Homeಮುಖಪುಟಪುಲ್ವಾಮ ದಾಳಿ ಸಂದರ್ಭದಲ್ಲಿ ಮೋದಿ ಸರ್ಕಾರದ ಅಸಮರ್ಥತೆಯಿಂದ ಸೈನಿಕರನ್ನು ಉಳಿಸಿಕೊಳ್ಳಲಾಗಲಿಲ್ಲ: ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲರ...

ಪುಲ್ವಾಮ ದಾಳಿ ಸಂದರ್ಭದಲ್ಲಿ ಮೋದಿ ಸರ್ಕಾರದ ಅಸಮರ್ಥತೆಯಿಂದ ಸೈನಿಕರನ್ನು ಉಳಿಸಿಕೊಳ್ಳಲಾಗಲಿಲ್ಲ: ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲರ ಗಂಭೀರ ಆರೋಪ

ಪ್ರಧಾನಿಗೆ ಭ್ರಷ್ಟಾಚಾರದಿಂದ ಯಾವುದೇ ಸಮಸ್ಯೆ ಇಲ್ಲ ಎಂದು ನಾನು ಖಚಿತವಾಗಿ ಹೇಳಬಲ್ಲೆ, ಪುಲ್ವಾಮ ದಾಳಿಯ ಸಂದರ್ಭದಲ್ಲಿ ನನ್ನ ಬಾಯಿ ಮುಚ್ಚಿಸಲಾಯಿತು - ಸತ್ಯ ಪಾಲ್ ಮಲಿಕ್

- Advertisement -
- Advertisement -

ಮೋದಿ ಸರ್ಕಾರದ ಅಸಮರ್ಥತೆಯಿಂದ 2019ರ ಫೆಬ್ರವರಿಯಲ್ಲಿ ಪುಲ್ವಾಮ ದಾಳಿ ನಡೆದು 40 ಭಾರತೀಯ ಸೈನಿಕರು ಹುತಾತ್ಮರಾಗಬೇಕಾಯಿತು ಎಂದು ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ದಿ ವೈರ್ ಪತ್ರಕರ್ತ ಕರಣ್ ಥಾಪರ್‌ರವರಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ, “ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಬೆಂಗಾವಲು ಪಡೆಯ ಮೇಲಿನ ದಾಳಿಯು ಭಾರತೀಯ ಗುಪ್ತಚರ ಇಲಾಖೆಯ ಬಹುದೊಡ್ಡ ವೈಫಲ್ಯ ಮತ್ತು ನಿರ್ದಿಷ್ಟವಾಗಿ ಗೃಹ ಸಚಿವಾಲಯದ ಅಸಮರ್ಥತೆಯ ಪರಿಣಾಮವಾಗಿದೆ. ಆಗ ರಾಜನಾಥ್ ಸಿಂಗ್ ಗೃಹ ಸಚಿವರಾಗಿದ್ದರು. ಸಿಆರ್‌ಪಿಎಫ್ ತನ್ನ ಜವಾನರನ್ನು ಸಾಗಿಸಲು ವಿಮಾನವನ್ನು ಕೇಳಿತ್ತು. ಆದರೆ ಕೇಂದ್ರ ಗೃಹ ಸಚಿವಾಲಯ ಅದನ್ನು ನಿರಾಕರಿಸಿತು” ಎಂದು ಮಲಿಕ್ ದೂರಿದ್ದಾರೆ.

ಸತ್ಯ ಪಾಲ್ ಮಲಿಕ್ ಪುಲ್ವಾಮ ದಾಳಿ ನಡೆದಾಗ ಮತ್ತು ಆರ್ಟಿಕಲ್ 370 ಅನ್ನು ಕಿತ್ತು ಹಾಕಿದ ಸಂದರ್ಭದಲ್ಲಿ ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿದ್ದರು. ನಂತರ ಗೋವಾದ ರಾಜ್ಯಪಾಲರಾಗಿದ್ದ ಅವರು, ಆನಂತರ 2022ರವರೆಗೆ ಮೇಘಾಲಯದ ರಾಜ್ಯಪಾಲರಾಗಿದ್ದರು. ಮೋದಿ ಸರ್ಕಾರ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದಾಗ ಅದನ್ನು ಕಟು ಶಬ್ದಗಳಲ್ಲಿ ಟೀಕಿಸಿದ್ದರು. ಅಲ್ಲದೇ ಆರ್‌ಎಸ್‌ಎಸ್‌ ಭಾರೀ ಭ್ರಷ್ಟಾಚಾರ ನಡೆಸುತ್ತದೆ ಎಂದು ಆರೋಪಿಸಿದ್ದರು.

