ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಶನಿವಾರ ಹಾಗೂ ರವಿವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು ನಗರದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಈ ವೇಳೆ ಪ್ರದೇಶದ ಜನರಿಗೆ ಪೊಲೀಸ್ ಇಲಾಖೆ ಕೆಲವು ನಿರ್ಬಂಧನೆಗಳನ್ನು ಹೊರಡಿಸಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯು ಪ್ರಧಾನಿ ಮೋದಿ ರೋಡ್ಶೋ ಹಿನ್ನೆಲೆ ಭದ್ರತೆ ಹಾಗೂ ಸುರಕ್ಷತಾ ಪ್ರೋಟೋಕಾಲ್ಗಳಿಗಾಗಿ ಸಾರ್ವಜನಿಕರಿಗೆ ಕೆಲವು ನಿರ್ಬಂಧನೆಗಳನ್ನು ಹೇರಿ ಪ್ರಕಟಣೆ ಹೊರಡಿಸಿದ್ದಾರೆ.
ಸಾರ್ವಜನರಿಕರಿಗೆ ಸೂಚನೆಗಳು:
- ನಿಮ್ಮ ಮನೆಯ ಟೆರೇಸ್/ಫಾಲ್ಕನಿಗಳಲ್ಲಿ ನಿಂತು ಮೋದಿ ರೋಡ್ ಶೋ ವೀಕ್ಷಿಸುವುದನ್ನು ನಿಷೇಧಿಸಲಾಗಿದೆ.
- 07/04/2023 ರಂದು ಮೋದಿ ರೊಡ್ ಶೋ ಪೂರ್ಣಗೊಳ್ಳುವವರೆಗೆ ಅಂದರೆ ಸಂಜೆ 6 ಗಂಟೆಯವರೆಗೆ ವಾಹನಗಳು ಹೊರ ತೆಗೆಯುವಂತಿಲ್ಲ.
- ಕಟ್ಟಡದ ಒಳ ಮತ್ತು ಹೊರ ಹೋಗುವ ಮಾರ್ಗ ಬಂದ್ ಮಾಡಬೇಕು.
- ಕಟ್ಟಡದ ಒಳಗಡೆ ಅಪರಿಚಿತ ವ್ಯಕ್ತಿಗಳಿಗೆ ಪ್ರವೇಶ ನೀಡಬಾರದು.
- ರೋಡ್ ಶೋ ನೋಡ ಬಯಸುವವರು ನಿಗದಿತ ಸ್ಥಳಕ್ಕೆ ಆಗಮಿಸಿ ವೀಕ್ಷಿಸಬೇಕು.
ಪೊಲೀಸರ ಈ ನಿರ್ಬಂಧದಿಂದ ಬೆಂಗಳೂರಿನ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಕಳೆದ ವಾರವೂ ಇದೇ ರೀತಿ ರೋಡ್ ಶೋ ಮಾಡುವ ಮೂಲಕ ಪ್ರಯಾಣಿಕರು ಪರದಾಡುವಂತಾಗಿತ್ತು. ಇದೀಗ ಮತ್ತಷ್ಟು ನಿರ್ಬಂಧಗಳನ್ನು ಹೇರಿ ಪ್ರಕಟಣೆ ಹೊರಡಿಸಲಾಗಿದೆ.
