Homeಮುಖಪುಟಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ತಂತ್ರಜ್ಞ ಪುಟ್ಟಣ್ಣ ಕಣಗಲ್ ಸ್ಮರಣೆ

ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ತಂತ್ರಜ್ಞ ಪುಟ್ಟಣ್ಣ ಕಣಗಲ್ ಸ್ಮರಣೆ

ಕಲಾವಿದರಿಗೆ ಸ್ವತಃ ತಾವೇ ಅಭಿನಯಿಸಿ ತೋರಿಸುವ ಪರಿಪಾಠ ರೂಢಿಸಿಕೊಂಡಿದ್ದ ನಿರ್ದೇಶಕ ಅವರು. ನಟ, ನಟಿಯರು ಇದನ್ನು ಶ್ರದ್ಧೆಯಿಂದ ಅನುಸರಿಸಿದರೆ ಸಾಕಿತ್ತು. ಹೀಗೆ ಪುಟ್ಟಣ್ಣನವರ ನಿರ್ದೇಶನದಲ್ಲಿ ತೀರಾ ಸಾಧಾರಣ ಎನ್ನುವವರು ಕೂಡ ಪಳಗಿದ ಕಲಾವಿದರಾಗಿ ಹೆಸರು ಮಾಡಿದರು.

- Advertisement -
- Advertisement -

70-80ರ ದಶಕಗಳಲ್ಲಿ ದಕ್ಷಿಣ ಭಾರತದ ಇತರೆ ಚಿತ್ರರಂಗಗಳು ಮಾತ್ರವಲ್ಲ ಬಾಲಿವುಡ್‍ನವರೂ ಕನ್ನಡ ಸಿನಿಮಾದತ್ತ ಹೊರಳಿ ನೋಡುವಂಥ ಚಿತ್ರಗಳನ್ನು ರೂಪಿಸಿದವರು ಪುಟ್ಟಣ್ಣ ಕಣಗಾಲ್. ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ತಂತ್ರಜ್ಞ ಪುಟ್ಟಣ್ಣ ಅಗಲಿ ಇಂದಿಗೆ (ಜೂನ್ 5) ಮೂವತ್ತೈದು ವರ್ಷ. ಪುಟ್ಟಣ್ಣನವರ ಹತ್ತು ಸಿನಿಮಾಗಳಿಗೆ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ ಪ್ರಗತಿ ಅಶ್ವತ್ಥ ನಾರಾಯಣ ಅವರು ಮೇರು ನಿರ್ದೇಶಕನನ್ನು ಸ್ಮರಿಸಿಕೊಂಡಿದ್ದಾರೆ.

***

ಪುಟ್ಟಣ್ಣನವರನ್ನು ಮೊದಲ ಬಾರಿ ನಾನು ಭೇಟಿ ಮಾಡಿದ್ದು ಮದರಾಸಿನ ವೀನಸ್ ಸ್ಟುಡಿಯೋದಲ್ಲಿ. ಅವರ ’ಬೆಳ್ಳಿಮೋಡ’ (1965) ಸಿನಿಮಾ ಸ್ಟಿಲ್ ಫೋಟೋಗ್ರಫಿಗೆಂದು ಹೋಗಿದ್ದೆ. ಮುಂದೆ ಅವರ ನಿರ್ದೇಶನದ ಹತ್ತು ಸಿನಿಮಾಗಳಿಗೆ (ಒಂಬತ್ತು ಕನ್ನಡ ಮತ್ತು ಒಂದು ಮಲಯಾಳಂ) ಕೆಲಸ ಮಾಡಿದೆ. ಅವರೊಂದಿಗೆ ಕೆಲಸ ಮಾಡುವ ಮೂಲಕ ನನಗೂ ಕಲಿಯಲು ಸಾಧ್ಯವಾಯ್ತು ಎಂದು ಹೇಳಬಹುದು. ಈಗಲೂ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್, ಸಿದ್ದಲಿಂಗಯ್ಯನವರ ಹೆಸರು ಹೇಳಿ ನನ್ನನ್ನು ಗುರುತಿಸುವಾಗ ಹೆಮ್ಮೆ ಎನಿಸುತ್ತದೆ.
ನೀವು ಗಮನಿಸಿ, ಪುಟ್ಟಣ್ಣನವರ ಸಿನಿಮಾಗಳ ಪ್ರತೀ ಸೀನ್‍ಗಳಿಗೂ ಒಂದು ಕಲಾತ್ಮಕ ಫ್ರೇಮ್ ಇರುತ್ತದೆ. ಅವರಿಗೆ ಕ್ಯಾಮರಾ ಆಂಗಲ್‌ಗಳ ಬಗ್ಗೆ ಸ್ಪಷ್ಟ ಚಿತ್ರಣವಿತ್ತು. ಅಗ್ಗದ ಗಿಮಿಕ್‍ಗಳ ಬಗ್ಗೆ ಕಿಡಿಕಾರುತ್ತಿದ್ದ ಅವರು ಅನಗತ್ಯವಾಗಿ  ಟೆಕ್ನಾಲಜಿ ಬಳಕೆ ಮಾಡುತ್ತಿರಲಿಲ್ಲ. ಕತೆ, ದೃಶ್ಯಕ್ಕೆ ಅಗತ್ಯವಿದ್ದರಷ್ಟೇ ಕ್ಯಾಮರಾ ತಂತ್ರಗಾರಿಕೆ ಬಳಕೆಯಾಗುತ್ತಿತ್ತು. ’ನಾಗರಹಾವು’ ಚಿತ್ರದ ಹಾಡನ್ನು ಸ್ಲೋ ಮೋಷನ್‍ನಲ್ಲಿ ಚಿತ್ರಿಸಿದ ಪುಟ್ಟಣ್ಣ ’ಋಣಮುಕ್ತಳು’ ಚಿತ್ರಕ್ಕೆ ಝೂಮ್ ಬಳಕೆ ಮಾಡಿರಲೇ ಇಲ್ಲ.

