Homeಮುಖಪುಟನಿರ್ಲಕ್ಷತೆಯೇ ಅಥವಾ ಪಿತೂರಿಯೇ? ಫುಲ್ವಾಮಾದ ಸಂಪೂರ್ಣ ಸತ್ಯವೇನೆಂದು ಕೇಳುತ್ತಿದೆ ದೇಶ!

ನಿರ್ಲಕ್ಷತೆಯೇ ಅಥವಾ ಪಿತೂರಿಯೇ? ಫುಲ್ವಾಮಾದ ಸಂಪೂರ್ಣ ಸತ್ಯವೇನೆಂದು ಕೇಳುತ್ತಿದೆ ದೇಶ!

- Advertisement -
- Advertisement -

ಯಾವಾಗ ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ಅತ್ಯಂತ ಆಘಾತಕಾರಿಯಾದ ಸಂದರ್ಶನ ಬಿತ್ತರವಾಯಿತೋ, ಆಗಿನಿಂದ ಟಿವಿ ಚಾನೆಲ್‌ಗಳು ಮತ್ತು ಪತ್ರಿಕೆಗಳು ಗರಬಡಿದಂತೆ ಸುಮ್ಮನಾಗಿವೆ. ಗುಲಾಂ ನಬಿ ಆಜಾದ್‌ರ ಸಣ್ಣಪುಟ್ಟ ಆರೋಪಗಳ ಮೇಲೆಯೇ ಗಂಟೆಗಟ್ಟಲೆ ಕಾರ್ಯಕ್ರಮ ನಡೆಸುವ ಚಾನೆಲ್‌ಗಳ ಬಳಿ ಈಗ ಬಹಿರಂಗಪಡಿಸಲಾಗಿರುವ ಅತ್ಯಂತ ಗಂಭೀರ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಒಂದು ನಿಮಿಷವೂ ಇಲ್ಲ. 15ನೇ ಏಪ್ರಿಲ್‌ನ ಬಹುತೇಕ ಮುಖ್ಯ ವಾಹಿನಿ ಪತ್ರಿಕೆಗಳಲ್ಲಿ ಎಲ್ಲಿಯೂ ಈ ಸುದ್ದಿಯ ಸಣ್ಣ ಉಲ್ಲೇಖವೂ ಕಾಣಿಸಿಕೊಂಡಿಲ್ಲ.

ಒಂದು ವಿಷಯ ಇಲ್ಲಿ ಹೇಳಬೇಕಿದೆ. 2019ರ 14ನೇ ಫೆಬ್ರುವರಿಯಂದು ಫುಲ್ವಾಮಾದಲ್ಲಿ ಆದ ಭೀಕರ ಘಟನೆಯ ಕಾಲದಲ್ಲಿ ಸತ್ಯಪಾಲ್ ಮಲಿಕ್ ಅವರು ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಇತ್ತೀಚಿಗೆ, ಮೊದಲು ಪ್ರಕಾಶ್ ಟಂಡನ್ ಹಾಗೂ ನಂತರ ಕರಣ್ ಥಾಪರ್‌ಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದೇನೆಂದರೆ ಈ ಭೀಕರ ಘಟನೆಯು ಸರಕಾರದ ತಪ್ಪಿನಿಂದ ಆಗಿದೆ ಎಂದು. ಅವರು ಪ್ರಧಾನಮಂತ್ರಿಗೆ ಘಟನೆಯ ದಿನದಂದೇ ಈ ಭೀಕರ ಘಟನೆಯ ನಮ್ಮ ತಪ್ಪಿನಿಂದ ಆಗಿದೆ ಹಾಗೂ ಅದನ್ನು ತಪ್ಪಿಸಬಹುದಾಗಿತ್ತು ಎಂದು ಹೇಳಿದ್ದರು. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ನಂತರ ಅಜಿತ್ ದೋವಲ್ ಇಬ್ಬರೂ ಮಲಿಕ್‌ಗೆ ಈ ವಿಷಯದ ಬಗ್ಗೆ ಸುಮ್ಮನಿರಬೇಕೆಂದು ತಾಕೀತು ಮಾಡಿದರು.

