Homeರಂಜನೆಕ್ರೀಡೆಒಂದಿಡೀ ಸಮುದಾಯ ಮತ್ತು ದೇಶ ಸಂಭ್ರಮಿಸುವ ಕ್ರೀಡಾಸ್ಪೂರ್ತಿ ರಾಷ್ಟ್ರೀಯತೆಯ ಒಲಿಂಪಿಕ್ಸ್

ಒಂದಿಡೀ ಸಮುದಾಯ ಮತ್ತು ದೇಶ ಸಂಭ್ರಮಿಸುವ ಕ್ರೀಡಾಸ್ಪೂರ್ತಿ ರಾಷ್ಟ್ರೀಯತೆಯ ಒಲಿಂಪಿಕ್ಸ್

- Advertisement -
- Advertisement -

ಪ್ರತಿ ನಾಲ್ಕು ವರ್ಷಗಳಿಗೊಮ್ಮ ಬರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿನ ಸಾಧನೆ ಯಾವುದೇ ಕ್ರೀಡಾಪಟುವಿನ ಜೀವಮಾನಕ್ಕೆ ಜೊತೆಯಾಗಿ ಉಳಿಯುವ ಬೆವರು. ಅಲ್ಲಿ ಕೇವಲ ಆಟಗಾರನೊಬ್ಬನಲ್ಲ ಆತನನ್ನು/ಆಕೆಯನ್ನು ಪ್ರೋತ್ಸಾಹಿಸುವ, ಪೋಷಿಸುವ, ಮಾರ್ಗದರ್ಶನ ನೀಡುವ, ಚಪ್ಪಾಳೆ ಹೊಡೆದು ಹುರಿದುಂಬಿಸುವ, ಬಿರುದು ಬಾವಲಿ ನೀಡಿ ಅಭಿನಂದಿಸುವ ಸಾವಿರಾರು ಮನಸ್ಸುಗಳಿರುತ್ತವೆ. ಹಾಗೆ ನೋಡಿದರೆ ಒಂದಿಡೀ ಸಮುದಾಯ/ದೇಶವೇ ಆಕೆ/ಆತನ ಹಿಂದಿರುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಒಲಿಂಪಿಕ್ಸ್‌ಅನ್ನು ರಾಜಕೀಯರಹಿತ ರಾಷ್ಟ್ರೀಯತೆಯಿಂದ ಬೇರ್ಪಡಿಸುವುದು ಕಷ್ಟ.

ಈ ಕ್ರೀಡಾಜಾತ್ರೆಗೆ ಆಟಗಾರರನ್ನು ಅಣಿಗೊಳಿಸುವುದು, ಅವರ ಬೆಂಬಲಕ್ಕೆ ನಿಲ್ಲುವುದು ಹಾಗೂ ಅವರ ಸಾಧನೆಗೆ ಪೂರಕ ಒತ್ತಾಸೆ ನೀಡುವ ವ್ಯವಸ್ಥೆ ಸಹ ಒಂದಿಲ್ಲೊಂದು ಚೌಕಟ್ಟಿನ ಬಂಧಿಯಾಗಿರುತ್ತದೆ. ಓರ್ವ ಕ್ರೀಡಾಪಟುವಿನ ಯಶಸ್ಸಿನ ಮೇಲೆ ಆ ಇಡೀ ವ್ಯವಸ್ಥೆಯ ಯಶಸ್ಸು ಕೂಡ ಅವಲಂಬಿತವಾಗಿರುತ್ತದೆ.

ಈ ದೃಷ್ಟಿಯಿಂದ ನೋಡಿದಾಗ ಶತಮಾನಗಳಷ್ಟು ಇತಿಹಾಸವಿರುವ ಈ ಕೂಟಗಳಲ್ಲಿ ಅನೇಕ ಉದಾಹರಣೆಗಳು ದೇಶಿಯತೆಯ ಛಾಪು ಮೂಡಿಸಿರುವುದನ್ನು ನೋಡಬಹುದಾಗಿದೆ. ಅಷ್ಟೇ ಏಕೆ, ಪದಕ ಗೆದ್ದ ಕ್ರೀಡಾಳು ತನ್ನ ದೇಶದ ಧ್ವಜವನ್ನು ಮೈಗೆ ಸುತ್ತಿಕೊಂಡು ಸಂಭ್ರಮಿಸುವಾಗ, ಗೆಲುವನ್ನು ತನ್ನ ಜನರಿಗೆ ಸಮರ್ಪಿಸುವಾಗ ಸಹ ಈ ದೇಶೀಯತೆ ಸಾಕಾರಗೊಳ್ಳುತ್ತದೆ.

