Homeಕರ್ನಾಟಕಭಾವೀ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ವಿಳಂಬ: ಸರ್ಕಾರಕ್ಕೆ ಬೃಹತ್ ಪ್ರತಿಭಟನೆಯ ಎಚ್ಚರಿಕೆ

ಭಾವೀ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ವಿಳಂಬ: ಸರ್ಕಾರಕ್ಕೆ ಬೃಹತ್ ಪ್ರತಿಭಟನೆಯ ಎಚ್ಚರಿಕೆ

- Advertisement -
- Advertisement -

ಶಿಕ್ಷಕ ವೃತ್ತಿಗೆ ಆಯ್ಕೆಯಾಗಿ ವರ್ಷ ಕಳೆದರೂ ಸ್ಥಳನಿಯುಕ್ತಿ ಮಾಡದೆ, ಆದೇಶ ಪ್ರತಿ ನೀಡದೆ ಶಿಕ್ಷಣ ಇಲಾಖೆಯು ಸತಾಯಿಸಲಾಗುತ್ತಿದೆ. ಕೂಡಲೇ ಕೌನ್ಸೆಲಿಂಗ್ ನಡೆಸಿ ಕೆಲಸಕ್ಕೆ ಕಳಿಸಬೇಕೆಂದು ಒತ್ತಾಯಿಸಿ ಜು.3ರಂದು ಸಾವಿರಾರು ಭಾವೀ ಶಿಕ್ಷಕರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಆರಂಭಿಸಿದ್ದರು ಆದರೂ ಅವರ ಗೋಳು ಕೇಳುವವರಿಲ್ಲ. ಇದೀಗ ಮತ್ತೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆಯು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗಾಗಿ 2022ರ ಮಾರ್ಚ್‌ನಲ್ಲಿ 15,000 ಶಿಕ್ಷಕರ ನೇಮಕಾತಿಗೆ ಅರ್ಜಿ ಕರೆಯಲಾಯಿತು. 70,000ಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಮೇ ತಿಂಗಳಿನಲ್ಲಿ ಪರೀಕ್ಷೆ ನಡೆಸಲಾಯಿತು. 13,351 ಅಭ್ಯರ್ಥಿಗಳು ಆಯ್ಕೆಯಾಗಿರುತ್ತಾರೆ.

ನವೆಂಬರ್‌ನಲ್ಲಿ 1:2 ಮತ್ತು 1:1ರ ಆಧಾರದಲ್ಲಿ 13,353 ಶಿಕ್ಷಕರನ್ನು ಆಯ್ಕೆ ಮಾಡಿ ತಾತ್ಕಾಲಿಕ ಪಟ್ಟಿ ಪ್ರಕಟ ಮಾಡಿಲಾಯಿತು. ಆಯ್ಕೆಯಾದ ಭಾವೀ ಶಿಕ್ಷಕರು ಕೊನೆಗೂ ತಮ್ಮ ಆಸೆ ನೆರವೇರಿತು ಎಂಬ ಸಂಭ್ರಮದಲ್ಲಿದ್ದರು. ಆದರೆ ಪಟ್ಟಿ ಪ್ರಕಟವಾಗಿ 9 ತಿಂಗಳಾಗುತ್ತ ಬಂದರೂ ಅವರಿಗೆ ಇದುವರೆಗೂ ಸ್ಥಳ ನಿಯುಕ್ತಿ ಮತ್ತು ನೇಮಕಾತಿ ಆದೇಶ ಸಿಕ್ಕಿಲ್ಲ ಎಂದು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ಅಭ್ಯರ್ಥಿಗಳು ಕಿಡಿಕಾರುತ್ತಿದ್ದಾರೆ.

ಇಲಾಖೆಯೆ ಸೃಷ್ಠಿಸಿದ ಕೆಲವು ಗೊಂದಲದ ಅಸ್ಪಷ್ಟ ನಿಯಮಗಳ ಕಾರಣಕ್ಕಾಗಿ 300-400 ಅಭ್ಯರ್ಥಿಗಳು ನ್ಯಾಯಲಯದ ಮೊರೆ ಹೋಗಿದ್ದಾರೆ. W/P 23752/2022, W/A 305/2023 ಮತ್ತು W/P 5009/2023 ನಲ್ಲಿ ರಿಟ್ ಅರ್ಜಿಯ ಮತ್ತು ಮೇಲ್ಮನವಿಯ ವಿಚಾರಣೆ ರಾಜ್ಯ ಉಚ್ಚ ನ್ಯಾಯಲಯದಲ್ಲಿ ನಡೆಯುತ್ತಿದ್ದು, ಈ ವಿಚಾರಣೆಗಳ ಮಧ್ಯಂತರ ಆದೇಶವು ಸುಮಾರು 13,000 ಕ್ಕೂ ಹೆಚ್ಚು ಅಭ್ಯರ್ಥಿಗಳ ನೇಮಕಾತಿಯ ವಿಳಂಬಕ್ಕೆ ಕಾರಣವಾಗಿದೆ.

