Homeಕರ್ನಾಟಕನಮ್ಮ ಸಚಿವರಿವರು; ಕಾಂಗ್ರೆಸ್‌ ಪಕ್ಷದ ಕಟ್ಟಾಳು, ಛಲದಂಕಮಲ್ಲ ಆರ್.ಬಿ.ತಿಮ್ಮಾಪೂರಗೆ ಅಬಕಾರಿ ಖಾತೆ

ನಮ್ಮ ಸಚಿವರಿವರು; ಕಾಂಗ್ರೆಸ್‌ ಪಕ್ಷದ ಕಟ್ಟಾಳು, ಛಲದಂಕಮಲ್ಲ ಆರ್.ಬಿ.ತಿಮ್ಮಾಪೂರಗೆ ಅಬಕಾರಿ ಖಾತೆ

- Advertisement -
- Advertisement -

ಯಡಿಯೂರಪ್ಪ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಪ್ರಭಾವಿ ರಾಜಕಾರಣಿ ಗೋವಿಂದ ಕಾರಜೋಳ ಅವರನ್ನು ಸೋಲಿಸಿ ಬಾಗಲಕೋಟೆ ಜಿಲ್ಲೆಯ ಮುಧೋಳ ಮೀಸಲು ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಆರ್.ಬಿ.ತಿಮ್ಮಾಪೂರ ಅವರಿಗೆ ಮತ್ತೊಮ್ಮೆ ಮಂತ್ರಿ ಭಾಗ್ಯ ಒಲಿದುಬಂದಿದೆ. ಅಬಕಾರಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಸಿ.ಎಂ ಸಿದ್ದರಾಮಯ್ಯ ಆಪ್ತರಾಗಿರುವ ದಲಿತ ಮುಖಂಡ ತಿಮ್ಮಾಪೂರ ಅವರು, ಸೋತರೂ ಗೆದ್ದರೂ ಛಲ ಬಿಡದಂತೆ ಪಕ್ಷಕ್ಕಾಗಿ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಈ ಹಿಂದೆ ಶಾಸಕರಾಗಿ ಆಯ್ಕೆಯಾದಾಗ ಇವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಸೋತಾಗಲೂ, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ವಿಧಾನಪರಿಷತ್‌ಗೆ ಆಯ್ಕೆ ಮಾಡಿ ಸಚಿವ ಸ್ಥಾನ ನೀಡಲಾಗಿದೆ. ಹೀಗಾಗಿ ರಾಜ್ಯ ರಾಜಕಾರಣದಲ್ಲಿ ಆರ್.ಬಿ ತಿಮ್ಮಾಪೂರ್ ಅವರನ್ನು ಅದೃಷ್ಟವಂತ ರಾಜಕಾರಣಿ ಅಂತಲೇ ಕರೆಯುತ್ತಾರೆ.

ಎಸ್ಸಿ (ಎಡಗೈ) ಸಮುದಾಯದ ಪ್ರಬಲ ನಾಯಕ ಆರ್.ಬಿ. ತಿಮ್ಮಾಪೂರ (ರಾಮಣ್ಣ ಬಾಲಪ್ಪ ತಿಮ್ಮಾಪೂರ) ಅವರು ಮೂಲತಃ ಬಾದಾಮಿ ತಾಲೂಕಿನ ಕಾಡರಕೊಪ್ಪ ಗ್ರಾಮದವರು. ಬಿ.ಎ, ಎಲ್‌ಎಲ್‌ಬಿ ಪದವೀಧರರಾಗಿರುವ ಅವರು ಕಾಲೇಜು ದಿನಗಳಲ್ಲಿ ಕುಸ್ತಿಯ ಆಟದಲ್ಲಿ ಪೈಲ್ವಾನ್ ಎನಿಸಿಕೊಂಡವರು. ಈಗಲೂ ರಾಜಕೀಯ ಕ್ಷೇತ್ರದಲ್ಲಿ ತಮ್ಮ ಪಟ್ಟುಗಳನ್ನು ಪ್ರಯೋಗಿಸುತ್ತ, ಸೋತರೂ ಗೆದ್ದರೂ ಛಲದಂಕ ಮಲ್ಲನಂತೆ ಕಣದಲ್ಲಿ ಪೈಪೋಟಿ ನೀಡುತ್ತಲೇ ಬಂದಿದ್ದಾರೆ.

