Homeಚಳವಳಿಶ್ರಧ್ಧಾಂಜಲಿ: ಜನಪರ ಚಳವಳಿಯ ಮಾರ್ಗದರ್ಶಕ - ಧೀರ ಹೋರಾಟಗಾರ ಮಾರುತಿ ಮಾನ್ಪಡೆ

ಶ್ರಧ್ಧಾಂಜಲಿ: ಜನಪರ ಚಳವಳಿಯ ಮಾರ್ಗದರ್ಶಕ – ಧೀರ ಹೋರಾಟಗಾರ ಮಾರುತಿ ಮಾನ್ಪಡೆ

ಕೆಲಸ ಕಾರ್ಯಗಳಲ್ಲಿ ಸಮರಶೀಲತೆ ಮತ್ತು ಬದ್ದತೆಯ ಹೋರಾಟಕ್ಕೆ ಮತ್ತೊಂದು ಹೆಸರಾಗಿದ್ದ ಕಾಮ್ರೆಡ್ ಮಾರುತಿ ಮಾನ್ಪಡೆಯವರು 8 ಕ್ಕೂ ಹೆಚ್ಚು ಬಾರಿ ಜೈಲುವಾಸ ಕಂಡವರು.

- Advertisement -
- Advertisement -

ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸಮಿತಿ ಉಪಾಧ್ಯಕ್ಷರು, ಸಿಪಿಐಎಂ ಪಕ್ಷದ ರಾಜ್ಯ ನೇತಾರರು ಆಗಿದ್ದ ಹಿರಿಯ ರೈತ ನಾಯಕ ಕಾಮ್ರೆಡ್ ಮಾರುತಿರಾವ್ ಮಾನ್ಪಡೆ ರವರು ದಿನಾಂಕ 20.10.2020ರ ಬೆಳಗ್ಗೆ 9:30ಕ್ಕೆ ನಿಧನರಾದರು. ಇದು ರಾಜ್ಯದ ರೈತ ಚಳವಳಿ ಹಾಗೂ ಶೋಷಿತರ ಪರ ಹೋರಾಟದ ಹಿತೈಷಿಗಳಿಗೆ ಒಟ್ಟಾರೆಯಾಗಿ ಇಡೀ ಪ್ರಜಾಸತ್ತಾತ್ಮಕ ಹೋರಾಟದ ಒಡನಾಡಿಗಳಿಗೆ ಅಘಾತ ಉಂಟುಮಾಡಿದೆ. ಕೋವಿಡ್-19 ಸೋಂಕು ಅಪಾಯವನ್ನು ಲೆಕ್ಕಿಸದೇ ಅಂತಿಮ ದರ್ಶನದ ಅವಕಾಶ ಇಲ್ಲದಿದ್ದರೂ ಅಂತಿಮ ನಮನಕ್ಕೆ ಸೇರಿದ್ದ ಅಪಾರ ಜನಸ್ತೋಮ ಹಾಗೂ ರಾಜ್ಯದೆಲ್ಲೆಡೆ ವ್ಯಕ್ತವಾದ ಸಂತಾಪ ಮಾನ್ಪಡೆಯವರು ಹೊಂದಿದ್ದ ಜನಪರ ಕಾಳಜಿಯ ಅಭಿವ್ಯಕ್ತಿಯಾಗಿತ್ತು.