ಈ ಸಂದರ್ಶನದಲ್ಲಿ ಸತ್ಯಪಾಲ್ ಮಲಿಕ್ ಹೇಳಿದ್ದೆಲ್ಲವೂ ಬ್ರಹ್ಮವಾಕ್ಯದಂತೆ ಸಂಪೂರ್ಣ ಸತ್ಯ ಎಂದು ಪರಿಗಣಿಸಬೇಕಿಲ್ಲ. ಕಾಶ್ಮೀರದ ರಾಜ್ಯಪಾಲರಾಗಿದ್ದಾಗ ಸತ್ಯಪಾಲ್ ಮಲಿಕ್ ಮತ್ತು ಪ್ರಧಾನಮಂತ್ರಿಯ ನಡುವೆ ಎಲ್ಲವೂ ಸರಿಯಿದ್ದಿಲ್ಲ ಎಂಬುದು ಗುಟ್ಟೇನಿಲ್ಲ. ಹಾಗೂ ಅವರು ಕಳೆದ ಸ್ವಲ್ಪ ಸಮಯದಿಂದ ಮುನಿಸಿಕೊಂಡಿದ್ದೂ ಕಂಡುಬಂದಿದೆ. ಇಂಥದರಲ್ಲಿ, ಅವರ ಆರೋಪಗಳ ಹಿಂದೆ ಯಾವುದೇ ದ್ವೇಷ ಅಥವಾ ಸೇಡು ಕೆಲಸ ಮಾಡುತ್ತ, ಅದರಲ್ಲಿ ಉತ್ಪ್ರೇಕ್ಷೆ ಅಥವಾ ಸುಳ್ಳು ಇರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಈ ಸಂದರ್ಶನದ ನಂತರ ರಾಷ್ಟ್ರೀಯ ಮೀಡಿಯಾ ಸತ್ಯಪಾಲ್ ಮಲಿಕ್‌ಗೆ ಕಠಿಣವಾದ ಪಾಟೀಸವಾಲು ಮಾಡಿ, ಅವರ ಎಲ್ಲಾ ದಾವೆಗಳನ್ನು ಪುಷ್ಟೀಕರಿಸಿ, ಒಂದು ವೇಳೆ ಅವರು ಯಾವುದೇ ತಪ್ಪು ಹೇಳಿಕೆ ನೀಡಿದ್ದರೆ, ಆಗ ಅದನ್ನು ಖಂಡಿಸಿದ್ದರೆ, ಅದು ಖಂಡಿತವಾಗಿಯೂ ಸರಿಯಾದ ಕ್ರಮವಾಗುತ್ತಿತ್ತು. ಆದರೆ ಈ ವಿಷಯದ ಮೇಲೆ ಸಂಪೂರ್ಣ ಮೌನ ವಹಿಸಿರುವುದನ್ನು ನೋಡಿದಾಗ ಅನಿಸುವುದೇನೆಂದರೆ ’ಈ ಸುದ್ದಿಯ ಹತ್ತಿರಕ್ಕೆ ಬಂದರೆ ಹುಷಾರ್’ ಎಂದು ಮಾಧ್ಯಮಗಳಿಗೆ ಕರೆ ಮಾಡಿ ಹೇಳಿಲಾಗಿದೆ ಎಂದು. ಈ ಪ್ರಾಯೋಜಿತ ಮೌನವಂತೂ ಸಂದರ್ಶನವು ಬಹಿರಂಗಪಡಿಸಿದ ವಿಷಯಗಳ ತೂಕವನ್ನು ಇನ್ನಷ್ಟೂ ಹೆಚ್ಚಿಸುತ್ತಿದೆ.