ತಂತ್ರಜ್ಞರನ್ನು ಅವರು ಅತ್ಯಂತ ಸಮರ್ಥವಾಗಿ ದುಡಿಸಿಕೊಂಡರು. ಸಾಧಾರಣ ಎನಿಸಿಕೊಂಡ ತಂತ್ರಜ್ಞರು ಕೂಡ ಪುಟ್ಟಣ್ಣನವರ ಸಂಗದಲ್ಲಿ ಅತ್ಯುತ್ತಮ ಕೆಲಸಗಾರರಾಗಿ ಹೊರಹೊಮ್ಮಿದರು. ಚಿತ್ರೀಕರಣವಾದ ನಂತರ ನಾನು ಸ್ಟಿಲ್ಸ್ ತೆಗೆದುಕೊಳ್ಳುವಾಗಲೂ ಅವರು ಅಲ್ಲಿರುತ್ತಿದ್ದರು. ಮೂವೀ ಕ್ಯಾಮರಾ ಪೊಸಿಷನ್‌ನಲ್ಲೇ ಫೋಟೋ ತೆಗೆಯಬೇಕಾಗಿತ್ತು. ಆಗ ಪುಟ್ಟಣ್ಣ ನನಗೂ ಸೂಕ್ತ ನಿರ್ದೇಶನ ನೀಡುತ್ತಿದ್ದರು. ಲೈಟಿಂಗ್ ಬಗ್ಗೆ ಅವರಿಗೆ ಅತಿಯಾದ ಕಾಳಜಿ. ಟೇಕ್‍ಗೆ ಮುನ್ನ ಕಲಾವಿದರಿಗೆ ಲೈಟಿಂಗ್ ರಿಹರ್ಸಲ್ ಕೊಡುತ್ತಿದ್ದುದು ಕಡ್ಡಾಯವಾಗಿತ್ತು.
ನಿರ್ದೇಶಕ ಪುಟ್ಟಣ್ಣನವರೊಂದಿಗೆ ಕೆಲಸ ಮಾಡಿದ ನಮಗೆ ಈಗಿನ ತಂತ್ರಜ್ಞರ ಕಾರ್ಯವೈಖರಿ ನೋಡಿದಾಗ ಕೆಲವು ಬಾರಿ ಸೋಜಿಗವೆನಿಸುತ್ತದೆ. ತೆರೆಯ ಮೇಲಿನ ಚಲಿಸುವ ಚಿತ್ರಗಳಿಗೂ, ಹಿನ್ನೆಲೆ ಸಂಗೀತಕ್ಕೂ ಸಂಬಂಧವಿಲ್ಲದಿದ್ದರೆ ಫ್ರೇಮ್‍ಗಳು ನೀರಸವೆನಿಸುತ್ತವೆ. ದೃಶ್ಯ ಮಾಧ್ಯಮವನ್ನು ದುಡಿಸಿಕೊಳ್ಳುವ ಕಲೆ ಗೊತ್ತಿರದಿದ್ದರೆ ಜನರನ್ನು ತಲುಪಲು ಸಾಧ್ಯವೇ ಇಲ್ಲ. ಪುಟ್ಟಣ್ಣನವರಿಗೆ ಸಿನಿಮಾದ ಎಲ್ಲಾ ವಿಭಾಗಗಳಲ್ಲಿಯೂ ಅಪಾರ ಜ್ಞಾನವಿತ್ತು ಮತ್ತು ಅವರು ಇದನ್ನು ಸಮರ್ಪಕವಾಗಿ ದುಡಿಸಿಕೊಳ್ಳುತ್ತಿದ್ದರು. ಹಾಗಾಗಿಯೇ ಅವರು ಚಿತ್ರಿಸಿರುವ ಪ್ರತೀ ಸನ್ನಿವೇಶಗಳಲ್ಲಿಯೂ ಜೀವಂತಿಕೆ ಕಾಣಿಸುವುದು.

ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರೊಂದಿಗೆ

ಸೆಟ್‍ನಲ್ಲಿ ಪುಟ್ಟಣ್ಣನವರೊಂದಿಗೆ ಚಿತ್ರಕ್ಕೆ ಸಂಭಾಷಣೆ, ಗೀತೆಗಳನ್ನು ಬರೆದವರು ಇರುತ್ತಿದ್ದರು. ಪ್ರತೀ ಶಾಟ್‍ಗೆ ಮುನ್ನ ಪರಸ್ಪರರಲ್ಲಿ ಚರ್ಚೆ ನಡೆಯುತ್ತಿತ್ತು. ಸೆಟ್‍ನಲ್ಲಿ ಜೊತೆಗಿರುವ ಬರಹಗಾರರ ಅಭಿಪ್ರಾಯಗಳನ್ನು ಪಡೆದ ನಂತರ ತಮ್ಮ ಹೇಳಿಕೆಯನ್ನೂ ಪುಟ್ಟಣ್ಣ ದಾಖಲಿಸುತ್ತಿದ್ದರು. ಇವುಗಳಲ್ಲಿ ಅತ್ಯಂತ ಸಮರ್ಪಕವೆನಿಸುವ ಅಭಿಪ್ರಾಯವೊಂದು ಸನ್ನಿವೇಶವಾಗಿ ಮೈದಾಳುತ್ತಿತ್ತು. ಪುಟ್ಟಣ್ಣ ಸನ್ನಿವೇಶವೊಂದನ್ನು ಕ್ಷಣಕ್ಷಣಕ್ಕೂ ಚೆಂದಗೊಳಿಸಲು ಶ್ರಮಿಸುತ್ತಿದ್ದರು. ಕಲಾವಿದರಿಗೆ ಸ್ವತಃ ತಾವೇ ಅಭಿನಯಿಸಿ ತೋರಿಸುವ ಪರಿಪಾಠ ರೂಢಿಸಿಕೊಂಡಿದ್ದ ನಿರ್ದೇಶಕ ಅವರು. ನಟ, ನಟಿಯರು ಇದನ್ನು ಶ್ರದ್ಧೆಯಿಂದ ಅನುಸರಿಸಿದರೆ ಸಾಕಿತ್ತು. ಹೀಗೆ ಪುಟ್ಟಣ್ಣನವರ ನಿರ್ದೇಶನದಲ್ಲಿ ತೀರಾ ಸಾಧಾರಣ ಎನ್ನುವವರು ಕೂಡ ಪಳಗಿದ ಕಲಾವಿದರಾಗಿ ಹೆಸರು ಮಾಡಿದರು.

ನಾನು ನೋಡಿದಂತೆ, ವೃತ್ತಿಪರತೆಗೆ ಒಳ್ಳೆಯ ಉದಾಹರಣೆ ಪುಟ್ಟಣ್ಣ. ಅವರ ಶೂಟಿಂಗ್ ಸೆಟ್‍ನಲ್ಲಿ ಕೆಲಸ ಮಾಡುವ ಎಲ್ಲರಲ್ಲೂ ಶಿಸ್ತು ಮೈಗೂಡಿರುತ್ತಿತ್ತು. ಸೆಟ್‍ನಲ್ಲಿ ಕೆಲಸ ಮಾಡುವಾಗ ಅನುಚಿತ ವರ್ತನೆ, ಜೋರು ದನಿಯಲ್ಲಿ ಮಾತನಾಡುವುದನ್ನು ಪುಟ್ಟಣ್ಣ ಸಹಿಸುತ್ತಿರಲಿಲ್ಲ. ಯಾವುದೇ ಒತ್ತಡವಿಲ್ಲದೆ ಆರಾಮವಾಗಿ ಚಿತ್ರಿಸುವುದು ಅವರ ಶೈಲಿ. ಸೆಟ್‍ನಲ್ಲಿ ಎಲ್ಲರಿಗೂ ಪುಟ್ಟಣ್ಣನವರ ರೀತಿ, ನೀತಿಯ ಅರಿವಿರುತ್ತಿತ್ತು. ಹಾಗಾಗಿ ಅವರ ಕೋಪಕ್ಕೆ ಆಸ್ಪದ ನೀಡದಂತೆ ನಡೆದುಕೊಳ್ಳುತ್ತಿದ್ದರು.

