪ್ರಸ್ತಾಪಿಸಿದ್ದೇವೆ. ಆದರೆ ಕೇಂದ್ರದ ನಾಯಕರು ನಮಗೆ ಯಾವುದೇ ಪ್ರಾಮುಖ್ಯತೆಯನ್ನು ನೀಡಲಿಲ್ಲ” ಎಂದಿದ್ದಾರೆ.

“ತಮ್ಮ ಬೇಡಿಕೆಗಳ ಬಗ್ಗೆ ಉನ್ನತ ನಾಯಕರೊಂದಿಗೆ ವಾದಿಸಲು ರಾಜ್ಯ ನಾಯಕತ್ವಕ್ಕೆ ಸಾಕಷ್ಟು ಅಧಿಕಾರವಿಲ್ಲ” ಎನ್ನುತ್ತಾರೆ ಅಯೋಧ್ಯೆ ಮೇಯರ್‌.

“ಕೇಸರಿ ಪಕ್ಷವು ಆದಿತ್ಯನಾಥ್ ಅವರನ್ನು ಮೇಲಕ್ಕೆತ್ತುವ ಮನಸ್ಥಿತಿಯಲ್ಲಿಲ್ಲ” ಎಂದು ಹಿರಿಯ ಪತ್ರಕರ್ತರು ಹೇಳುತ್ತಾರೆ. ಅಯೋಧ್ಯೆ ಹೋರಾಟವನ್ನು ಕಣ್ಣಾರೆ ಕಂಡ ಖ್ಯಾತ ಪತ್ರಕರ್ತ ಡಾ. ಸುಮನ್ ಗುಪ್ತಾ ಪ್ರತಿಕ್ರಿಯಿಸಿ, “ಈಗಾಗಲೇ ಕಟ್ಟರ್ ಹಿಂದೂ ಸನ್ಯಾಸಿಯ ಇಮೇಜ್ ಹೊಂದಿರುವ ಯೋಗಿ ಗೆದ್ದರೆ ಅವರು ಹಿಂದುತ್ವದ ನಾಯಕರಾಗಿ ಉನ್ನತ ಮಟ್ಟಕ್ಕೇರುತ್ತಾರೆ” ಎಂದಿದ್ದಾರೆ.

“ಇದು ಅವರನ್ನು (ಯೋಗಿ ಆದಿತ್ಯನಾಥ್) ಮೋದಿ ನಾಯಕತ್ವಕ್ಕೆ ಸವಾಲು ಹಾಕುವ ರಾಷ್ಟ್ರೀಯ ನಾಯಕನನ್ನಾಗಿ ರೂಪಿಸುತ್ತದೆ. ಅಮಿತ್ ಶಾಗೆ ಸಮಾನಾಂತರ ನಾಯಕರಾಗಿಯೂ ಯೋಗಿ ನಿಲ್ಲಬಹುದು” ಎಂದು ಗುಪ್ತಾ ಹೇಳುತ್ತಾರೆ.

ಕೃಪೆ: ದಿ ವೈರ್‌ (ಅಸದ್ ರಿಜ್ವಿ)


ಇದನ್ನೂ ಓದಿರಿ: ಮೋದಿ ಭಾಷಣದ ಅಡಚಣೆಗೆ ಟೆಲಿಫ್ರಾಮ್ಟರ್‌ ಕಾರಣವಲ್ಲ: ಆಲ್ಟ್‌ ನ್ಯೂಸ್‌ ಬಿಚ್ಚಿಟ್ಟ ಸತ್ಯ ಇಲ್ಲಿದೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...