Homeಮುಖಪುಟಆಪರೇಷನ್ ಕಮಲ: ಬಿಜೆಪಿಯ ಮುಂದಿನ ಬೇಟೆ ಜಾರ್ಖಂಡ್?

ಆಪರೇಷನ್ ಕಮಲ: ಬಿಜೆಪಿಯ ಮುಂದಿನ ಬೇಟೆ ಜಾರ್ಖಂಡ್?

- Advertisement -
- Advertisement -

ಜಾರ್ಖಂಡ್‌ ಸಮ್ಮಿಶ್ರ ಸರ್ಕಾರದ ವಿರುದ್ಧ ಪಿತೂರಿ ನಡೆಸಿದ ಆರೋಪದ ಮೇಲೆ ಮೂರು ಜನರನ್ನು ಶನಿವಾರ ಬಂಧಿಸಲಾಗಿತ್ತು. ಇದಾಗಿ ಒಂದು ದಿನದ ನಂತರ ಭಾನುವಾರದಂದು, ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಕೆಲವು ಅಪರಿಚಿತ ವ್ಯಕ್ತಿಗಳು ಅನೇಕ ಬಾರಿ ತಮ್ಮನ್ನು ಸಂಪರ್ಕಿಸಿದ್ದು 1 ಕೋಟಿ ರೂ. ಮತ್ತು ಮಂತ್ರಿ ಪದವಿಯನ್ನು ನೀಡುವುದಾಗಿ ಹೇಳಿದ್ದಾರೆ ಎಂದು ಕಾಂಗ್ರೆಸ್ ಶಾಸಕರೊಬ್ಬರು ಆರೋಪಿಸಿದ್ದಾರೆ.

ದೇಶದ ಹಲವು ರಾಜ್ಯದಗಳಲ್ಲಿ ಆಪರೇಷನ್ ಕಮಲ ಮಾಡಿ ಅಧಿಕಾರ ಹಿಡಿದಿರುವ ಬಿಜೆಪಿಯ ಮುಂದಿನ ಗುರಿ ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಸಮ್ಮಿಶ್ರ ಸರ್ಕಾರವಿರುವ ಜಾರ್ಖಂಡ್‌ ಆಗಿದೆಯೆ ಎಂದು ಸಂಶಯ ಮೂಡತೊಡಗಿದೆ. 81 ಸದಸ್ಯ ಬಲವಿರುವ ರಾಜ್ಯದಲ್ಲಿ ಆಡಳಿತರೂಢ ಜೆಎಂಎಂಗೆ 30 ಸ್ಥಾನಗಳಿದ್ದರೆ, ಕಾಂಗ್ರೆಸ್‌ಗೆ 18 ಮತ್ತು ಆಜೆಡಿಗೆ 1 ಸ್ಥಾನವಿದೆ. ಬಿಜೆಪಿ 26 ಸ್ಥಾನಗಳನ್ನು ಹೊಂದಿದ್ದು, ಇತರೆ ಪಕ್ಷಗಳು ಏಳು ಸ್ಥಾನಗಳನ್ನು ಹೊಂದಿದೆ.

“ಮೂವರು ವ್ಯಕ್ತಿಗಳು ಕನಿಷ್ಠ ಆರು ಬಾರಿ ನನ್ನನ್ನು ಸಂಪರ್ಕಿಸಿದ್ದಾರೆ” ಎಂದು ಜಾರ್ಖಂಡ್‌ ನ ಕೋಲೆಬೀರಾ ಕ್ಷೇತ್ರದ ಕಾಂಗ್ರೆಸ್ ಶಾಸಕ ನಮನ್ ಬಿಕ್ಸಲ್ ಕೊಂಗಾರಿ ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ: ಜಾರ್ಖಂಡ್‌: ಮಗನಿಗಾಗಿ ಸೈಕಲ್‌ನಲ್ಲಿ 400 ಕಿ.ಮೀ ಪ್ರಯಾಣ ಮಾಡುತ್ತಿದ್ದ ತಂದೆ, ನೆರವಾದ ಬೆಂಗಳೂರಿನ ಸಂಸ್ಥೆ

