ಲಖಿಂಪುರ್ ಖೇರಿ ರೈತರ ಹತ್ಯಾಕಾಂಡದ ಹಿಂದೆ ಒಕ್ಕೂಟ ಸರ್ಕಾರದ ಸಚಿವ ಅಜಯ್ ಮಿಶ್ರಾ ಇದ್ದಾರೆ ಎಂದು ಉತ್ತರ ಪ್ರದೇಶ ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಮ್ ಇಕ್ಬಾಲ್ ಸಿಂಗ್ ಗುರುವಾರ ಆರೋಪಿಸಿದ್ದಾರೆ. ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಕೋರಿದ್ದಾರೆ.
ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸದ ಕಾರಣಕ್ಕಾಗಿ ಪ್ರಧಾನಿಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಅವರ “ಉದ್ರೇಕಕಾರಿ ಹೇಳಿಕೆ” ಬೆಂಕಿಗೆ ತುಪ್ಪ ಸುರಿದಂತಾಯಿತು ಎಂದು ಅವರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ‘ಪಕ್ಷ ನನಗೆ ದ್ರೋಹ ಮಾಡುತ್ತಿದೆ’: ರಾಜೀನಾಮೆಗೆ ಸಜ್ಜಾದ ಬಿಜೆಪಿ ಶಾಸಕ ಮಸಾಲೆ ಜಯರಾಮ
“ಘಟನೆ ಬಗ್ಗೆ ಅವರು ರೈತರಲ್ಲಿ ಕ್ಷಮೆ ಕೇಳಬೇಕಿತ್ತು. ಆದರೆ ಅವರು ತಮ್ಮ ಮಗನನ್ನು ರಕ್ಷಿಸಲು ಮಾತ್ರ ಪ್ರಯತ್ನಿಸಿದರು. ಘಟನೆಯ ಬಗ್ಗೆ ಅವರು ಇನ್ನೂ ವಿಷಾದಿಸಿಲ್ಲ. ಈ ಘಟನೆಯು ಮಾನವೀಯತೆಗೆ ಕಳಂಕವಾಗಿದೆ” ಎಂದು ರಾಮ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಅವರ ಮಗ ತನ್ನ ಕಾರಿನ ಅಡಿಗೆ ರೈತರನ್ನು ಹಾಕಿ ಹತ್ಯೆ ಮಾಡಿದ್ದಾನೆ. ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದ ನಂತರ ಆತನನ್ನು ಬಂಧಿಸಲಾಯಿತು. ಆದರೆ ಇಂದಿಗೂ ಸಚಿವರು ಕುರ್ಚಿಯಲ್ಲಿ ಕುಳಿತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಸಚಿವರನ್ನು ತಕ್ಷಣವೇ ವಜಾಗೊಳಿಸಬೇಕು” ಎಂದು ಹೇಳಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಾಮ್ ಸಿಂಗ್, ಲಖಿಂಪುರ್ ಘಟನೆ ಮತ್ತು ಗೋರಖ್ಪುರ್ ಉದ್ಯಮಿ ಕೊಲೆ ಪ್ರಕರಣದಿಂದಾಗಿ ಬಿಜೆಪಿ ಸರ್ಕಾರದ ಇಮೇಜ್ ಹಾಳಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಲಖಿಂಪುರ್: ಅಪರಾಧದ ದೃಶ್ಯವನ್ನು ಮರುಸೃಷ್ಟಿಸಲು ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆತಂದ ಪೊಲೀಸರು
ಲಖಿಂಪುರ್ ಘಟನೆಯಲ್ಲಿ ಬಿಜೆಪಿ ಕಾರ್ಯಕರ್ತರು ಕೂಡ ಸಾವನ್ನಪ್ಪಿದ್ದಾರೆ. ಅವರನ್ನೂ ಸರ್ಕಾರ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.
“ಈ ಘಟನೆಯ ಬಗ್ಗೆ ಸರ್ಕಾರದ ನಿಷ್ಠುರತೆಯಿಂದಾಗಿ ರಾಜ್ಯದಾದ್ಯಂತ ಕಾರ್ಯಕರ್ತರು ಕೋಪಗೊಂಡಿದ್ದಾರೆ. ರೈತರಿಗೆ ನೀಡಿದಂತೆ ಮೃತ ಕಾರ್ಯಕರ್ತರ ಸಂಬಂಧಿಕರಿಗೆ ಆರ್ಥಿಕ ನೆರವನ್ನು ಸರ್ಕಾರ ನೀಡಬೇಕು. ಜೊತೆಗೆ ಅವರ ಕುಟುಂಬ ಸದಸ್ಯರಿಗೆ ಉದ್ಯೋಗ ನೀಡಬೇಕು” ಎಂದು ಅವರು ಹೇಳಿದ್ದಾರೆ.
ಬಿಜೆಪಿಯಲ್ಲಿರುವ ಕಾರ್ಯಕರ್ತರ ಸ್ಥಿತಿ “ಬಂಧಿಸಲ್ಪಟ್ಟ ಕಾರ್ಯಕರ್ತ”ರಂತೆ ಆಗಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಅಧಿಕಾರಶಾಹಿಗಳು ಸರ್ಕಾರವನ್ನು ನಡೆಸುತ್ತಿದ್ದಾರೆ ಎಂದು ಅವರು ಈ ಹಿಂದೆ ಹೇಳಿದ್ದರು ಉತ್ತರ ಪ್ರದೇಶದ ಆದಿತ್ಯನಾಥ್ ಸರ್ಕಾರವನ್ನು ಟೀಕಿಸಿದ್ದರು. ಜೊತೆಗೆ ಕೊರೊನಾ ಅಲೆಯನ್ನು ನಿರ್ವಹಿಸಿರುವ ಬಗ್ಗೆಯು ಅವರು ಪ್ರಶ್ನೆ ಮಾಡಿದ್ದರು.
ಇದನ್ನೂ ಓದಿ: ದೇಶದಲ್ಲಿ ಲಖಿಂಪುರ್ ಖೇರಿಯಂತಹ ಘಟನೆ ನಡೆಯುತ್ತಲೇ ಇರುತ್ತವೆ: ನಿರ್ಮಲಾ ಸೀತಾರಾಮನ್