ಮತದಾರರ ವಿವರಗಳಿರುವ 3,400ಕ್ಕೂ ಹೆಚ್ಚು ಎಸ್ಐಆರ್ ಎನ್ಯುಮರೇಷನ್ ಫಾರಂಗಳು ಸ್ಥಳೀಯ ಬಿಜೆಪಿ ಕಾರ್ಯಕರ್ತನ ಬಳಿ ಪತ್ತೆಯಾದ ಬಳಿಕ, ನವಿ ಮುಂಬೈನಲ್ಲಿ ಐವರು ಬೂತ್ ಮಟ್ಟದ ಅಧಿಕಾರಿಗಳನ್ನು (ಬಿಎಲ್ಒ) ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ.
ಗುರುವಾರ (ಆ.27) ಮತದಾರರ ವಿವರಗಳಿದ್ದ ಎನ್ಯುಮರೇಷನ್ ಫಾರಂಗಳನ್ನು ಬಿಜೆಪಿ ಕಾರ್ಯಕರ್ತ ಅಂಗಡಿಯೊಂದರಲ್ಲಿ ಜೆರಾಕ್ಸ್ ಮಾಡಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಈ ಸಂಬಂಧ ಶುಕ್ರವಾರ (ಆ.28) ಬೆಳಿಗ್ಗೆ ಮೊಕದ್ದಮೆ ದಾಖಲಿಸಲಾಗಿದೆ ಎಂಬುವುದಾಗಿ ಖಾರ್ಘರ್ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು thehindu.com ವರದಿ ಮಾಡಿದೆ.
ಆರೋಪಿ ಬಿಜೆಪಿ ಕಾರ್ಯಕರ್ತ ಸೂರಜ್ ಪಾಟೀಲ್ ಎನ್ಯುಮರೇಷನ್ ಫಾರಂಗಳ ಜೆರಾಕ್ಸ್ ಪಡೆಯುತ್ತಿದ್ದ ಬಗ್ಗೆ ಚುನಾವಣಾ ನೋಂದಣಿ ಕಚೇರಿಗೆ ದೂರು ಬಂದಿತ್ತು. ದೂರಿನ ಆಧಾರದ ಮೇಲೆ ತನಿಖೆ ನಡೆಸಲು ಚುನಾವಣಾ ನೋಂದಣಿ ಅಧಿಕಾರಿಗೆ (ಇಆರ್ಒ) ಸೂಚಿಸಲಾಗಿತ್ತು. ತನಿಖೆ ಕೈಗೊಂಡ ಇಆರ್ಒ, ಖಾರ್ಘರ್ನ ಸೆಕ್ಟರ್ 19 ರಲ್ಲಿರುವ ಜೆರಾಕ್ಸ್ ಅಂಗಡಿಯೊಂದರಲ್ಲಿ 3,400 ಎನ್ಯುಮರೇಷನ್ ಫಾರಂಗಳನ್ನು ಕಾನೂನುಬಾಹಿರವಾಗಿ ಜೆರಾಕ್ಸ್ ಮಾಡಿಸುತ್ತಿದ್ದ ಪಾಟೀಲ್ನನ್ನು ರೆಡ್-ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಳಿಕ ಖಾರ್ಘರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಕಿಶನ್ ಜಾವಳೆ ವಿವರಿಸಿದ್ದಾರೆ.
ಈ ಎನ್ಯುಮರೇಷನ್ ಫಾರಂಗಳು ಆರೋಪಿ ಪಾಟೀಲ್ ಕೈಗೆ ಸಿಗಲು ಕಾರಣರಾದ ಐವರು ಬಿಎಲ್ಒಗಳನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಈ ಎನ್ಯುಮರೇಷನ್ ಫಾರಂಗಳು ಆರೋಪಿ ಪಾಟೀಲ್ ಕೈಗೆ ಸಿಗಲು ಕಾರಣರಾದ ಐವರು ಬಿಎಲ್ಒಗಳನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಎನ್ಯುಮರೇಷನ್ ಫಾರಂಗಳ ಜೆರಾಕ್ಸ್ ಪಡೆಯುತ್ತಿದ್ದ ವಿಷಯ ಗೊತ್ತಾಗುತ್ತಿದ್ದಂತೆ ಖಾರ್ಘರ್ ಪೊಲೀಸರು ಕೂಡ ಸ್ಥಳಕ್ಕೆ ಧಾವಿಸಿದ್ದರು. ಬಿಜೆಪಿ ಕಾರ್ಯಕರ್ತ ಎನ್ನಲಾದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಜೆರಾಕ್ಸ್ ಆಗಿದ್ದ ಎಲ್ಲಾ ಫಾರಂಗಳನ್ನು ವಶಪಡಿಸಿಕೊಂಡು ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಪೊಲೀಸರ ಪ್ರಕಾರ, ಜೆರಾಕ್ಸ್ ಮಾಡಿಸುತ್ತಿದ್ದ ವ್ಯಕ್ತಿಯನ್ನು ಶಿವಸೇನಾ (ಯುಬಿಟಿ) ಕಾರ್ಯಕರ್ತರು
ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಆತ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿ ಎಂದು ಆರೋಪಿಸಿದ್ದಾರೆ.
