ನವೆಂಬರ್ 4ರ ಶುಕ್ರವಾರದಂದು ಮೈಸೂರಿನ ಮಾನಸ ಗಂಗೋತ್ರಿ ಕ್ಯಾಪಸ್ನಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟ ನಿವೃತ್ತ ಇಂಟೆಲಿಜೆನ್ಸ್ ಬ್ಯೂರೋ (ಐಬಿ) ಅಧಿಕಾರಿಯೊಬ್ಬರ ಪ್ರಕರಣಕ್ಕೆ ತಿರುವು ಲಭಿಸಿದೆ. ಅವರನ್ನು ಉದ್ದೇಶಪೂರ್ವಕವಾಗಿ ಕಾರು ಗುದ್ದಿ ಕೊಲೆ ಮಾಡಲಾಗಿದೆ ಎಂದು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ತಿಳಿದುಬಂದಿದೆ.
ಎಂಬತ್ತಮೂರು ವರ್ಷದ ಮಾಜಿ ಐಬಿ ಅಧಿಕಾರಿ ಆರ್.ಎನ್. ಕುಲಕರ್ಣಿ ಅವರು ನವೆಂಬರ್ 4 ರಂದು ಮೈಸೂರಿನ ಮಾನಸ ಗಂಗೋತ್ರಿ ಕ್ಯಾಂಪಸ್ನಲ್ಲಿ ತಮ್ಮ ದಿನನಿತ್ಯದ ಸಂಜೆ ವಾಕಿಂಗ್ ಮಾಡುತ್ತಿದ್ದಾಗ ಮೃತಪಟ್ಟಿರುವುದು ಪತ್ತೆಯಾಗಿದೆ. ಅವರ ಸಾವು ಕಾರು ಅಪಘಾತದ ಪರಿಣಾಮ ಎಂದು ಆರಂಭದಲ್ಲಿ ಭಾವಿಸಲಾಗಿತ್ತು. ಆದರೆ ಪೊಲೀಸರಿಗೆ ಇದೀಗ ಸಿಕ್ಕಿರುವ ಸಿಸಿಟಿವಿ ದೃಶ್ಯಾವಳಿಗಳು ಅವರ ಸಾವು ಪೂರ್ವನಿಯೋಜಿತ ಕೊಲೆ ಎಂಬುವುದನ್ನು ಎತ್ತಿ ತೋರಿಸಿವೆ. ಆರ್.ಎನ್. ಕುಲಕರ್ಣಿ ಅವರು ಇಂಟೆಲಿಜೆನ್ಸ್ ಬ್ಯೂರೋದ ನಿವೃತ್ತ ಅಧಿಕಾರಿಯಾಗಿದ್ದರು ಮತ್ತು ಭಾರತ ಸರ್ಕಾರದ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ (RAW) ದೊಂದಿಗೆ ಕೆಲಸ ಮಾಡಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಕೊಲೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಕುಲಕರ್ಣಿ ಅವರು ಮಾನಸ ಗಂಗೋತ್ರಿ ಕ್ಯಾಂಪಸ್ನ ಬಯೋಟೆಕ್ನಾಲಜಿ ವಿಭಾಗದ ಕಿರಿದಾದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ಈ ವೇಳೆ ಅವರ ಬಳಿಗೆ ಅತ್ಯಂತ ವೇಗವಾಗಿ ಬೂದು ಬಣ್ಣದ ಸೆಡಾನ್ ಕಾರು ಬರುತ್ತದೆ. ಕುಲಕರ್ಣಿ ಅವರು ವಾಹನಕ್ಕೆ ದಾರಿ ಮಾಡಿಕೊಡಲು ಪಕ್ಕಕ್ಕೆ ಚಲಿಸುತ್ತಾರಾದರೂ, ಕಾರು ಅವರಿಗೆ ಬಳಿಗೆ ನುಗ್ಗಿ ಅವರಿಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಹೊರಟುಹೋಗುತ್ತದೆ.