ಇದನ್ನೂ ಓದಿ: ನೀಟ್ ಪರೀಕ್ಷೆ ಬರೆಯುವವರ ಗಮನಕ್ಕೆ: ಮೋದಿ ರೋಡ್ ಷೋ ಸಾಗುವ ಮಾರ್ಗವಿದು
ಬೆಂಗಳೂರಿನಲ್ಲಿ 38 ಕಿಮೀ ರೋಡ್ ಶೋ ಗೆ ಅವಕಾಶ ನೀಡಬಾರದು. ಇಂತಹ ಕಾರ್ಯಕ್ರಮಗಳಿಂದ ಜನರಿಗೆ ತೊಂದರೆ ಆಗುತ್ತದೆ ಎಂಬ ನಿಟ್ಟಿನಲ್ಲಿ ಹೈಕೋರ್ಟ್ ರಿಟ್ ಪಿಟಿಷನ್ ನಲ್ಲಿ ನಿರ್ದೇಶನ ನೀಡಲಾಗಿದೆ. ಹೈಕೋರ್ಟ್ ನಿರ್ದೇಶನ ಪಾಲನೆ ಮಾಡದೆಯೇ ರೋಡ್ ಶೋ ಅವಕಾಶ ನೀಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ನಗರದಲ್ಲಿ ಅಂಬ್ಯುಲೆನ್ಸ್ ಓಡಾಟಕ್ಕೆ ಅನನುಕೂಲ ಆಗುವ ನಿಟ್ಟಿನಲ್ಲಿ ರೋಡ್ ಶೋ ಅವಕಾಶ ನೀಡಬಾರದು. ಪ್ರಧಾನಿ ನರೇಂದ್ರ ಮೋದಿ ರೋಡ್ ಶೋಗೆ ಸರ್ಕಾರದ ಹಣವನ್ನೂ ಖರ್ಚು ಮಾಡಲಾಗುತ್ತಿದೆ. ಇದನ್ನು ಲೆಕ್ಕಹಾಕಲು ಸರಿಯಾದ ಸಿಬ್ಬಂದಿ ನೇಮಕ ಮಾಡಬೇಕು ಎಂದೂ ದೂರಿನಲ್ಲಿ ಕಾಂಗ್ರೆಸ್ ಕಾನೂನು ಘಟಕದ ಆರೋಪಿಸಿದೆ.
ಈ ಹಿಂದೆ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ ನಡೆಸಿದ್ದರು. ಈ ಸಂಬಂಧ ನೈಸ್ ರಸ್ತೆಯ ಜಂಕ್ಷನ್ ನಿಂದ ಸುಮ್ಮನಹಳ್ಳಿ ವೃತ್ತದವರೆಗೆ ಭಾರೀ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಈ ವೇಳೆ ಮೆರವಣಿಗೆ ಮೂಲಕ ಕಲ್ಯಾಣ ಮಂಟಪ್ಪಕ್ಕೆ ಹೋಗುತ್ತಿದ್ದ ವಧು-ವರರ ವಾಹನವು ಗಂಟೆಗಟ್ಟಲೇ ರಸ್ತೆಯಲ್ಲೇ ನಿಲ್ಲಬೇಕಾಯಿತು. ಮದುವೆ ಧಿರಿಸಿನಲ್ಲಿ ಮದುಮಗ ನಿಂತ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅವರಷ್ಟೇ ಅಲ್ಲದೇ ಸಾರ್ವಜನಿಕರು ಸಹ ಕಿಲೋ ಮೀಟರ್ಗಟ್ಟಲೇ ಟ್ರಾಫಿಕ್ ಸಮಸ್ಯೆ ಎದುರಿಸಿದ್ದರು.
ಇದೀಗ ಮತ್ತೆ ಅಂತದ್ದೆ ಸಮಸ್ಯೆ ಮೇ 06 ಮತ್ತು 7ರಂದು ಎದುರಾಗುವ ಸಂಭವವಿದೆ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿಯವರ ಬೃಹತ್ ರೋಡ್ ಗೆ ಚುನಾವಣಾ ಆಯೋಗದ ಅಧಿಕಾರಿಗಳು ಅನುಮತಿ ನೀಡದಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
6ನೇ ತಾರೀಖು ಮತ್ತೆ ಬೆಂಗಳೂರಿನಲ್ಲಿ ರೋಡ್ಶೋ ಅಂತೆ. ಮೊನ್ನೆ ಆದ ಸಮಸ್ಯೆ ಇನ್ನು ಜನ ಮರೆತಿಲ್ಲಾ. ಈಗ ಮತ್ತೆ ಸುಮಾರು 35km ರೋಡ್ಶೋ ಅಂತೆ. ಜನರ ದೈನಂದಿನ ಬದುಕನ್ನು ಸಮಸ್ಯೆಗೆ ದೂಡುವ ಈ ಶೋಕಿ ಬೇಕಾ? @ceo_karnataka ದಯವಿಟ್ಟು ಅನುಮತಿ ಕೊಡಬೇಡಿ. ಅವರು ಅಭಿವೃದ್ಧಿ ಮಾಡಿದ್ದರೆ ಜನರೇ ಓಟು ಹಾಕ್ತಾರೆ. #No_road_show_in_Bengaluru
— ಮಂಸೋರೆ/ManSoRe (@mansore25) May 3, 2023