ಪ್ರಧಾನಮಂತ್ರಿ ನರೇಂದ್ರ ಮೋದಿ ಕಳೆದ ವರ್ಷ ಕಾಶ್ಮೀರಕ್ಕೆ ಭೇಟಿ ನೀಡಿದಾಗ ಭಾರತೀಯ ಸೇನೆಯ ಸಮವಸ್ತ್ರ ಧರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ಕುರಿತು ಉತ್ತರ ಪ್ರದೇಶದ ಪ್ರಯಾಗ್ರಾಜ್ (ಅಲಹಾಬಾದ್) ಜಿಲ್ಲಾ ನ್ಯಾಯಾಲಯವು ಪ್ರಧಾನಿ ಕಚೇರಿ (PMO) ಗೆ ನೋಟಿಸ್ ಜಾರಿ ಮಾಡಿದೆ ಎಂದು ದೈನಿಕ್ ಭಾಸ್ಕರ್ ವರದಿ ಮಾಡಿದೆ.
ಮಾರ್ಚ್ 2 ರಂದು ಪ್ರಕರಣದ ವಿಚಾರಣೆ ನಡೆಯಲಿದೆ. ವಕೀಲ ರಾಕೇಶ್ ನಾಥ್ ಪಾಂಡೆ ಅವರು ಸಲ್ಲಿಸಿದ ಮೇಲ್ವಿಚಾರಣಾ ಅರ್ಜಿಯ ಕುರಿತು ವಕೀಲರ ವಾದವನ್ನು ಆಲಿಸಿದ ನಂತರ ಜಿಲ್ಲಾ ನ್ಯಾಯಾಧೀಶ ನಳಿನ್ ಕುಮಾರ್ ಶ್ರೀವಾಸ್ತವ ಪ್ರಧಾನಿ ಕಚೇರಿಗೆ ನೋಟಿಸ್ ಜಾರಿ ಮಾಡಿ ಆದೇಶ ನೀಡಿದ್ದಾರೆ.
ಕಾಶ್ಮೀರದ ನೌಶೇರಾದಲ್ಲಿ ಪ್ರಧಾನಿ ಸೇನಾ ಸಮವಸ್ತ್ರ ಧರಿಸಿದ್ದನ್ನು ಪ್ರಶ್ನಿಸಿ ವಕೀಲ ರಾಕೇಶ್ ನಾಥ್ ಪಾಂಡೆ ಅವರು ಪ್ರಧಾನಿ ಮೋದಿ ವಿರುದ್ಧ ಸೆಕ್ಷನ್ 153 (3) ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರಧಾನಿ ವಿರುದ್ಧ ಮೊಕದ್ದಮೆ ದಾಖಲು ಮಾಡುವಂತೆ ಆದೇಶಿಸುವಂತೆ ಮನವಿ ಮಾಡಿದ್ದರು.
ಇದನ್ನೂ ಓದಿ: ಕುಂದಾಪುರ ಕಾಲೇಜಿನಲ್ಲೂ ‘ಕೇಸರಿ ಶಾಲು ವಿವಾದ’; ಹಿಜಾಬ್ ಧರಿಸಿ ಬರದಂತೆ ಪ್ರಿನ್ಸಿಪಾಲ್ ಹೇಳಿದ್ದಾರೆಂದು ಪೋಷಕರ ಆರೋಪ
ನವೆಂಬರ್ 4, 2021 ರಂದು ಜಮ್ಮು ಮತ್ತು ಕಾಶ್ಮೀರದ ನೌಶೇರಾದಲ್ಲಿ ಪ್ರಧಾನಿ ಭಾರತೀಯ ಸೇನೆಯ ಸಮವಸ್ತ್ರವನ್ನು ಧರಿಸಿದ್ದರು ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಇದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 140 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಈ ಸೆಕ್ಷನ್, ನಾಗರಿಕರು ಸೈನಿಕ, ನೌಕಾದಳ, ವಾಯುದಳದ ಸಮವಸ್ತ್ರವನ್ನು ಧರಿಸುವುದನ್ನು ತಡೆಯುತ್ತದೆ. ಹೀಗಾಗಿ ಪ್ರಧಾನಿ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಮನವಿ ಮಾಡಲಾಗಿದೆ.
ಇದಕ್ಕೂ ಮೊದಲು ಡಿಸೆಂಬರ್ 21, 2021 ರಂದು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಹರೇಂದ್ರ ನಾಥ್ ಅವರು ಅರ್ಜಿಯನ್ನು ಆಲಿಸಿದರು. ಆಗ ನ್ಯಾಯಾಲಯವು ಈ ಘಟನೆ ನ್ಯಾಯಾಲಯದ ವ್ಯಾಪ್ತಿಯಲ್ಲಿ ನಡೆದಿಲ್ಲ ಎಂದು ಹೇಳಿತ್ತು. ಸ್ಥಳೀಯ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಮ್ಯಾಜಿಸ್ಟ್ರೇಟ್ ಅವರು ಈ ವಿಷಯವನ್ನು ಆಲಿಸಬಹುದು ಎಂದು ಸಿಜೆಎಂ ಹರೇಂದ್ರ ನಾಥ್ ಅವರು ನಿರ್ವಹಣೆಯ ಆಧಾರದ ಮೇಲೆ ಅರ್ಜಿಯನ್ನು ತಿರಸ್ಕರಿಸಿದ್ದರು.
ಈ ತಿರಸ್ಕೃತ ಆದೇಶವನ್ನು ಪ್ರಶ್ನಿಸಿ ವಕೀಲ ರಾಕೇಶ್ ನಾಥ್ ಪಾಂಡೆ ಜಿಲ್ಲಾ ನ್ಯಾಯಾಧೀಶರ ಮುಂದೆ ಮೇಲ್ವಿಚಾರಣಾ ಅರ್ಜಿಯನ್ನು ಸಲ್ಲಿಸಿದ್ದರು. ಮೇಲ್ವಿಚಾರಣಾ ಅರ್ಜಿಯನ್ನು ಆಲಿಸಿದ ಜಿಲ್ಲಾ ನ್ಯಾಯಾಧೀಶ ನಳಿನ್ ಕುಮಾರ್ ಶ್ರೀವಾಸ್ತವ ಪ್ರಧಾನಿ ಕಚೇರಿಗೆ ನೋಟಿಸ್ ಜಾರಿ ಮಾಡಿ ಆದೇಶಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ, ಯೋಗಿ ಆದಿತ್ಯನಾಥ್ ಪರ ಘೋಷಣೆ ಕೂಗುವಂತೆ ಮಕ್ಕಳಿಗೆ ಸೂಚನೆ : ತನಿಖೆಗೆ ಆದೇಶ