ಕಳೆದ ವಾರ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಮೂವರ ಮೇಲೆ ನಡೆದ ಗುಂಪು ಹಲ್ಲೆ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಈವರೆಗೆ ಬಂಧಿಸಲ್ಪಟ್ಟ 101 ಜನರಲ್ಲಿ ಯಾರೊಬ್ಬರೂ ಮುಸ್ಲಿಮರಿಲ್ಲ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಹೇಳಿದ್ದಾರೆ.
ಭೀಕರ ಘಟನೆಯನ್ನು ಕೋಮುವಾದಿಕರಣಗೊಳಿಸಲು ಯತ್ನಿಸುತ್ತಿರುವ ಬಿಜೆಪಿ ನೇತೃತ್ವದ ವಿರೋಧ ಪಕ್ಷವನ್ನು ದೇಶ್ಮುಖ್ ತರಾಟೆಗೆ ತೆಗೆದುಕೊಂಡಿದ್ದು, ಪ್ರಕರಣವನ್ನು ಮಹಾರಾಷ್ಟ್ರ ಅಪರಾಧ ತನಿಖಾ ಇಲಾಖೆ (ಸಿಐಡಿ)ಗೆ ನೀಡಲಾಗಿದೆ ಎಂದು ಹೇಳಿದ್ದಾರೆ.
“ಇಲ್ಲಿಯವರೆಗೆ 101 ಜನರನ್ನು ಬಂಧಿಸಲಾಗಿದೆ ಮತ್ತು ಬಂಧಿಸಲ್ಪಟ್ಟವರಲ್ಲಿ ಒಬ್ಬರೂ ಮುಸ್ಲಿಂ ಇಲ್ಲ, ಆದ್ದರಿಂದ ಈ ಘಟನೆಗೆ ಕೋಮು ಬಣ್ಣ ನೀಡಬೇಡಿ” ಎಂದು ಸಚಿವರು ಫೇಸ್ಬುಕ್ ಮೂಲಕ ಮಾಹಿತಿ ನೀಡಿ, ಕೊರೊನಾ ವೈರಸ್ ಹರಡದಂತೆ ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಲು ಮನವಿ ಮಾಡಿದ್ದಾರೆ.
“ಕೆಲವರು ‘ಮುಂಗೇರಿಲಾಲ್ ಕೆ ಹಸೀನ್ ಸಪ್ನೆ‘ ನೋಡುತ್ತಿದ್ದಾರೆ. ಇದು ರಾಜಕೀಯ ಮಾಡುವ ಸಮಯವಲ್ಲ” ಎಂದು ಹೇಳಿದರು. ಈ ಬಗ್ಗೆ ಟ್ವೀಟ್ ಸಹ ಮಾಡಿ ಬಂಧಿತರ ಹೆಸರಿನ ಪಟ್ಟಿಯನ್ನು ಹಾಕಿದ್ದಾರೆ.
The list of the 101 arrested in the #Palghar incident. Especially sharing for those who were trying to make this a communal issue.. pic.twitter.com/pfZnuMCd3x
— ANIL DESHMUKH (@AnilDeshmukhNCP) April 22, 2020
ಮುಂಬಯಿಯಿಂದ 125 ಕಿಲೋಮೀಟರ್ ದೂರದ ಪಾಲ್ಘರ್ ನಲ್ಲಿ ನಡೆದ ಘಟನೆಯನ್ನು ತಪ್ಫಾಗಿ ಗುರುತಿಸಿದ ಪರಿಣಾಮದಿಂದ ಆಗಿರಬಹುದು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೋಮವಾರ ಹೇಳಿದ್ದರು. ಅಲ್ಲದೆ ಘಟನೆಯನ್ನು ಕೋಮುವಾದೀಕರಣಗೊಳಿಸುವವರ ವಿರುದ್ಧ ಎಚ್ಚರಿಕೆ ನೀಡಿದ್ದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಕಚೇರಿಯು, “ಭಾವೋದ್ರೇಕಗಳನ್ನು ಹೆಚ್ಚಿಸಲು ಪ್ರಯತ್ನಿಬಾರದು. ಈ ದಾಳಿಯಲ್ಲಿ ಕೋಮುವಾದ ಇಲ್ಲ. ಇಬ್ಬರು ಪೊಲೀಸರನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ” ಎಂದು ಟ್ವೀಟ್ ಮಾಡಿತ್ತು.