ದಾಳಿ ನಡೆದ ದಿನ ಸಂಜೆಯೇ ಪ್ರಧಾನಿ ಮೋದಿಯವರಿಗೆ ಈ ವೈಫಲ್ಯಗಳ ಬಗ್ಗೆ ತಿಳಿಸಿದೆ. ನಮ್ಮ ತಪ್ಪಿನಿಂದಾಗಿ 40 ಸೈನಿಕರು ಪ್ರಾಣ ಕಳೆದುಕೊಳ್ಳಬೇಕಾಯಿತು ಎಂದು ವಿವರಿಸಿದೆ. ಆದರೆ ಅವರು ಯಾರಿಗೂ ಹೇಳಬೇಡಿ, ಸುಮ್ಮನಿದ್ದುಬಿಡಿ ಎಂದರು. ಎನ್‌ಎಸ್‌ಎ ಅಜಿತ್ ದೋವಲ್ ಕೂಡ ನನ್ನ ಬಾಯಿ ಮುಚ್ಚಿಸಿದರು. ಆಗ ನನಗೆ ತಕ್ಷಣವೇ ಅರ್ಥವಾಯಿತು, ಅವರ ಉದ್ದೇಶ ಪಾಕಿಸ್ತಾನದ ಮೇಲೆ ದೋಷಾರೋಪ ಮಾಡಿ ಚುನಾವಣೆಯಲ್ಲಿ ಸರ್ಕಾರ ಮತ್ತು ಬಿಜೆಪಿಗೆ ಲಾಭ ಪಡೆಯುವುದಾಗಿತ್ತು ಎಂದು ಸತ್ಯಪಾಲ್ ಮಲಿಕ್ ಸಂದರ್ಶನದಲ್ಲಿ ಹೇಳಿದ್ದಾರೆ.

ಪುಲ್ವಾಮಾ ಘಟನೆಯಲ್ಲಿ 300 ಕೆಜಿ ಆರ್‌ಡಿಎಕ್ಸ್ ಸ್ಫೋಟಕಗಳನ್ನು ಹೊತ್ತ ಕಾರು ಪಾಕಿಸ್ತಾನದಿಂದ ಬಂದಿದ್ದು, ಜಮ್ಮು ಮತ್ತು ಕಾಶ್ಮೀರದ ರಸ್ತೆಗಳು ಮತ್ತು ಹಳ್ಳಿಗಳಲ್ಲಿ 10-15 ದಿನಗಳ ಕಾಲ ಯಾರಿಗೂ ಗೊತ್ತಾಗದಂತೆ ಮತ್ತು ಯಾರಿಗೂ ತಿಳಿಯದಂತೆ ಸಂಚರಿಸುತ್ತಿತ್ತು ಎಂದರೆ ಇದು ಗಂಭೀರ ಗುಪ್ತಚರ ವೈಫಲ್ಯ ಅಲ್ಲವೇ ಎಂದಿದ್ದಾರೆ.

ಭ್ರಷ್ಟಾಚಾರದ ವಿಷಯಕ ಕುರಿತು ಮಾತನಾಡಿದ ಅವರು, “ಹೈಡ್ರೋ ಎಲೆಕ್ಟ್ರಿಕ್ ಯೋಜನೆ ಮತ್ತು ರಿಲಯೆನ್ಸ್ ಇನ್ಸೂರೆನ್ಸ್ ಯೋಜನೆಗೆ ಅನುಮತಿ ಪಡೆಯಲು ಬಿಜೆಪಿ ಆರ್‌ಎಸ್‌ಎಸ್‌ ಮುಖಂಡ ರಾಮ್ ಮಾಧವ್ ಬಂದಿದ್ದರು. ಆ ಯೋಜನೆಗಳಿಗೆ ಸಹಿ ಹಾಕಿದ್ದರೆ ನನಗೆ 300 ಕೋಟಿ ಸಿಗುತ್ತದೆ ಎಂದು ಜನ ಮಾತನಾಡುತ್ತಿದ್ದರು. ಆದರೆ ನಾನು ಆ ತಪ್ಪು ಕೆಲಸ ಮಾಡಲಿಲ್ಲ. ರಾಮ್ ಮಾಧವ್ ಎಷ್ಟೇ ಪ್ರಯತ್ನ ಪಟ್ಟರೂ ನಾನು ಆ ಯೋಜನೆಗಳನ್ನು ಜಾರಿಗೊಳಿಸಲಿಲ್ಲ ಎಂದಿದ್ದಾರೆ.

