ಒಡೆದುಹೋದ ಸಂಬಂಧಕ್ಕೆ ಅಕ್ಷರದ ಮೂಲಕ ಔಷಧಿ ಹುಡುಕಬೇಕು. ಇಲ್ಲಿವರೆಗೆ ನಡೆದಿರುವ ಚಳವಳಿಗಳಾಗಲಿ, ಮಾನವೀಯ ಚಿಂತನೆಗಳಾಗಲಿ ಹೀಗೆ ನಮ್ಮನ್ನೆಲ್ಲಾ ಬೆಸೆದಿರುವುದು ಅಕ್ಷರ ಮತ್ತು ಪುಸ್ತಕಗಳ ಮೂಲಕವಾಗಿವೆ ಎಂದು ಚಿಂತಕ ವಡ್ಡಗೆರೆ ನಾಗರಾಜಯ್ಯ ಅವರು ಹೇಳಿದ್ದಾರೆ. ಖ್ಯಾತ ಕ್ರಿಕೆಟಿಗ, ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಗ್ಗೆಗಿನ “ಇಮ್ರಾನ್ ಖಾನ್-ಒಂದು ಜೀವಂತ ದಂತಕಥೆ” ಪುಸ್ತಕಕ್ಕೆ ಸಂಘಪರಿವಾರ ವಿರೋಧ ವ್ಯಕ್ತಪಡಿಸಿರುವುದ ಬಗ್ಗೆ ಅವರು ಮಾತನಾಡುತ್ತಿದ್ದರು.
ಪ್ರಥಮ ಪ್ರಕಾಶನ ಬೆಂಗಳೂರು ಪ್ರಕಟಿಸಿದ್ದ “ಇಮ್ರಾನ್ ಖಾನ್-ಒಂದು ಜೀವಂತ ದಂತಕಥೆ” ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಬೆಂಗಳೂರಿನ ಮಲ್ಲತಹಳ್ಳಿಯ ಕಲಾಗ್ರಾಮದಲ್ಲಿ ಯೋಜಿಸಲಾಗಿತ್ತು. ಆದರೆ ಸಂಘಪರಿವಾರದಿಂದ ವಿರೋಧ ವ್ಯಕ್ತವಾದ್ದರಿಂದ ನಿಗದಿಪಡಿಸಲಾಗಿದ್ದ ಸ್ಥಳ ಬದಲಾಯಿಸಿ, ಲೇಖಕರ ಮನೆಯಲ್ಲಿಯೇ ಗುರುವಾರ ಸಂಜೆ ಬಿಡುಗಡೆಗೊಳಿಸಲಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಈ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ನಾಗರಾಜಯ್ಯ ಅವರು, “ಇಮ್ರನ್ ಖಾನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದ ಕ್ರಿಕೆಟ್ ತಾರೆ. ನಮಗೆ ಅವರ ರಾಜಕೀಯ, ಧಾರ್ಮಿಕ ಚಿಂತನೆಗಳ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಅಂತಹ ಭಿನ್ನಮತಗಳನ್ನು ಇಟ್ಟುಕೊಂಡೆ ಒಬ್ಬ ವ್ಯಕ್ತಿಯ ಒಳಿತು, ವ್ಯಕ್ತಿತ್ವದ ಘನತೆ, ಅವರ ಸಾಧನೆಯನ್ನು ಗುರುತಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ‘ಇಮ್ರಾನ್ ಖಾನ್ ಒಂದು ಜೀವಂತ ದಂತಕತೆ’ ಪುಸ್ತಕ ತುಂಬಾ ಮುಖ್ಯವಾಗುತ್ತದೆ. ಎಲ್ಲಿಂದಲೇ ಆಗಲಿ, ನಮಗೆ ಹೊಸ ಬೆಳಕು, ನೀರು, ವಾತಾವರಣ, ಹೊಸತನ ಬೇಕಾಗಿದೆ. ಇವುಗಳನ್ನು ಸ್ವಾಗತಿಸೋಣ. ಮಾನವೀಯ ಆಲೋಚನೆಗಳು ಎಲ್ಲಿಂದ ಬಂದರೂ ಏನು ತಪ್ಪಿದೆ?” ಎಂದು ಹೇಳಿದರು.