ತಿಮ್ಮಾಪೂರರವರ ರಾಜಕೀಯ ಪಯಣ

1989ರಲ್ಲಿ ಆರ್.ಬಿ ತಿಮ್ಮಾಪೂರ ಅವರು ಮೊದಲ ಬಾರಿಗೆ ಮುಧೋಳ ಮೀಸಲು ಕ್ಷೇತ್ರದಿಂದ ಆಯ್ಕೆಯಾಗುವ ಮೂಲಕ, ಆಗ ರಾಜ್ಯದಲ್ಲೇ ಅತ್ಯಂತ ಕಿರಿಯ (27ನೇ ವಯಸ್ಸಿಗೆ) ಶಾಸಕರಾದ ಖ್ಯಾತಿ ಪಡೆದವರು. ಒಟ್ಟು ಏಳು ಬಾರಿ ಮುಧೋಳ ಕ್ಷೇತ್ರದಿಂದ ಸ್ಪರ್ಧಿಸಿ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ನಾಲ್ಕು ಬಾರಿ ಸೋಲು ಕಂಡಿದ್ದಾರೆ.

ಸ್ಪರ್ಧಿಸಿದ ಪ್ರತಿ ಚುನಾವಣೆಯಲ್ಲೂ ಪ್ರಬಲ ಪೈಪೋಟಿಯನ್ನೇ ಕೊಟ್ಟಿರುವ ತಿಮ್ಮಾಪೂರ ಅವರು, ಕ್ಷೇತ್ರದಲ್ಲೂ ಒಳ್ಳೆಯ ಹೆಸರು ಗಳಿಸಿದ್ದಾರೆ. ಜನಸಂಪರ್ಕದಿಂದ ಯಾವತ್ತೂ ದೂರ ಉಳಿದಿಲ್ಲ. ಇಷ್ಟೊಂದು ಸೋಲುಕಂಡ ಬಳಿಕವೂ ಛಲಬಿಡದೇ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿ ಕಣಕ್ಕಿಳಿದಿದ್ದರು. ತಿಮ್ಮಾಪೂರ ಅವರಿಗೆ ಸತತ ಸೋಲುಗಳಿಂದಾಗಿ ಜನರ ಅನುಕಂಪವೂ ಇದ್ದದ್ದು ಈ ಬಾರಿ ಗೆಲುವಿಗೆ ಸಹಕಾರಿಯಾಗಿದೆ.

ಮುಧೋಳ ಮೀಸಲು ಕ್ಷೇತ್ರದಲ್ಲಿ ತಿಮ್ಮಾಪೂರ ಅವರು ಪ್ರತಿಬಾರಿಯೂ ದಲಿತ ಸಮುದಾಯದ ಮತಗಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತಾ ಬಂದಿದ್ದಾರೆ. ಆದರೆ ರೆಡ್ಡಿ ಸಮುದಾಯದ ಮತಗಳನ್ನು ಸೆಳೆಯುವಲ್ಲಿ ಯಾವಾಗಲೂ ಹಿಂದೆ ಬಿದ್ದಿದ್ದರು. ಇದಕ್ಕೆ ಮುಖ್ಯ ಕಾರಣ, ಅವರು ಎಂದಿಗೂ ಮತಕ್ಕಾಗಿ ದೊಡ್ಡ ಜಾತಿಗಳ ವ್ಯಕ್ತಿಗಳ ಎದುರು ಕೈಕಟ್ಟಿ ನಿಲ್ಲಲಿಲ್ಲ, ಸ್ವಾಭಿಮಾನದಿಂದಲೇ ಚುನಾವಣೆಗಳನ್ನು ಎದುರಿಸುತ್ತಾ ಬಂದವರು ಎಂದು ಗುರುತಿಸಲಾಗುತ್ತದೆ. ಹಾಗಾಗಿ ದೊಡ್ಡ ಸಮುದಾಯಗಳ ಮತಗಳು ತಮ್ಮ ಎದುರಾಳಿಯ ಪಾಲಾಗುತ್ತಿದ್ದರಿಂದ ನಾಲ್ಕು ಬಾರಿ ಸೋಲು ಕಾಣಬೇಕಾಯಿತು. ಈ ಚುನಾವಣೆಯಲ್ಲಿ ಸಂಘಪರಿವಾರದ ಬೆಂಬಲದಿಂದ ಸ್ಪರ್ಧಿಸಿದ ಪಕ್ಷೇತರ ಅಭ್ಯರ್ಥಿಯು ಬಿಜೆಪಿಯ ಬುಟ್ಟಿಯಲ್ಲಿದ್ದ ಮತಗಳನ್ನು ಬಾಚಿಕೊಂಡಿದ್ದರಿಂದ ತಿಮ್ಮಾಪೂರ ಗೆಲುವು ಸುಲಭವಾಯಿತೆಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: ನಮ್ಮ ಸಚಿವರಿವರು: ಸಭ್ಯ ರಾಜಕಾರಣಕ್ಕೆ ಮತ್ತೊಂದು ಹೆಸರೇ ‘ಕೆ.ವೆಂಕಟೇಶ್‌’