ಸರ್ಕಾರಿ ಹುದ್ದೆಗೆ ಆಯ್ಕೆಯಾದ ಕಾರಣಕ್ಕೆ ತಾವು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮಾಡುತಿದ್ದ ಕೆಲಸಗಳನ್ನು ಕಳೆದುಕೊಂಡು ಜೀವನ ನಿರ್ವಾಹಣೆಗೆ ಅನಿವಾರ್ಯವಾಗಿ ಬಸ್ ಏಜೆಂಟ್ ರುಗಳಾಗಿ, ಉದ್ಯೋಗ ಖಾತ್ರಿ ಇತ್ಯಾದಿ ಕೆಲಸಗಳ ಮೊರೆ ಹೋಗುತ್ತಿದ್ದು, ಹಲವು ಕುಟುಂಬಗಳು ಬೀದಿಗೆ ಬೀಳುವ ಅತಂಕ ಎದುರಾಗಿದೆ. ಜೊತೆಗೆ ಈಗಾಗಲೇ ಶಾಲೆಗಳು ಆರಂಭವಾಗಿ ಎರಡು ತಿಂಗಳುಗಳಾಗಿದ್ದು, ಸುಮಾರು 56,000ಕ್ಕೂ ಹೆಚ್ಚು ಶಿಕ್ಷಕರ ಕೊರತೆ ಇದೆ ಎಂದು ಪ್ರತಿ ದಿನ ಪತ್ರಿಗಳಲ್ಲಿ ವರದಿಯಾಗುತ್ತಿದೆ. ಹಾಗಾಗಿಯೇ ಸಾಕಷ್ಟು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರೆತೆ ಇದೆ ಎಂದು ಮಕ್ಕಳ ದಾಖಲಾತಿ ಕೂಡ ಇಳಿಮುಖವಾಗಿ ಶಾಲೆಗಳನ್ನು ಮುಚ್ಚುವ ಹಂತಕ್ಕೆ ಬಂದಿವೆ. ಇದು ಗುಣಮಟ್ಟದ ಶಿಕ್ಷಣದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿರುವುದಕ್ಕೆ ಮುಖ್ಯ ಕಾರಣವಾಗಿದೆ.

ಸದರಿ ಶಿಕ್ಷಕರ ನೇಮಕಾತಿಯು ಅತಿ ದೊಡ್ಡ ಮಟ್ಟದ ಶಿಕ್ಷಕರ ನೇಮಕಾತಿಯಾಗಿದ್ದು, ನೇಮಕಾತಿ ತ್ವರಿತವಾಗಿ ಪೂರ್ಣಗೊಂಡಲ್ಲಿ ಶಾಲೆಗಳಲ್ಲಿರುವ ಶಿಕ್ಷಕರ ಕೊರತೆಯ ಹೊರೆಯನ್ನು ಕಡಿಮೆ ಮಾಡುವ ಜೊತೆಗೆ ಗುಣಮಟ್ಟದ ಶಿಕ್ಷಣವನ್ನ ಕಾಯ್ದುಕೊಳ್ಳಲು ಅನುಕೂಲವಾಗುತ್ತದೆ. ಈಗಾಗಲೆ ಶಿಕ್ಷಕರ ಕೊರತೆಯಿಂದ ಸಾಕಷ್ಟು ಶಾಲೆಗಳು ಮುಚ್ಚಿದ್ದರು. ಇಲಾಖೆ ಮತ್ತು ಸರ್ಕಾರ ನ್ಯಾಯಾಲಯದಲ್ಲಿರುವ ನೇಮಕಾತಿಯನ್ನು ಬೇಗ ಬಗೆಹರಿಸಿ ಶಿಕ್ಷಕರ ನೇಮಕಾತಿಯನ್ನು ಪೂರ್ಣಗೊಳಿಸುವ ಬದಲಿಗೆ ಮತ್ತೆ ಹೊಸ ಸಮಸ್ಯೆಯನ್ನು ಸೃಷ್ಟಿಸಿ ಅಭ್ಯರ್ಥಿಗಳನ್ನು ಮತ್ತೆ ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡುತ್ತಿವೆ.