ಸಹಜವಾಗಿಯೇ ಅಥ್ಲೀಟ್‌ಗಳು ತಮ್ಮ ನಾಲ್ಕು ವರ್ಷಗಳ ಕಠಿಣ ಪರಿಶ್ರಮವನ್ನು ಪಣಕ್ಕಿಡುತ್ತಾರೆ. ಇಲ್ಲಿ ವೈಯಕ್ತಿಕ ಸಾಧನೆಯ ಪರಾಕಾಷ್ಠೆ ತಲುಪುವ ಹಂಬಲದಲ್ಲಿರುತ್ತಾರೆ. ಅವರ ಸಾಧನೆಯ ಮೇರಿನಲ್ಲಿಯೇ ಅವರು ಪ್ರತಿನಿಧಿಸುವ ಸಮುದಾಯದ ಸಂಭ್ರಮ ಕೂಡ ಬೆಸುಗೆ ಹಾಕಿಕೊಂಡಿರುತ್ತದೆ.

ಒಲಿಂಪಿಕ್ಸ್‌ನಲ್ಲಿ ದೇಶದ ಎಲ್ಲೆಗಳನ್ನು ಮೀರಿ ಕ್ರೀಡಾಪಟುಗಳು ಸ್ವತಂತ್ರರಾಗಿ ಸ್ಪರ್ಧಿಸಲು ಸಹ ಅವಕಾಶ ಇರುತ್ತದೆ. ಯಾವುದೇ ಒಂದು ದೇಶ ರಾಜಕೀಯ ಮತ್ತು ತುಮುಲದ ಕಾರಣಗಳಿಂದಾಗಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದಾದಾಗ ಆಯ್ದ ಕ್ರೀಡಾಪಟುಗಳು ಸ್ವತಂತ್ರವಾಗಿ ಸ್ಪರ್ಧೆ ಮಾಡಲು ಐಒಸಿ ಅವಕಾಶ ಮಾಡಿಕೊಡುತ್ತದೆ. ಆದರೆ ಅಂತಹವರ ಸಂಖ್ಯೆ ವಿರಳ ಎಂದೇ ಹೇಳಬೇಕು.

17 ವರ್ಷಗಳ ಹಿಂದೆ…

ಆಧುನಿಕ ಒಲಿಂಪಿಕ್ಸ್ ತವರು ಎನ್ನಲಾಗುವ ಅಥೆನ್ಸ್‌ನಲ್ಲಿ 17 ವರ್ಷಗಳ ಹಿಂದೆ ಒಲಿಂಪಿಕ್ಸ್ ಕ್ರೀಡಾಕೂಟ ಏರ್ಪಟ್ಟಿತ್ತು. ಧಾರವಾಡದ ಹೆಮ್ಮೆಯ ಕುವರಿ ಜೆಜೆ ಶೋಭಾ ಆ ಕೂಟದಲ್ಲಿ ತೋರಿದ ಛಲ, ಧೈರ್ಯ, ಸಂಕಲ್ಪದ ಹಿಂದೆ ಸಹ ತನ್ನ, ತನ್ನ ದೇಶದ ಗೌರವವನ್ನು ಎತ್ತಿಹಿಡಿಯಬೇಕು ಎಂಬ ಭಾವನೆ ಎದ್ದು ಕಾಣುತ್ತದೆ.

ಏಳು ಆಟಗಳ ಗೊಂಚಲಾಗಿರುವ ಹೆಪ್ಟಾಥ್ಲಾನಿನಲ್ಲಿ ಪದಕದಾಸೆಯೊಂದಿಗೆ ಕಣಕ್ಕಿಳಿದಿದ್ದ ಶೋಭಾ ಕಡೆಯ ಓಟದ ವೇಳೆ ತೀವ್ರ ಗಾಯಗೊಂಡು ನಡೆದಾಡಲೂ ಸಾಧ್ಯವಿಲ್ಲ ಎಂಬ ಸ್ಥಿತಿಯಲ್ಲಿದ್ದರು. ಇಡೀ ಮೈದಾನವೇ ನಿಬ್ಬೆರಗಾಗುವಂತೆ 800 ಮೀಟರ್ ಓಟದ ಆರಂಭ ಗೆರೆ ಸಮೀಪ ಬಂದ ಶೋಭಾ ಅಪಾರ ನೋವಿನ ನಡುವೆಯೂ ಓಡಿದ್ದು, ಇಡೀ ಭಾರತೀಯರು ಎದೆಯುಬ್ಬಿಸುವಂತೆ ಮಾಡಿತ್ತು ಎಂಬುದನ್ನು ಯಾರೂ ಮರೆಯಲು ಸಾಧ್ಯವಿಲ್ಲ.

