ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುನ್ನಡೆಸುತ್ತಿರುವ ‘ಭಾರತ್ ಜೋಡೋ ನ್ಯಾಯ ಯಾತ್ರೆ’ ಶನಿವಾರ(ಮಾ.2) ಮಧ್ಯಾಹ್ನ ರಾಜಸ್ಥಾನದ ಧೋಲ್ಪುರ್ ಜಿಲ್ಲೆಯಿಂದ ಪುನರಾರಂಭಗೊಂಡಿದೆ.
ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುಖಜಿಂದರ್ ರಾಂಧವಾ ಮತ್ತು ಇತರ ನಾಯಕರು ಹಾಗೂ ಭಾರೀ ಸಂಖ್ಯೆಯ ಕಾರ್ಯಕರ್ತರ ಸಮ್ಮುಖದಲ್ಲಿ ರಾಹುಲ್ ಯಾತ್ರೆಯನ್ನು ಪುನರಾರಂಭಿಸಿದ್ದಾರೆ.
ತೆರದ ವಾಹನದಲ್ಲಿ ಪಕ್ಷದ ಧ್ವಜ ಬೀಸಿ ರಾಹುಲ್ ಗಾಂಧಿ ಯಾತ್ರೆಗೆ ಚಾಲನೆ ಕೊಟ್ಟರು. ಸಾವಿರಾರು ಮಂದಿ ಕಾರ್ಯಕರ್ತರು ಅವರಿಗೆ ಸಾಥ್ ನೀಡಿದರು.
ಜನನಾಯಕ ರಾಹುಲ್ ಗಾಂಧಿ ಅವರು 'ಭಾರತ ಐಕ್ಯತಾ ನ್ಯಾಯ ಯಾತ್ರೆ' ಮೂಲಕ ಯೋಧರ ನಾಡು ರಾಜಸ್ಥಾನ ತಲುಪಿದ್ದಾರೆ. ದೇಶದ ಜನತೆಯ ಆಶೀರ್ವಾದದೊಂದಿಗೆ 'ನ್ಯಾಯದ ಹಕ್ಕಿಗಾಗಿ' ಹೋರಾಟ ಮುಂದುವರಿಯುತ್ತಿದೆ.#bhaaratJodoNyaayYaatra 🇮🇳 pic.twitter.com/NQp3XBTRln
— Karnataka Congress (@INCKarnataka) March 2, 2024
ಐದು ದಿನಗಳ ವಿರಾಮದ ನಂತರ ಇಂದು ಮಧ್ಯಾಹ್ನ ರಾಜಸ್ಥಾನದ ದೋಲ್ಪುರ ಜಿಲ್ಲೆಯಲ್ಲಿ ಪುನರಾರಂಭಗೊಂಡ ಯಾತ್ರೆಯು, ಸಂಜೆಯ ಹೊತ್ತಿಗೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಗೆ ಪ್ರವೇಶಿಸಿದೆ. ಇಂದು ರಾತ್ರಿ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ರಾಹುಲ್ ಗಾಂಧಿ ವಾಸ್ತವ್ಯ ಹೂಡಲಿದ್ದಾರೆ.
ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಎರಡು ವಿಶೇಷ ಉಪನ್ಯಾಸಗಳನ್ನು ನೀಡಲು ಮತ್ತು ನವದೆಹಲಿಯಲ್ಲಿ ಪ್ರಮುಖ ಸಭೆಗಳಲ್ಲಿ ಭಾಗವಹಿಸಲು ರಾಹುಲ್ ಗಾಂಧಿ ತೆರಳಿದ್ದ ಕಾರಣ ‘ಭಾರತ್ ಜೋಡೋ ನ್ಯಾಯ ಯಾತ್ರೆ’ಯು ಫೆಬ್ರವರಿ 26 ರಿಂದ ಮಾರ್ಚ್ 1 ರವರೆಗೆ ಸ್ಥಗಿತಗೊಂಡಿತ್ತು.
ಮಣಿಪುರದಿಂದ-ಮುಂಬೈಗೆ 15 ರಾಜ್ಯಗಳ ಮೂಲಕ 6,700 ಕಿಲೋಮೀಟರ್ಗಳಷ್ಟು ದೂರದ ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ರಾಹುಲ್ ಗಾಂಧಿ ಹಮ್ಮಿಕೊಂಡಿದ್ದು, ಪ್ರಸ್ತುತ ಮಧ್ಯಪ್ರದೇಶದಲ್ಲಿ ಯಾತ್ರೆ ಮುಂದುವರೆಯುತ್ತಿದೆ.
ಇದನ್ನೂ ಓದಿ : ಮುಗಿಯದ ಹಿಮಾಚಲ ಬಿಕ್ಕಟ್ಟು: ಕನಿಷ್ಠ 9 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದ ಅನರ್ಹ ಶಾಸಕ