ಇದನ್ನೂ ಓದಿ: ಪಾಲ್ಘರ್ ಘಟನೆಗೆ ಕೋಮು ಆಯಾಮವಿಲ್ಲ: ಮುಖ್ಯಮಂತ್ರಿ ಉದ್ದವ್ ಠಾಕ್ರೆ ಸ್ಪಷ್ಟನೆ
ದಾಳಿಯ ಆಘಾತಕಾರಿ ದೃಶ್ಯಗಳು ಕಳೆದ ವಾರ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದ್ದು, ಅದರಲ್ಲಿ ಕೋಪಗೊಂಡ ಗದ್ಚಿಂಚಲೆ ಗ್ರಾಮದ ನಿವಾಸಿಗಳು ಕೋಲು ಮತ್ತು ಕಲ್ಲುಗಳಿಂದ 70 ವರ್ಷದ ವೃದ್ದ ಸೇರಿದಂತೆ ಮೂವರ ಮೇಲೆ ಹಲ್ಲೆ ನಡೆಸಿದ್ದಾರೆ.
ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸುತ್ತಿರುವ ಪೊಲೀಸ್ ತಂಡದ ಮೇಲೂ ದಾಳಿ ನಡೆಸಲಾಗಿದ್ದು, ಕೆಲವರು ಗಾಯಗೊಂಡಿದ್ದರು. ಕೊಲ್ಲಲ್ಪಟ್ಟ ಮೂವರಲ್ಲಿ ಇಬ್ಬರು ವಾರಣಾಸಿ ಆಶ್ರಮಕ್ಕೆ ಸೇರಿದ ಸಾಧುಗಳಾಗಿದ್ದು, ಮತ್ತೊಬ್ಬರು ಅವರು ಪ್ರಯಾಣಿಸುತ್ತಿದ್ದ ಕಾರಿನ ಚಾಲಕರಾಗಿದ್ದಾರೆ.
ಇತರ ವೀಡಿಯೊಗಳು ಗ್ರಾಮಸ್ಥರು ಪೊಲೀಸ್ ಕಾರಿನ ಮೇಲೆ ದಾಳಿ ಮಾಡಿ ಅದನ್ನು ಉರುಳಿಸುವವರೆಗೆ ತಳ್ಳುವುದನ್ನು ಕಾಣಬಹುದಾಗಿದೆ.
ಕೊರೊನಾ ಹರಡುವುದನ್ನು ತಡೆಯಲು ಮಾಡಿದ್ದ ಲಾಕ್ಡೌನನ್ನು ಮುರಿದು ಕಳ್ಳರು ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂಬ ವದಂತಿಗಳು ಹರಡಲಾಗಿದೆ ಎಂದು ಪೊಲೀಸರು ತಿಳಿದ್ದಾರೆ. ಜಿಲ್ಲಾಧಿಕಾರಿ ಕೈಲಾಶ್ ಶಿಂಧೆ ಅವರು, ನೆರೆಹೊರೆಯ ಮಕ್ಕಳನ್ನು ಅಪಹರಿಸಿದ್ದಾರೆ ಎಂಬ ವದಂತಿಗಳು ಹರಡಲಾಗಿತ್ತು ಎಂದು ಹೇಳಿದ್ದಾರೆ. ಈ ದಾಳಿಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಮಹಾರಾಷ್ಟ್ರ ಸರ್ಕಾರ ಆದೇಶಿಸಿದೆ.
ಮೃತರನ್ನು ಮಹಾರಾಜ್ ಕಲ್ಪವ್ರಕ್ಷಗಿರಿ (70), ಸುಶಿಲ್ ಗಿರಿ ಮಹಾರಾಜ್ (35) ಮತ್ತು ನಿಲೇಶ್ ತೆಲ್ಗಡೆ (30) ಎಂದು ಗುರುತಿಸಲಾಗಿದೆ.