Homeಮುಖಪುಟ`ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ’: ಕುಸ್ತಿಪಟುಗಳ ಹೋರಾಟ ಸ್ಥಳಕ್ಕೆ ಪಿ.ಟಿ.ಉಷಾ ಭೇಟಿ

`ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ’: ಕುಸ್ತಿಪಟುಗಳ ಹೋರಾಟ ಸ್ಥಳಕ್ಕೆ ಪಿ.ಟಿ.ಉಷಾ ಭೇಟಿ

ಲೈಂಗಿಕ ಕಿರುಕುಳ ಎಸಗಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಬಂಧನಕ್ಕೆ ಆಗ್ರಹಿಸಿ ದೇಶದ ಅಗ್ರ ಕುಸ್ತಿಪಟುಗಳು ಹೋರಾಡುತ್ತಿದ್ದಾರೆ

- Advertisement -
- Advertisement -

ಭಾರತೀಯ ಕುಸ್ತಿ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ನಡೆಯುತ್ತಿರುವ ಪ್ರತಿಭಟನೆಯನ್ನು ಟೀಕಿಸಿದ ಕೆಲವು ದಿನಗಳ ನಂತರ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿ.ಟಿ.ಉಷಾ ಅವರು ಇಂದು (ಬುಧವಾರ) ದೆಹಲಿಯ ಜಂತರ್ ಮಂತರ್‌ನಲ್ಲಿ ಕುಸ್ತಿಪಟುಗಳನ್ನು ಭೇಟಿ ಮಾಡಿದ್ದಾರೆ.

ಮಾಜಿ ಒಲಿಂಪಿಯನ್‌ ಆಗಿರುವ ಪಿಟಿ ಉಷಾ, ಅಲ್ಲಿ ನೆರೆದಿದ್ದ ಮಾಧ್ಯಮದವರೊಂದಿಗೆ ಮಾತನಾಡದೆ ಪ್ರತಿಭಟನಾ ಸ್ಥಳದಿಂದ ನಿರ್ಗಮಿಸಿದರು, ಆದರೆ ಕುಸ್ತಿಪಟು ಬಜರಂಗ್ ಪುನಿಯಾ ಅವರು, ತಮ್ಮೊಂದಿಗೆ ಪಿ.ಟಿ.ಉಷಾ ಅವರು ಆಡಿರುವ ಮಾತುಗಳನ್ನು ಹಂಚಿಕೊಂಡಿದ್ದಾರೆ.

”ಆಟಗಾರರಿಗೆ ಸಹಾಯ ಮಾಡುವ ಭರವಸೆಯನ್ನು ಅವರು ನೀಡಿದ್ದಾರೆ. ಉಷಾ ಅವರ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ತಿಳಿಸಿದ್ದಾರೆ. ನಾನು ಮೊದಲು ಕ್ರೀಡಾಪಟು ಮತ್ತು ನಂತರ ಅಧಿಕಾರಿ ಅವರು ಸ್ಪಷ್ಟಪಡಿಸಿರುವ ಅವರು, ನಮ್ಮೊಂದಿಗಿರುವುದಾಗಿ ತಿಳಿಸಿದ್ದಾರೆ’’ ಎಂದು ಪುನಿಯಾ ವಿವರಿಸಿದ್ದಾರೆ.

“ನಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಮತ್ತು ನಮಗೆ ನ್ಯಾಯ ದೊರಕಿಸಲು ಪ್ರಯತ್ನಿಸಲಿದ್ದಾರೆ’’ ಎಂದು ಮಾಹಿತಿ ನೀಡಿದ್ದಾರೆ.

”ಈಗ ಬಂದಿರುವ  ಆರೋಪಗಳಿಗೆ ಸಂಬಂಧಿಸಿದಂತೆ ಪರಿಶೀಲಿಸಲು ನಿಯೋಜಿಸಲಾಗಿರುವ ಸಮಿತಿ ವರದಿ ನೀಡುವ ಮುನ್ನವೇ ಪ್ರತಿಭಟನೆ ನಡೆಸಲಾಗುತ್ತಿದೆ’’ ಉಷಾ ಅವರು ಕೆಲವು ದಿನಗಳ ಹಿಂದೆ ಟೀಕಿಸಿದ್ದರು.

“ಪ್ರತಿಭಟನೆಯು ಅಶಿಸ್ತಿಗೆ ಸಮಾನವಾಗಿದೆ” ಎಂದಿದ್ದರು.

“ಆಟಗಾರರು ಬೀದಿಗಿಳಿದು ಪ್ರತಿಭಟನೆ ಮಾಡಬಾರದಿತ್ತು. ಕನಿಷ್ಠ ಸಮಿತಿಯ ವರದಿಗಾಗಿ ಕಾಯಬೇಕಿತ್ತು. ಅವರು ಮಾಡಿರುವುದು ಆಟಕ್ಕೆ ಮತ್ತು ದೇಶಕ್ಕೆ ಒಳ್ಳೆಯದಲ್ಲ. ಇದು ನಕಾರಾತ್ಮಕ ಧೋರಣೆ” ಎಂದು ಉಷಾ ಅಭಿಪ್ರಾಯ ತಾಳಿದ್ದರು.