‘ಧರ್ಮಸೆರೆ’ ಸಿನಿಮಾ ಚಿತ್ರೀಕರಣದಲ್ಲಿ ಕಲಾವಿದರಿಗೆ ನಿರ್ದೇಶನ

ಬೆಳಗ್ಗೆ ಒಂಬತ್ತೂವರೆಗೇ ಪ್ಯಾಕ್ ಅಪ್!

ಪುಟ್ಟಣ್ಣನವರು ತಾವು ಅಂದುಕೊಂಡಂತೆಯೇ ಶಾಟ್ ಮೂಡಿಬರಬೇಕೆಂದು ಪಟ್ಟು ಹಿಡಿಯುತ್ತಿದ್ದರು. ಇದಕ್ಕಾಗಿ ಅವರೆಷ್ಟು ಶ್ರಮ ಹಾಕುತ್ತಿದ್ದರು ಎನ್ನುವುದಕ್ಕೆ ’ಪಡುವಾರಹಳ್ಳಿ ಪಾಂಡವರು’ ಚಿತ್ರದ ಸನ್ನಿವೇಶವೊಂದನ್ನು ಉದಾಹರಿಸಬಹುದು. ಚಿತ್ರದ ಕತೆಗೆ ತಿರುವು ನೀಡುವಂಥ ಸನ್ನಿವೇಶವೊಂದನ್ನು ಅಂದು ಚಿತ್ರಿಸಬೇಕಿತ್ತು. ನಟ ರಾಮಕೃಷ್ಣ ತನ್ನ ಮನೆ ತೊರೆದು ಹೋಗುವ ಸನ್ನಿವೇಶವದು. ಆತ ಗ್ರಾಮದ ಪ್ರತೀ ಮನೆ ಎದುರು ನಿಂತು ಡೈಲಾಗ್ ಹೇಳಿ ಊರಿನ ಹೆಬ್ಬಾಗಿಲಿನಿಂದ ತೆರಳುತ್ತಾನೆ. ಸುಮಾರು ಇನ್ನೂರೈವತ್ತು – ಮುನ್ನೂರು ಅಡಿಗಳ ಶಾಟ್ ಅದು. ಪುಟ್ಟಣ್ಣ ಇದನ್ನು ಒಂದೇ ಶಾಟ್‍ನಲ್ಲಿ ಚಿತ್ರಿಸಬೇಕೆಂದಿದ್ದರು.

ಅತಿ ಹೆಚ್ಚೆಂದರೆ ನೂರು ಅಡಿವರೆಗಷ್ಟೇ ಚಿತ್ರಿಸಲು ಸಾಧ್ಯವಾಗುತ್ತಿದ್ದುದು. ಮುನ್ನೂರು ಅಡಿಯಷ್ಟು ದೂರಕ್ಕೆ ಟ್ರ್ಯಾಲಿ, ಟ್ರ್ಯಾಕ್ ಹಾಕಲು ಸಾಧ್ಯವಿರಲಿಲ್ಲ. ಈ ಶಾಟ್‍ಗಾಗಿ ಎರಡು ದಿನ ಏನೇನೋ ಪ್ರಯೋಗಗಳನ್ನು ನಡೆಸಿದ್ದಾಯ್ತು. ದೇವರನ್ನು ಪಲ್ಲಕ್ಕಿಯಲ್ಲಿ ಹೊತ್ತೊಯ್ಯುವಂತೆ ನಾಲ್ವರು ಕ್ಯಾಮರಾ ಹೊತ್ತೊಯ್ದರು. ಇದೇ ರೀತಿ ಹಲವಾರು ಪ್ರಯತ್ನಗಳನ್ನು ನಡೆಸಿದ್ದಾಯ್ತು. ಜರ್ಕ್ ಬರುತ್ತಿದ್ದುದರಿಂದ ಈ ಐಡಿಯಾಗಳು ವರ್ಕ್ ಆಗಲಿಲ್ಲ. ಅಂದು ಸಂಜೆ ಪುಟ್ಟಣ್ಣ, ನಟಿ ಆರತಿ ಅಣ್ಣ ಮುಕುಂದ ಹಾಗೂ ಛಾಯಾಗ್ರಾಹಕ ಮಾರುತಿ ರಾವ್ ಮತ್ತೊಂದು ಪ್ರಯೋಗ ನಡೆಸುವುದೆಂದು ಮಾತನಾಡಿಕೊಂಡರು.