Visuals of Former IB Assistant Director and IOC vigilance chief RN Kulkarni mowed down by a car in Mysuru’s Manasa Ganothri Campus. He was 83. Trigger warning pic.twitter.com/SDzN2xFlXy
— Samrah Attar (@samrahattar) November 6, 2022
ಇದನ್ನೂ ಓದಿ: ಅಪ್ಪು ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಮಾಡಿದ ಆರ್ಎಸ್ಎಸ್ ಕಾರ್ಯಕರ್ತೆ: ಕಿಡಿಕಾರಿದ ಕನ್ನಡಿಗರು
ಮೈಸೂರಿನ ಶಾರದಾದೇವಿ ನಗರದ ನಿವಾಸಿಯಾಗಿರುವ ಆರ್.ಎನ್.ಕುಲಕರ್ಣಿ ಅವರು ಪತ್ನಿ ವತ್ಸಲಾ ಹಾಗೂ ಪುತ್ರಿ ಪರಿಣಿತಾ ಅವರನ್ನು ಅಗಲಿದ್ದಾರೆ. ಕುಲಕರ್ಣಿ ಅವರ ಅಳಿಯ ನೀಡಿದ ದೂರಿನ ಆಧಾರದ ಮೇಲೆ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
“ಕುಲಕರ್ಣಿ ಅವರ ಮನೆಯ ಪಕ್ಕದಲ್ಲಿ ಮನೆ ನಿರ್ಮಿಸುವಾಗ ನೆರೆಹೊರೆಯವರು ಮಾಡಿದ ಅಕ್ರಮಗಳ ಬಗ್ಗೆ ಕುಲಕರ್ಣಿ ಅವರು ತಮ್ಮ ನೆರೆಹೊರೆಯವರೊಂದಿಗೆ ಜಗಳವಾಡುತ್ತಿದ್ದರು. ನೆರೆಮನೆಯವರು ನಿರ್ಮಿಸುತ್ತಿರುವ ಮನೆ ಯೋಜನೆಯ ಲೋಪದೋಷದ ಬಗ್ಗೆ ಕುಲಕರ್ಣಿ ಅವರು ಮಹಾನಗರ ಪಾಲಿಕೆಯ ವಿರುದ್ಧ ದೂರು ನೀಡಿದ್ದರು” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತನಗೆ ಜೀವ ಭಯವಿದೆ ಎಂದು ಮಗಳ ಬಳಿ ಹೇಳಿದ್ದ ಕುಲಕರ್ಣಿ ಅವರಿಗೆ ಅವರ ಮಗಳು ಪೊಲೀಸ್ ದೂರು ದಾಖಲಿಸುವಂತೆ ಸಲಹೆ ನೀಡಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕುಲಕರ್ಣಿ ಅವರು ಪೊಲೀಸರಿಗೆ ದೂರು ನೀಡಿದ್ದರು ಮತ್ತು ತನ್ನ ನೆರೆ ಮನೆಯವರ ಸಹಚರರು ತನ್ನನ್ನು ಹಿಂಬಾಲಿಸುತ್ತಿದ್ದಾರೆ ಎಂದು ಹೇಳಿದ್ದರು ಎಂದು ಅಳಿಯ ಹೇಳಿದ್ದಾರೆ. ತನ್ನನ್ನು ಹಿಂಬಾಲಿಸುತ್ತಿದೆ ಎಂದು ಶಂಕಿಸಿ ವಾಹನಗಳ ಲೈಸೆನ್ಸ್ ಪ್ಲೇಟ್ ನಂಬರ್ಗಳ ಪಟ್ಟಿಯನ್ನೂ ಅವರು ನೀಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಮತ್ತೊಂದು ವಿವಾದಕ್ಕೆ ರಂಗಾಯಣ ನಿರ್ದೇಶಕರ ರೂಪುರೇಷೆ; ‘ಟಿಪ್ಪು’ ಕುರಿತ ನಾಟಕ ಪ್ರದರ್ಶನಕ್ಕೆ ಸಿದ್ಧ
“83 ವರ್ಷದ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿದ್ದರು ಮತ್ತು ಕಾರು ಅವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ ಎಂದು ನಮಗೆ ವರದಿಯಾಗಿದೆ. ಇದು ಹಿಟ್ ಅಂಡ್ ರನ್ ಕೇಸ್ ಎಂದು ನಾವು ನಂಬಿದ್ದೆವು, ಆದರೆ ಈ ಬಗ್ಗೆ ನಾವು ಎಚ್ಚರಿಕೆಯಿಂದ ಪರಿಶೀಲಿಸಿದಾಗ, ಅದು ಉದ್ದೇಶಪೂರ್ವಕವಾಗಿ ನಡೆಸಿದ ಕೃತ್ಯದಂತೆ ಕಾಣುತ್ತದೆ. ಅವರು ರಸ್ತೆ ಬದಿಗೆ ಸರಿದರೂ ಕಾರು ಅವರಿಗೆ ಡಿಕ್ಕಿ ಹೊಡೆದಿದೆ. ಅದರ ಆಧಾರದ ಮೇಲೆ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಅವರು ನಿವೃತ್ತರಾಗಿ 23 ವರ್ಷಗಳಾಗಿದ್ದು, ಇದು ಯಾಕೆ ಸಂಭವಿಸಿತು ಎಂದು ನಮಗೆ ತಿಳಿದಿಲ್ಲ” ಎಂದು ಮೈಸೂರು ಪೊಲೀಸ್ ಕಮಿಷನರ್ ಚಂದ್ರಗುಪ್ತ ಹೇಳಿದ್ದಾರೆ.
