ವಿಧಾನಸಭೆಯಲ್ಲಿ ವಿರೋಧ ಪಕ್ಷವನ್ನು ಸರಿಯಾಗಿ ಜಾಡಿಸಿದ ಕುಮಾರಣ್ಣನ ಹಾವಭಾವ ಮತ್ತು ಭಾಷೆಯನ್ನು ಮೆಚ್ಚಿಕೊಂಡ ಬಿಜೆಪಿಗಳು ಅವರಿಗೆ ಭರ್ಜರಿ ಭೋಜನ ಹಾಕಿದರಂತಲ್ಲಾ. ಕುಮಾರಣ್ಣನನ್ನು ಮಧ್ಯದಲ್ಲಿ ಕೂರಿಸಿಕೊಂಡು ಅಕ್ಕಪಕ್ಕದಲ್ಲಿ ಎಡೂರಪ್ಪ ಮತ್ತು ಬೊಮ್ಮಾಯಿ ಕುಳಿತು ವಿಶೇಷ ಕಾಳಜಿಯಿಂದ ಉಣ್ಣಿಸುತ್ತಿರುವುದನ್ನು ನೋಡಿದ ಭೋಜನಪ್ರಿಯ ಬಿಜೆಪಿಗಳೇ ದಂಗುಬಡಿದು ಹೋದರಂತಲ್ಲಾ. ಕುಮಾರಣ್ಣನ ಮಾತುಗಳನ್ನು ಮಾಜಿ ಪ್ರಧಾನಿಗಳೇ ಮೆಚ್ಚಿಕೊಂಡ ಮೇಲೆ, ಅವರಿಗೆ ಊಟಹಾಕಿ ಉಪಚರಿಸುವುದು ನಮ್ಮ ಕರ್ತವ್ಯ ಎಂದು ಭಾವಿಸಿದ ಬೊಮ್ಮಾಯಿ, ಕುಮಾರಣ್ಣನ ಇಷ್ಟದ ಭೋಜನ ಬಡಿಸುತ್ತಿರಬೇಕಾದರೆ ಇದನ್ನ ನೋಡಿದ ಚನ್ನಪಟ್ಟಣದ ಮಾಜಿ ಮಂತ್ರಿಯಾದ ಯೋಗೇಶ್ವರ್ಗೆ ಹೊಟ್ಟೆಯುರಿಯುಂಟಾಗಿ, ’ನಮ್ಮ ಪಾರ್ಟಿಯವರಿಗೇನು ಬಂದಿದೆ, ನನ್ನನ್ನು ಸೋಲಿಸಿದವನನ್ನು ಕರೆದು ಊಟ ಹಾಕುತ್ತಿರಬೇಕಾದರೆ ಇದು ನನ್ನ ವಿರುದ್ಧದ ಷಡ್ಯಂತ್ರವಲ್ಲವೇ’ ಎಂದು ಭಾವಿಸಿದರಂತಲ್ಲಾ. ಕೂಡಲೆ, ತಾನೂ ಕೂಡ ಎಡೂರಪ್ಪನ ವಿರುದ್ಧ ಪಿತೂರಿ ನಡೆಸಿ, ದೆಹಲಿ ಮಟ್ಟದವರೆಗೂ ಹೋಗಿ, ವಿಜಯೇಂದ್ರನ ಹಾವಳಿ ವಿಪರೀತವಾಗಿದೆ ಎಂದು ದೂರು ಹೇಳಿ, ಅಂತೂ ಪರೀಕ್ಷೆ ಬರೆದಿದ್ದೇನೆಂದು ರಿಸಲ್ಟಿಗಾಗಿ ಕಾಯುತ್ತಿರಬೇಕಾದರೆ, ಎಡೂರಪ್ಪ ಇಳಿದು ಬೊಮ್ಮಾಯಿ ಏರಿದ ಮೇಲೆ ಯೋಗೇಶ್ವರನ ಮಂತ್ರಿಗಿರಿಯೇ ಹೋಯ್ತಂತಲ್ಲಾ. ಥೂತ್ತೇರಿ.