ಆದರೆ ಕೇವಲ ಈ ಒಂದು ಆಧಾರದ ಮೇಲೆ ಇಷ್ಟು ಗಂಭೀರವಾದ ವಿಷಯದ ಬಗ್ಗೆ ಅಭಿಪ್ರಾಯ ರೂಪಿಸಿಕೊಳ್ಳಬಾರದು. ಫುಲ್ವಾಮಾ ದಾಳಿಯ ಹಿಂದೆ ಸರಕಾರದ ನಿರ್ಲಕ್ಷತೆ ಅಥವಾ ಅದಕ್ಕಿಂತ ಆಳವಾದ ಪಿತೂರಿ ಇತ್ತೋ ಇಲ್ಲವೋ ಎಂಬುದರ ಬಗ್ಗೆ ಯಾವುದಾದರೂ ಸ್ವತಂತ್ರ ಪ್ರಮಾಣಗಳು ಇವೆಯೇ ಎಂಬುದರ ತನಿಖೆ ಮಾಡಬೇಕು. ಅದೃಷ್ಟವಶಾತ್, ಪ್ರಮಾಣ ಹುಡುಕಲು ನಮಗೆ ಹೊಸದಾಗಿ ಅಧ್ಯಯನ ನಡೆಸುವ ಅವಶ್ಯಕತೆ ಇಲ್ಲ. ಇಂಗ್ಲಿಷ್ ಪತ್ರಿಕೆ ಫ್ರಂಟ್‌ಲೈನ್‌ನ ಫೆಬ್ರುವರಿ 2021ರ ಸಂಚಿಕೆಯಲ್ಲಿ ಆನಂದೋ ಭಕ್ತೊ ಅವರು ಸರಕಾರದ ಗುಪ್ತಚರ ವಿಭಾಗದ ಸಂದೇಶಗಳನ್ನು ತಲಕಾಡಿ ಹುಡುಕಿ, ಬಹಿರಂಗಪಡಿಸಿದ್ದೇನೆಂದರೆ, ಈ ದಾಳಿಗೆ ಮುನ್ನ ಸರಕಾರಕ್ಕೆ ಒಂದಲ್ಲ ಎರಡಲ್ಲ, ಒಟ್ಟು 11 ಬಾರಿ ಗೂಢಚಾರಿ ಸೂಚನೆಗಳು ಬಂದು, ಇಂತಹದ್ದೇನೋ ಆಗುತ್ತೆ ಎಂಬ ರಹಸ್ಯ ಮಾಹಿತಿ ಸಿಕ್ಕಿತ್ತೆಂಬ ಅಂಶ ಎದ್ದುಕಾಣುತ್ತದೆ. ಇದರ ಎಲ್ಲಾ ದಾಖಲೆಗಳು ಫ್ರಂಟ್‌ಲೈನ್ ಪತ್ರಿಕೆಯ ಬಳಿ ಇವೆ. ಆನಂದೋ ಭಕ್ತೊ ಅವರ ಈ ತನಿಖಾ ವರದಿಯನ್ನು ಇಲ್ಲಿಯವರೆಗೆ ಸರಕಾರ ಖಂಡಿಸಿಲ್ಲ.