ಇದನ್ನೂ ಓದಿ: ಕೂಡಲೇ ಸ್ಥಳನಿಯುಕ್ತಿ ಮಾಡಿ ಆದೇಶ ಪ್ರತಿ ನೀಡಿ: ಬೆಂಗಳೂರಿನಲ್ಲಿ ಭಾವೀ ಶಿಕ್ಷಕರ ಹೋರಾಟ

ಸಮಸ್ಯೆ ಸೃಷ್ಟಿಸಿರುವ ಇಲಾಖೆ

ಮೇ, 2023 ರಿಂದ ಆಯ್ಕೆಯಾದ ಅಭ್ಯರ್ಥಿಗಳ ದಾಖಲೆಗಳ ನೈಜತೆ ಪರಿಶೀಲನೆ ಕಾರ್ಯ ಪ್ರಗತಿಯಲ್ಲಿದ್ದರು ಈ ಪ್ರಕ್ರಿಯೆ ತುಂಬಾ ವಿಳಂಬವಾಗುತ್ತಿದೆ. ಜಾತಿ ಮೀಸಲಾತಿ ಕೋರಿ ಅರ್ಜಿ ಸಲ್ಲಿಸಿ ಸಾಮಾನ್ಯ ಅರ್ಹತೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಜಾತಿ ಮತ್ತು ಆದಾಯ ಸಿಂಧುತ್ವ ಮಾಡಿಸಲು ಸೂಚಿಸುತ್ತಿರುವುದು ಸಾಮಾನ್ಯ ಅರ್ಹತೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹೊಸ ಸಮಸ್ಯೆಯನ್ನು ಸೃಷ್ಟಿಸುತ್ತಿದೆ.

2016, 2017 ಮತ್ತು 2019 ರ ನೇಮಕಾತಿಗಳಲ್ಲಿ ಸಾಮಾನ್ಯ ಅರ್ಹತೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲ್ಲದ ನಿಯಮ ಈಗೇಕೆ? ಎಂಬ ಪ್ರೆಶ್ನೆ ಅಭ್ಯರ್ಥಿಗಳಲ್ಲಿ ಮೂಡಿದೆ. ಅಲ್ಲದೆ ಸಾಮಾನ್ಯ ಅರ್ಹತೆಯಲ್ಲಿ ಆಯ್ಕೆಯಾದ ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು ಯಾವುದೇ ಅಂಕ ಮತ್ತು ಅರ್ಜಿ ಸಲ್ಲಿಕೆಯ ಫೀ ಗಳ ವಿನಾಯ್ತಿಯನ್ನು ಪಡೆದಿರುವುದಿಲ್ಲ. ಹಿಂದಿನ ಶಿಕ್ಷಣ ಆಯುಕ್ತರಾದ ಡಾ. ವಿಶಾಲ್ ರವರು ಕೂಡ ಸಾಮಾನ್ಯ ಅರ್ಹತೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನಡತೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ಹೊರತುಪಡಿಸಿ ಯಾವುದೇ ಸಿಂಧುತ್ವ ಇರುವುದಿಲ್ಲವೆಂದು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ಅನುಸೂಚಿ/ಕಾಯ್ದೆ 1990, 1992 ಮತ್ತು 1994 ರಲ್ಲಿ ಕೂಡ ಸಾಮಾನ್ಯ ಅರ್ಹತೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಜಾತಿ ಮತ್ತು ಆದಾಯ ಸಿಂಧುತ್ವ ಅಗತ್ಯವಿಲ್ಲವೆಂದು ಮತ್ತು ಹೆಚ್ಚು ಅಂಕಗಳೊಂದಿಗೆ ರ್ಯಾಂಕ್ ಬಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳನ್ನು ಸಾಮಾನ್ಯ ಅರ್ಹತೆಯಲ್ಲಿಯೇ ಆಯ್ಕೆ ಮಾಡಿಕೊಳ್ಳಬೇಕೆಂಬ ನಿಯಮವಿದೆ. ಕರ್ನಾಟಕ ಆಡಳಿತ ನ್ಯಾಯಮಂಡಳಿಯು ಕೂಡ ಈ ಹಿಂದಿನ ಪ್ರಕರಣಗಳಲ್ಲಿ (1814/2020 ಮತ್ತು 4602/2017) ಸಾಮಾನ್ಯ ಅರ್ಹತೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಜಾತಿ ಮತ್ತು ಆದಾಯ ಸಿಂಧುತ್ವ ಅಗತ್ಯವಿಲ್ಲವೆಂದು ತೀರ್ಪನ್ನು ನೀಡಿದ್ದರು ಇಲಾಖೆಯು ಹಿಂದುಳಿದ ವರ್ಗಗಳ ಇಲಾಖೆಯ 2021ರಲ್ಲಿನ ಅನಧಿಕೃತ ಟಿಪ್ಪಣಿಯೊಂದನ್ನು ಮುಂದಿಟ್ಟು ಸಾಮಾನ್ಯ ಅರ್ಹತೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಜಾತಿ ಮತ್ತು ಆದಾಯ ಸಿಂಧುತ್ವ ಮಾಡಿಸ ಬೇಕೆಂದು ಹೇಳುತ್ತಿದೆ.

