ದಕ್ಷಿಣ ಕನ್ನಡದ ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ನಾಯಕ ಪ್ರವೀಣ್ ನೆಟ್ಟಾರು ಮೃತದೇಹದ ಮೆರವಣಿಗೆಯನ್ನು ಸಂಘ ಪರಿವಾರದ ಸಂಘಟನೆಗಳು ನಡೆಸುತ್ತಿವೆ. ಈ ನಡುವೆ ತಡವಾಗಿ ಮೃತದೇಹ ನೋಡಲು ಬಂದ ಬಿಜೆಪಿ ಶಾಸಕರು ಮತ್ತು ಸ್ಥಳೀಯ ನಾಯಕರ ವಾಹನವನ್ನು ಉದ್ರಿಕ್ತ ಜನರು ತಡೆದು ನಿಲ್ಲಿಸಿ, ಬಿಜೆಪಿಗೆ ಧಿಕ್ಕಾರ ಕೂಗಿದ್ದಾರೆ.
ಪ್ರವೀಣ್ ಅವರ ಕುಟುಂಬಿಕರು ಮೃತದೇಹವಿದ್ದ ಆಸ್ಪತ್ರೆಯಲ್ಲಿ ಮಾತನಾಡಿ,‘‘ಮೆರವಣಿಗೆ ವೇಳೆ ಯಾರಿಗೂ ತೊಂದರೆ ಕೊಡಬೇಡಿ. ಯಾರೂ ಜೈಕಾರ, ಘೋಷಣೆ ಕೂಗಬೇಡಿ” ಎಂದು ವಿನಂತಿಸಿದ್ದರು. ಅದಾಗಿಯೂ ಸೇರಿದ್ದ ಜನರು ಜಯಕಾರ ಕೂಗಿ, ಘೋಷಣೆಗಳನ್ನು ಹಾಕುತ್ತಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಆಸ್ಪತ್ರೆಯಲ್ಲಿ ಮಾತನಾಡಿದ ಪ್ರವೀಣ್ ಕುಟುಂಬದ ಸದಸ್ಯರೊಬ್ಬರು, “ಬಿಜೆಪಿ ಸಚಿವರು ಶವವನ್ನು ಮುಂದಿಟ್ಟು ಅವರು ಶೋ ಮಾಡುವುದು ಬೇಡ. ಏರ್ಪೋರ್ಟ್ ಅಲ್ಲಿದ್ದಾರೆ ಎಂದು ಹೇಳುತ್ತಾ ನಮ್ಮ ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ನಿನ್ನೆ ರಾತ್ರಿ ಘಟನೆ ನಡೆದಿದೆ, ಆದರೆ ಸಚಿವರು ಇನ್ನೂ ಸ್ಥಳಕ್ಕೆ ತಲುಪಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಮೃತದೇಹವನ್ನು ನಮ್ಮಷ್ಟಕ್ಕೆ ನಾವು ಕೊಂಡೊಯ್ಯುತ್ತೇವೆ. ಯಾರೂ ಕೂಡಾ ಜಯಕಾರ, ಘೋಷಣೆಗಳನ್ನು ಕೂಗಬಾರದು. ಮೆರವಣಿಯಲ್ಲಿ ಯಾರಿಗೂ ತೊಂದರೆ ನೀಡಬೇಡಿ. ನಾವು ನಮ್ಮ ಕುಟುಂಬದ ಸದಸ್ಯನನ್ನು ಕಳೆದುಕೊಂಡಿದ್ದೇವೆ. ಅವನ ಆತ್ಮಕ್ಕೆ ಶಾಂತಿ ಸಿಗಬೇಕು, ಅದಕ್ಕಾಗಿ ನೀವೆಲ್ಲರೂ ಸಹಕಾರ ನೀಡಬೇಕು” ಎಂದು ಹೇಳಿದ್ದಾರೆ. ಕುಟುಂಬಸ್ಥರ ಮನವಿಯ ಹೊರತಾಗಿಯೂ ಸೇರಿದ್ದ ಜನರು ಘೋಷಣೆಗಳನ್ನು ಕೂಗಿದ್ದಾರೆ.