ಸತ್ಯಪಾಲ್ ಮಲಿಕ್‌ರ ದಾವೆಗಳಿಗೆ ಪುಷ್ಟಿ ನೀಡುವ ಈ ತಥ್ಯಗಳನ್ನು ಒಂದು ಬಾರಿ ನೋಡುವ. ಫ್ರಂಟ್‌ಲೈನ್‌ನ ಲೇಖನದ ಪ್ರಕಾರ ಜಮ್ಮು ಕಾಶ್ಮೀರದ ಪೊಲೀಸರಿಗೆ ಮೊದಲ ಎಚ್ಚರಿಕೆ ಫುಲ್ವಮಾ ದಾಳಿಗೆ ಒಂದೂವರೆ ತಿಂಗಳ ಮುನ್ನ 2 ಮತ್ತು 3ನೆಯ ಜನವರಿ 2019ರಂದು ಜಮ್ಮು ಕಾಶ್ಮೀರದ ಡಿಜಿಪಿ ಮತ್ತು ಕಾಶ್ಮೀರ ರೇಂಜಿನ ಐಜಿಪಿಯ ಹೆಸರಿಗೆ ಒಂದು ರಹಸ್ಯ ವರದಿಯಲ್ಲಿ ಸಿಕ್ಕಿತು. ಇದರಲ್ಲಿ ಹೇಳಿದ್ದೇನೆಂದರೆ, ದಕ್ಷಿಣ ಕಾಶ್ಮೀರದಲ್ಲಿ ಜೈಶೆ ಮೊಹಮ್ಮದ್ ’ಕಿಸಾಸ್ ಮಿಷನ್’ನ ಹೆಸರಿನಲ್ಲಿ ಪ್ರತೀಕಾರದ ತಯ್ಯಾರಿ ನಡೆಯುತ್ತಿದೆ. ಈ ಎಚ್ಚರಿಕೆಯ ಗಂಭೀರತೆಗೆ ಒತ್ತುನೀಡಿ ಈ ವರದಿಯು ನೆನಪಿಸಿದ್ದೇನೆಂದರೆ ಇದಕ್ಕೂ ಮುನ್ನ ಇಂತಹದ್ದೊಂದು ಎಚ್ಚರಿಕೆ ಬಂದ ನಂತರ ಫುಲ್ವಾಮಾದಲ್ಲಿ ಸಿಆರ್‌ಪಿಎಫ್‌ನ ಕ್ಯಾಂಪಿನ ಮೇಲೆ ದಾಳಿ ಆಗಿತ್ತು. ಅದೇ ವಾರ 7ನೆಯ ಜನೆವರಿಯಂದು ಮೂರು ಉಗ್ರವಾದಿಗಳು (ಅದರಲ್ಲಿ ವಿದೇಶಿಯರೂ ಒಳಗೊಂಡಿದ್ದರು) ಕಾಶ್ಮೀರದ ಶೊಪಿಯಾ ಪ್ರದೇಶದಲ್ಲಿ ಯುವಕರಿಗೆ ಐಇಡಿ ಸ್ಪೋಟಕದ ತರಬೇತಿ ನೀಡುತ್ತಿದ್ದಾರೆ ಎಂಬ ಮೂರನೆಯ ಎಚ್ಚರಿಕೆ ಸಿಕ್ಕಿತ್ತು, ಫುಲ್ವಾಮಾದ ಅವಂತಿಪೋರ್ ಪ್ರದೇಶದಲ್ಲಿ ವಿದೇಶಿ ಉಗ್ರವಾದಿಗಳ ಸಹಯೋಗದಿಂದ 20 ಸ್ಥಳೀಯ ಉಗ್ರವಾದಿಗಳು ದೊಡ್ಡದೊಂದು ಭಯೋತ್ಪಾದಕ ಕೆಲಸ ಮಾಡುವ ಯೋಜನೆ ಮಾಡುತ್ತಿದ್ದಾರೆ ಎಂಬ 18ನೆಯ ಜನವರಿಯಂದು ಸಿಕ್ಕ ರಹಸ್ಯ ವರದಿಯು ಇದಕ್ಕೆ ಪುಷ್ಟಿ ನೀಡಿತು. ಅಂದೇ ಮತ್ತು ಮತ್ತೆ 21ನೆಯ ಜನವರಿಯಂದು ಗೊತ್ತಾಗಿದ್ದೇನೆಂದರೆ ಕಿಸಾಸ್ ಮಿಷನ್ ಹೆಸರಿನಲ್ಲಿ, 2017ರಲ್ಲಿ ಜೈಶೆ ಮೊಹಮ್ಮದ್‌ನ ಮುಖ್ಯಸ್ಥನ ಸಹೋದರನ ಮಗ ತಲಹಾ ರಾಷೀದ್‌ನ ಸಾವಿಗೆ ಪ್ರತಿಕಾರ ತೀರಿಸಿಕೊಳ್ಳಲು ಯೋಜನೆ ರಚಿಸಲಾಗುತ್ತಿದೆ ಎಂದು.

ಇದನ್ನೂ ಓದಿ: ಕಂಗೆಡುತ್ತಿರುವ ಪ್ರಜಾಪ್ರಭುತ್ವ ಮತ್ತು ಬೆದರಿದ ರಾಜಕೀಯಕ್ಕೆ ಬಲಿಪಶುಗಳಾದ ಪಠ್ಯಪುಸ್ತಕಗಳು