ವಶಪಡಿಸಿಕೊಳ್ಳಲಾದ ಎನ್ಯುಮರೇಷನ್ ಫಾರಂಗಳು 188 ಪನ್ವೇಲ್ ವಿಧಾನಸಭಾ ಕ್ಷೇತ್ರದ ಅಧಿಕೃತ ಎಸ್ಐಆರ್ ಫಾರಂಗಳಾಗಿವೆ. ಅವುಗಳಲ್ಲಿ ಮತದಾರರ ಭಾವಚಿತ್ರ, ವೈಯಕ್ತಿಕ ವಿವರಗಳು ಮತ್ತು ಬಿಎಲ್ಒಗಳ ಅಧಿಕೃತ ಸಹಿಗಳಿದ್ದವು ಎಂದು thehindu.com ವರದಿ ಹೇಳಿದೆ.
ಆರೋಪಿ ಪಾಟೀಲ್ ವಿರುದ್ಧ ಖಾರ್ಘರ್ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಮತ್ತು ಜನಪ್ರತಿನಿಧಿ ಕಾಯ್ದೆಯ ಸೂಕ್ತ ಸೆಕ್ಷನ್ಗಳ ಅಡಿಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸಿದ್ದಾರೆ.
ಪಾಟೀಲ್ನನ್ನು ವಶಕ್ಕೆ ಪಡೆದು, ಕಾನೂನು ಪ್ರಕ್ರಿಯೆಯ ಪ್ರಕಾರ ನೋಟಿಸ್ ಜಾರಿ ಮಾಡಿದ ನಂತರ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತಂದ ಕೆಲವೇ ಕ್ಷಣಗಳಲ್ಲಿ ಪಾಟೀಲ್ ಖಾರ್ಘರ್ ಪೊಲೀಸ್ ಠಾಣೆಯಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ ಎಂದು ಶಿವಸೇನಾ (ಯುಬಿಟಿ) ಕಾರ್ಯಕರ್ತರು ಆರೋಪಿಸಿದ್ದಾರೆ. ಈ ಘಟನೆಯು ಶಿವಸೇನಾ (ಯುಬಿಟಿ) ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿದೆ.
ಸಾಮಾನ್ಯ ಮತದಾರರು ಭರ್ತಿ ಮಾಡಿದ ಎಸ್ಐಆರ್ ಫಾರಂಗಳು ಖಾಸಗಿ ವ್ಯಕ್ತಿಯ ಕೈಗೆ ಹೇಗೆ ಸಿಕ್ಕಿತು ಎಂದು ಪ್ರಶ್ನಿಸಿರುವ ಶಿವಸೇನಾ (ಯುಬಿಟಿ) ಪದಾಧಿಕಾರಿ ಬಾಲೇಶ್ ಭೋಜನೆ, ಈ ಘಟನೆಯ ಹಿಂದೆ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಗಳ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ಆದರೆ, ಪನ್ವೇಲ್ ಮಹಾನಗರ ಪಾಲಿಕೆ ಮೇಯರ್ ಹಾಗೂ ಬಿಜೆಪಿ ನಾಯಕ ನಿತಿನ್ ಪಾಟೀಲ್ ಅವರು ಈ ವಿಷಯಕ್ಕೂ ತಮ್ಮ ಪಕ್ಷದ ಕಾರ್ಯಕರ್ತರಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೊಂಡಿದ್ದಾರೆ.
ಕೇವಲ ಬಿಎಲ್ಒಗಳ ಅಮಾನತು ಸಾಲದು ಎಂದು ಹೇಳಿರುವ ವಿರೋಧ ಪಕ್ಷದ ಎನ್ಸಿಪಿ (ಎಸ್ಪಿ) ಶಾಸಕ ರೋಹಿತ್ ಪವಾರ್, ಎಸ್ಐಆರ್ ಪ್ರಕ್ರಿಯೆಯನ್ನು ಹೇಗೆ ನಡೆಸಲಾಗುತ್ತಿದೆ ಎಂಬುವುದನ್ನು ಈ ಘಟನೆ ಬಹಿರಂಗಪಡಿಸಿದೆ ಎಂದಿದ್ದಾರೆ.
“ಬಿಜೆಪಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಈ ಪ್ರಕ್ರಿಯೆಯನ್ನು ಬಳಸಿಕೊಳ್ಳುತ್ತಿದೆ ಎಂದು ನಾವು ಮೊದಲಿನಿಂದಲೂ ಹೇಳುತ್ತಿದ್ದೇವೆ ಮತ್ತು ಈ ಘಟನೆಯು ನಮ್ಮ ಮಾತನ್ನು ನಿಜ ಎಂದು ಸಾಬೀತುಪಡಿಸಿದೆ” ಎಂದು ಅವರು ಹೇಳಿದ್ದಾರೆ.
ಈ ಘಟನೆಯ ಕುರಿತು ತಾವು ಚುನಾವಣಾ ಆಯೋಗದಿಂದ ಪ್ರತಿಕ್ರಿಯೆ ಕೇಳಿದ್ದರೂ, ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ವರ್ಗಾಯಿಸುತ್ತಿದ್ದಾರೆ ಎಂದು ಪವಾರ್ ಆರೋಪಿಸಿದ್ದಾರೆ.