“ನನ್ನ ಪಕ್ಷದ ಕಾರ್ಯಕರ್ತರ ಮೂಲಕ ಮೂರು ಜನರು ನನ್ನನ್ನು ಸಂಪರ್ಕಿಸಿದ್ದರು, ಅವರು ಕೆಲವು ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ನಾನು ಅವರನ್ನು ನನ್ನನ್ನು ಸಂಪರ್ಕಿಸಬೇಡಿ ಎಂದು ಕೇಳಿದರೂ, ಅವರು ಮತ್ತೇ ಸಂಪರ್ಕಿಸಿದ್ದರು. ಒಮ್ಮೆ, ಅವರು ನನಗೆ 1 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ನೀಡುವುದಾಗಿ ಹೇಳಿದ್ದಾರೆ. ನಾನು ತಕ್ಷಣ ಸಿಎಲ್‌ಪಿ (ಕಾಂಗ್ರೆಸ್ ಶಾಸಕಾಂಗ ಪಕ್ಷ) ನಾಯಕ ಆಲಮ್‌ಗೀರ್ ಆಲಂ ಮತ್ತು ಕಾಂಗ್ರೆಸ್ ಜಾರ್ಖಂಡ್ ಉಸ್ತುವಾರಿ ಆರ್.ಪಿ.ಎನ್. ಸಿಂಗ್ ಅವರಿಗೆ ಮಾಹಿತಿ ನೀಡಿದ್ದೇನೆ. ನಾನು ಈ ಬಗ್ಗೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರಿಗೆ ಮಾಹಿತಿ ನೀಡಿದ್ದೇನೆ” ಎಂದು ಶಾಸಕ ಹೇಳಿದ್ದಾರೆ.

ಆದರೆ ಈ ಬಗ್ಗೆ ಪತ್ರಿಕೆಗಳೊಂದಿಗೆ ಚರ್ಚಿಸಲು ಸಾಧ್ಯವಿಲ್ಲ ಎಂದು, ಆರ್.ಪಿ.ಎನ್. ಸಿಂಗ್ ಅವರು ಹೇಳಿದ್ದಾರೆಂದು ಪತ್ರಿಕೆ ವರದಿ ಮಾಡಿದೆ. ಈ ವಿಷಯದ ಬಗ್ಗೆ ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂ‌ತ್‌ ಸೊರೆನ್ ಕೂಡಾ ಮೌನ ತಾಳಿದ್ದಾರೆ.

ನಮನ್ ಬಿಕ್ಸಲ್ ಕೊಂಗಾರಿ, “ಹಣದ ಹೊರತಾಗಿ, ಮಂತ್ರಿ ಸ್ಥಾನವನ್ನು ನೀಡುವುದಾಗಿ ಅವರು ನನ್ನನ್ನು ಸಂಪರ್ಕಿಸಿದ್ದರು. ಅವರು ಬಿಜೆಪಿಗಾಗಿ ಇದನ್ನು ಮಾಡುತ್ತಿದ್ದಾರೆ ಎಂದು ಅವರು ನನಗೆ ಹೇಳಿದ್ದಾರೆ. ಆದರೆ ಬಿಜೆಪಿ ಕಾರ್ಯಕರ್ತರು ಯಾರೂ ನನ್ನನ್ನು ಸಂಪರ್ಕಿಸಲಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ನಮ್ಮ ಮಾತನ್ನೂ ಕೇಳಿ’- ಪ್ರಧಾನಿ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಜಾರ್ಖಂಡ್ ಸಿಎಂ

ಶನಿವಾರ ಬಂಧನಕ್ಕೊಳಗಾದ ಮೂವರು ವ್ಯಕ್ತಿಗಳು ಅವರೆನಾ ಎಂದು ಖಚಿತಪಡಿಸಲು ಸಾಧ್ಯವಿಲ್ಲ, ಯಾಕೆಂದರೆ ಅವರ ಮುಖಗಳು ನನಗೆ ನೆನಪಿಲ್ಲ ಎಂದು ಶಾಸಕ ಹೇಳಿದ್ದಾರೆ.

ಬರ್ಮೋ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕುಮಾರ್ ಜೈಮಂಗಲ್‌ ನೀಡಿದ ದೂರಿನ ಮೇರೆಗೆ ರಾಂಚಿಯ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದಾಗಿ ಎರಡು ದಿನಗಳ ನಂತರ ಅಭಿಷೇಕ್ ದುಬೆ, ಅಮಿತ್ ಸಿಂಗ್ ಮತ್ತು ನಿವಾರನ್ ಪ್ರಸಾದ್ ಮಹತೋ ಅವರನ್ನು ಶನಿವಾರ ಬಂಧಿಸಲಾಯಿತು.