“ಎರಡು ದೇಶಗಳ ಸ್ಥಿತಿ ಈಗ ದಾಯಾದಿ ಮತ್ಸರದ ತರ ಆಗಿಹೋಗಿದೆ. ಆದರೆ ಈ ದಾಯಾದಿಗಳು ತಮ್ಮ ಮತ್ಸರ ಮರೆತು ಸೋದರ ಭಾವದಿಂದ ಇರಬಾರದು ಎಂದೇನು ಇಲ್ಲವಲ್ಲ? ಒಡೆದುಹೋದ ಸಂಬಂಧಕ್ಕೆ ಅಕ್ಷರದ ಮೂಲಕ ಔಷಧಿ ಹುಡುಕಬೇಕು. ಇಲ್ಲಿವರೆಗೆ ನಡೆದಿರುವ ಚಳವಳಿಗಳಾಗಲಿ, ಮಾನವೀಯ ಚಿಂತನೆಗಳಾಗಲಿ ಹೀಗೆ ನಮ್ಮನ್ನೆಲ್ಲಾ ಬೆಸೆದಿರುವುದು ಅಕ್ಷರ ಮತ್ತು ಪುಸ್ತಕಗಳ ಮೂಲಕವಾಗಿವೆ”
“ಹೀಗೆ ಇದೊಂದು ಸಾಂಸ್ಕೃತಿಕ ಕೊಡುಕೊಳ್ಳುವಿಕೆ ಹಾಗೂ ಅನುಸಂಧಾನವಾಗಿದೆ. ಈ ಅನುಸಂಧಾನ ನಡೆದಾಗಲೆ ವ್ಯಕ್ತಿತ್ವ ವಿಕಸನ ಆಗುವುದು. ವೈರಿ ಎಂದು ಹೇಳಿಕೊಂಡು ಅಲ್ಲಿನ ಎಲ್ಲರಲ್ಲೂ ವೈರತ್ವವಿದೆ, ವಿಷವಿದೆ ಎನ್ನುತ್ತಾ ಹೋದರೆ ನಮ್ಮೊಳಗೆಯೆ ವಿಷವಿದೆ ಎಂದರ್ಥ. ಕೆಟ್ಟವನು ಯಾರು ಎಂದು ಹುಡುಕಿಕೊಂಡು ಹೋಗುವ ಗುಣವೇ ನಮ್ಮೊಳಗಿನ ಕೆಟ್ಟತನ”.
“ವಚನ ಸಾಹಿತ್ಯ, ಬುದ್ಧನ ಬೋಧನೆಗಳು, ಮಹಾವೀರನ ಬೋಧನೆಗಳನ್ನೇ ನೋಡಿ, ಈ ಎಲ್ಲವು ನಮಗೆ ಸಾಹಿತ್ಯದ ಮೂಲಕ ಸಿಕ್ಕವುಗಾಳಾಗಿವೆ. ಯಾವ ಚಳವಳಿ ಮಾಡದೆ ಇರುವ ಕೆಲಸವನ್ನು ಒಂದು ಸಾಹಿತ್ಯ ಮಾಡುತ್ತವೆ. ಹಾದಿ ಬೀದಿ ಹೋರಾಟಕ್ಕಿಂತಲೂ ದೊಡ್ಡದಾದ ಕೂಡಿಸುವಿಕೆ, ಬೆಸೆಯುವಿಕೆ ಒಂದು ಪುಸ್ತಕದಿಂದ ಸಾಧ್ಯವಿದೆ. ಅಂತಹ ಪುಸ್ತಕಗಳನ್ನು ನಾವು ಅನ್ಯ ದೇಶದವನು, ವೈರಿ ಎಂದು ಹೇಳಿ ನೋಡಿದರೆ ಹೇಗೆ?”