ಆದರೆ ಅಲ್ಲಿಯತನಕ ಈ ದಾಳಿ ಎಲ್ಲಿ ಆಗುತ್ತದೆ, ಯಾರು ಮಾಡುತ್ತಾರೆ ಹಾಗೂ ಕಾರ್ಯಾಚರಣೆ ನಡೆದರೆ ಯಾರ ವಿರುದ್ಧ ನಡೆಯುತ್ತದೆ ಎಂಬುದರ ಬಗ್ಗೆ ಮಾಹಿತಿ ಇರಲಿಲ್ಲ. 24 ಮತ್ತು 25ನೆಯ ಜನವರಿಯಿಂದ ಸಿಕ್ಕ ಗುಪ್ತ ಮಾಹಿತಿಯು ಈ ಕೊಂಡಿಯನ್ನೂ ಜೋಡಿಸಿತು. ಆಗ ತಿಳಿದುಬಂದಿದ್ದೇನೆಂದರೆ, ಜೈಶೆ ಮೊಹಮ್ಮದ್‌ನ ಅವಂತಿಪೊರಾ ಗುಂಪು ಮುದಾಸ್ಸಿರ್ ಖಾನ್‌ನ ನೇತೃತ್ವದಲ್ಲಿ ದೊಡ್ಡ ಫಿದಾಯೀನ್ ದಾಳಿಯ ನಡೆಸುತ್ತಿದೆ ಎಂಬ ವರದಿ ಹಾಗೂ ಆ ಗುಂಪು ಫುಲ್ವಾಮಾದ ಶಾಹಿದ್ ಬಾಬಾನ ಸಂಪರ್ಕದಲ್ಲಿದೆ ಎಂದು. ಈಗ ಪೊಲೀಸರ ಬಳಿ ಕಾರ್ಯಾಚರಣೆ ನಡೆಸಲು ಅವಶ್ಯಕ ಮಾಹಿತಿ ಇತ್ತು. ಮುದಾಸ್ಸಿರ್ ಒಬ್ಬ ಸ್ಥಳೀಯ ಉಗ್ರವಾದಿಯಾಗಿದ್ದ ಹಾಗೂ ಅವನ ತನಕ ತಲುಪುವುದು ಅಸಾಧ್ಯವಾಗಿರಲಿಲ್ಲ. 25ನೆಯ ತಾರೀಕಿನಂದು ಮುದಾಸ್ಸಿರ್ ಖಾನ್ ಮಿಡೂರಾ ಎಂಬ ಹಳ್ಳಿಯಲ್ಲಿ ಕಾಣಿಸಿಕೊಂಡಿದ್ದ ಎಂಬ ಗುಪ್ತಚರ ವರದಿ ಹೇಳಿತು. ಅವಂತಿಪೊರಾ ಅಥವಾ ಪಾಂಪೋರ್ ಬಳಿ ದಾಳಿಯ ತಯ್ಯಾರಿ ನಡೆಯುತ್ತವೆ ಎಂಬುದು ಆಗ ಸ್ಪಷ್ಟವಾಗಿತ್ತು. ಜೈಶೆ ಮೊಹಮ್ಮದ್ ಸಂಘಟನೆಯು ಪ್ರತೀಕಾರದ ಕಾರ್ಯಾಚರಣೆ ನಡೆಸಲಿದೆ ಎಂಬ ಸುದ್ದಿ 19ನೆಯ ಫೆಬ್ರುವರಿಯಂದು ಸಿಆರ್‌ಪಿಎಫ್ ಬಳಿಯೂ ಬಂದಿತ್ತು.

ದಾಳಿಯ ಎರಡು ದಿನಗಳ ಮುನ್ನ ದಾಳಿ ಹೇಗೆ ಆಗಲಿದೆ ಎಂಬುದು ಗೊತ್ತಾಗಿತ್ತು. ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಬಳಸುವ ದಾರಿಯಲ್ಲಿ ಐಇಡಿ ಸ್ಫೋಟದ ತಯ್ಯಾರಿ ಜೈಶೆ ಮೊಹಮ್ಮದ್‌ನ ಪಾಕಿಸ್ತಾನ್ ಹ್ಯಾಂಡ್ಲರ್ ನಡೆಸುತ್ತಿದೆ ಎಂಬ ವರದಿ 12ನೆಯ ಫೆಬ್ರುವರಿಯಂದು ಕೇಂದ್ರ ಸರಕಾರದ ಗೂಢಚರ್ಯ ಸಂಸ್ಥೆ ಐಬಿಯ ಮಲ್ಟಿ ಎಜೆನ್ಸಿ ಸೆಂಟರ್‌ಗೆ ಬಂದು ತಲುಪಿತು. ಮತ್ತೇ ದಾಳಿಯ 24 ಗಂಟೆಗಳ ಮುನ್ನ ಕೊನೆಯ ಮತ್ತು ಹನ್ನೊಂದನೆಯ ಎಚ್ಚರಿಕೆ ಸಿಕ್ಕಿತು, ಅದರಲ್ಲಿ ಜೈಶೆ ಮೊಹಮ್ಮದ್ ಭದ್ರತಾ ಪಡೆಗಳ ದಾರಿಯಲ್ಲಿ ಐಇಡಿ ಸ್ಫೋಟ್ ಮಾಡಬಹುದು ಹಾಗೂ ಭದ್ರತಾ ಪಡೆಗಳಿಗೆ ತಕ್ಷಣ ಅಲರ್ಟ್ ಮಾಡಬೇಕು ಎಂದು ಹೇಳಲಾಗಿತ್ತು.