ಕುಸ್ತಿಪಟುಗಳು ಉಷಾ ಅವರ ಹೇಳಿಕೆಯನ್ನು ಕಟುವಾಗಿ ವಿರೋಧಿಸಿದ್ದರು. ”ಅವರು ನಮ್ಮನ್ನು ಬೆಂಬಲಿಸುತ್ತಾರೆಂದು ಕಾಯುತ್ತಿದ್ದೆವು. ಆದರೆ ಅವರ ಈ ಅಭಿಪ್ರಾಯಗಳಿಂದ ನೋವುಂಟಾಗಿದೆ’’ ಎಂದು ಪ್ರತಿಭಟನಾನಿರತ ಕುಸ್ತಿಪಟುಗಳು ಬೇಸರ ವ್ಯಕ್ತಪಡಿಸಿದ್ದರು.

“ಪಿಟಿ ಉಷಾ ಅವರ ಹೇಳಿಕೆಯಿಂದ ನಮಗೆ ನೋವಾಗಿದೆ. ಸ್ವತಃ ಮಹಿಳೆಯಾಗಿದ್ದರೂ ಅವರು ನಮಗೆ ಬೆಂಬಲ ನೀಡುತ್ತಿಲ್ಲ. ನಾವು ಏನು ಅಶಿಸ್ತು ತೋರಿದ್ದೇವೆ? ನಾವು ಇಲ್ಲಿ ಶಾಂತಿಯುತವಾಗಿ ಕುಳಿತಿದ್ದೇವೆ. ನಮಗೆ ನ್ಯಾಯ ಸಿಕ್ಕಿದ್ದರೆ ಪ್ರತಿಭಟನೆ ಮಾಡುತ್ತಿರಲಿಲ್ಲ” ಎಂದು ಕುಸ್ತಿಪಟು ಸಾಕ್ಷಿ ಮಲಿಕ್ ಹೇಳಿಕೆ ನೀಡಿದ್ದರು.

”ಉಷಾ ಅವರು ಕೆಲವು ರೀತಿಯ ಒತ್ತಡಕ್ಕೆ ಒಳಗಾಗಿದ್ದಾರೋ ಇಲ್ಲವೋ ನಮಗೆ ಗೊತ್ತಿಲ್ಲ’’ ಎಂದು ಕುಸ್ತಿಪಟು ವಿನೇಶ್ ಫೋಗಟ್ ಪ್ರತಿಕ್ರಿಯಿಸಿದ್ದರು.

ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಬಂದಿರುವ ಲೈಂಗಿಕ ಕಿರುಕುಳದ ಆರೋಪ ಸಂಬಂಧ ಭಾರತದ ಪ್ರಮುಖ ಕುಸ್ತಿಪಟುಗಳು ರಾಷ್ಟ್ರ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಹಲವಾರು ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಎದುರಿಸುತ್ತಿರುವ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವವರೆಗೂ ತಮ್ಮ ಧರಣಿ ಸತ್ಯಾಗ್ರಹವನ್ನು ಮುಂದುವರಿಸುವುದಾಗಿ ಭಾರತದ ಅಗ್ರ ಕುಸ್ತಿಪಟುಗಳು ಪಟ್ಟು ಹಿಡಿದಿದ್ದಾರೆ.

ಒಲಿಂಪಿಕ್ ಪದಕ ವಿಜೇತರಾದ ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ವಿನೇಶ್ ಫೋಗಟ್ ಸೇರಿದಂತೆ ಹಲವಾರು ಕ್ರೀಡಾಪಟುಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ಬ್ರಿಜ್‌ ಭೂಷಣ್‌ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ಸುಪ್ರೀಂ ಕೋರ್ಟ್ ಪ್ರಕರಣವನ್ನು ಆಲಿಸಿದ ಕೆಲವು ಗಂಟೆಗಳ ನಂತರ ಫೆಡರೇಶನ್ ಮುಖ್ಯಸ್ಥರ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದೆಹಲಿ ಪೊಲೀಸರು ದಾಖಲಿಸಿದ್ದಾರೆ. ಸುಮಾರು ನಾಲ್ಕು ತಿಂಗಳ ನಂತರ ಕುಸ್ತಿಪಟುಗಳು ಆರೋಪಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿದ್ದಾರೆ.

“ಇದು ವಿಜಯದತ್ತ ನಮ್ಮ ಮೊದಲ ಹೆಜ್ಜೆಯಾಗಿದೆ, ಆದರೆ ಪ್ರತಿಭಟನೆಗಳು ಮುಂದುವರಿಯುತ್ತವೆ” ಎಂದು ಮಲಿಕ್ ಹೇಳಿದ್ದಾರೆ. “ನಾವು ಸುದೀರ್ಘ ಯುದ್ಧಕ್ಕಾಗಿ ಇಲ್ಲಿದ್ದೇವೆ. ಆಂತರಿಕ ಸಮಾಲೋಚನೆಯ ನಂತರ ನಾವು ನಮ್ಮ ಮುಂದಿನ ಕ್ರಮವನ್ನು ನಿರ್ಧರಿಸುತ್ತೇವೆ” ಎಂದು ಸ್ಪಷ್ಟಪಡಿಸಿದ್ದಾರೆ.

