ಭಾರತದ ಇತಿಹಾಸ ಸಂಸ್ಕೃತಿಯ ಹುಟ್ಟು ಮತ್ತು ವಿಕಾಸವನ್ನು ಸಮಗ್ರವಾಗಿ ಅಧ್ಯಯನ ಮಾಡಲು ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆ ತಂಡವೊಂದನ್ನು ರಚಿಸಿದೆ. ಆದರೆ ಈ ತಂಡದಲ್ಲಿ ದಕ್ಷಿಣದ ಪರಪಂರೆಯ ಬಗ್ಗೆ ಜ್ಞಾನವಿರುವ ಕನ್ನಡಿಗರಾಗಲಿ, ಮಹಿಳೆಯರಾಗಲಿ, ದ್ರಾವಿಡರಾಗಲಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಭಾರತದ ಸಂಸ್ಕೃತಿಯನ್ನು ಸಮಗ್ರವಾಗಿ ಅಧ್ಯಯನ ಮಾಡಲು ಕೇಂದ್ರ ಸರ್ಕಾರ ರಚಿಸಿರುವ 16 ಜನರ ಸಮಿತಿಯಲ್ಲಿ ದಕ್ಷಿಣ ಭಾರತೀಯರಾರೂ ಇಲ್ಲವೆಂದು ಕುಮಾರಸ್ವಾಮಿ ಇಂದು ಸರಣಿ ಟ್ವೀಟ್ ಮಾಡುವುದರ ಮೂಲಕ ಆರೋಪಿಸಿದ್ದಾರೆ.
“ಭಾರತದ 12 ಸಾವಿರ ವರ್ಷಗಳ ಇತಿಹಾಸ, ಸಂಸ್ಕೃತಿ ಮತ್ತು ಜಗತ್ತಿನ ಇತರ ಸಂಸ್ಕೃತಿಗಳೊಂದಿಗಿನ ಸಂಪರ್ಕದ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ 16 ಸದಸ್ಯರ ತಜ್ಞರ ಸಮಿತಿ ರಚಿಸಿದೆ. ಆದರೆ ಇದರಲ್ಲಿ ಕನ್ನಡಿಗರಾಗಲಿ, ದ್ರಾವಿಡ ಪರಂಪರೆಯ ಜ್ಞಾನವಿರುವ ದಕ್ಷಿಣ ಭಾರತೀಯರಾಗಲಿ, ಮಹಿಳೆಯರಾಗಲಿ ಇಲ್ಲವೇ ಇಲ್ಲವಾಗಿರುವುದು ದುರದೃಷ್ಟಕರ” ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಉತ್ತರ ಭಾರತೀಯರ ಹೆಸರುಗಳ ವಿಜೃಂಭಣೆ: ಹೀಗಾದರೆ ಕನ್ನಡದ ಅಸ್ಮಿತೆಯ ಕತೆಯೇನು?
ಭಾರತದ 12 ಸಾವಿರ ವರ್ಷಗಳ ಇತಿಹಾಸ, ಸಂಸ್ಕೃತಿ ಮತ್ತು ಜಗತ್ತಿನ ಇತರ ಸಂಸ್ಕೃತಿಗಳೊಂದಿಗಿನ ಸಂಪರ್ಕದ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ 16 ಸದಸ್ಯರ ತಜ್ಞರ ಸಮಿತಿ ರಚಿಸಿದೆ. ಆದರೆ ಇದರಲ್ಲಿ ಕನ್ನಡಿಗರಾಗಲಿ, ದ್ರಾವಿಡ ಪರಂಪರೆಯ ಜ್ಞಾನವಿರುವ ದಕ್ಷಿಣ ಭಾರತೀಯರಾಗಲಿ, ಮಹಿಳೆಯರಾಗಲಿ ಇಲ್ಲವೇ ಇಲ್ಲವಾಗಿರುವುದು ದುರದೃಷ್ಟಕರ.