ಅದೇ ರೀತಿ ಗೋವಾದ ರಾಜ್ಯಪಾಲನಾಗಿದ್ದಾಗ ಅಲ್ಲಿನ ಭ್ರಷ್ಟಾಚಾರಗಳ ಕುರಿತು ಪ್ರಧಾನಿ ಮೋದಿಯವರಿಗೆ ದೂರು ನೀಡಿದ್ದೆ. ಅವುಗಳನ್ನು ಸರಿಪಡಿಸುವ ಬದಲು ನಿರ್ಲಕ್ಷ್ಯ ಮಾಡಿದ್ದಲ್ಲದೆ ನನ್ನನ್ನು ಗೋವಾದ ರಾಜ್ಯಪಾಲ ಸ್ಥಾನದಿಂದ ಕಿತ್ತು ಮೇಘಾಲಯಕ್ಕೆ ಕಳಿಸಿದರು. ಪ್ರಧಾನಿಯವರ ಸುತ್ತಲಿನ ಜನರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಮತ್ತು ಆಗಾಗ್ಗೆ ಪ್ರಧಾನಿ ಕಚೇರಿಯ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ಇದೆಲ್ಲವನ್ನೂ ಮೋದಿಯವರ ಗಮನಕ್ಕೆ ತಂದಿದ್ದೇನೆ, ಆದರೆ ಪ್ರಧಾನಿ ಕಾಳಜಿ ತೋರುತ್ತಿಲ್ಲ. ಹಾಗಾಗಿ ನಾನು ಖಚಿತವಾಗಿ ಹೇಳಬಲ್ಲೆ ಭ್ರಷ್ಟಾಚಾರ ಕುರಿತು ನರೇಂದ್ರ ಮೋದಿಯವರಿಗೆ ಹೆಚ್ಚಿನ ದ್ವೇಷವಿಲ್ಲ ಎಂದು ಸತ್ಯಪಾಲ್ ಮಲಿಕ್ ಹೇಳಿದ್ದಾರೆ.

ಕಾಶ್ಮೀರದ ಬಗ್ಗೆ ಪ್ರಧಾನಿ ಮೋದಿಗೆ ಅಜ್ಞಾನ ಮತ್ತು ತಪ್ಪು ತಿಳುವಳಿಕೆ ಇದೆ. ಆ ಕಾರಣದಿಂದಲೇ ಅವರು ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ ಆರ್ಟಿಕಲ್ 370 ಅನ್ನು ಕಿತ್ತು ಹಾಕಿ ರಾಜ್ಯದ ಅರ್ಹತೆ ತೆಗೆದುಹಾಕಿದರು. ಅದು ಅತ್ಯಂತ ದೊಡ್ಡ ಅಪರಾಧವಾಗಿದ್ದು, ಈ ಕೂಡಲೇ ರಾಜ್ಯದ ಸ್ಥಾನಮಾನ ಮರುಸ್ಥಾಪಿಸಬೇಕು ಎಂದು ಮಲಿಕ್ ಒತ್ತಾಯಿಸಿದ್ದಾರೆ.

