ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ, ” ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್ಡಿಎ)ದಲ್ಲಿ ಆದಾಯ ತೆರಿಗೆ ಇಲಾಖೆ(ಐಟಿ), ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ”ಮೂರು ಪಕ್ಷಗಳು ಪ್ರಬಲ”ವಾಗಿವೆ ಎಂದು ಟೀಕೆ ಮಾಡಿದ್ದಾರೆ.
ಶಿವಸೇನಾ (ಯುಬಿಟಿ) ಪಕ್ಷದ ಮುಖವಾಣಿ ‘ಸಾಮ್ನಾ’ದ ಕಾರ್ಯನಿರ್ವಾಹಕ ಸಂಪಾದಕ, ರಾಜ್ಯಸಭಾ ಸಂಸದ ಸಂಜಯ್ ರಾವತ್ ಅವರಿಗೆ ನೀಡಿದ ಸಂದರ್ಶನದಲ್ಲಿ ಠಾಕ್ರೆ ಈ ಹೇಳಿಕೆಗಳನ್ನು ನೀಡಿದ್ದಾರೆ. ಸಂದರ್ಶನದ ಮೊದಲ ಭಾಗವು ಬುಧವಾರ ಸಾಮ್ನಾದಲ್ಲಿ ಪ್ರಕಟವಾಯಿತು ಮತ್ತು ಪಕ್ಷದ ಸಾಮಾಜಿಕ ಮಾಧ್ಯಮ ಚಾನೆಲ್ಗಳಲ್ಲಿ ಪ್ರಸಾರವಾಯಿತು.
”ಹಲವು ವರ್ಷಗಳ ನಂತರ, ಈ ದೇಶದಲ್ಲಿ ಎನ್ಡಿಎ ಎಂಬ ‘ಅಮೀಬಾ’ ಇನ್ನೂ ಜೀವಂತವಾಗಿದೆ ಎಂದು ನನಗೆ ತಿಳಿಯಿತು. INDIA ಎಂದು ಕರೆಯಲ್ಪಡುವ ದೇಶಭಕ್ತ ನಾಯಕರ ಮೈತ್ರಿಯನ್ನು ಎದುರಿಸಲು, ನಮ್ಮ ಪ್ರಧಾನಿ ಇದ್ದಕ್ಕಿದ್ದಂತೆ 36 ಪಕ್ಷಗಳ (ಬಿಜೆಪಿ ನೇತೃತ್ವದ ಎನ್ಡಿಎ ಭಾಗ) ಸಭೆಯನ್ನು ಕರೆದರು. ವಾಸ್ತವವಾಗಿ, ಅವರಿಗೆ 36 ಪಕ್ಷಗಳ ಅಗತ್ಯವಿಲ್ಲ. ಪ್ರಸ್ತುತ ಎನ್ಡಿಎಯಲ್ಲಿ ಇಡಿ, ಆದಾಯ ತೆರಿಗೆ ಮತ್ತು ಸಿಬಿಐ ಮೂರು ಪಕ್ಷಗಳು ಪ್ರಬಲವಾಗಿವೆ” ಎಂದು ಠಾಕ್ರೆ ವ್ಯಂಗ್ಯ ಮಾಡಿದ್ದಾರೆ.
”ಶಿವಸೇನೆ ಮತ್ತು ಅಕಾಲಿದಳದಂತಹ ಹಳೆಯ ಮಿತ್ರಪಕ್ಷಗಳು ಈಗಾಗಲೇ ಎನ್ಡಿಎ ತೊರೆದಿವೆ ಮತ್ತು ಎನ್ಡಿಎ ಸಭೆಯಲ್ಲಿ ಕೆಲವು ಪಕ್ಷಗಳು ಒಬ್ಬನೇ ಒಬ್ಬ ಸಂಸದನನ್ನು ಸಹ ಹೊಂದಿಲ್ಲ” ಎಂದು ಅವರು ಟೀಕೆ ಮಾಡಿದರು.