ಈ ಪ್ರಕರಣವನ್ನು ಐಪಿಸಿ ಸೆಕ್ಷನ್ 419 (ಕ್ರಿಮಿನಲ್ ಪಿತೂರಿ), 420 (ಮೋಸ), 124 ಎ (ದೇಶದ್ರೋಹ), 120 ಬಿ (ಕ್ರಿಮಿನಲ್ ಪಿತೂರಿ) ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಿಸಲಾಗಿದೆ.

ಇದನ್ನೂ ಓದಿ: 75% ಖಾಸಗಿ ವಲಯದ ಉದ್ಯೋಗ ಸ್ಥಳೀಯರಿಗೆ: ಜಾರ್ಖಂಡ್ ಸಚಿವ ಸಂಪುಟ ನಿರ್ಧಾರ

ಆರೋಪಿ ನಿವಾರನ್ ಪ್ರಸಾದ್ ಮಹತೋ ಅವರ ಫೇಸ್‌ಬುಕ್ ಪೇಜ್‌‌ನಲ್ಲಿ ಅವರು ಬಿಜೆಪಿಯ ಧನ್ಬಾದ್ ಸಂಸದ ಪಶುಪತಿ ನಾಥ್ ಮತ್ತು ಕೆಲವು ಸ್ಥಳೀಯ ನಾಯಕರೊಂದಿಗೆ ಇರುವ ಚಿತ್ರಗಳು ಬಹಿರಂಗವಾಗಿದೆ. ನಿವಾರನ್‌ ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಜಾರ್ಖಂಡ್ ಬಿಜೆಪಿ ವಕ್ತಾರ ಪ್ರತುಲ್ ಶಹದೇವ್, “ನನಗೆ ತಿಳಿದ ಮಟ್ಟಿಗೆ ಅವರು ಬಿಜೆಪಿ ಸದಸ್ಯರಲ್ಲ” ಎಂದು ಹೇಳಿದ್ದಾರೆ.

ಪ್ರತುಲ್‌ ಶಹದೇವ್ ಪ್ರಕರಣವನ್ನು ಸಿಬಿಐ ನೀಡುವಂತೆ ಒತ್ತಾಯಿಸಿದರೆ, ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಬಾಬುಲಾಲ್ ಮರಂಡಿ ಅವರು ಪೊಲೀಸರು ಪತ್ರಿಕಾಗೋಷ್ಠಿ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಅಂಶಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಒತ್ತಾಯಿಸಿದ್ದಾರೆ.

ಜಾರ್ಖಂಡ್‌ ಪೊಲೀಸರು ಈ ಪ್ರಕರಣದ ಕಾರ್ಯವಿಧಾನವನ್ನು ಇಲ್ಲಿಯವರೆಗೆ ವಿವರಿಸಿಲ್ಲ. ಕೇವಲ ಮೂವರು ಆರೋಪಿಗಳು ತಾವು ಸರ್ಕಾರದ ವಿರುದ್ಧದ ಪಿತೂರಿಯಲ್ಲಿ ಭಾಗಿಯಾಗಿದ್ದೇವೆ ಮತ್ತು ಅದನ್ನು ಅಸ್ಥಿರಗೊಳಿಸಲು ಯೋಜಿಸುತ್ತಿದ್ದೇವೆ ಎಂದು ಹೇಳಿದ್ದಾರೆ ಎಂಬ ಪತ್ರಿಕಾ ಪ್ರಕಟಣೆಯನ್ನು ಮಾತ್ರ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಜಾರ್ಖಂಡ್: ಬಡತನದಿಂದ ಮದ್ಯ ಮಾರುವ ಸ್ಥಿತಿಗೆ ಬಂದ ನ್ಯಾಷನಲ್ ಕರಾಟೆ ಚಾಂಪಿಯನ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನನ್ನ ತಾಯಿ ದೇಶಕ್ಕಾಗಿ ಮಂಗಳಸೂತ್ರವನ್ನು ತ್ಯಾಗ ಮಾಡಿದ್ದಾರೆ: ಪ್ರಿಯಾಂಕ ಗಾಂಧಿ

0
'ನನ್ನ ತಾಯಿ ದೇಶಕ್ಕಾಗಿ ಮಂಗಳಸೂತ್ರವನ್ನು ತ್ಯಾಗ ಮಾಡಿದ್ದಾರೆ' ಮತ್ತು 'ನನ್ನ ಅಜ್ಜಿ ಆಡಳಿತದಲ್ಲಿ ದೇಶದ ಯುದ್ಧಕ್ಕಾಗಿ ತಮ್ಮ ಚಿನ್ನವನ್ನು ದಾನ ಮಾಡಿದ್ದಾರೆ' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದು, ಪ್ರಧಾನಿ...