ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಇಂದಿನಿಂದ (ಮಾರ್ಚ್ 29) ರಾಜ್ಯದಲ್ಲಿ 15 ದಿನ ಯಾವುದೇ ಪ್ರತಿಭಟನೆ, ಚಳವಳಿ ಮತ್ತು ರ್ಯಾಲಿ ಮಾಡುವಂತಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಯಡಿಯೂರಪ್ಪ ಈ ಕುರಿತು ಮಾಹಿತಿ ನೀಡಿದ್ದಾರೆ. ಇಂದಿನಿಂದ 15 ದಿನ ಯಾವುದೇ ಸತ್ಯಾಗ್ರಹ, ಪ್ರತಿಭಟನೆ, ಚಳುವಳಿ ಮಾಡುವಂತಿಲ್ಲ. ಜನರು ಸುರಕ್ಷತೆ ವಹಿಸಬೇಕು. ಮಾಸ್ಕ್ಗಳನ್ನು ಸರಿಯಾಗಿ ಬಳಸಬೇಕು. ದೈಹಿಕ ಅಂತರ ಅನುಸರಿಸಬೇಕು ಎಂದಿದ್ದಾರೆ.
ಸಮಾಧಾನದ ಸಂಗತಿ ಎಂದರೇ, ಸ್ಲಂಗಳಲ್ಲಿ ಕೊರೊನಾ ಪ್ರಕರಣಗಳು ಅಷ್ಟಾಗಿ ಕಾಣಿಸಿಕೊಂಡಿಲ್ಲ. ಆದರೆ, ಫ್ಲ್ಯಾಟ್, ಅಪಾರ್ಟ್ಮೆಂಟ್ಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲಿ ವ್ಯಾಕ್ಸಿನ್ ಹಾಕಲು ತಂಡಗಳನ್ನು ರಚಿಸಲಾಗುವುದು. ಹೀಗಾಗಿ ಅಪಾರ್ಟ್ಮೆಂಟ್ಗಳಲ್ಲಿ ಇನ್ನು ಮುಂದೆ ಯಾವುದೇ ಪಾರ್ಟಿಗಳನ್ನು ನಡೆಸುವಂತಿಲ್ಲ ಎಂದಿದ್ದಾರೆ.
ಇದನ್ನೂ ಓದಿ: `1232 ಕಿ.ಮೀ’ | ಕರಾಳ ಲಾಕ್ಡೌನ್ನಲ್ಲಿ ಕಾರ್ಮಿಕರ ‘ಮಹಾವಲಸೆ’ಯ ಕತೆ ಹೇಳುವ ಸಾಕ್ಷ್ಯಚಿತ್ರ
ರಾಜ್ಯದಲ್ಲಿ ಯಾವುದೇ ರೀತಿಯ ಲಾಕ್ಡೌನ್ ಜಾರಿಗೊಳಿಸುವುದಿಲ್ಲ. ಆದರೆ ಜನರ ಸಹಕಾರ ಇದಕ್ಕೆ ಬೇಕಾಗಿದೆ. ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಈ ಮೂಲಕ ಸರ್ಕಾರಕ್ಕೆ ಸಹಕಾರ ನೀಡಬೇಕು. ನಾಳೆಯಿಂದ ಮಾಸ್ಕ್ ಧರಿಸದೇ ಇರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದಿದ್ದಾರೆ.
ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಪತ್ರ ಬರೆದು ಕೊರೊನಾ ತಡೆಗೆ ಕೆಲವು ವಿಷಯಗಳನ್ನು ತಿಳಿಸಿದ್ದಾರೆ. ಕೊರೊನಾ 2ನೇ ಅಲೆ ಆವರಿಸುತ್ತಿದ್ದು, ಜನರನ್ನು ಹೆಚ್ಚು ಭೀತಿಗೆ ಒಳಪಡಿಸದೇ, ಆರ್ಥಿಕ ಚಟುವಟಿಕೆಗಳಿಗೆ ನಿರ್ಬಂಧಿಸದೇ, ವೈಜ್ಞಾನಿಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದಿದ್ದಾರೆ. ಸ್ವಯಂ ಪ್ರೇರಣಿಯಿಂದ ಸುರಕ್ಷತಾ ಕ್ರಮ ಕೈಗೊಳ್ಳಲು ಉತ್ತೇಜಿಸಬೇಕು ಎಂದು ಪತ್ರ ಬರೆದಿದ್ದಾರೆ ಹಾಗಾಗಿ ಈ ಸೂಚನೆಗಳನ್ನು ಪರಿಗಣಿಸಲಾಗುವುದು ಎಂದಿದ್ದಾರೆ.
ಇದನ್ನೂ ಓದಿ: ಪಂಜಾಬ್ ಬಿಜೆಪಿ ಶಾಸಕನ ಮೇಲೆ ಹಲ್ಲೆ ಪ್ರಕರಣ: ನಮ್ಮ ರೈತರು ಭಾಗಿಯಾಗಿಲ್ಲವೆಂದ ರಾಕೇಶ್ ಟಿಕಾಯತ್