ನರಸಿಂಹರಾಜ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರು (ಎಸಿಪಿ) ಪ್ರಕರಣದ ತನಿಖೆ ನಡೆಸುತ್ತಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ. ಕುಲಕರ್ಣಿ ಅವರಿಗೆ ಡಿಕ್ಕಿ ಹೊಡೆದ ವಾಹನಕ್ಕೆ ನಂಬರ್ ಪ್ಲೇಟ್ ಇರಲಿಲ್ಲ ಎಂದು ಆಯುಕ್ತ ಚಂದ್ರಗುಪ್ತ ತಿಳಿಸಿದ್ದಾರೆ.
1998 ರಲ್ಲಿ ಸಹಾಯಕ ನಿರ್ದೇಶಕರಾಗಿ ನಿವೃತ್ತರಾದ ಕುಲಕರ್ಣಿ ಅವರು ವಿವಿಧ ಹುದ್ದೆಗಳಲ್ಲಿ ಇಂಟೆಲಿಜೆನ್ಸ್ ಬ್ಯೂರೋದಲ್ಲಿ ಕೆಲಸ ಮಾಡಿದ್ದು, RAW ಮತ್ತು ವಿದೇಶಿ ಗುಪ್ತಚರ ಸಂಸ್ಥೆಯೊಂದಿಗೆ ಸಹ ಸೇವೆ ಸಲ್ಲಿಸಿದ್ದಾರೆ. ಅವರು ರಾಜತಾಂತ್ರಿಕ ಕಾರ್ಯಾಚರಣೆಗಳ ಭಾಗವಾಗಿದ್ದರು ಮತ್ತು ಪರವಾನಗಿ ಪಡೆದ ಪೈಲಟ್ ಆಗಿದ್ದರು.
ಇದನ್ನೂ ಓದಿ: ತವರು ರಾಜ್ಯಕ್ಕೆ ಮಲ್ಲಿಕಾರ್ಜುನ ಖರ್ಗೆ: ಭಾನುವಾರ ಕಾಂಗ್ರೆಸ್ನಿಂದ ಅದ್ದೂರಿ ಸ್ವಾಗತ
ಮೂರು ಪುಸ್ತಕಗಳ ಲೇಖಕರಾಗಿರುವ ಅವರು, ಗುಪ್ತಚರ ಸಂಸ್ಥೆಗೆ ಸಾಂವಿಧಾನಿಕ ಅನುಮತಿಯ ಕೊರತೆಯು ಲೆಕ್ಕಪರಿಶೋಧನೆ ಮತ್ತು ಸುಧಾರಣೆಯನ್ನು ತಡೆಯುತ್ತದೆ ಎಂದು ಕುಲಕರ್ಣಿ ಅವರು ಈ ಹಿಂದೆ ಕರ್ನಾಟಕ ಹೈಕೋರ್ಟ್ನಲ್ಲಿ ಇಂಟೆಲಿಜೆನ್ಸ್ ಬ್ಯೂರೋದ ಕಾನೂನು ಸ್ಥಾನಮಾನವನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸಲ್ಲಿಸಿದ್ದರು.