ಥಾಲಸ್ಸೆಮಿಯಾ (Thalassemia) ರೋಗಕ್ಕೆ ಒಳಗಾಗಿದ್ದ ತನ್ನ ಮಗನಿಗೆ ರಕ್ತ ವರ್ಗಾವಣೆಯ ವ್ಯವಸ್ಥೆ ಮಾಡಲು ತಂದೆಯೊಬ್ಬರು ಪ್ರತಿ ತಿಂಗಳು ಸೈಕಲ್ನಲ್ಲಿ 400 ಕಿ.ಮೀ ಪ್ರಯಾಣ ಮಾಡುತ್ತಿದ್ದ ಘಟನೆ ಜಾರ್ಖಂಡ್ನ ಗೊಡ್ಡಾ ಜಿಲ್ಲೆಯಲ್ಲಿ ನಡೆದಿದೆ.
ಜಾರ್ಖಂಡ್ನ ಕೂಲಿ ಕೆಲಸಗಾರ ದಿಲೀಪ್ ಯಾದವ್, ತನ್ನ ಐದೂವರೆ ವರ್ಷದ ಮಗ ವಿವೇಕ್ಗೆ ರಕ್ತ ವರ್ಗಾವಣೆಯ ವ್ಯವಸ್ಥೆ ಮಾಡಲು ಅವರು ಬೈಸಿಕಲ್ನಲ್ಲಿ ಪ್ರತಿ ತಿಂಗಳು 400 ಕಿ.ಮೀ ಪ್ರಯಾಣ ಮಾಡುತ್ತಿದ್ದರು. ಅವರ ಕಷ್ಟವನ್ನು ಗಮನಿಸಿದ್ದ ಬೆಂಗಳೂರು ಮೂಲದ ಕ್ರೌಡ್ಫಂಡಿಂಗ್ ಪ್ಲಾಟ್ಫಾರ್ಮ್, ಬೆಂಗಳೂರಿನ ಆಸ್ಟರ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಿದೆ.
ಥಾಲಸ್ಸೆಮಿಯಾ (Thalassemia) ಅನುವಂಶಿಕವಾಗಿ ರಕ್ತದ ಕಾಯಿಲೆಯಾಗಿದ್ದು, ಈ ರೊಗದಿಂದ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಅಗತ್ಯಕ್ಕಿಂತ ಕಡಿಮೆಯಾಗುತ್ತಿರುತ್ತದೆ. ಐದೂವರೆ ವರ್ಷದ ಬಾಲಕ ವಿವೇಕ್ಗೆ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ.
ಇದನ್ನೂ ಓದಿ: ಕೊರೊನಾ ಲಾಕ್ಡೌನ್; ಹೆಚ್ಚುತ್ತಿರುವ ಬಡತನ ಮತ್ತು ಬಾಲ್ಯವಿವಾಹದ ರಣನರ್ತನ
ಆಸ್ಪತ್ರೆಗೆ ತೆರಳಲು ಲಾಕ್ಡೌನ್ ನಡುವೆ ಪ್ರತಿ ತಿಂಗಳು ಬೈಸಿಕಲ್ನಲ್ಲಿ 400 ಕಿ.ಮೀ ಪ್ರಯಾಣಿಸುತ್ತಿದ್ದ ದಿಲೀಪ್ ಯಾದವ್ ಅವರ ಕಷ್ಟದ ಬಗ್ಗೆ ಪತ್ರಿಕಾ ವರದಿಗಳಿಂದ ತಿಳಿದ, ಮಿಲಾಪ್ ಸಂಸ್ಥೆ ಸಂಸ್ಥಾಪಕ-ನಿರ್ದೇಶಕ ಸಂಜಯ್ ಪಾಂಡೆ ಅವರು ಯಾದವ್ ಅವರನ್ನು ಭೇಟಿಯಾಗಲು ಅವರ ಊರು ಗೊಡ್ಡಾಗೆ ಪ್ರಯಾಣಿಸಿದ್ದರು.
ದಿಲೀಪ್ ಯಾದವ್ ಅವರನ್ನು ಭೇಟಿ ಮಾಡಿದ ಸಂಜಯ್ ಪಾಂಡೆ ಅವರು, “ಯಾದವ್ ಅವರ ಮಗನಿಗೆ ಉಚಿತವಾಗಿ ಚಿಕಿತ್ಸೆ ಕೊಡಿಸಲು ಸಹಾಯ ಮಾಡಬೇಕು ಎಂದು ನಾವು ನಿರ್ಧರಿಸಿದ್ದೇವೆ. ಯಾದವ್ ಅವರ ಮಗನ ವೈದ್ಯಕೀಯ ಪರೀಕ್ಷೆಯ ನಂತರ, ಆತನ ಅಸ್ಥಿಮಜ್ಜೆಯ ಕಸಿಗೆ ಒಟ್ಟು 18 ರಿಂದ 20 ಲಕ್ಷ ರೂ. ವೆಚ್ಚವಾಗಲಿದೆ ಎಂದು ತಿಳಿದುಬಂದಿದೆ. ಅದನ್ನು ಮಿಲಾಪ್ ಸಂಸ್ಥೆ ಸಂಪೂರ್ಣವಾಗಿ ಭರಿಸಲಿದೆ” ಎಂದು ಹೇಳಿದ್ದಾರೆ.
ಮಗನ ಚಿಕಿತ್ಸೆಗಾಗಿ ಕಷ್ಟ ಪಡುತ್ತಿದ್ದ ದಿಲೀಪ್ ಯಾದವ್ ಅವರ ಕುಟುಂಬದ ನಾಲ್ಕು ಮಕ್ಕಳು ಸೇರಿದಂತೆ ಆರು ಸದಸ್ಯರಿಗೂ ವಿಮಾನ ಟಿಕೆಟ್ಗಳನ್ನು ಕಳುಹಿಸಲಾಗಿದೆ. ಇದರಿಂದ ಅವರು ಬೆಂಗಳೂರಿಗೆ ಬರಲು ಅನುಕೂಲವಾಗಿದೆ ಎಂದು ಮಿಲಾಪ್ ಸಂಸ್ಥೆ ಸಂಸ್ಥಾಪಕ-ನಿರ್ದೇಶಕ ಸಂಜಯ್ ಪಾಂಡೆ ಹೇಳಿದ್ದಾರೆ.
ಇದನ್ನೂ ಓದಿ: ಕೊರೊನಾ ಭಯ:15 ತಿಂಗಳಿಂದ ಗುಡಿಸಿಲಿನಲ್ಲೇ ಸ್ವಯಂ ಕ್ವಾರಂಟೈನ್ ಆದ ಕುಟುಂಬ!