ಛಾಯಾಗ್ರಾಹಕ ಬಿ.ಎಸ್.ಬಸವರಾಜ್ ಅವರೊಂದಿಗೆ

ಮರುದಿನ ಬೆಳಗ್ಗೆ ಆರೂವರೆ ಹೊತ್ತಿಗೆ ಶೂಟಿಂಗ್ ಶುರುವಾಯ್ತು. ನಟ ರಾಮಕೃಷ್ಣ ಹಾದು ಹೋಗುವ ರಸ್ತೆಗೆ ಮಣ್ಣು ಹಾಕಿ ಸಮತಟ್ಟು ಮಾಡಲಾಗಿತ್ತು. ಹಿಂದಿನ ದಿನ ಮಾತನಾಡಿಕೊಂಡಂತೆ, ಸಹ ನಿರ್ದೇಶಕ ಮುಕುಂದ ನಿಧಾನವಾಗಿ ಸ್ಕೂಟರ್ ಓಡಿಸಬೇಕು. ಹಿಂದೆ ಕುಳಿತ ಮಾರುತಿರಾವ್ ತಮ್ಮ ಕ್ಯಾಮರಾದಲ್ಲಿ ದೃಶ್ಯ ಸೆರೆಹಿಡಿಯಬೇಕಾಗಿತ್ತು. ಪುಟ್ಟಣ್ಣ ಆ್ಯಕ್ಷನ್ ಹೇಳುತ್ತಿದ್ದಂತೆ ರಾಮಕೃಷ್ಣ ಸಂಭಾಷಣೆ ಹೇಳುತ್ತಾ ಪ್ರತೀ ಮನೆಯನ್ನು ಹಾದು ಊರಿನಿಂದ ಹೊರಗೆ ತೆರಳಿದರು. ಮುಕುಂದ, ಮಾರುತಿರಾವ್ ಸ್ಕೂಟರ್ ಮೇಲೆ ಅವರನ್ನು ಅನುಸರಿಸಿಕೊಂಡು ಹೋದರು. ಶಾಟ್ ಓಕೆ ಆಯ್ತು! ಪುಟ್ಟಣ್ಣನವರು ಅಂದುಕೊಂಡಂತೆಯೇ ಶಾಟ್ ಬಂತು. ಬೆಳಗ್ಗೆ ಏಳೂವರೆಗೆ ಶುರುವಾದ ಚಿತ್ರೀಕರಣ ಒಂಭತ್ತೂವರೆ ಹೊತ್ತಿಗೆ ಮುಗಿದಿತ್ತು. ಪುಟ್ಟಣ್ಣ, ’ಪ್ಯಾಕ್‍ಅಪ್’ ಅಂದರು! ಎಲ್ಲರಿಗೂ ಆಶ್ಚರ್ಯ! ’ನಾನು ಇಂದು ಏನು ಚಿತ್ರಿಸಬೇಕು ಅಂದುಕೊಂಡಿದ್ದೆನೋ ಅದು ಮುಗಿದಿದೆ. ಮುಂದಿನ ಶಾಟ್ ಏನೂಂತ ಯೋಚಿಸಿಲ್ಲ. ನಾಳೆ ನೋಡೋಣ. ಎಲ್ಲರೂ ಹೋಗಿ..!’ ಎಂದರು ಪುಟ್ಟಣ್ಣ. ಬೆಳ್ಳಂಬೆಳಗ್ಗೆ ಪ್ಯಾಕ್‍ಅಪ್ ಹೇಳಿದ್ದು ಆಗ ಗಾಂಧಿನಗರದಲ್ಲಿ ದೊಡ್ಡ ಸುದ್ದಿಯಾಗಿತ್ತು.