ಇದನ್ನೂ ಓದಿ: ದಕ್ಷಿಣ ಕನ್ನಡ: ಬಿಜೆಪಿ ಯುವ ಮುಖಂಡನ ಕೊಲೆ
ಅದರಂತೆ ಪುತ್ತೂರು ನಗರದಿಂದ ಶವ ಮೆರವಣಿಗೆ ಹೊರಟು, ದರ್ಬೆ, ಸವಣೂರು, ಕಾಣಿಯೂರು, ನಿಂತಿಕಲ್ಲು ಮೂಲಕ ಬೆಳ್ಳಾರೆಗೆ ಮೃತದೇಹವನ್ನು ಕೊಂಡೊಯ್ಯಲಾಗಿದೆ. ಈ ನಡುವೆ ತಡವಾಗಿ ಬಂದಿರುವ ಬಿಜೆಪಿ ನಾಯಕರ ವಾಹನವನ್ನು ಮೆರವಣಿಯಲ್ಲಿದ್ದ ಉದ್ರಿಕ್ತ ಜನರು ತಡೆದಿದ್ದು, ಅವರಿಗೆ ಧಿಕ್ಕಾರ ಕೂಗಿದ್ದಾರೆ.
ಶವ ಮೆರವಣಿಗೆ ಹಿನ್ನೆಲೆಯಲ್ಲಿ ಪುತ್ತೂರು, ಕಡಬ ಹಾಗೂ ಸುಳ್ಯ ತಾಲೂಕುಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಸೆಕ್ಷನ್ 144 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪುತ್ತೂರು ಉಪವಿಭಾಗ ವ್ಯಾಪ್ತಿಯ ಸುಳ್ಯ, ಪುತ್ತೂರು ಹಾಗೂ ಕಡಬ ತಾಲೂಕುಗಳಲ್ಲಿ ಬುಧವಾರ(ಜು.27) ಬೆಳಗ್ಗೆ 6ರಿಂದ ಅನ್ವಯವಾಗುವಂತೆ ಜುಲೈ 28ರ ಮಧ್ಯರಾತ್ರಿಯವರೆಗೆ ಸೆಕ್ಷನ್ 144 ಜಾರಿಗೊಳಿಸಿ ಪುತ್ತೂರು ಉಪ ವಿಭಾಗಾಧಿಕಾರಿ ಗಿರೀಶ್ ನಂದನ್ ಎಂ. ಆದೇಶ ಹೊರಡಿಸಿದ್ದಾರೆ.
ಕೊಲೆಯ ಹಿನ್ನಲೆಯಲ್ಲಿ ನಿನ್ನೆ ರಾತ್ರಿಯಿಂದಲೇ ಸುಳ್ಯ ತಾಲೂಕಿನ ಮುಖ್ಯ ಪೇಟೆಗಳಲ್ಲಿರುವ ಅಂಗಡಿಗಳು ಮಾತ್ರವಲ್ಲದೆ ಸಣ್ಣ ಪುಟ್ಟ ಊರುಗಳ ಅಂಗಡಿಗಳನ್ನು ಬಿಜೆಪಿಪರ ಸಂಘಟನೆಯ ಕಾರ್ಯಕರ್ತರು ಮುಚ್ಚಿಸಿದ್ದಾರೆ. ಸುಬ್ರಹ್ಮಣ್ಯ ಮತ್ತು ಪುತ್ತೂರು ನಗರವನ್ನೂ ಬಂದ್ ಮಾಡಲಾಗಿದೆ.
ಇದನ್ನೂ ಓದಿ: ಶವ ಮೆರವಣಿಗೆಯ ಕರಾಳ ಇತಿಹಾಸದಿಂದ ಪಾಠ ಕಲಿತ್ತಿಲ್ಲವೇ ಕರ್ನಾಟಕ ಜನತೆ?
ವಾರದ ಹಿಂದೆ ಕ್ಷುಲ್ಲಕ ಕಾರಣಕ್ಕೆ ಬೆಳ್ಳಾರೆಯಲ್ಲಿ ಮಸೂದ್ ಎಂಬ ಯುವಕನ್ನು ಕೊಲೆ ಮಾಡಲಾಗಿತ್ತು. ಪ್ರಕರಣದಲ್ಲಿ ಬಜರಂಗದಳದ ಐವರನ್ನು ಬಂಧಿಸಲಾಗಿದೆ.