ರಾಷ್ಟ್ರಪತಿ ಮುರ್ಮುರವರು ತಮ್ಮ ಭೇಟಿಗೆ ನೀಡುವ ಎಲ್ಲಾ ಸಮಯಗಳನ್ನು ನೇರವಾಗಿ ಪ್ರಧಾನಿ ಕಾರ್ಯಾಲಯ ಮೇಲ್ವಿಚಾರಣೆ ಮಾಡುತ್ತದೆ. ಒಮ್ಮೆ ನಾನು ರಾಷ್ಟ್ರಪತಿಗಳನ್ನು ನೋಡಲು ರಾಷ್ಟ್ರಪತಿ ಭವನಕ್ಕೆ ಹೊರಟಿದ್ದಾಗ ದಾರಿ ಮಧ್ಯೆ ನನಗೆ ನೀಡಿದ್ದ ಅವಕಾಶವನ್ನು ರದ್ದುಗೊಳಿಸಲಾಯಿತು ಎಂದು ಮಲಿಕ್ ಆರೋಪಿಸಿದ್ದಾರೆ.

ಪ್ರಧಾನ ಮಂತ್ರಿಯವರು ಬಿಬಿಸಿಯನ್ನು ನಿರ್ವಹಿಸುತ್ತಿರುವ ರೀತಿ ಭಯಾನಕ ತಪ್ಪಿನಿಂದ ಕೂಡಿದೆ. ಅದೇ ರೀತಿ ಸಂಸತ್ತಿನಲ್ಲಿ ಮಾತನಾಡಲು ರಾಹುಲ್ ಗಾಂಧಿಗೆ ಅನುಮತಿ ನಿರಾಕರಿಸಿದ್ದು ಮೋದಿ ಸರ್ಕಾರದ ಮತ್ತೊಂದು ತಪ್ಪಾಗಿದೆ. ಅದಾನಿ ಹಗರಣದ ಬಗ್ಗೆ ರಾಹುಲ್ ಗಾಂಧಿ ಸರಿಯಾದ ಪ್ರಶ್ನೆಗಳನ್ನು ಎತ್ತಿದ್ದಾರೆ. ಅದಕ್ಕೆ ಪ್ರಧಾನಿ ಉತ್ತರಿಸಲು ಸಾಧ್ಯವಾಗದ ಕಾರಣ ಅವರನ್ನು ಅನರ್ಹ ಮಾಡಲಾಗಿದೆ. ಮುಸಲ್ಮಾನರ ಬಗ್ಗೆ ಪ್ರಧಾನಿ ಮತ್ತು ಹಲವಾರು ಸಚಿವರು ನಡೆಸುತ್ತಿರುವ ವರ್ತನೆಯು ಸಹಿಸಲು ಅಸಾಧ್ಯವಾಗಿದೆ ಎಂದು ಮಲಿಕ್ ಹೇಳಿದ್ದಾರೆ. ಸರ್ಕಾರವು ‘ಮೂರನೇ ದರ್ಜೆಯ ಜನರನ್ನು’ ರಾಜ್ಯಪಾಲರನ್ನಾಗಿ ನೇಮಿಸಿದೆ ಎಂದು ಮಲಿಕ್ ಆರೋಪಿಸಿದ್ದಾರೆ.

ಪ್ರಧಾನ ಮಂತ್ರಿಯ ಬಗ್ಗೆ ತಾನು ಹೇಳಿರುವ ಎಲ್ಲಾ ಮಾತುಗಳಿಗೂ ಬದ್ಧನಾಗಿದ್ದೇನೆ ಮತ್ತು ಯಾವುದೇ ಪರಿಣಾಮಗಳ ಬಗ್ಗೆ ಚಿಂತಿಸುವುದಿಲ್ಲ ಅಥವಾ ಹೆದರುವುದಿಲ್ಲ ಎಂದು ಮಲಿಕ್ ಖಚಿತಪಡಿಸಿದ್ದಾರೆ. ತನಗೆ ಕನಿಷ್ಠ ಭದ್ರತೆಯನ್ನು ನೀಡಲಾಗಿದೆ. ಅಧಿಕೃತ ಭದ್ರತಾ ಸಮಿತಿಯು ಶಿಫಾರಸು ಮಾಡಿದ್ದಕ್ಕಿಂತ ಕಡಿಮೆಯಿದೆ. ಆದರೆ ಅದರ ಬಗ್ಗೆ ನನಗೆ ಚಿಂತೆಯಿಲ್ಲ ಎಂದು ಅವರು ಹೇಳಿದ್ದಾರೆ.

ಪೂರ್ಣ ಸಂದರ್ಶನ ನೋಡಿ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...