ಪುಟ್ಟಣ್ಣರ ಅಭಿಮಾನಿ ಬಾಲಚಂದರ್

ಸೂಪರ್‌ಹಿಟ್ `ಅವಳ್ ಒರು ತೊಡರ್ ಕಥೈ’ ತಮಿಳು ಚಿತ್ರವನ್ನು ಕನ್ನಡಕ್ಕೆ ತರಲು ನಿರ್ಮಾಪಕ ಚಂದೂಲಾಲ್ ಜೈನ್ ನಿರ್ಧರಿಸಿದ್ದರು. ತಮಿಳು ಸಿನಿಮಾ ನಿರ್ದೇಶಿಸಿದ್ದ ಕೆ.ಬಾಲಚಂದರ್ ಅವರೇ ಕನ್ನಡ ಅವತರಣಿಕೆಯನ್ನೂ (ಬೆಂಕಿಯಲ್ಲಿ ಅರಳಿದ ಹೂ) ನಿರ್ದೇಶಿಸುವುದೆಂದು ಗೊತ್ತಾಯಿತು. ಕನ್ನಡ ಅವತರಣಿಕೆಗೂ ತಮ್ಮೊಂದಿಗೆ ಮದರಾಸಿನ ತಂತ್ರಜ್ಞರೇ ಕೆಲಸ ಮಾಡಬೇಕೆಂದು ಬಾಲಚಂದರ್ ಹೇಳಿದ್ದರು. ಆದರೆ, ಸ್ಟಿಲ್ ಫೋಟೋಗ್ರಾಫರ್ ಆಗಿ ನಾನೇ ಕೆಲಸ ಮಾಡಬೇಕೆನ್ನುವುದು ನಿರ್ಮಾಪಕ ಚಂದೂಲಾಲ್ ಜೈನ್ ಆಶಯವಾಗಿತ್ತು. ಸ್ಟಿಲ್‍ಗಳಿಗೆಂದು ಪ್ರತೀ ಬಾರಿ ಮದ್ರಾಸ್‍ಗೆ ಹೋಗಿ ಬರುವ ತಾಪತ್ರಯ ತಪ್ಪುತ್ತದೆ ಎನ್ನುವ ಉದ್ದೇಶವೂ ಇದರ ಹಿಂದಿತ್ತು.

’ಇವರು ಪುಟ್ಟಣ್ಣ ಕಣಗಾಲ್ ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ನಿಮ್ಮ ಚಿತ್ರಕ್ಕೂ ಇವರೇ ಇರಲಿ..’ ಎಂದು ಚಂದೂಲಾಲ್ ನಿರ್ದೇಶಕ ಬಾಲಚಂದರ್‌ಗೆ ನನ್ನನ್ನು ಪರಿಚಯಿಸಿದ್ದರು. ಪುಟ್ಟಣ್ಣನವರೊಂದಿಗೆ ಕೆಲಸ ಮಾಡಿದ ಫೋಟೋಗ್ರಾಫರ್ ಎನ್ನುವ ಒಂದೇ ಕಾರಣಕ್ಕೆ ಬಾಲಚಂದರ್ ನನ್ನನ್ನು ಒಪ್ಪಿಕೊಂಡರು. ಅವರು ಪುಟ್ಟಣ್ಣನವರ ಅಭಿಮಾನಿ ಎನ್ನುವುದು ಮುಂದಿನ ದಿನಗಳಲ್ಲಿ ನನಗೆ ಮನವರಿಕೆಯಾಯ್ತು. ’ಬೆಂಕಿಯಲ್ಲಿ ಅರಳಿದ ಹೂ’ ಚಿತ್ರೀಕರಣದುದ್ದಕ್ಕೂ ಬಾಲಚಂದರ್, ಪುಟ್ಟಣ್ಣನವರ ವರ್ಕಿಂಗ್ ಸ್ಟೈಲ್ ಹಾಗೂ ಇತರೆ ಸಂಗತಿಗಳ ಬಗ್ಗೆ ನನ್ನನ್ನು ಕೇಳುತ್ತಿದ್ದರು. ಬಾಲಚಂದರ್ ಕೂಡ ದೊಡ್ಡ ನಿರ್ದೇಶಕರೇ. ಆದಾಗ್ಯೂ ಯಾವುದೇ ಹೆಚ್ಚುಗಾರಿಕೆ ಇಲ್ಲದೆ ಪುಟ್ಟಣ್ಣನವರ ಬಗ್ಗೆ ಅವರು ಕೇಳಿ ತಿಳಿದುಕೊಳ್ಳುತ್ತಿದ್ದರು. ಇದು ಬಾಲಚಂದರ್ ಸರಳತೆ, ಸಜ್ಜನಿಕೆಯನ್ನು ಎತ್ತಿ ಹಿಡಿದಿತ್ತು.

