ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆ ಜಾರ್ಖಂಡ್ ಬಳಿಕ ಒಡಿಶಾವನ್ನು ಪ್ರವೇಶಿಸಿದೆ. ಇಂದು ರೂರ್ಕೆಲಾದ ವೇದವ್ಯಾಸ್ ದೇವಸ್ಥಾನಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ. ಈ ದೇವಾಲಯದ ಗುಹೆಯು ಋಷಿ ಮತ್ತು ಕವಿ ವೇದವ್ಯಾಸ್ ಅವರು ಮಹಾಭಾರತವನ್ನು ರಚಿಸಿದ ಸ್ಥಳವೆಂದು ಪರಿಗಣಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ, ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯಲು ನಾನು ಒಡಿಶಾಗೆ ಬಂದಿದ್ದೇನೆ. ರಾಜ್ಯದಿಂದ 30 ಲಕ್ಷ ಜನರು ಜೀವನೋಪಾಯಕ್ಕಾಗಿ ಇತರ ರಾಜ್ಯಗಳಿಗೆ ಕಾರ್ಮಿಕರಾಗಿ ವಲಸೆ ಹೋಗಿದ್ದಾರೆ ಎಂದು ಹೇಳಿದ್ದಾರೆ.
ಒಡಿಶಾದಲ್ಲಿ ಬುಡಕಟ್ಟು ಜನಾಂಗದ ಹೆಚ್ಚಿನ ಜನಸಂಖ್ಯೆ ಇದೆ. ದಲಿತರ ಜೊತೆಗೆ ಬುಡಕಟ್ಟು ಜನರನ್ನು ಕೂಡ ಸರ್ಕಾರವು ರಾಜ್ಯದಲ್ಲಿ ನಿರ್ಲಕ್ಷಿಸಿದೆ. ನಾನು 6-7 ಗಂಟೆಗಳ ಕಾಲ ನಿಮ್ಮ ‘ಮಾನ್ ಕಿ ಬಾತ್’ ಕೇಳಲು ಮತ್ತು 15 ನಿಮಿಷಗಳ ಕಾಲ ಸ್ವಲ್ಪ ಮಾತನಾಡಲು ಇಲ್ಲಿಗೆ ಬಂದಿದ್ದೇನೆ. ಕೈಗಾರಿಕೆಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಒಡಿಶಾದ ದೊಡ್ಡ ಸಮಸ್ಯೆ ನಿರುದ್ಯೋಗವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ओडिशा, राउरकेला के प्राचीन महर्षि वेदव्यास मंदिर में विधिवत पूजा पाठ कर, भारत जोड़ो न्याय यात्रा के आज के दिन की शुरुआत हुई।
इस दौरान ओडिशा की सांस्कृतिक और आध्यात्मिक संपन्नता को देखने का अवसर प्राप्त हुआ।
#BharatJodoNyayYatra pic.twitter.com/zJcIuh5dRX— Bharat Jodo Nyay Yatra (@bharatjodo) February 7, 2024
ಅಖಿಲೇಶ್ ಯಾದವ್ ಹೇಳಿಕೆ:
ಫೆಬ್ರವರಿ 16 ರಂದು ಉತ್ತರಪ್ರದೇಶಕ್ಕೆ ಪ್ರವೇಶಿಸಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಸೇರಲು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮಂಗಳವಾರ ಆಹ್ವಾನವನ್ನು ಸ್ವೀಕರಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಪ್ರದೇಶದಲ್ಲಿ ಯಾತ್ರೆಗೆ ಸೇರಲು ಅಖಿಲೇಶ್ ಯಾದವ್ಗೆ ನೀಡಿದ ಆಹ್ವಾನವನ್ನು ಸ್ವೀಕರಿಸುವ ಸಂದರ್ಭದಲ್ಲಿ ಅಖಿಲೇಶ್ ಕಾಂಗ್ರೆಸ್ಗೆ ಶುಭಾಶಯಗಳನ್ನು ಕೋರಿದ್ದಾರೆ.
ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆ ಫೆಬ್ರವರಿ 16 ರಂದು ಉತ್ತರಪ್ರದೇಶದಲ್ಲಿ ಸಾಗಲಿದೆ. ಅಮೇಥಿ ಅಥವಾ ರಾಯ್ಬರೇಲಿಯಲ್ಲಿ ಯಾತ್ರೆಗೆ ಸೇರಲು ಅಖಿಲೇಶ್ ಯಾದವ್ ಒಪ್ಪಿಗೆ ನೀಡಿದ್ದಾರೆ ಎಂದು ಸಮಾಜವಾದಿ ಪಕ್ಷ ಹೇಳಿಕೆಯಲ್ಲಿ ತಿಳಿಸಿದೆ.
ಜೈರಾಮ್ ರಮೇಶ್, ಕನ್ಹಯ್ಯಾ ಕುಮಾರ್ ಹೇಳಿಕೆ:
ಪ್ರಧಾನಿ ಮೋದಿ ಮೂರನೇ ಬಾರಿಗೆ ಬಂದರೆ, ನನ್ನ ಮಾತುಗಳನ್ನು ಗಮನದಲ್ಲಿಟ್ಟುಕೊಳ್ಳಿ, ರೂರ್ಕೆಲಾ (ಒಡಿಶಾದ ನಗರ) ಕೂಡ ಮಾರಾಟ ಮಾಡುತ್ತಾರೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.
ಪ್ರಧಾನಿ ಮೋದಿ ಅಹಂಕಾರ ಆಚಾರ್ಯ, ಅವರನ್ನು ಪ್ರಶ್ನಿಸುವ ಧೈರ್ಯ ಯಾರಿಗೂ ಇಲ್ಲ. ಪ್ರಧಾನಿ ಮೋದಿ ನಮಗೆ ‘ಉದ್ಯೋಗ ನೀಡುವವರು’ ಎಂದು ಹೇಳುತ್ತಾರೆ. ಅವರು ಉದ್ಯೋಗ ಕಸಿದುಕೊಳ್ಳುವವರಾಗಿದ್ದಾರೆ.. ಮತ್ತೆ ಅವರು ಹೇಗೆ ಉದ್ಯೋಗ ನೀಡುವವರಾಗುತ್ತಾರೆ? ಮಾಧ್ಯಮಗಳು ಸ್ವತಂತ್ರವಾಗಿರಬೇಕು ಮತ್ತು ಮಾದ್ಯಮಗಳು ನಮ್ಮ ಪ್ರಜಾಪ್ರಭುತ್ವದ ಪ್ರಮುಖ ಭಾಗವಾಗಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ನಮ್ಮ ಯಾತ್ರೆಯು ಯುವ ನ್ಯಾಯ, ಸಹಭಾಗಿತ್ವ, ಮಹಿಳಾ ನ್ಯಾಯ, ರೈತರಿಗೆ ನ್ಯಾಯ ಮತ್ತು ಕಾರ್ಮಿಕರ ನ್ಯಾಯದ ಕುರಿತು ಮಾತನಾಡುತ್ತದೆ. ನಮ್ಮ ಯಾತ್ರೆಯು ಹಕ್ಕುಗಳಿಗಾಗಿ ಮತ್ತು ನ್ಯಾಯಕ್ಕಾಗಿದೆ ಎಂದು ಕನ್ಹಯ್ಯಾ ಕುಮಾರ್ ಇದೇ ವೇಳೆ ಹೇಳಿದ್ದಾರೆ.
ಇದನ್ನು ಓದಿ: ಮ್ಯಾನುವಲ್ ಸ್ಕ್ಯಾವೆಂಜಿಂಗ್ ಪ್ರಕರಣದಲ್ಲಿ ಮೃತರ ಕುಟುಂಬಕ್ಕೆ 30 ಲಕ್ಷ ಪರಿಹಾರಕ್ಕೆ ಹೈಕೋರ್ಟ್ ಸೂಚನೆ