ಕಾಮ್ರೆಡ್ ಮಾರುತಿರಾವ್ ಮಾನ್ಪಡೆಯವರು ಇಡೀ ರಾಜ್ಯ ಕಂಡ ಅಪರೂಪದ ದಿಟ್ಟ ರೈತ ನಾಯಕ. ರಾಜ್ಯದ ನೀರಾವರಿ ಯೋಜನೆಗಳು ಮತ್ತು ನೀರಾವರಿ ಹೋರಾಟಗಳ ಕುರಿತು ಅಪಾರ ಜ್ಞಾನ ಹೊಂದಿದ್ದರು. ತೊಗರಿ ಬೆಲೆಗಾಗಿ, ಬಗರ್‌ಹುಕುಂ ಸಾಗುವಳಿ ಸಕ್ರಮಕ್ಕಾಗಿ, ಕೃಷ್ಣ ನದಿ ನೀರು ಬಳಕೆಯ ನೀರಾವರಿಗಾಗಿ, ವಿದ್ಯುತ್ ಖಾಸಗೀಕರಣ, ಕೃಷಿ ಉತ್ಪನ್ನಗಳ ಅಮದು ಮುಂತಾದ ಕೇಂದ್ರ, ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳು ಸೇರಿದಂತೆ ಹಲವಾರು ರೈತ ಹೋರಾಟ ಪ್ರಶ್ನೆಗಳನ್ನು ಕೈಗೆತ್ತಿಕೊಂಡು ರೈತ ಸಮುದಾಯಕ್ಕೆ ನ್ಯಾಯ-ಪರಿಹಾರ ಒದಗಿಸುವುದರಲ್ಲಿ ನಿರತರಾಗಿದ್ದ ರಾಜಿರಹಿತ ಹೋರಾಟಗಾರ ಅವರಾಗಿದ್ದರು. ತೊಗರಿ ಬೆಳೆಗೆ ಸಿಗಬೇಕಾದ ವೈಜ್ಞಾನಿಕ ಬೆಲೆ ವಿಷಯದ ಹೋರಾಟದ ಚಾಂಪಿಯನ್ ಆಗಿ ಮನೆ ಮಾತಾಗಿದ್ದ ಮಾನ್ಪಡೆಯವರು ಕೃಷ್ಣ ಜಲ ಭಾಗ್ಯ ನಿಗಮ ರಚನೆಗೆ ಒತ್ತಡ ಹೇರಿದ ಪ್ರಮುಖ ಶಕ್ತಿಯಾಗಿದ್ದರು. ವಿಶ್ವ ಬ್ಯಾಂಕ್‌ನ ಸಾಲದ ಷರುತ್ತಗಳಿಗೆ ಕೃಷ್ಣ ಜಲ ಭಾಗ್ಯ ನಿಗಮ ಈಡಾಗದಂತೆ ರೈತರ ಬೃಹತ್ ಸಮಾವೇಶವನ್ನು ಸಂಘಟಿಸಿದ್ದರು.

ರೈತ – ಕೃಷಿ ಕೂಲಿಕಾರರ ಪ್ರಶ್ನೆಗಳಿಗೆ ಮಾತ್ರವೇ ಅಲ್ಲದೇ ರಾಜ್ಯದ ಪಂಚಾಯತಿ, ಅಂಗನವಾಡಿ ಕಾರ್ಮಿಕರನ್ನು ಹಾಗೂ ಸಾಮಾಜಿಕವಾಗಿ ದಮನಕ್ಕೀಡಾಗಿದ್ದ ಶೋಷಿತ ದಲಿತ, ಮಹಿಳೆಯರನ್ನು ಕೂಡ ಸಂಘಟಿಸುವಲ್ಲಿ ಮುಂಚೂಣಿ ಪಾತ್ರವನ್ನು ಮಾರುತಿ ಮಾನ್ಪಡೆ ವಹಿಸಿದ್ದರು.

1995 ರಿಂದ 2017ರವರೆಗೆ ಸುಧೀರ್ಘ ಕಾಲಾವಧಿಗೆ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು ೧೯೮೯ರಿಂದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘಕ್ಕೆ ಕೂಡ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ಸುಮಾರು 40 ವರ್ಷಗಳ ಕಾಲದ ಅವರ ಹೋರಾಟದಿಂದ ರಾಜ್ಯದ ಮತ್ತು ವಿಶೇಷವಾಗಿ ಹೈದರಾಬಾದ್ ಕರ್ನಾಟಕ ಹಾಗೂ ಇಡೀ ಉತ್ತರ ಕರ್ನಾಟಕದ ಒಬ್ಬ ಪ್ರಮುಖ ಕಮ್ಯುನಿಸ್ಟ್ ಮುಖಂಡರಾಗಿ ಗುರುತಿಸಲ್ಪಟ್ಟಿದ್ದರು.