ಇದನ್ನೂ ಓದಿ: ಸಂಘಪರಿವಾರದ ವಿರೋಧದ ನಡುವೆಯು ‘ಇಮ್ರಾನ್ ಖಾನ್ ಒಂದು ಜೀವಂತ ದಂತಕತೆ’ ಪುಸ್ತಕ ಬಿಡುಗಡೆ
“ಪಾಕಿಸ್ತಾನ ಮತ್ತು ನಮ್ಮ ದೇಶದ ಶಿಕ್ಷಣ, ಬಡತನ, ಕೃಷಿ ಹೀಗೆ ಯಾವುದೇ ವಿಚಾವನ್ನು ತೆಗೆದುಕೊಳ್ಳಿ, ಹೆಚ್ಚು ಕಡಿಮೆ ನಾವು ಅವರು ಸಮಾನ ಮತ್ತು ಸಮಾನ ದುಃಖಿಗಳು. ಅವರ ಮತ್ತು ನಮ್ಮ ಬಾಳಾಟ, ಗೋಳಾಟ, ಜೀವನ ವಿಧಾನ, ಸಂಸ್ಕೃತಿ ವಿಧಾನ, ನೆಲೆ ಎಲ್ಲವೂ ಒಂದೆ ಆಗಿದೆ. ಹೀಗಿರುವಾಗ ಅವರ ಬಗ್ಗೆ ಓದಬಾರದು ಎಂದು ಹೇಗೆ ಹೇಳಲು ಸಾಧ್ಯ? ನಮ್ಮ ರಾಜಕೀಯ ಮತ್ತು ಧಾರ್ಮಿಕ ಭಿನ್ನಾಭಿಪ್ರಾಯಗಳು ಇರಲಿ, ಭಿನ್ನಮತಗಳು ಯಾವುತ್ತಿಗೂ ಸ್ವಾಗತಾರ್ಹ. ಆದರೆ ಸಂಪೂರ್ಣ ವೈರಿ ಎಂದು ಅವರನ್ನು ಆಚೆಕಡೆ ಎಸೆದುಬಿಟ್ಟ ನಾವು ಸಾಧಿಸುವುದು ಏನಿದೆ?”
“ಬ್ರಿಟೀಷರ ವಿರುದ್ಧ ಹೋರಾಟ ಮಾಡುವಾಗ ನಾವು ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದವರಂತೆ ಬದುಕಿದ್ದವರು. ಹೀಗಿರುವಾಗ ಒಬ್ಬ ಕ್ರಿಕೆಟ್ ತಾರೆ, ಮಾಜಿ ಪ್ರಧಾನ ಮಂತ್ರಿಯ ಪುಸ್ತಕ ನಮ್ಮಲ್ಲಿ ಯಾಕೆ ಬಿಡುಗಡೆಯಾಗಬೇಕು ಎನ್ನುವುದು ಸರಿಯಲ್ಲ”
“ಮುಂದಕ್ಕೂ ನಾವು ವೈರಿಗಳಾಗಿಯೆ ಬದುಕಬೇಕೆ? ಇನ್ನೆಷ್ಟು ಕಾಲ ವೈರಿಗಳಂತೆ ಬಾಳಿಕೊಂಡು ಹೋಗಬೇಕು? ಪುಲ್ವಾಮದಲ್ಲಿ ಭಾರತೀಯರನ್ನು ಕೊಂದಿದ್ದಕ್ಕೆ ಅವರು ಸಂಭ್ರಮಪಟ್ಟರು ಎಂಬುವುದು ಈಗ ವಿವಾದ. ಆದರೆ ಪಾಕಿಸ್ತಾನಿಗಳನ್ನು ಕೊಂದರೆ ನಮ್ಮ ದೇಶದಲ್ಲಿ ಸಂಭ್ರಮ ಪಡುವವರು ಇಲ್ಲವೆ?. ಅದಾಗ್ಯೂ ನಮ್ಮ ಧರ್ಮ, ನಮ್ಮ ಮೌಲ್ಯ, ಕೊಲ್ಲುವುದಲ್ಲ ಬದಲಾಗಿ ಅಹಿಂಸೆಯಾಗಿದೆ. ಮಾನವೀಯತೆ, ಪ್ರೀತಿಯಾಗಿದೆ ನಮ್ಮ ಮೌಲ್ಯ, ಧರ್ಮ” ಎಂದು ನಾಗರಾಜಯ್ಯ ಅವರು ಹೇಳಿದರು.
ಇದನ್ನೂ ಓದಿ: ಹಳತು-ವಿವೇಕ; ‘ಸಮನ್ವಯ ಮಾಡಿಕೊಳ್ಳದಿದ್ದರೆ ಕಾವ್ಯ ಹೇಗಾಗುತ್ತೆ?’ ಚೆನ್ನವೀರ ಕಣವಿ ಅವರ ಸಂದರ್ಶನ
“ಇಂಗ್ಲೀಷರು ನಮ್ಮನ್ನು ಗುಲಾಮಗಿರಿಗೆ ತಳ್ಳಿ ನಮ್ಮನ್ನು ಆಳ್ವಿಕೆ ನಡೆಸಿದವರಾಗಿದ್ದಾರೆ. ಇಂಗ್ಲಿಷ್ನವರ ಕೃತಿಗಳನ್ನು ಇಲ್ಲಿ ಯಾಕೆ ಓದುತ್ತೀರಿ ಎಂದು ಕೇಳಿದರೆ ಸರಿಯಾಗುತ್ತದೆಯೆ. ಆದರೆ ಅಲ್ಲಿನ ಸಾಹಿತ್ಯವೂ ನಮಗೆ ಬೇಕು, ಹಾಗೆಯೆ ಇಲ್ಲಿನ ಸಾಹಿತ್ಯವನ್ನೂ ನಾವು ಅಲ್ಲಿಗೆ ಕಳುಹಿಸಬೇಕು. ಕಾರ್ಲ್ ಮಾರ್ಕ್ಸ್ ಅನ್ನು ನಾವು ಓದುತ್ತೇವೆ ಎಂದರೆ, ಇಲ್ಲಿನ ಬಸವ, ಬುದ್ಧನನ್ನು ಅವರು ಓದುವುದು ಬೇಡವೆ? ಚೀನಾದ ಕ್ರಾಂತಿಕಾರಿ ಮಾವೋತ್ಸೆ ತುಂಗನನ್ನು ನಾವು ಓದುತ್ತೇವೆ ಎಂದರೆ, ಇಲ್ಲಿನ ಭಗತ್ ಸಿಂಗ್ನನ್ನು ಅವರು ತಿಳಿಯುವುದು ಬೇಡವೆ? ಟಾಲ್ಸ್ಟಾಯ್ ಅವರನ್ನು ನಾವು ಓದುತ್ತೇವೆ, ಕುವೆಂಪು ಅವರನ್ನು ಅವರು ಓದುವುದು ಬೇಡವೆ?”
“ಭಾರತ ಮತ್ತು ಪಾಕಿಸ್ತಾನ ಎರಡು ಕೂಡಾ ಘೋಷಿತ ಶತ್ರುಗಳು ಎಂಬಂತೆ ಬಿಂಬಿಸಲಾಗುತ್ತಿದೆ. ಅದರಲ್ಲೂ ಈ ಎರಡು ದೇಶಗಳನ್ನು ಧರ್ಮದ ನೆಲೆಯಲ್ಲಿ, ಮುಸ್ಲಿಮರು ಎನ್ನುವ ಕಾರಣಕ್ಕೆ ಘೋಷಿತ ಶತ್ರುಗಳು ಎಂಬಂತೆ ಬಿಂಬಿಸಲಾಗುತ್ತಿದೆ. ಹೀಗಾದರೆ ಉಳಿದ ಎಲ್ಲಾ ದೇಶಕ್ಕೂ ಈ ಧರ್ಮದ ನೆಲೆಯನ್ನೇ ಇವರು ಅನ್ವಯಿಸುತ್ತಾರೆ. ಹಿಂದೂ ಧರ್ಮವನ್ನು ಶ್ರೇಷ್ಠ ಎಂದು ನಂಬಿಸುತ್ತಾ, ಇಸ್ಲಾಂ ಧರ್ಮವನ್ನು ವೈರಿ ನೆಲೆಯಲ್ಲಿ ಕಂಡು ಬೇರೆ ರಾಷ್ಟ್ರಗಳನ್ನು ಕೂಡಾ ವೈರಿ ದೇಶಗಳಂತೆ ಕಾಣುತ್ತಾರೆ”