ಇಂತಹ ಅನೇಕ ಉದಾಹರಣೆಗಳು ಓಲಿಂಪಿಕ್ಸ್ ಇತಿಹಾಸದ ಗರ್ಭದಲ್ಲಿ ಅಡಗಿವೆ. ಭಾರತ ಮಾತ್ರವಲ್ಲದೇ ವಿವಿಧ ದೇಶಗಳ ಅಥ್ಲೀಟ್‌ಗಳು ತಮ್ಮ ದೇಶದ ಘನತೆ ಹೆಚ್ಚಿಸುವ ಸಲುವಾಗಿ ಅಪಾರ ನೋವು ನುಂಗಿ ಸ್ಪರ್ಧಿಸಿದ ನಿದರ್ಶನಗಳು ಹಲವಿವೆ.

ನಿಜ, ಓಲಿಂಪಿಕ್ಸ್ ಎಂಬುದು ಸಮಾನತೆಯ ಸಂಕೇತ. ಸಾಧನೆಯೊಂದೇ ಇಲ್ಲಿ ಎದ್ದು ಕಾಣುವ ಕಸುಬಾದರೂ ಎಲ್ಲರೂ ಸಮಾನ ಸಾಮರ್ಥ್ಯದ ಅಭ್ಯರ್ಥಿಗಳೇ! ಇಷ್ಟಾದರೂ ಇದನ್ನು ನಾವು, ನಮ್ಮವರು, ನಮ್ಮ ದೇಶ ಎಂಬ ಭಾವನೆಗಳಿಂದ ದೂರ ಇಡಲು ಸಾಧ್ಯವಿಲ್ಲ. ಆದರೆ ಇಲ್ಲಿ ಎದೆ ಬಡಿದುಕೊಳ್ಳುವ ರಾಷ್ಟ್ರೀಯತೆ ಎಂಬ ರಾಜಕೀಯ ಷಡ್ಯಂತ್ರ ಇಲ್ಲ. ಇಲ್ಲಿರುವುದು ಒಂದಿಡೀ ಸಮುದಾಯ-ದೇಶ ಎದೆಯುಬ್ಬಿಸಿ ನಡೆಯುವಂತೆ ಮಾಡುವ, ಒಳಗೊಳ್ಳುವ, ಪ್ರಾತಿನಿಧ್ಯಕ್ಕೆ ಮಹತ್ವ ನೀಡುವ, ಕ್ರೀಡಾಸ್ಪೂರ್ತಿಯ ರಾಷ್ಟ್ರೀಯತೆಯಷ್ಟೇ.

ಈಗ ಟೋಕಿಯೋದಲ್ಲಿ ಈ ಜಾತ್ರೆ ನಡೆಯುತ್ತಿದೆ. ಭಾರತ ಈ ಬಾರಿ 120ಕ್ಕೂ ಹೆಚ್ಚು ಸ್ಪರ್ಧಾಳುಗಳನ್ನು ಕಳುಹಿಸಿಕೊಟ್ಟಿದೆ.  ಈ ಹೊತ್ತಿಗೆ ಮೀರಾಬಾಯಿ ಚಾನು ವೇಯ್ಟ್ ಲಿಫ್ಟಿಂಗ್ ನಲ್ಲಿ ಭಾರತಕ್ಕೆ ಈ ಒಲಿಂಪಿಕ್ಸ್ ನ ಬೆಳ್ಳಿ ಪದಕ ಗಳಿಸಿಕೊಟ್ಟಿದ್ದರೆ. ಇನ್ನೂ ಹಲವು ಪದಕಗಳ ಭರವಸೆ ಇದೆ. ಅದೇನೇ ಇರಲಿ ನೂರು ಕೋಟಿ ಕನಸನ್ನು ಹೊತ್ತು ಟೋಕಿಯೋಗೆ ಹೋಗಿರುವ ಎಲ್ಲ ಕ್ರೀಡಾಪಟುಗಳಿಗೆ ಶುಭಮಸ್ತು.

ಕೆ ಬಿ ಎಸ್ ಜಗನ್ನಾಥ್

ಕೆ ಬಿ ಎಸ್ ಜಗನ್ನಾಥ್
ಹಲವು ಕನ್ನಡ ಪತ್ರಿಕೆಗಳಲ್ಲಿ ಕ್ರೀಡಾ ವಿಭಾಗದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದ್ದಾರೆ. ಸಂಯುಕ್ತ ಕರ್ನಾಟಕ ಪತ್ರಿಕೆಯ ಮಾಜಿ ಸಂಪಾದಕರು.


ಇದನ್ನೂ ಓದಿ: ಒಲಂಪಿಯಾದಿಂದ ಟೋಕಿಯೋದವರೆಗೆ; ಇತಿಹಾಸದ ಕಣ್ಣೋಟದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...