*****
ಸುಮ್ಮನೆ ಮಾತಿಗೆ ಹೇಳೋದಾದ್ರೆ ಎಡೂರಪ್ಪನ ಟೀಮು ಕುಮಾರಣ್ಣನ ಋಣದಲ್ಲಿದೆಯಂತಲ್ಲಾ. ಧರ್ಮರಾಯನ ಸರಕಾರದಂತೆ ನಡೆದುಕೊಂಡು ಹೋಗುತ್ತಿದ್ದ ಧರ್ಮಸಿಂಗ್ ಸರಕಾರವನ್ನ ಕೆಡವಿ ಎಮ್ಮೆಲ್ಲೆಗಳನ್ನೆಲ್ಲಾ ರೆಸಾರ್ಟಿನಿಂದ ಜಮೀರ್ ಅಹಮದ್ದನ ನ್ಯಾಷನಲ್ ಟ್ರಾವಲ್ ಬಸ್ನಲ್ಲಿ ತಂದು ವಿಧಾನಸೌಧದ ಮುಂದೆ ಸುರಿದುಕೊಂಡು, ಕುಮಾರಣ್ಣ ಮುಖ್ಯಮಂತ್ರಿಯಾಗಿ ಎಡೂರಪ್ಪ ಉಪಮುಖ್ಯಮಂತ್ರಿಯಾದ ಘಟನೆ ಸಾಮಾನ್ಯವೆ. ಪವರಿಲ್ಲದೆ ಮನೆಗೆ ಹೋಗುವ ಸ್ಥಿತಿಯಲ್ಲಿದ್ದ ಎಡೂರಪ್ಪ ಉಪಮುಖ್ಯಮಂತ್ರಿಯಾದದ್ದೂ ಅಲ್ಲದೆ, ಮೂರುಬಾರಿ ಮುಖ್ಯಮಂತ್ರಿಯಾದುದ್ದರಲ್ಲಿ ಕುಮಾರಣ್ಣನ ಕಾಂಟ್ರಿಬ್ಯೂಷನ್ ಕಡಿಮೆಯೇ! ಇದೆಲ್ಲಾ ನೆನಸಿಕೊಂಡು ಬಿಜೆಪಿಗಳು ಮತ್ತು ದಳದವರು ಖುಷಿಯಿಂದ ಮೆಲುಕು ಹಾಕುತ್ತಿರುವಾಗಲೇ ಇತಿಹಾಸ ಮರುಕಳಿಸಿದಂತೆ ಕುಮಾರಣ್ಣನ ಕೆಲಸವನ್ನ ಬಿಜೆಪಿ ಪಾರ್ಟಿಯೇ ಮಾಡಿಬಿಟ್ಟಿತಲ್ಲಾ. ಕುಮಾರಣ್ಣ ಶಾಸಕರನ್ನ ರೆಸಾರ್ಟಿಗೆ ಕರೆದುಕೊಂಡು ಹೋದರೆ ಬಿಜೆಪಿಯವರು ಬಾಂಬೆಗೆ ಕರೆದುಕೊಂಡು ಹೋಗಿ ತಾವು ಕದ್ದು ತಂದ ಶಾಸಕರಿಗೆ ಏನೇನನ್ನೆಲ್ಲಾ ಒದಗಿಸಿಕೊಟ್ಟು, ನಂತರ ಸಿಡಿ ಬಿಡುಗಡೆ ಮಾಡದಂತೆ ಸ್ಟೇ ತರುಬೇಕಾಗುವಂತೆ ಮಾಡಿ, ಖೆಡ್ಡಾದೊಳಕ್ಕೆ ಕೆಡವಿಕೊಂಡು ತಾವು ಬದುಕಿರುವವರೆಗೆ ಬಿಜೆಪಿ ಬಗ್ಗೆ ಉಸಿರೆತ್ತದಂತೆ ಮಾಡಿದ್ದಾರಲ್ಲಾ. ಹೀಗೆ ರಚನೆಗೊಂಡ ಸರಕಾರದ ಬಗ್ಗೆ ಕಿಡಿಕಾರುವುದು ಬಿಟ್ಟು ಅಪ್ಪ ಮಕ್ಕಳೇ ಬಿಜೆಪಿ ಸರಕಾರಕ್ಕೆ ಬೆಂಗಾವಲಾಗಿರುವುದನ್ನು ನೋಡಿದ ಜನ ದಳ ನಿಜಕ್ಕೂ ಬಿಜೆಪಿಯ ಬಿಟೀಂ ಎಂದರಂತಲ್ಲಾ. ಥೂತ್ತೇರಿ.