ಜುಲೈ 18ರಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರೆದಿದ್ದ ಸಭೆಯಲ್ಲಿ ಎನ್ಡಿಎ ಭಾಗವಾಗಿರುವ 36 ಪಕ್ಷಗಳ ನಾಯಕರು ಭಾಗವಹಿಸಿದ್ದರು. ಅದೇ ದಿನ, ಕಾಂಗ್ರೆಸ್, ಶರದ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಮತ್ತು ಶಿವಸೇನೆ (ಯುಬಿಟಿ) ಸೇರಿದಂತೆ 26 ವಿರೋಧ ಪಕ್ಷಗಳು ಬೆಂಗಳೂರಿನಲ್ಲಿ ಸಭೆ ನಡೆಸಿದ್ದವು. ಈ ಮೈತ್ರಿಕೂಟವನ್ನು ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟ್ ಇನ್ಕ್ಲೂಸಿವ್ ಅಲೈಯನ್ಸ್ (INDIA) ಎಂದು ಹೆಸರಿಸಲಾಯಿತು.
ಮಣಿಪುರ ಹಿಂಸಾಚಾರ: ಪ್ರಧಾನಿಗೆ ಠಾಕ್ರೆ ತರಾಟೆ
ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಬಗ್ಗೆ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಠಾಕ್ರೆ, ”ಪ್ರಧಾನಿ ಮೋದಿ ಸಮಸ್ಯೆಯನ್ನು ಪರಿಹರಿಸಲು ಮಣಿಪುರಕ್ಕೆ ಏಕೆ ಭೇಟಿ ನೀಡಲಿಲ್ಲ?” ಎಂದು ಪ್ರಶ್ನೆ ಮಾಡಿದ್ದಾರೆ.
”ಮಣಿಪುರ ನಮ್ಮ ದೇಶದ ಭಾಗವಾಗಿರುವುದರಿಂದ ನಾನು ಮಣಿಪುರವನ್ನು ಮತ್ತೆ ಮತ್ತೆ ಪ್ರಸ್ತಾಪಿಸುತ್ತಿದ್ದೇನೆ. ಮಣಿಪುರವು ದೇಶದ ಗಡಿಯಂಚಿನಲ್ಲಿದೆ ಎಂದು ನಾನು ಭಯಪಡುತ್ತೇನೆ. ಮಣಿಪುರದಲ್ಲಿ ಡಬಲ್ ಇಂಜಿನ್ (ಬಿಜೆಪಿ) ಸರ್ಕಾರ ವಿಫಲವಾಗಿದೆ” ಎಂದು ಠಾಕ್ರೆ ಹೇಳಿದರು.
”ಈಗ ಎರಡು ರಾಜ್ಯಗಳು (ಮಣಿಪುರ ಮತ್ತು ಕಾಶ್ಮೀರ) ಹೊತ್ತಿ ಉರಿಯುತ್ತಿವೆ. ಒಂದೇ ಸಮಯದಲ್ಲಿ ಎರಡು ರಾಜ್ಯಗಳಲ್ಲಿ ಅಸ್ಥಿರತೆ ಇದೆ. ಕಾಶ್ಮೀರದಲ್ಲಿ ಕಳೆದ ಆರು ವರ್ಷಗಳಿಂದ ಚುನಾವಣೆಯೇ ನಡೆದಿಲ್ಲ. ಸರ್ಕಾರಕ್ಕೆ ಚುನಾವಣೆ ನಡೆಸಲು ಇಷ್ಟವಿಲ್ಲ ಎಂದು ತೋರುತ್ತದೆ. ಅದಕ್ಕಾಗಿಯೇ ನಾನು 2024 ದೇಶಕ್ಕೆ ನಿರ್ಣಾಯಕ ವರ್ಷ ಎಂದು ಹೇಳುತ್ತಿದ್ದೇನೆ. ಈ (ಬಿಜೆಪಿ) ಸರ್ಕಾರ 2024 ರಲ್ಲಿ ಮತ್ತೆ ಬಂದರೆ, ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯುವುದಿಲ್ಲ, ಮತ್ತೆ ಚುನಾವಣೆಗಳು ನಡೆಯುವುದಿಲ್ಲ” ಎಂದು ಠಾಕ್ರೆ ಹೇಳಿದರು.
”ಪ್ರಜಾಪ್ರಭುತ್ವ ಅಪಾಯದಲ್ಲಿದೆ ಮತ್ತು ಸಾಮಾನ್ಯ ಜನರು ರಾಜ್ಯ ಮತ್ತು ದೇಶದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಬೇಕಾಗಿದೆ” ಎಂದರು.
ಇದನ್ನೂ ಓದಿ: ಇಂದು ಮೋದಿ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡನೆ: INDIA ಒಕ್ಕೂಟದ ನಿರ್ಧಾರ