“ದೆಹಲಿ ಪೊಲೀಸರ ಮೇಲೆ ಕುಸ್ತಿಪಟುಗಳು ನಂಬಿಕೆ ಕಳೆದುಕೊಂಡಿದ್ದಾರೆ. ಏಕೆಂದರೆ ಅವರು ಆರು ದಿನಗಳನ್ನು ತೆಗೆದುಕೊಂಡರು ಮತ್ತು ಕ್ರಮ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ವಹಿಸಬೇಕಾಯಿತು” ಎಂದು ಫೋಗಟ್ ಹೇಳಿದ್ದಾರೆ.

“ನಾವು ಈಗಾಗಲೇ ಸಾಕಷ್ಟು ಪುರಾವೆಗಳನ್ನು ನೀಡಿದ್ದೇವೆ ಮತ್ತು ಬೇರೆ ಏನಾದರೂ ಅಗತ್ಯವಿದ್ದರೆ, ನಾವು ಅದನ್ನು ಸುಪ್ರೀಂ ಕೋರ್ಟ್‌ಗೆ ಪ್ರಸ್ತುತಪಡಿಸುತ್ತೇವೆಯೇ ಹೊರತು ದೆಹಲಿ ಪೊಲೀಸರಿಗೆ ಅಲ್ಲ. ಇದು ಎಫ್‌ಐಆರ್ ದಾಖಲಿಸುವ ಹೋರಾಟವಲ್ಲ. ಈಗಾಗಲೇ 85 ಪ್ರಕರಣಗಳಿರುವ ವ್ಯಕ್ತಿಯ ವಿರುದ್ಧದ ಹೋರಾಟವಾಗಿದೆ. ನಾವು ಭ್ರಷ್ಟರನ್ನು ಕುಸ್ತಿಯಿಂದ ಮುಕ್ತಗೊಳಿಸಬೇಕಾಗಿದೆ” ಎಂದಿದ್ದಾರೆ.

ಬ್ರಿಜ್‌ ಭೂಷಣ್‌ ಸಿಂಗ್ ಅವರನ್ನು ಎಲ್ಲಾ ಸ್ಥಾನಗಳಿಂದ ವಜಾಗೊಳಿಸುವಂತೆ ಕುಸ್ತಿಪಟುಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

“ಕಂಬಿ ಹಿಂದೆ ಹಾಕುವವರೆಗೂ ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಳ್ಳುವುದನ್ನು ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥರು ಮುಂದುವರಿಸುತ್ತಾರೆ” ಎಂದು ಪುನಿಯಾ ತಿಳಿಸಿದ್ದಾರೆ.

“ಪ್ರತಿಭಟಿಸುವ ನಮಗೆಲ್ಲರಿಗೂ ಭದ್ರತೆ ಬೇಕು, ದೂರುದಾರರಿಗೆ ಭದ್ರತೆ ಬೇಕು. ಏಕೆಂದರೆ ನಮಗೆ ಯಾರು ಹಾನಿ ಮಾಡಲು ಬಯಸುತ್ತಾರೆ ಎಂದು ನಿಮಗೆ ತಿಳಿದಿಲ್ಲ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಅಪ್ರಾಪ್ತ ವಯಸ್ಕ ಸೇರಿದಂತೆ ಏಳು ಮಹಿಳಾ ಕುಸ್ತಿಪಟುಗಳು ಏಪ್ರಿಲ್ 21ರಂದು ದೆಹಲಿಯಲ್ಲಿ ಆತನ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದಾರೆ.

ಅಪ್ರಾಪ್ತ ಕುಸ್ತಿಪಟು ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಜೊತೆಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ (ಪೋಕ್ಸೋ) ಅಡಿಯಲ್ಲಿ ಮೊದಲ ಪ್ರಕರಣ ದಾಖಲಿಸಲಾಗಿದೆ. ವಯಸ್ಕ ಕುಸ್ತಿಪಟುಗಳು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಎರಡನೇ ಎಫ್‌ಐಆರ್ ದಾಖಲಿಸಲಾಗಿದೆ.

ಉತ್ತರ ಪ್ರದೇಶದ ಕೈಸರ್‌ಗಂಜ್‌ನಿಂದ ಆರು ಬಾರಿ ಬಿಜೆಪಿ ಸಂಸದರಾಗಿ ಗೆದ್ದಿರುವ, ಆರೋಪಿ ಬ್ರಿಜ್‌ ಭೂಷಣ್ ಸಿಂಗ್ ಆರೋಪಗಳನ್ನು ನಿರಾಕರಿಸುತ್ತಾ ಬಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...