(ಫೋಟೋಗಳು: ಪ್ರಗತಿ ಅಶ್ವತ್ಥ ನಾರಾಯಣ)

(ನಿರೂಪಣೆ: ಶಶಿಧರ ಚಿತ್ರದುರ್ಗ)


ಇದನ್ನೂ ಓದಿ: 120 ಕ್ಕೂ ಹೆಚ್ಚು ಹೀರೋಗಳಿಗೆ ಹಾಡಿದ್ದಾರೆ ಎಸ್.ಪಿ.ಬಾಲಸುಬ್ರಹ್ಮಣ್ಯಂ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗೋಮಾಂಸ ಸಾಗಣೆ ಆರೋಪದ ಮೇಲೆ ವಾಹನ ಮುಟ್ಟುಗೋಲು: ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಗೋಮಾಂಸ ಸಾಗಣೆ ಮಾಡುತ್ತಿದ್ದಾರೆ ಎಂದು ಕೇವಲ ಅನುಮಾನದ ಮೇಲೆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದು ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಅಂತಹ ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ವೈಜ್ಞಾನಿಕ ದೃಢೀಕರಣ ಅಗತ್ಯ...

ಎಕ್ಸಿಟ್‌ ಪೋಲ್ಸ್‌ಗಳು ‘ಹಣ-ಒತ್ತಡ’ದಿಂದ ಕೂಡಿವೆ; ಟಿಎಂಸಿ 226 ಸ್ಥಾನಗಳನ್ನು ಮೀರಲಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನದ ನಂತರ ಇತ್ತೀಚಿನ ಚುನಾವಣೋತ್ತರ ಸಮೀಕ್ಷೆಗಳ ವಿಶ್ವಾಸಾರ್ಹತೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಲವಾಗಿ ತಳ್ಳಿಹಾಕಿದ್ದಾರೆ. ಅವರ ಪಕ್ಷವಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) 294 ಸದಸ್ಯರ ವಿಧಾನಸಭೆಯಲ್ಲಿ 226...

ಗುಜರಾತ್‌| ರಾಮ ಮಂದಿರ ಕಾರ್ಯಕ್ರಮದಲ್ಲಿ ದಲಿತರಿಗೆ ಪ್ರತ್ಯೇಕ ಊಟದ ವ್ಯವಸ್ಥೆ; ಅಸ್ಪೃಶ್ಯತೆ ಆಚರಣೆ ಆರೋಪ

ಗುಜರಾತ್‌ನ ಜುನಾಗಢ್ ಜಿಲ್ಲೆಯಲ್ಲಿ ಜಾತಿ ತಾರತಮ್ಯದ ಆರೋಪ ಹೊರಿಸಲಾಗಿದ್ದು, ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ದೇವಾಲಯದ ಆಯೋಜಕರು ಅಸ್ಪೃಶ್ಯತೆ ಆಚರಿಸುತ್ತಿದ್ದಾರೆ ಎಂದು ದಲಿತ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ. ಭುಟ್ಡಿ ಗ್ರಾಮದ ನಿವಾಸಿ 25 ವರ್ಷದ ಅಜಯ್...

ಕೋಗಿಲು ಬಡಾವಣೆ ಮನೆಗಳ ನೆಲಸಮ: ಹದಿನೈದು ದಿನಗಳೊಳಗೆ ಪುನರ್ವಸತಿ ಕಲ್ಪಿಸದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ

ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಪ್ರದೇಶದ ಕೋಗಿಲು ಲೇಔಟ್‌ನ ಫಕೀರ್ ಕಾಲೋನಿ ಮತ್ತು ಮಹಾನಾಯಕ ಅಂಬೇಡ್ಕರ್ ನಗರ (ವಾಸಿಂ ಲೇಔಟ್‌) ಪ್ರದೇಶದ ಬಡ ನಿವಾಸಿಗಳ ಮನೆಗಳನ್ನು 2025 ಡಿಸೆಂಬರ್ 20ರಂದು ಬೆಳಿಗ್ಗೆ ಸುಮಾರು...

ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟ 95.20 ರೂ.ಗೆ ಕುಸಿತ ಕಂಡ ಭಾರತೀಯ ರೂಪಾಯಿ ಮೌಲ್ಯ 

ನವದೆಹಲಿ: ಏಪ್ರಿಲ್ 30ರಂದು ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಮೌಲ್ಯವು ಅಮೆರಿಕನ್ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 95.07 ಕ್ಕೆ ಕುಸಿದಿದೆ. ಕರೆನ್ಸಿ 0.4% ಕುಸಿತದೊಂದಿಗೆ 95.2325 ಕ್ಕೆ ಇಳಿದಿದೆ. ಇದು ಮಾರ್ಚ್...