ಈ ಎಲ್ಲಾ ಎಚ್ಚರಿಕೆಗಳ ಹೊರತಾಗಿಯೂ ಮಾರನೆಯ ದಿನ ಅಂದರೆ 14ನೆಯ ಫೆಬ್ರುವರಿಯಂದು ಎರಡೂವರೆ ಸಾವಿರಕ್ಕಿಂತ ಹೆಚ್ಚು ಸಿಆರ್‌ಪಿಎಫ್‌ನ ಜವಾನರನ್ನು ಯಾವ ದಾರಿಯಲ್ಲಿ ಸ್ಫೋಟವಾಗಬಹುದೆಂಬ ರಹಸ್ಯ ಮಾಹಿತಿ ಸಿಕ್ಕಿತ್ತೋ, ಅದೇ ದಾರಿಯಲ್ಲಿ ಕಳುಹಿಸಲಾಯಿತು. ರಸ್ತೆಯಲ್ಲಿ ಹೋಗುವ ಬದಲಿಗೆ ವಿಮಾನಗಳನ್ನು ಕಳುಹಿಸಬೇಕು ಎಂದು ಸಿಆರ್‌ಪಿಎಫ್ ಬೇಡಿಕೆಯಿಟ್ಟಿದ್ದರೂ ಅವುಗಳನ್ನು ನಿರಾಕರಿಸಲಾಯಿತು. ಅದಷ್ಟೇ ಅಲ್ಲ, ಸತ್ಯಪಾಲ್ ಮಲಿಕ್ ಪ್ರಕಾರ ಆ ರಸ್ತೆಯ ಎಲ್ಲಾ ನಾಕಾಗಳಲ್ಲಿ ಸಂಚಾರ ನಿರ್ಬಂಧಿಸಲಾಗಿರಲಿಲ್ಲ. ಆಗ ಯಾವುದರ ಆತಂಕವಿತ್ತೋ ಅದೇ ಆಯಿತು. ಯಾವುದರ ಮಾಹಿತಿ ಮುಂಚೆಯೇ ಸಿಕ್ಕಿತ್ತೊ, ಅದೇ ಜೈಶೆ ಮೊಹಮ್ಮದ್ ಮುಖಾಂತರ, ಅದೇ ಮುದಾಸ್ಸಿರ್ ಖಾನ್‌ನ ನೇತೃತ್ವದಲ್ಲಿ ಅದೇ ಫುಲ್ವಾಮಾ ಅವಂತಿಪೊರಾ ಪ್ರದೇಶದಲ್ಲಿ ಐಇಡಿ ಸ್ಫೋಟ ಆಯಿತು. ನಮ್ಮ ನಲವತ್ತು ಜವಾನರು ಹುತಾತ್ಮರಾದರು.

ಹಾಗಾಗಿಯೇ ಸತ್ಯಪಾಲ್ ಮಲಿಕ್‌ರ ಖುಲಾಸೆಯನ್ನು ಹಗುರವಾಗಿ ಪರಿಗಣಿಸಲಾಗುವುದಿಲ್ಲ. ಈ ಎಲ್ಲಾ ಪ್ರಮಾಣಗಳು ಮತ್ತು ಪ್ರಧಾನಮಂತ್ರಿಯವರು ಅವರಿಗೆ ಸುಮ್ಮನಿರಲು ಹೇಳಿದ್ದು, ರಾಷ್ಟ್ರೀಯ ಭದ್ರತೆಯ ಮೇಲೆ ಒಂದು ದೊಡ್ಡ ಪ್ರಶ್ನೆ ಎತ್ತುತ್ತದೆ. ಒಂದು ವೇಳೆ ಇಷ್ಟೆಲ್ಲಾ ಗುಪ್ತಚರ ಮಾಹಿತಿಯ ಹೊರತಾಗಿಯೂ ಭದ್ರತಾ ಪಡೆಗಳನ್ನು ಸಾವಿನ ದವಡೆಗೆ ನೂಕಿದರು ಎಂದರೆ ಇದು ಒಂದು ಅತ್ಯಂತ ಭೀಕರ ನಿರ್ಲಕ್ಷತೆಯ ವಿಷಯವಾಗಿದೆ. ಒಂದು ವೇಳೆ ಹೀಗೆಯೇ ಆಗಿದ್ದಲ್ಲಿ, ಈ ಕ್ರಿಮಿನಲ್ ನಿರ್ಲಕ್ಷತೆಯ ಹೊಣೆಗಾರಿಕೆ ಯಾರದ್ದು ಎಂಬುದನ್ನು ತಿಳಿಯುವ ಹಕ್ಕು ದೇಶಕ್ಕಿದೆ. ಇಲ್ಲಿಯತನಕ ಯಾವುದೇ ಅಧಿಕಾರಿ ಅಥವಾ ಸಚಿವನ ವಿರುದ್ಧ ನಿರ್ಲಕ್ಷತೆಗಾಗಿ ಕ್ರಮ ಏಕೆ ಕೈಗೊಂಡಿಲ್ಲ? ಅಥವಾ ಇದು ಕೇವಲ ನಿರ್ಲಕ್ಷ್ಯದ ವಿಷಯವಾಗದೆ, ಒಂದು ಪಿತೂರಿಯಾಗಿತ್ತೇ? ಎಲ್ಲಾ ಗೊತ್ತಿದ್ದರೂ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಈ ಭೀಕರ ಘಟನೆ ಘಟಿಸಲು ಉದ್ದೇಶಪೂರ್ವಕವಾಗಿ ಬಿಡಲಾಯಿತೇ? ಇದೇ ಸತ್ಯವಾಗಿದ್ದಲ್ಲಿ, ಇದು ದೇಶದ್ರೋಹದ ಪ್ರಕರಣವಾಗುತ್ತದೆ. ಈ ಪಿತೂರಿ ಯಾರ ಸೂಚನೆಯ ಮೇರೆಗೆ ನಡೆದಿತ್ತು ಎಂಬುದನ್ನು ತಿಳಿಯುವ ಹಕ್ಕು ದೇಶಕ್ಕಿದೆ. ಎಲ್ಲಿಯವರೆಗೆ ಈ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲವೋ, ಅಲ್ಲಿಯವರೆಗೆ ಸತ್ಯಪಾಲ್ ಮಲಿಕ್ ಖುಲಾಸೆಗೊಳಿಸಿದ ವಿಷಯಗಳು ಪ್ರತಿಧ್ವನಿಸುತ್ತಲೇ ಇರಲಿವೆ.

ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾ ಸಂಸ್ಥಾಪಕರಲ್ಲೊಬ್ಬರು, ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಬಾಲ ಕಾರ್ಮಿಕ’ ಶಂಕೆಯ ಮೇಲೆ 155 ಮುಸ್ಲಿಂ ವಿದ್ಯಾರ್ಥಿಗಳ ಬಂಧನ: ಧಾರ್ಮಿಕ ಗುರುತಿನ ಕಾರಣಕ್ಕೆ ಬಂಧಿಸಿರುವುದಾಗಿ ಪೋಷಕರ ಆರೋಪ

ಮಧ್ಯಪ್ರದೇಶದ ಕಟ್ನಿಯಲ್ಲಿ ಸರ್ಕಾರಿ ರೈಲ್ವೆ ಪೊಲೀಸರು (GRP) 155 ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಎಂಟು ಶಿಕ್ಷಕರನ್ನು "ಬಾಲ ಕಾರ್ಮಿಕ" ಶಂಕೆಯ ಮೇಲೆ ಬಂಧಿಸಿದ ನಂತರ, ಪೋಷಕರು ಮುಸ್ಲಿಂ ವಿರೋಧಿ ಪಕ್ಷಪಾತವನ್ನು ಹೊಂದಿದ್ದಾರೆಂದು ಆರೋಪಿಸಿದ್ದಾರೆ....