“ವರ್ತಮಾನ ಭಾರತದ ಅಂತರಂಗದ ಒಳಗೆ ಕೂಡಾ ಹಿಂದೂ-ಮುಸ್ಲಿಂ ವೈರತ್ವ ಭಾರಿ ಜೋರಾಗಿ ಹೊಗೆಯಾಡುತ್ತಿದೆ. ಹೀಗಾಗಿ ಇದಕ್ಕೆ ಲಗಾಮು ಹಾಕುವುದು ತುಂಬಾ ಅಗತ್ಯವಿದೆ. ಈ ಹೊತ್ತು ಭಾರತ ಅಂತಾರಾಷ್ಟ್ರೀಯ ಸಂಬಂಧಗಳನ್ನು ಬೇರೆ ಬೇರೆ ದೇಶಗಳೊಂದಿಗೆ ದಕ್ಕಿಸಿಕೊಳ್ಳಬೇಕಾಗಿದೆ. ದೇಶದ ರಾಜತಾಂತ್ರಿಕದ ಮುಖ್ಯಗುರಿ ಈ ರೀತಿ ಅಂತಾರಾಷ್ಟ್ರೀಯ ಸಂಬಂಧಗಳನ್ನು ಬೆಸೆದುಕೊಳ್ಳುವುದು. ಭಾರತ-ಪಾಕಿಸ್ತಾನ ರಾಷ್ಟ್ರಗಳು ಬೇರೆ ಯಾವುದೆ ದೇಶಗಳಿಗಿಂತ ಹೆಚ್ಚಾಗಿ ಸೋದರ ಸಂಬಂಧವನ್ನು ಬೆಳೆಸಿಕೊಳ್ಳಬೇಕಿದೆ. ಯಾಕೆಂದರೆ ಈ ಎರಡು ದೇಶಗಳು ವಿಭಜನೆ ಪೂರ್ವದಲ್ಲಿ ಬ್ರಿಟೀಷರ ವಿರುದ್ಧ ಐಕ್ಯತೆಯಿಂದ ಹೋರಾಡಿ ದೇಶಗಳನ್ನು ಸ್ವಾತಂತ್ಯ್ರಗೊಳಿಸಿವೆ. ಆ ವೇಳೆ ಇದ್ದಂತಹ ಐಕ್ಯತೆ, ಆಗಿನ ಸೋದರ ಸಂಬಂಧಗಳನ್ನು ನೆನಪಿಸಿಕೊಂಡರೆ ಮುಸ್ಲಿಮರು ಮಾತ್ರವಲ್ಲ, ಪಾಕಿಸ್ತಾನದವರು ಕೂಡಾ ನಮ್ಮ ಸಹೋದರರೆ ಎಂಬ ಬಂಧುತ್ವ ಬಂದುಬಿಡುತ್ತದೆ” ಎಂದು ನಾಗರಾಜಯ್ಯ ಅವರು ಹೇಳಿದರು.
ಇದನ್ನೂ ಓದಿ: ಎಷ್ಟು ಬೆಂಕಿ ಹಚ್ಚಬಲ್ಲಿರಿ ನೀವು?
ಮಾಜಿ ಕ್ರಿಕೆಟಿಗ, ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರ ಬಗ್ಗೆಗಿನ, “ಇಮ್ರಾನ್ ಖಾನ್-ಒಂದು ಜೀವಂತ ದಂತಕಥೆ” ಪುಸ್ತಕವನ್ನು ಗುರುವಾರ ಬೆಂಗಳೂರಿನ ನಾಗರಬಾವಿಯಲ್ಲಿ ಬಿಡುಗಡೆ ಮಾಡಲಾಯಿತು. ಪುಸ್ತಕದ ಲೇಖಕರಾದ ಸುಧಾಕರ್ ಎಸ್.ಬಿ. ಅವರ ನಿವಾಸದಲ್ಲಿ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಅವರು ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಐನಕೈ, ಮಾಜಿ ಸಚಿವರಾದ ಡಾ.ಲೀಲಾದೇವಿ ಆರ್ ಪ್ರಸಾದ್, ಪುಸ್ತಕದ ಲೇಖಕ ಸುಧಾಕರ್ ಎಸ್ ಬಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ. ಪ್ರಕಾಶ್ ಟಿ.ಎನ್. ಕಮ್ಮರಡಿ, ಪ್ರೊ. ರಾಜಪ್ಪ ದಳವಾಯಿ, ವಿ.ಎನ್. ವೀರನಾಗಪ್ಪ ಹಾಗೂ ಡಾ. ಕುಮಾರಸ್ವಾಮಿ ಬೆಜ್ಜಿಹಳ್ಳಿ ಅವರು ಉಪಸ್ಥಿತರಿದ್ದರು.