ತಮಿಳುನಾಡು| ದಲಿತ ಯುವಕನ ಶವ ಪತ್ತೆ; ‘ಜಾತಿ ಕಾರಣಕ್ಕೆ ಹತ್ಯೆಯಾಗಿದೆ’ ಎಂದು ಕುಟುಂಬದ ಆರೋಪ

ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯ ಕ್ವಾರಿ ಕೆರೆಯ ಬಳಿ 20 ವರ್ಷದ ದಲಿತ ಯುವಕನ ಶವ ಪತ್ತೆಯಾಗಿದ್ದು, ಹಿಂದುಳಿದ ವರ್ಗದ ಯುವತಿಯೊಂದಿಗಿನ ಸಂಬಂಧದಿಂದಾಗಿ ಆತನನ್ನು ಕೊಲ್ಲಲಾಗಿದೆ ಎಂದು ಆತನ ಕುಟುಂಬ ಆರೋಪಿಸಿದೆ. ಆದರೆ, ಈ...

‘ಬಾಲ ಕಾರ್ಮಿಕ’ ಶಂಕೆಯ ಮೇಲೆ 155 ಮುಸ್ಲಿಂ ವಿದ್ಯಾರ್ಥಿಗಳ ಬಂಧನ: ಧಾರ್ಮಿಕ ಗುರುತಿನ ಕಾರಣಕ್ಕೆ ಬಂಧಿಸಿರುವುದಾಗಿ ಪೋಷಕರ ಆರೋಪ

ಮಧ್ಯಪ್ರದೇಶದ ಕಟ್ನಿಯಲ್ಲಿ ಸರ್ಕಾರಿ ರೈಲ್ವೆ ಪೊಲೀಸರು (GRP) 155 ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಎಂಟು ಶಿಕ್ಷಕರನ್ನು "ಬಾಲ ಕಾರ್ಮಿಕ" ಶಂಕೆಯ ಮೇಲೆ ಬಂಧಿಸಿದ ನಂತರ, ಪೋಷಕರು ಮುಸ್ಲಿಂ ವಿರೋಧಿ ಪಕ್ಷಪಾತವನ್ನು ಹೊಂದಿದ್ದಾರೆಂದು ಆರೋಪಿಸಿದ್ದಾರೆ....

ಜನಿವಾರದ ಹಿಂದೆ ಬಿದ್ದಿರುವ ವಿರೋಧ ಪಕ್ಷ ಮತ್ತು ಮಾಧ್ಯಮಗಳು

ಏಪ್ರಿಲ್ 23, 2026 ರಂದು ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ವೇಳೆ ಬೆಂಗಳೂರಿನ ಕೋರಮಂಗಲದಲ್ಲಿರುವ ಕೃಪಾನಿಧಿ ಪಿಯು ಕಾಲೇಜಿನಲ್ಲಿ ಐವರು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ ಘಟನೆ ರಾಜಕೀಯ...

ಒಡಿಶಾ| ಸಾವಿನ ದಾಖಲೆ ಕೇಳಿದ ಬ್ಯಾಂಕ್‌ ಸಿಬ್ಬಂದಿ; ಸಮಾದಿ ಅಗೆದು ಸಹೋದರಿಯ ಅಸ್ಥಿಪಂಜರ ತಂದ ಬುಡಕಟ್ಟು ವ್ಯಕ್ತಿ

ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ, ಬುಡಕಟ್ಟು ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಅಸ್ಥಿಪಂಜರವನ್ನು ಅಗೆದು ಗ್ರಾಮೀಣ ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿದ್ದಾನೆ. ಆಕೆಯ ಸಾವನ್ನು ಸಾಬೀತುಪಡಿಸುವ ಮೂಲಕ ಆಕೆಯ ಖಾತೆಯಲ್ಲಿ ಜಮಾ ಮಾಡಿದ ಹಣವನ್ನು ಪಡೆಯಲು...

ಜಾತಿ ಕಿರುಕುಳಕ್ಕೆ ದಲಿತ ವಿದ್ಯಾರ್ಥಿ ಸಾವು ಪ್ರಕರಣ: ಇಂದು ಸಂಜೆ 6 ರವರೆಗೆ ಕೇರಳ ಬಂದ್

ಜಾತಿ ಆಧಾರಿತ ಕಿರುಕುಳದಿಂದ ಮನನೊಂದಿದ್ದ ಕೇರಳದ ಅಂಚರಕಂಡಿಯ ಕಣ್ಣೂರು ದಂತ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವಿದ್ಯಾರ್ಥಿ ಆರ್.ಎಲ್. ನಿತಿನ್ ರಾಜ್ ಆತ್ಮಹತ್ಯೆಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ...