ಚುನಾವಣಾ ಬಾಂಡ್ ಇಡೀ ಪ್ರಪಂಚದಲ್ಲೇ ಅತಿ ದೊಡ್ಡ ಹಗರಣವಾಗಿದೆ ಎಂದು ಬಹುಭಾಷಾ ನಟ, ಪ್ರಕಾಶ್ ರಾಜ್ ಹೇಳಿದ್ದು, ಈ ಕುರಿತು ಅಮಿತ್ ಶಾ ಸುಳ್ಳು ಹೇಳಿಕೆ ನೀಡಿದ್ದಾರೆ ಮತ್ತು ಮೋದಿ ಮೌನ ವಹಿಸಿದ್ದಾರೆ ಎಂದು ವಾಗ್ಧಾಳಿಯನ್ನು ನಡೆಸಿದ್ದಾರೆ.
ಮಂಗಳೂರಿನಲ್ಲಿ ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಪ್ರಕಾಶ್ ರಾಜ್, ಗೃಹ ಸಚಿವರು ನಾವು 6000 ಕೋಟಿ ತೆಗೆದುಕೊಂಡಿದ್ದೇವೆ, ಆದರೆ 330 ಸಂಸದರು ಇದ್ದಾರೆ. ಅದನ್ನು ಹಂಚಿಕೊಂಡರೆ ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ. 500 ಕೋಟಿ ಲಂಚ ಕೊಡ್ತಿದ್ದಾನೆ ಎಂದರೆ ಅವರಿಗೆ 1,500ಕೋಟಿ, 2,000ಕೋಟಿ ಕಾಂಟ್ರೆಕ್ಟ್ ನೀವು ಕೊಡುತ್ತಿದ್ದೀರಿ ಎಂದರೆ ಅದು ನಮ್ಮ ಹಣ ಅಲ್ವ, ಚುನಾವಣೆಗೆ ಹಣ ಬೇಕಂತ ದೇಶವನ್ನು ಕೆಡಿಸಿರುವುದು ನೀವಲ್ವ? ಎಂಎಲ್ಎ, ಎಂಪಿಗಳನ್ನು ಇದೇ ದುಡ್ಡಿನಲ್ಲಿ ನೀವು ಕೊಂಡುಕೊಳ್ಳುತ್ತಿದ್ದೀರಾ? ಪ್ರಧಾನಿ ಮೋದಿ ಅವರು ಮನ್ ಕಿ ಬಾತ್ನಲ್ಲಿ ಈ ಬಗ್ಗೆ ಹೇಳಿ, ದೇಶವನ್ನು ಉದ್ದಾರ ಮಾಡಲಿಕ್ಕೆ ತೆಗೆದುಕೊಂಡ್ರಾ? ನೀವು ದೇಶದ ಜನರಿಗೆ ಕೆಲಸ ಕೊಟ್ಟಿದ್ದೀರೋ ಇಲ್ವೋ, ಆದರೆ ನಿಮ್ಮ ಮನೆ ಟೈಲರಿಗೆ ದಿನಕ್ಕೊಂದು ಬಟ್ಟೆ ಹೊಲಿಯಲು ಕೆಲಸ ಕೊಟ್ಟಿದ್ದೀರಿ ಎಂದು ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ಧಾಳಿ ನಡೆಸಿದ್ದಾರೆ.
ಡಿಎಂಕೆಯವರು ಲಾಟರಿ ಏಜೆಂಟ್ ಮಾರ್ಟಿನ್ ಅವರಿಂದ ಚುನಾವಣಾ ಬಾಂಡ್ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಬಿಜೆಪಿಯವರು ಯಾಕೆ ಯಾರಿಂದ ಪಡೆದಿದ್ದಾಗಿ ಹೇಳುತ್ತಿಲ್ಲ. ಬಿಜೆಪಿ ಪಡೆದಿರುವ ಬಾಂಡ್ ಹಣವೆಲ್ಲಾ ದಾಳಿಯ ಬಳಿಕ ಸಂಗ್ರಹಿಸಿದ್ದಾಗಿದೆ. ಇಡಿ ರೈಡ್ ಮಾಡಿದ ಕಂಪೆನಿಗಳು ಮರು ದಿನ ಬಾಂಡ್ ನೀಡಿದ್ದಾರೆ. ಅವರು ಕಳ್ಳರು ಎಂದು ಗೊತ್ತಿದ್ದೂ ಯಾಕೆ ಬಾಂಡ್ ಪಡೆದಿದ್ದೀರಿ? ಇಡಿ ರೈಡ್ ಆದ ಮೇಲೆ ನಿಮಗೆ ಹಣ ಕೊಟ್ಟರೆ ಸರಿನಾ? ಈಗ ಅಂಥವರಿಂದ ಹಣ ತೆಗೆದುಕೊಂಡ ನಿಮ್ಮ ಮೇಲೆ ಯಾಕೆ ರೈಡ್ ಆಗುವುದಿಲ್ಲ? ಈ ರೀತಿ ದುಡ್ಡು ಪಡೆದು ನೀವು ದೇಶ ಮಾರ್ತಾ ಇಲ್ವಾ? ಅದು ಪಾಪದ ಹಣ ಅಂತ ಗೊತ್ತಿಲ್ವಾ ನಿಮಗೆ? ಮನ್ ಕಿ ಬಾತ್ನಲ್ಲಿ ಅದನ್ನೂ ಹೇಳಿ ಎಂದು ಮೋದಿಗೆ ಪ್ರಕಾಶ್ ರಾಜ್ ಆಗ್ರಹಿಸಿದ್ದಾರೆ.
ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಒಂದು ಸಲ ಏನು ಅಂತ ನೋಡಿ ಆಯ್ತು, ಸಾಮಾನ್ಯ ಜನರ ಪರವಾಗಿ ನಾನು ಧ್ವನಿಯನ್ನು ಎತ್ತುತ್ತೇನೆ, ನಾನು ರಾಜಕಾರಣದಲ್ಲಿ ಇದ್ದೇನೆ, ರಾಜಕೀಯವಾಗಿ ಪ್ರಶ್ನಿಸುತ್ತೇನೆ, ಪ್ರಶ್ನೆಗಳನ್ನು ಮಂಡಿಸುತ್ತೇನೆ, ನೀವ್ಯಾರು ಪ್ರಶ್ನೆ ಕೇಳುವುದಕ್ಕೆ ಎಂದು ಕೇಳುವಂತಿಲ್ಲ. ದಯವಿಟ್ಟು ಪಕ್ಷಗಳನ್ನು ನೋಡಬೇಡಿ, ನಿಮ್ಮ ಮತವನ್ನು ಚಲಾಯಿಸುವಾಗ ಪ್ರಶ್ನೆ ಮಾಡಿ ಎಂದು ಹೇಳಿದ್ದಾರೆ.
6,000ಕೋಟಿಯಲ್ಲಿ ಒಂದು ಸ್ಮಾರ್ಟ್ ಸಿಟಿ ಮಾಡಿದ್ರಾ? ಏನು ಮಾಡಿದ್ರಿ ಆ ಹಣ? ಯಾವ ನಾಚಿಕೆ ಮಾನ ಇಲ್ಲದೆ ಅವನು ತೆಗೆದುಕೊಂಡನಲ್ಲ ಎನ್ನುವುದು ಎಷ್ಟು ಸರಿ, ಪ್ರಧಾನಿ ಅವರ ಪರಿವಾರ ಏನು ಅಂತ ಈಗಾಗಲೇ ಬಯಲಾಗಿದೆ. ಲಾಟರಿ ಮಾಡುವ ಕಂಪೆನಿ ಪರಿವಾರ, ಫಾರ್ಮಾ ಕಂಪೆನಿ, ಅದಾನಿ ಪರಿವಾರ, ರೇಪ್ ಪ್ರಕರಣದ ಆರೋಪಿ ಬ್ರಿಜ್ ಭೂಷಣ್ ಕೂಡಾ ಅವರದ್ದೇ ಪರಿವಾರ. ಸಾವಿರಾರು ಕೋಟಿ ರೂ. ಸಂಗ್ರಹಿರುವುದು ಯಾಕಾಗಿ? ಒಂದು ಪಕ್ಷಕ್ಕೆ ಅಷ್ಟು ದುಡ್ಡು ಬೇಕಾ? ಆಡಳಿತ ನಡೆಸುತ್ತಿರುವವರು ಬಿಜೆಪಿಯವರು, ಅಷ್ಟು ಬೃಹತ್ ದುಡ್ಡು ತಗೆದುಕೊಂಡು ಅದನ್ನೂ ಗೌಪ್ಯವಾಗಿಟ್ಟುಕೊಂಡಿದ್ದು ಯಾಕೆ? ಈಗ ಬೆತ್ತಲಾಗ್ತಾ ಇದ್ದೀರಿ, ಹಾಗಿದ್ದರೂ ಸುಳ್ಳು ಹೇಳಿಕೊಂಡೇ ಓಡಾಡೋದು ತಪ್ಪಲ್ವಾ? ಜನರಿಗೆ ನೀವು ಮೋಸ ಮಾಡಬೇಡಿ ಎಂದು ಹೇಳಿದ್ದಾರೆ.
ಪತ್ರಿಕೋದ್ಯಮ ಅಥವಾ ಜನರು ನಿರಂತರವಾಗಿ ವಿರೋಧ ಪಕ್ಷವಾಗಿರಬೇಕು, ಉಪವಾಸ ಮಾಡಿಕೊಂಡು ದೇವಸ್ಥಾನ ಸುತ್ತುತ್ತಿದ್ದೀರಿ ಯಾಕೆ? ಮಣಿಪುರದ ಬಗ್ಗೆ, ಎಲೆಕ್ಟ್ರಾಲ್ ಬಾಂಡ್ ಬಗ್ಗೆ ಒಂದು ಬಾರಿ ಮಾತನಾಡುತ್ತಿಲ್ಲ, ಸುಳ್ಳು ಹೇಳಿ ಯಾರನ್ನು ಮೋಸ ಮಾಡುತ್ತೀರಿ, ಪ್ರಜಾಪ್ರಭುತ್ವದಲ್ಲಿ ಅಧಿಕಾರ ಕೊಟ್ಟ ಜನರಿಗೆ ಇರುವುದು ಅಧಿಕಾರ, ಅಧಿಕಾರ ನಡೆಸುವವರಿಗಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿ: ಅಸ್ಸಾಂ ಎನ್ಆರ್ಸಿ: ಪೌರತ್ವ ನೋಂದಣಿಯಿಂದ ಹೊರಗುಳಿದ 7ಲಕ್ಷ ಮುಸ್ಲಿಮರು