ದಳ ಬಿಜೆಪಿಯ ಬಿಟೀಮ್ ಆದುದಕ್ಕೆ ಭಯಂಕರ ಸಿಟ್ಟುಮಾಡಿಕೊಂಡಿರುವ ಯೋಗೇಶ್ ಕುಮಾರಣ್ಣನ ಬಗ್ಗೆ ಹೀನಾಯವಾಗಿ ಮಾತನಾಡಿದ್ದಾರಂತಲ್ಲಾ. ಈತ ನೆಲಕಚ್ಚಿದ ಪಾರ್ಟಿಯ ನಾಯಕ, ಮುಖ್ಯಮಂತ್ರಿಯಾಗಿದ್ದಾಗ ಹೋಟೆಲಿನಲ್ಲಿದ್ದು ರಾಸಲೀಲೆ ನಡೆಸಿದ ಗಿರಾಕಿ. ಈತ ನಡೆಸುತ್ತಿದ್ದ ಪ್ರಣಯಾಟಕ್ಕೆ ಸಮಯವಿಲ್ಲದಿದ್ದಾಗ, ಇನ್ನು ಮಂತ್ರಿ ಶಾಸಕರು ಜನಗಳನ್ನ ಮಾತನಾಡಿಸಲು ಬಿಡುವೆಲ್ಲಿ ಎಂದು ಕಿಡಿಕಾರಿ ಕರ್ನಾಟಕದ ಜನಕ್ಕೆ ಬಿಟ್ಟಿ ಮನರಂಜನೆ ಕೊಟ್ಟಿದ್ದಾರಲ್ಲಾ. ಕುಮಾರಣ್ಣನ ರಾಜಕೀಯ ಇತಿಹಾಸದಲ್ಲಿ ಇಷ್ಟು ಕಠೋರವಾಗಿ ಯಾರೂ ಟೀಕಿಸಿರಲಿಲ್ಲವಲ್ಲಾ. ಯೋಗೇಶ್ವರನ ಮಾತಿನಿಂದ ಕೆರಳಿದ ಕುಮಾರಣ್ಣ ನೀನೇನು ಸಾಚಾನೆ, ಮೆಗಾಸಿಟಿ ಹೆಸರಲ್ಲಿ ಜನಗಳ ದುಡ್ಡನ್ನು ಲಪಟಾಯಿಸಿ ಸಿನಿಮಾ ತೆಗೆದು ಹಣ ಹಾಕಿದವರನ್ನು ಹಾಳು ಮಾಡಿದ್ದಿ. ವೆಸ್ಟೆಂಡ್ ಹೋಟೆಲಿನ ರಾಸಲೀಲೆ ವಿಷಯಕ್ಕೆ ಬಂದರೆ ನನ್ನ ಜೊತೆ ಸಾರಾ ಮಹೇಶ್ ಇದ್ದರು. ಅವರ ಎದುರಲ್ಲೇ ಇನ್ನೂ ಹಲವರ ಜೊತೆಗೆ ವಿಶ್ರಾಂತಿಗೆ ಹೋಗುತ್ತಿದ್ದುದು ಅಲ್ಲಿಗೆ. ಕದ್ದುಮುಚ್ಚಿ ಏನನ್ನೂ ಮಾಡಿಲ್ಲ. ಅದರಲ್ಲೂ ಹೊರಗಡೆ ಪೊಲೀಸರಿದ್ದರು ಎಂದಿದ್ದಾರಲ್ಲಾ. ಆ ಪೊಲೀಸರ ಮುಖಾಂತರವೇ ನಾನು ಮಾಹಿತಿ ಸಂಗ್ರಹಿಸಿದ್ದು ಎಂದು ಯೋಗೇಶ್ವರ್ ಇನ್ನ ಹೇಳಿಲ್ಲವಂತಲ್ಲಾ. ಥೂತ್ತೇರಿ.