ಕರಿ ಲಿಂಗೇಶ್ವರ ಯುವ ರೈತ ಸಂಘದ ಮೂಲಕ ಸಾರ್ವಜನಿಕ ಜೀವನ ಪ್ರಾರಂಬಿಸಿದ ಮಾರುತಿ ಮಾನ್ಪಡೆಯವರು ಯಶವಂತ ಹಲಸೂರು, ವಿ.ಎನ್ ಹಳಕಟ್ಟಿ, ಗಂಗಾಧರ ನಮೋಶಿ, ಚಂದ್ರಶೇಖಕರ ಬಾಳೆ, ಪಿ ರಾಮಚಂದ್ರರಾವ್‌ರವರ ಒಡನಾಟವೂ ಸೇರಿದಂತೆ ರೈತ ಹಾಗೂ ಕಮ್ಯುನಿಸ್ಟ್ ಚಳುವಳಿಯ ಪ್ರಭಾವಕ್ಕೆ ಒಳಗಾಗಿ ತಮ್ಮ ನೌಕರಿಗೆ ರಾಜೀನಾಮೆ ನೀಡಿ ರೈತ ಚಳವಳಿಯ ಪೂರ್ಣ ಕಾಲದ ಕಾರ್ಯಕರ್ತರಾಗಿ ಗುಲ್ಬರ್ಗ ಜಿ¯ಯಿಂದ ಕೆಲಸ ಆರಂಭಿಸಿದರು. ಶೋಷಿತರ ಪರವಾದ ದಣಿವರಿಯದ ಕೆಲಸದ ಪರಿಣಾಮವಾಗಿ 1986 ರಲ್ಲಿ ಗುಲ್ಬರ್ಗ ಜಿ.ಪಂ ಸದಸ್ಯರಾಗಿ ಸಿಪಿಐಎಂನ್ನು ಪ್ರತಿನಿಧಿಸಿದ್ದರು. ಜಿ.ಪಂ ಸದಸ್ಯರಾಗಿ ಅವರು ಮಾಡಿದ ಕೆಲಸಗಳು ಇಡೀ ರಾಜ್ಯದಲ್ಲೇ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಹೇಗೆ ಕೆಲಸ ಮಾಡಬೇಕು ಎಂಬುದಕ್ಕೆ ಮಾದರಿಯಾಗಿತ್ತು.
ಕೆಲಸ ಕಾರ್ಯಗಳಲ್ಲಿ ಸಮರಶೀಲತೆ ಮತ್ತು ಬದ್ದತೆಯ ಹೋರಾಟಕ್ಕೆ ಮತ್ತೊಂದು ಹೆಸರಾಗಿದ್ದ ಕಾಮ್ರೆಡ್ ಮಾರುತಿ ಮಾನ್ಪಡೆಯವರು 8 ಕ್ಕೂ ಹೆಚ್ಚು ಬಾರಿ ಜೈಲುವಾಸ ಕಂಡವರು. ಪಂಪ್‌ಸೆಟ್ ಬಳಕೆದಾರರಿಗೆ ಮೀಟರ್ ಅಳವಡಿಸಿ ವಿದ್ಯುತ್ ಖಾಸಗೀಕರಣದ ಪ್ರಯತ್ನ ಮಾಡುವ ಸರ್ಕಾರದ ಧೋರಣೆ ವಿರುದ್ಧ ಹೋರಾಟ ಒಂದರಲ್ಲೇ ೩ ತಿಂಗಳು ಜೈಲಿನಲ್ಲಿದ್ದರು. ಒಟ್ಟಾರೆ ಅವರ ಹೋರಾಟದ ಜೀವನದಲ್ಲಿ ಸುಮಾರು 150 ದಿನಗಳಿಗೂ ಹೆಚ್ಚು ಜೈಲು ವಾಸ ಅನುಭವಿಸಿದ್ದರು. ರೈತ ವಿರೋಧಿ ಸುಗ್ರೀವಾಜ್ಞೆಗಳ ವಿರುದ್ಧ 2020.ಸೆಪ್ಟೆಂಬರ್ 25 ರಂದು ನಡೆದ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್‌ನ ರಸ್ತೆ ತಡೆ ಪ್ರತಿಭಟನೆಯಲ್ಲೂ ಬಂಧನಕ್ಕೆ ಒಳಗಾಗಿದ್ದರು.

ಚುನಾವಣಾ ಹೋರಾಟದಲ್ಲೂ ಅಭ್ಯರ್ಥಿಯಾಗಿ ಭಾಗವಹಿಸಿದ್ದ ಮಾರುತಿ ಮಾನ್ಪಡೆ ರವರು ಬೀದರ್ ಲೋಕಸಭಾ ಹಾಗೂ ಗುಲ್ಬರ್ಗ ಗ್ರಾಮೀಣ ಮೀಸಲು ಕ್ಷೇತ್ರದಲ್ಲಿ ಸಿಪಿಐಎಂ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿದ್ದರು.

1955ರಲ್ಲಿ ಸಾಮಾಜಿಕವಾಗಿ ಅಸ್ಪೃಶ್ಯತೆ ಅನುಭವಿಸುತ್ತಿದ್ದ ಬಡತನದ ಕುಟುಂಬದಲ್ಲಿ ಜನಿಸಿದ ಮಾರುತಿ ಮಾನ್ಪಡೆಯವರು ಸ್ವತಃ ಬರಗಾಲದ ಬವಣೆಗಳನ್ನು ಅನುಭವಿಸಿ ರೈತರ ಕಷ್ಟ -ನಷ್ಟಗಳನ್ನು ನೇರವಾಗಿ ಕಂಡವರು. 65 ವಯಸ್ಸಿನ ಹಿರಿಯರಾಗಿದ್ದರೂ ದೈಹಿಕ ಆರೋಗ್ಯ ಸ್ಥಿತಿಯನ್ನು ಲೆಕ್ಕಿಸದೇ ಕೇಂದ್ರ, ರಾಜ್ಯ ಸರ್ಕಾರಗಳ ಕೃಷಿ ಸುಗ್ರಿವಾಜ್ಞೆಗಳನ್ನು ವಿರೋಧಿಸಿ ಸೆಪ್ಟೆಂಬರ್ 21 ರಿಂದ 26ರವರಿಗೆ ಬೆಂಗಳೂರಿನಲ್ಲಿ ನಡೆದ ಆಹೋರಾತ್ರಿ ಹೋರಾಟದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾಗಿ ತೊಡಗಿಸಿಕೊಂಡಿದ್ದರು. ಸೆಪ್ಟೆಂಬರ್ 28 ರ ಕರ್ನಾಟಕ ಬಂದ್ ಯಶಸ್ವಿಗೊಳಿಸಲು ಗುಲ್ಬರ್ಗಕ್ಕೆ ತೆರಳಿ ಹೈದರಾಬಾದ್ ಕರ್ನಾಟಕ ಬಂದ್ ಯಶಸ್ವಿ ಆಗಲು ಶ್ರಮಿಸಿದ್ದರು. ಈ ಕಾಲಾವಧಿಯಲ್ಲಿ ಆದ ಕೋವಿಡ್-19 ಸೋಂಕಿಗೆ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯರ ಉತ್ತಮ ಪ್ರಯತ್ನದ ಹೊರತಾಗಿಯೂ ಚಿಕಿತ್ಸೆ ಫಲಕಾರಿಯಾಗದೇ ಶೋಷಿತರ ಬಲವಾದ ಧ್ವನಿಯೊಂದು ನಿಂತು ಹೋಗಿದೆ.

ಸಂಗಾತಿ ಮಾನ್ಪಡೆರವರು ಜನರ ಸಮಸ್ಯೆಗಳನ್ನು ನಿಖರವಾಗಿ ಗುರುತಿಸಿ, ಹೋರಾಟದ ಸ್ಪರೂಪ ನೀಡುವುದರಲ್ಲಿ ಬಹಳ ಪರಿಣತಿ ಹೊಂದಿದ್ದ ಮತ್ತು ರಾಜ್ಯದ ಎಲ್ಲ ಜನಪರ ಚಳವಳಿಗಳಗೆ ಮಾರ್ಗದರ್ಶನ ನೀಡಬಲ್ಲ ಒಡನಾಡಿಯಾಗಿದ್ದರು. ಇವರ ನಿಧನ ರೈತ ಚಳುವಳಿಗೆ ಮಾತ್ರವೇ ಅಲ್ಲದೇ ಒಟ್ಟಾರೆ ಪ್ರಜಾಸತ್ತಾತ್ಮಕ ಹೋರಾಟಗಳಿಗೆ ಅಪಾರ ನಷ್ಟ.

  • ಟಿ.ಯಶವಂತ
    ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸಮಿತಿ ಸದಸ್ಯರು.

ಇದನ್ನೂ ಓದಿ: ಮಾರುತಿ ಮಾನ್ಪಡೆಯವರ ಸಾವಿಗೆ ಸರ್ಕಾರವೇ ನೇರ ಹೊಣೆ: ಐಕ್ಯ ಹೋರಾಟ ಸಮಿತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...