ಹಿಂಸಾಚಾರ ಪೀಡಿತ ನುಹ್ನಲ್ಲಿ ಶೋಭಾ ಯಾತ್ರೆಗೆ ಕರೆ ಹಿನ್ನೆಲೆ ಮೊಬೈಲ್ ಇಂಟರ್ನೆಟ್ ಮತ್ತು SMS ಸೇವೆಗಳನ್ನು ಆಗಸ್ಟ್ 28ರವರೆಗೆ ಸ್ಥಗಿತಗೊಳಿಸಿ ಹರಿಯಾಣ ಸರ್ಕಾರ ಆದೇಶ ಹೊರಡಿಸಿದೆ.
ಮೆರವಣಿಗೆ ಬಗ್ಗೆ ಸಮಾಜ ವಿರೋಧಿ ಶಕ್ತಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ವದಂತಿಗಳನ್ನು ಹರಡುವುದನ್ನು ತಡೆಯಲು ನಿರ್ಧಾರ ಕೈಗೊಂಡಿರುವುದಾಗಿ ಸರ್ಕಾರ ಪ್ರಕಟಿಸಿದೆ.
ಶನಿವಾರ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿವಿಎಸ್ ಎನ್ ಪ್ರಸಾದ್ ಅವರು ಇಂಟರ್ನೆಟ್ ಮತ್ತು ಎಸ್ ಎಮ್ ಎಸ್ ಸೇವೆಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ. ಕೋಮು ಘರ್ಷಣೆಗಳು ಭುಗಿಲೆದ್ದ ನಂತರ ಹರಿಯಾಣ ಸರ್ಕಾರವು ಈ ಹಿಂದೆಯೂ ನುಹ್ನಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿತ್ತು.
ಜುಲೈ 31 ರಂದು ನಡೆದ ವಿಶ್ವ ಹಿಂದೂ ಪರಿಷತ್ನ (ವಿಎಚ್ಪಿ) ಧಾರ್ಮಿಕ ಮೆರವಣಿಗೆಯ ವೇಳೆ ಹಿಂಸಾಚಾರ ನಡೆದಿತ್ತು. ಘಟನೆಯಲ್ಲಿ ಇಬ್ಬರು ಗೃಹ ರಕ್ಷಕ ಸಿಬ್ಬಂದಿ ಮತ್ತು ಧರ್ಮಗುರು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದರು.
ನುಹ್ ವ್ಯಾಪ್ತಿಯಲ್ಲಿ ಶಾಂತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗವನ್ನು ತಡೆಗಟ್ಟಲು ಈ ಆದೇಶವನ್ನು ಹೊರಡಿಸಲಾಗಿದೆ. ಆಗಸ್ಟ್ 28ರವರೆಗೆ ಆದೇಶ ಜಾರಿಯಲ್ಲಿರುತ್ತದೆ ಎಂದು ಪ್ರಸಾದ್ ಅವರು ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.
ಶುಕ್ರವಾರ ನುಹ್ ಡಿಸಿ ಅವರು ಎಸಿಎಸ್ ಅವರಿಗೆ ಪತ್ರ ಬರೆದು ಜಿಲ್ಲೆಯಲ್ಲಿ ಆಗಸ್ಟ್ 28 ರಂದು ‘ಬ್ರಿಜ್ ಮಂಡಲ್ ಶೋಭಾ ಯಾತ್ರೆ’ಗೆ ‘ಸರ್ವ ರಾಷ್ಟ್ರೀಯ ಹಿಂದೂ ಮಹಾಪಂಚಾಯತ್’ ಕರೆ ಕೊಟ್ಟಿದೆ. ಶಾಂತಿ ಕದಡಲು ಸಮಾಜ ವಿರೋಧಿ ಶಕ್ತಿಗಳಿಂದ ಸಾಮಾಜಿಕ ಮಾಧ್ಯಮಗಳ ದುರ್ಬಳಕೆ ನಡೆಯುತ್ತಿದ ಎಂದು ಡಿಸಿ ಅವರು ಗೃಹ ಇಲಾಖೆಯ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತಂದಿದ್ದರು.
ಯಾತ್ರೆಗೆ ಈ ಮೊದಲು ಅನುಮತಿಯನ್ನು ನಿರಾಕರಿಸಿ ಆದೇಶವನ್ನು ಹೊರಡಿಸಲಾಗಿತ್ತು. ಆದರೆ ವಿಹೆಚ್ ಪಿ ನಮಗೆ ರ್ಯಾಲಿ ನಡೆಸಲು ಯಾರ ಅನುಮತಿ ಕೂಡ ಬೇಡ ಎಂದು ಹೇಳಿಕೆಯನ್ನು ನೀಡಿತ್ತು.
ಇದೀಗ ನುಹ್ ನಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳು ಮತ್ತು SMS (ಬ್ಯಾಂಕಿಂಗ್ ಮತ್ತು ಮೊಬೈಲ್ ರೀಚಾರ್ಜ್ ಹೊರತುಪಡಿಸಿ) ಸೇವೆಗಳನ್ನು ರದ್ದುಪಡಿಸಿ ಆದೇಶಿಸಲಾಗಿದೆ.
ಇದನ್ನು ಓದಿ: ದಲಿತ ಬಾಲಕ ಶಾಲಾ ಕೊಠಡಿಯಲ್ಲಿ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ; ಕೊಲೆ ಆರೋಪಿಸಿದ ಕುಟುಂಬ