*****
ಕುಮಾರಣ್ಣನನ್ನು ನಡುವೆ ಕೂರಿಸಿಕೊಂಡಿದ್ದನ್ನು ನೋಡಿದ ದಳದವರು ಹೆದರಿಕೊಂಡು, ಇದೇನು ಕುಮಾರಣ್ಣ ನಮ್ಮನ್ನೆ ಬಲಿಕೊಡಲು ಹೊರಟಿದ್ದಾರಲ್ಲಾ ಎಂದು ಚರ್ಚಿಸಿದರಂತಲ್ಲಾ. ಇದಕ್ಕೆ ಬಿಜೆಪಿ ಉತ್ತರ ಪ್ರದೇಶದಲ್ಲಿ ಮಾಡಿದ ಮನೆಮುರುಕ ರಾಜಕಾರಣವೇ ಕಾರಣವಂತಲ್ಲಾ. ಅತ್ತ ಓವೈಸಿಯನ್ನು ಓಲೈಸುತ್ತ ಇತ್ತ ಮಾಯಾವತಿಯನ್ನು ಮರುಳುಮಾಡಿದ ಯೋಗಿ ಟೀಮು ಅವರ ಜೊತೆಯಲ್ಲೇ ಎಸ್ಪಿ ಯಾದವರನ್ನ ಮಕಾಡೆ ಮಲಗಿಸಿದ್ದನ್ನ ನೋಡಿದ ಭಾರತದ ಜನ ದಂಗುಬಡಿದು ಹೋಗಿದ್ದಾರಲ್ಲಾ. ದಳದ ಪಾರ್ಟಿ ಮುಖಂಡರಿಗೆ ಇದು ಹಳೆ ವರೆಸೆಯಾಗಿ ಕಾಣುತ್ತಿದೆ. ಕುಮಾರಣ್ಣ ವೆಸ್ಟೆಂಡ್ ಹೋಟೆಲು ಕಾಲಿ ಮಾಡುವಂತಾದುದರಲ್ಲಿ ತಮ್ಮ ಪಾತ್ರವಿಲ್ಲ ಎಂದು ಸಿದ್ದರಾಮಯ್ಯ ಎಷ್ಟೇ ಹೇಳಿದರೂ ದೇವು ಟೀಮು ನಂಬುತ್ತಿಲ್ಲವಂತಲ್ಲಾ.
ಆದ್ದರಿಂದ ದಳಪತಿಗಳಿಗೆ ಸಿದ್ದರಾಮಯ್ಯನ ಟೀಮು ನಿರ್ನಾಮವಾಗದ ಹೊರತು ಉಳಿಗಾಲವಿಲ್ಲ ಎನ್ನಿಸಿ ರಾಸಲೀಲೆಗೆ ಹೆಸರಾದವರು ಹೆಚ್ಚಿರುವ ಬಿಜೆಪಿಯ ಡೈನಿಂಗ್ ಹಾಲಿನಲ್ಲಿ ಕುಳಿತರಂತಲ್ಲಾ. ಥೂತ್ತೇರಿ.
ಇದನ್ನೂ ಓದಿ: ಇವರೆಲ್ಲಾ ಸಂತೆಗೆ ಬಂದ ಹಗಲುಗಳ್ಳರು