ಜನಿವಾರದ ಹಿಂದೆ ಬಿದ್ದಿರುವ ವಿರೋಧ ಪಕ್ಷ ಮತ್ತು ಮಾಧ್ಯಮಗಳು

ಏಪ್ರಿಲ್ 23, 2026 ರಂದು ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ವೇಳೆ ಬೆಂಗಳೂರಿನ ಕೋರಮಂಗಲದಲ್ಲಿರುವ ಕೃಪಾನಿಧಿ ಪಿಯು ಕಾಲೇಜಿನಲ್ಲಿ ಐವರು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ ಘಟನೆ ರಾಜಕೀಯ...

ಒಡಿಶಾ| ಸಾವಿನ ದಾಖಲೆ ಕೇಳಿದ ಬ್ಯಾಂಕ್‌ ಸಿಬ್ಬಂದಿ; ಸಮಾದಿ ಅಗೆದು ಸಹೋದರಿಯ ಅಸ್ಥಿಪಂಜರ ತಂದ ಬುಡಕಟ್ಟು ವ್ಯಕ್ತಿ

ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ, ಬುಡಕಟ್ಟು ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಅಸ್ಥಿಪಂಜರವನ್ನು ಅಗೆದು ಗ್ರಾಮೀಣ ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿದ್ದಾನೆ. ಆಕೆಯ ಸಾವನ್ನು ಸಾಬೀತುಪಡಿಸುವ ಮೂಲಕ ಆಕೆಯ ಖಾತೆಯಲ್ಲಿ ಜಮಾ ಮಾಡಿದ ಹಣವನ್ನು ಪಡೆಯಲು...

ಜಾತಿ ಕಿರುಕುಳಕ್ಕೆ ದಲಿತ ವಿದ್ಯಾರ್ಥಿ ಸಾವು ಪ್ರಕರಣ: ಇಂದು ಸಂಜೆ 6 ರವರೆಗೆ ಕೇರಳ ಬಂದ್

ಜಾತಿ ಆಧಾರಿತ ಕಿರುಕುಳದಿಂದ ಮನನೊಂದಿದ್ದ ಕೇರಳದ ಅಂಚರಕಂಡಿಯ ಕಣ್ಣೂರು ದಂತ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವಿದ್ಯಾರ್ಥಿ ಆರ್.ಎಲ್. ನಿತಿನ್ ರಾಜ್ ಆತ್ಮಹತ್ಯೆಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ...

‘ಹೊತ್ತಿ ಉರಿಯುತ್ತಿರುವ ಮಣಿಪುರ’: ಶತಮಾನದ ಬೆಂಕಿಗೆ ತುಪ್ಪ ಸುರಿದ ಬಿಜೆಪಿಯ ಕೋಮುರಾಜಕಾರಣ

ಭಾರತದ ಈಶಾನ್ಯ ರಾಜ್ಯ ಮಣಿಪುರ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಶತಮಾನಗಳಿಂದ ಹೊಗೆಯಾಡುತ್ತಿದ್ದ ಹಗೆತನಕ್ಕೆ ಕೋಮುರಾಜಕಾರಣದ ಬಣ್ಣ ಬಳಿದ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಮಣಿಪುರದ ಜನರತ್ತ ತಿರುಗಿಯೂ ನೋಡುತ್ತಿಲ್ಲ. 2023ರಲ್ಲಿ ಭುಗಿಲೆದ್ದ ಉದ್ವಿಗ್ನತೆ...

ಮಧ್ಯಪ್ರದೇಶ| ದಲಿತ ದಂಪತಿಗೆ ಹನುಮಾನ್ ದೇಗುಲ ಪ್ರವೇಶ ನಿರಾಕರಣೆ; ಸಾಮಾಜಿಕ ಬಹಿಷ್ಕಾರ

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಹನುಮಾನ್ ದೇವಸ್ಥಾನಕ್ಕೆ ನವವಿವಾಹಿತ ದಲಿತ ದಂಪತಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಗ್ರಾಮದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ. ಈ ಘಟನೆಯು ಜಾತಿ ಆಧಾರಿತ ತಾರತಮ್ಯದ ಕುರಿತು ಕಳವಳ...

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...