1/3 pic.twitter.com/cmdamaMHVd— H D Kumaraswamy (@hd_kumaraswamy) September 16, 2020
“ಕನ್ನಡಿಗ ಪ್ರತಿನಿಧಿಗಳೇ ಇಲ್ಲದೇ ಕರ್ನಾಟಕದ ಚರಿತ್ರೆ, ಪರಂಪರೆಯ ನಿಷ್ಪಕ್ಷಪಾತ ಅಧ್ಯಯನ ಸಾಧ್ಯವೇ? ದಕ್ಷಿಣ ಭಾರತೀಯರಿಲ್ಲದೇ ಒಟ್ಟು ಭಾರತದ ಇತಿಹಾಸ ಅಧ್ಯಯನಕ್ಕೆ ಒಳಪಡುವುದಾದರೂ ಹೇಗೆ? ಈ ದೇಶವನ್ನು ಅಂಬೆಗೆ ಹೋಲಿಸಿದವರು ನಾವು. ಹೆಣ್ಣನ್ನು ಪೂಜಿಸುವ ದೇಶದ ಸಂಸ್ಕೃತಿ ಅಧ್ಯಯನ ಮಾಡುವ ಸಮಿತಿಯಲ್ಲಿ ಮಹಿಳೆಗೆ ಸ್ಥಾನವೇ ಇಲ್ಲವಾಗಿದ್ದು ಹೇಗೆ? ಇತಿಹಾಸ, ಸಂಸ್ಕೃತಿ ವಿಚಾರವಾಗಿ ಪೂರ್ವಾಗ್ರಹಗಳನ್ನು ಹೊಂದಿರುವಂತೆ ಕಾಣುವ, ಉತ್ತರ ಭಾರತೀಯರೇ ತುಂಬಿರುವ ಈ ಸಮಿತಿ ನಡೆಸುವ ಅಧ್ಯಯನದ ವಸ್ತುನಿಷ್ಠತೆ ಬಗ್ಗೆ ಅನುಮಾನಗಳು ದಟ್ಟವಾಗಿವೆ. ಸಮಿತಿಯ ಪುನಾರಚನೆ ಮಾಡುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೂಡಲೇ ನಿರ್ಧಾರ ಕೈಗೊಳ್ಳಲಿ” ಎಂದು ಒತ್ತಾಯಿಸಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರು: ಕನ್ನಡಿಗರನ್ನು ಬಂಧಿಸಿ ನಾಮಕರಣಕ್ಕೆ ಮುಂದಾದ ಸರ್ಕಾರ
ಭಾರತೀಯ ಸಂಸ್ಕೃತಿ ಎಂದರೆ ಕೇವಲ ಒಂದು ಸಮುದಾಯದ ಸಂಸ್ಕೃತಿಯಲ್ಲ ಅಥವಾ ಒಂದು ರಾಜ್ಯದ, ಒಂದು ಧರ್ಮ, ಜಾತಿಗೆ ಸಂಬಂಧಿಸಿದ ಸಂಸ್ಕೃತಿ ಮಾತ್ರವಲ್ಲ. ಭಾರತ ಎಂದರೆ ವಿವಿಧತೆ, ಭಾರತ ಎಂದರೆ ಬಹು ಸಂಸ್ಕೃತಿ. ಆದರೆ ಇಂದಿನ ಆಳುವ ಸರ್ಕಾರಗಳು ಎಲ್ಲವನ್ನೂ ಏಕತೆಯೊಳಗೆ ಬಂಧಿಸುವ ಪ್ರಯತ್ನವನ್ನು ಮಾಡುತ್ತಿದೆ. ಇದರ ಮುಂದುವರಿದ ಭಾಗವೇ ಈ ಅಧ್ಯಯನ ಸಮಿತಿ.
ಕುಮಾರಸ್ವಾಮಿಯವರು ಎತ್ತಿರುವ ಪ್ರಶ್ನೆ ಅವರದು ಮಾತ್ರವಲ್ಲ. ಇದು ಇಡೀ ದಕ್ಷಿಣ ಭಾರತೀಯರ ಅಸ್ಮಿತೆಯ ಪ್ರಶ್ನೆ. ಹಿಂದಿ ಹೇರಿಕೆ ಮತ್ತು ಕರ್ನಾಟಕದಲ್ಲಿನ ಸ್ಥಳಗಳಿಗೆ ಉತ್ತರ ಭಾರತದ ನಾಯಕರ ಹೆಸರಿಡುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿ ನಡೆಯುತ್ತಿವೆ. ಈಗ ಈ ಅಧ್ಯಯನ ಮಾಡಿ, ಸರ್ಕಾರದಿಂದಲೇ ಅಧಿಕೃತವಾಗಿ ಕೇವಲ ಉತ್ತರ ಭಾರತದ ಸಂಸ್ಕೃತಿ ಮತ್ತು ಇತಿಹಾಸ ಮಾತ್ರ ಭಾರತದ್ದು ಎಂದು ಸಾಬೀತುಪಡಿಸಲು ಹೊರಟಿದೆ. ಈ ಮೂಲಕ ಉಳಿದ ಸ್ಥಳೀಯತೆಯ ಅಸ್ಮಿತೆಯನ್ನು ನಾಶಮಾಡಲು ಮುಂದಾಗಿರುವಂತೆ ತೋರುತ್ತಿದೆ. ಇದರ ವಿರುದ್ಧ ಬಲವಾದ ದನಿಯೆತ್ತದ ಹೊರತು ನಾವು ನಮ್ಮತನವನ್ನು ಕಳೆದುಕೊಳ್ಳುವುದರಲ್ಲಿ ಸಂದೇಹವಿಲ್ಲ.
ಇದನ್ನೂ ಓದಿ: ಸ್ವಾತಂತ್ರ ಬಂತು ಸ್ವಾಯತ್ತತೆ ಹೋಯ್ತು : ಇದು ಕನ್ನಡಿಗರ ಕೂಗು