1989ರಲ್ಲಿ ಮೊದಲ ಬಾರಿಗೆ ಮುಧೋಳ ಕ್ಷೇತ್ರದಿಂದ ಆಯ್ಕೆಯಾದ ತಿಮ್ಮಾಪೂರ ಅವರು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

1999ರ ಉಪ ಚುನಾವಣೆಯಲ್ಲಿ ಮರು ಆಯ್ಕೆಯಾಗಿ ಎಪಿಎಂಸಿ ಸಚಿವರಾಗಿ ಕಾರ್ಯನಿರ್ವಹಿಸಿದರು.

2002ರಲ್ಲಿ ಎಸ್.ಎಂ.ಕೃಷ್ಣ ಸಿ.ಎಂ ಆಗಿದ್ದ ಅವಧಿಯಲ್ಲಿ ಯೋಜನೆ, ಸಾಂಖ್ಯಿಕ ಖಾತೆ ಸಚಿವರಾದರು.

2003ರಲ್ಲಿ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರು, ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಪಕ್ಷ ಯಾವುದೇ ಜವಾಬ್ದಾರಿಯನ್ನು ವಹಿಸಿದರೂ ನಿಷ್ಠೆಯಿಂದ ಪಾಲಿಸಿದ ಹೆಗ್ಗಳಿಕೆ ಅವರದ್ದಾಗಿದೆ.

2013ರಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳರ ವಿರುದ್ಧ ಸೋಲು ಕಂಡರೂ, ಆಗ ಕಾಂಗ್ರೆಸ್ ಪಕ್ಷದ ಮುಖಂಡರು ಪಕ್ಷದಲ್ಲಿ ಇವರ ಹಿರಿತನ ಮತ್ತು ಮಾಡಿದ ಕೆಲಸ ಗುರುತಿಸಿ 2016ರಲ್ಲಿ ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕಗೊಳಿಸಿದರು. ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಪಕ್ಷವಿಟ್ಟ ವಿಶ್ವಾಸದಿಂದ ತಿಮ್ಮಾಪೂರ ಮತ್ತೆ ಸಚಿವ ಸ್ಥಾನ ಪಡೆದರು.

2017ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಅಬಕಾರಿ ಸಚಿವ ಸ್ಥಾನ ಒಲಿದು ಬಂದಿತು. ನಂತರ ಸಕ್ಕರೆ, ಬಂದರು ಹಾಗೂ ಒಳನಾಡು ಮೀನುಗಾರಿಕೆ ಖಾತೆ ದೊರೆಯಿತು.

2023ರ ಚುನಾವಣೆಯಲ್ಲಿ ಸಾಂಪ್ರದಾಯಿಕ ಎದುರಾಳಿ, ಮಾಜಿ ಉಪಮುಖ್ಯಮಂತ್ರಿ, ಬಿಜೆಪಿಯ ಹಿರಿಯ ನಾಯಕ ಗೋವಿಂದ ಕಾರಜೋಳರನ್ನು ಸೋಲಿಸುವ ಮೂಲಕ ತಿಮ್ಮಾಪೂರ ಶಾಸಕರಾಗಿ ಈಗ ಅಬಕಾರಿ ಮಂತ್ರಿಯೂ ಆಗಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಸರಕಾರಗಳ ಅವಧಿಯಲ್ಲಿ ಮುಧೋಳ ಕ್ಷೇತ್ರದಲ್ಲಿ ಗೆದ್ದವರಿಗೆ ಸಚಿವ ಸ್ಥಾನ ನಿಶ್ಚಿತ ಎನ್ನುವ ವಾಡಿಕೆಯಿದೆ. ಕ್ಷೇತ್ರದಿಂದ ಆಯ್ಕೆಯಾದ ಬಿಜೆಪಿಯ ಗೋವಿಂದ ಕಾರಜೋಳ, ಕಾಂಗ್ರೆಸ್‌ನ ಆರ್.ಬಿ.ತಿಮ್ಮಾಪೂರ ಪ್ರತಿ ಬಾರಿಯೂ ಸಚಿವ ಸ್ಥಾನ ಪಡೆದಿದ್ದಾರೆ. ಇದು ಈ ಬಾರಿಯೂ ಮುಂದುವರಿದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...