11 ವರ್ಷ ಶಾಸಕರಾಗಿದ್ದು ಕ್ಷೇತ್ರದ ಅಭಿವೃದ್ಧಿ ಮಾಡದೇ ಹಣ ನುಂಗಿ ಸಿಂಧನೂರು ತಾಲ್ಲೂಕಿನ ಗೋನವಾಳ, ಬೆಂಗಳೂರಿನ ದೇವನಹಳ್ಳಿ ಮತ್ತು ಹಗರಿಬೊಮ್ಮನಹಳ್ಳಿಯಲ್ಲಿ ಬೇನಾಮಿ ಆಸ್ತಿ ಹೊಂದಿದ್ದಾರೆ. ಆ ಆಸ್ತಿಯನ್ನು ಭದ್ರಪಡಿಸಿಕೊಳ್ಳಲು ಮತ್ತು ಸಿಕ್ಕಿಬೀಳದಂತೆ ತಡೆಯಲು ಅವರು ಪಕ್ಷಾಂತರ ಮಾಡುತ್ತಿದ್ದಾರೆ ಇದರ ಕುರಿತು ತನಿಖೆಯಾಗಬೇಕೆಂದು ಡಿಎಸ್ಎಸ್ ಒತ್ತಾಯಿಸಿದೆ.
ಅತೃಪ್ತರ ಬಣದಲ್ಲಿ ಗುರುತಿಸಿಕೊಂಡು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಮುಂಬೈ ರೆಸಾರ್ಟ್ ಸೇರಿಕೊಂಡಿರುವ ಪ್ರತಾಪ್ ಗೌಡ ಪಾಟೀಲರಿಗೆ ಒಂದರ ನಂತರ ಮತ್ತೊಂದು ಅಡಚಣೆಗಳು ಎದುರಾಗುತ್ತಿವೆ. 213 ಮತಗಳಿಂದ ಕೂದಲೆಳೆ ಅಂತರದಲ್ಲಿ ಗೆದ್ದು ಮೂರನೇಯ ಬಾರಿಗೆ ಶಾಸಕನಾಗಿದ್ದ ಅವರಿಗೆ ಈಗ ಕ್ಷೇತ್ರದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಮೊನ್ನೊ ತಾನೇ ಆರ್.ವೈ.ಎಫ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಇಂದು ಡಿಎಸ್ಎಸ್ ಪ್ರತಿಭಟನೆಗೆ ಮುಂದಾಗಿದ್ದ ಶಾಸಕರ ಅಕ್ರಮ ಆಸ್ತಿ ತನಿಖೆಯಾಗಬೇಕೆಂದು ಆಗ್ರಹಿಸಿದೆ.
ಮಸ್ಕಿ ಕ್ಷೇತ್ರ ರಾಜ್ಯದಲ್ಲಿಯೇ ಹಿಂದುಳಿದ ಪ್ರದೇಶಗಳ ವ್ಯಾಪ್ತಿಗೆ ಬರುತ್ತಿದೆ. ಈ ವರ್ಷ ಬರ ಆವರಿಸಿದೆ. ಕುಡಿಯಲು ನೀರಿಲ್ಲ. ಜನ ದಿನನಿತ್ಯ ಗುಳೆ ಹೊರಟಿದ್ದಾರೆ. ದಿನಕ್ಕೆ 50 ಟೆಂಪೋಗಳಲ್ಲಿ ಜನ ಉದ್ಯೋಗ ಹುಡುಕಿ ಊರು ಬಿಟ್ಟರೆ ಅದಕ್ಕಾಗಿಯೇ ಬೆಂಗಳೂರಿನ ಬಸ್ ಗಳೆಲ್ಲಾ ತುಂಬಿಹೋಗುತ್ತಿವೆ. ಇಂತಹ ಸಂದರ್ಭದಲ್ಲಿ ಕ್ಷೇತ್ರದಲ್ಲಿ ತಲೆ ಹಾಕದೇ ಸ್ವಾರ್ಥಕ್ಕಾಗಿ ರಾಜೀನಾಮೆ ನೀಡಿ ಹೋಗಿರುವುದು ಖಂಡನೀಯ ಎಂದು ಡಿಎಸ್ಎಸ್ ನ ರಾಜು ಬೊಮ್ಮನಾಳ, ಅನಿಲ್ ಮುದಬಾಳ ಆರೋಪಿಸಿದ್ದಾರೆ.
ಕ್ಷೇತ್ರದಲ್ಲಿ ಶಾಸಕರ ಅಕ್ರಮ ಮದ್ಯದಂಗಡಿಗಳು ತಲೆ ಎತ್ತಿವೆ. ಮಕ್ಕಳಿಗೆ ಮೊಟ್ಟೆ ಸಮವಸ್ತ್ರದಿಂದ ಹಿಡಿದು ರಸ್ತೆ ಕಾಮಗಾರಿಯವರೆಗೂ ಎಲ್ಲವು ಪ್ರತಾಪ್ ಗೌಡ ಪಾಟೀಲರ ಮಕ್ಕಳಿಗೆ ಸಿಗುತ್ತಿವೆ. ಬೋಗಸ್ ಬಿಲ್ ಮಾಡಿ ಕೋಟ್ಯಾಂತರ ಹಣ ವಂಚಿಸಿದ್ದಾರೆ. ಕುಡಿಯುವ ನೀರಿಗಾಗಿ ಬಂದ 50 ಕೋಟಿ ಅನುದಾನವನ್ನೂ ನುಂಗಿ ನೀರು ಕುಡಿದಿದ್ದಾರೆ. ಅದೂ ಸಾಲದೆಂಬಂತೆ ಈಗ ಪಕ್ಷಾಂತರ ಮಾಡಲು ಹವಣಿಸುತ್ತಿರುವುದುನ್ನು ಎಲ್ಲರೂ ಖಂಡಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಪ್ರತಾಪ್ ಗೌಡರ ಶಾಸಕ ಸ್ಥಾನ ಅನರ್ಹಗೊಳಿಸಬೇಕು. ಇಂತವರಿಂದ ಏನು ಪ್ರಯೋಜನವಿಲ್ಲ ಎಂದು ಆಗ್ರಹಿಸಿರುವ ಸ್ಥಳೀಯರು ಆತ ಮಸ್ಕಿಗೆ ಬಂದು ಸಾರ್ವಜನಿಕರ ಕ್ಷಮೆ ಕೇಳುವವರೆಗೂ ದಿನನಿತ್ಯ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.