ಅಭ್ಯರ್ಥಿಗಳು ಹಲವು ದಾಖಲೆಗಳನ್ನು ನೀಡಿ ಈ ಯೋಚನೆಯನ್ನು ಕೈ ಬಿಡುವಂತೆ ಮನವಿ ಮಾಡಿಕೊಂಡರು ಇಲಾಖೆಯ ಅಧಿಕಾರಿಗಳು ಇದುವರೆಗೂ ಯಾವುದೆ ನಿರ್ಧಾರಕ್ಕೆ ಬರದಿರುವುದು ಅಭ್ಯರ್ಥಿಗಳಲ್ಲಿ ಬೇಸರವನ್ನು ಮೂಡಿಸಿದೆ ಮತ್ತು ಕೆಲವು ಅಭ್ಯರ್ಥಿಗಳು ನ್ಯಾಯಾಂಗದ ಮೊರೆ ಹೋಗಲು ಸಿದ್ಧರಾಗಿದ್ದಾರೆ. ಇದರಿಂದ ಈಗಾಗಲೇ ಆಮೆಗತಿಯಲ್ಲಿರುವ ನೇಮಕಾತಿಗೆ ಮತ್ತೆ ಬ್ರೇಕ್ ಬೀಳುವ ಸಾಧ್ಯತೆಗಳಿವೆ. ಇಲಾಖೆಯು ಆದಷ್ಟು ಬೇಗ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಒಂದು ಸ್ಪಷ್ಟ ನಿರ್ಧಾರಕ್ಕೆ ಬರದದಿದ್ದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗಷ್ಟೆ ಅಲ್ಲದೆ ಈಗಾಗಲೆ ಶಿಕ್ಷಕರ ಕೊರತೆಯಿಂದ ಬಳಲುತ್ತಿರುವ ಸರ್ಕಾರಿ ಶಾಲೆಗಳಿಗೂ ನಷ್ಟವಾಗಲಿದೆ.

ಸರ್ಕಾರಿ ವಕೀಲರೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಿ ನೇಮಕಾತಿಯನ್ನು ಪೂರ್ಣಗೊಳಿಸ ಬೇಕು. ಇದು ಹೀಗೆ ವಿಳಂಬವಾದಲ್ಲಿ ಮತ್ತೊಮ್ಮೆ ದೊಡ್ಡಮಟ್ಟದ ಸಂಘಟಿತ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ಇಲಾಖೆಯನ್ನು ಭಾವೀ ಶಿಕ್ಷಕರು ಆಗ್ರಹಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆರ್‌ಟಿಐ ಕಾರ್ಯಕರ್ತ ಅಮಿತ್ ಜೇತ್ವಾ ಹತ್ಯೆ ಪ್ರಕರಣ: ಬಿಜೆಪಿಯ ಮಾಜಿ ಸಂಸದ ಸೇರಿ ಎಲ್ಲಾ...

0
ಆರ್‌ಟಿಐ ಕಾರ್ಯಕರ್ತ ಮತ್ತು ಪರಿಸರವಾದಿ ಅಮಿತ್ ಜೇತ್ವಾ ಹತ್ಯೆ ಪ್ರಕರಣದಲ್ಲಿ ಜುನಾಗಡದ ಬಿಜೆಪಿಯ ಮಾಜಿ ಸಂಸದ ದಿನು ಬೋಘಾ ಸೋಲಂಕಿ ಮತ್ತು ಇತರ ಆರು ಜನರನ್ನು ಗುಜರಾತ್ ಹೈಕೋರ್ಟ್‌ ಖುಲಾಸೆಗೊಳಿಸಿದೆ. ನ್ಯಾಯಮೂರ್ತಿಗಳಾದ ಎಎಸ್ ಸುಪೇಹಿಯಾ...