ಹೈದರಾಬಾದ್ ಕರ್ನಾಟಕದ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ರಾಯಚೂರಿನಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳಿಲ್ಲ ಎನ್ನುವುದು ಹಲವಾರು ದಶಕಗಳ ಕೂಗು. ಹಲವು ವರ್ಷಗಳ ಹಿಂದೆ ಇಲ್ಲಿಗೊಂದು ಐಐಟಿ ಬರುತ್ತದೆ ಎಂದು ಆಸೆ ಹುಟ್ಟಿಸಿ ಕೊನೆಗೆ ಕೈಕೊಡಲಾಯ್ತು, ಐಐಟಿ ಧಾರವಾಡದ ಪಾಲಾಯ್ತು. ಹೋಗಲಿ ಈ ಜಿಲ್ಲೆಗೆ ಒಂದು ವಿವಿಯಾದರೂ ಇದೆಯೇ ಎಂದು ನೋಡಿದರೆ ರಾಯಚೂರಿನಲ್ಲಿ ವಿಶ್ವವಿದ್ಯಾನಿಲಯ ಸ್ಥಾಪಿಸಬೇಕೆಂದು ಮೂರ್ನಾಲ್ಕು ವರ್ಷಗಳಿಂದ ಚರ್ಚೆಗಳು ನಡೆದಿವೆಯೇ ಹೊರತು ಕಾರ್ಯರೂಪಕ್ಕೆ ಬಂದಿಲ್ಲ. ಇಷ್ಟೆಲ್ಲದರ ನಡುವೆ ಅಲ್ಲಿನ ವಿದ್ಯಾರ್ಥಿಗಳು ಸಮರ್ಪಕ ಶಿಕ್ಷಣ ಸಿಗದೇ ನರಳುತ್ತಿದ್ದಾರೆ. ಅಲ್ಲಿಯ ವಿದ್ಯಾರ್ಥಿಗಳ ಧಾರುಣ ಸ್ಥಿತಿ ಇಲ್ಲಿದೆ ನೋಡಿ.
ಬೋರ್ಡೇ ಇಲ್ಲದ ಕಗ್ಗಾಡಿನಲ್ಲೊಂದು ಪಿ.ಜಿ ಸೆಂಟರ್
ದೊಡ್ಡ ಜಿಲ್ಲೆ ರಾಯಚೂರಿನಲ್ಲಿ ಯರಗೇರಾ ಪಿ.ಜಿ ಸೆಂಟರ್ ಇದೆ. ಸದ್ಯಕ್ಕೆ ಪದವಿ ನಂತರ ಉನ್ನತ ಶಿಕ್ಷಣ ಪಡೆಯಲು ರಾಯಚೂರು ಸುತ್ತ ಇರುವ ವಿದ್ಯಾರ್ಥಿಗಳೆಲ್ಲಾ ಇಲ್ಲಿಗೆ ಬರಬೇಕು. ದುರಂತವೆಂದರೆ ಇಲ್ಲಿ ಪಿ.ಜಿ ಸೆಂಟರ್ ಇದೆ ಎಂದು ಗೊತ್ತಾಗಲು ಇರಬೇಕಾದ ಒಂದು ಬೋರ್ಡ್ ಕೂಡ ಇಲ್ಲ. ಸುತ್ತಲೂ ಜಾಲಿಗಿಡಗಳು ಬೆಳೆದುಕೊಂಡಿದ್ದು ದೊಡ್ಡ ಕೊಂಪೆಯಾಗಿ ಕಾಣಿಸುತ್ತದೆಯೇ ವಿನಾಃ ವಿಶ್ವವಿದ್ಯಾನಿಲಯವಿರಲಿ ಒಂದು ಕಾಲೇಜು ಕಂಡಂತೆ ಸಹ ಕಾಣುವುದಿಲ್ಲ.
ಈ ಪಿ.ಜಿ ಸೆಂಟರ್ನಲ್ಲಿ ಇಂದು ವಿದ್ಯಾರ್ಥಿಗಳ ಆಕ್ರೋಶದ ಕಟ್ಟೆಯೊಡದಿದೆ. ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೈಬರಹದಲ್ಲಿ ಕೊಟ್ಟಿರುವ ಮನವಿ ಪತ್ರ ನೋಡಿದರೆ ಎಂತವರಿಗೂ ಕನಿಕರ ಹುಟ್ಟುತ್ತದೆ. ಪಿ.ಜಿ ಹಾಸ್ಟೆಲ್ನಲ್ಲಿ ಗಂಗಳದ ಸಮಸ್ಯೆ( ಊಟದ ತಟ್ಟೆ), ಶುದ್ದ ಕುಡಿಯುವ ನೀರು ಇಲ್ಲ. ಸಮರ್ಪಕ ಬಸ್ ಸೌಲಭ್ಯವಿಲ್ಲ. ಬರುವ ಬಸ್ಗಳು ಸಹ ಸರಿಯಾಗಿ ನಿಲ್ಲಿಸುವುದಿಲ್ಲ. ಬಸ್ ಸ್ಟ್ಯಾಂಡ್ನಿಂದ ಪಿ.ಜಿ ಯೊಳಗೆ ಹೋಗಬೇಕಾದರೆ ವಿದ್ಯುತ್ ದೀಪ ಇಲ್ಲ. ಕ್ರೀಡಾಂಗಣ, ಕ್ರೀಡಾ ಸಾಮಾಗ್ರಿಗಳು, ಜಿಮ್ ಯಾವುದೂ ಇಲ್ಲ. ಗ್ರಂಥಾಲಯದ ಪುಸ್ತಕಗಳಿಲ್ಲ, ದಿನಪತ್ರಿಕೆಗಳಿಲ್ಲ… ಹೇಳುತ್ತಾ ಹೋದರೆ ಸಮಸ್ಯೆಗಳು ಮುಗಿಯುವುದೇ ಇಲ್ಲ.
ಒಂದು ರೀತಿ ಕಾಡಿನಂತಿರುವ ಅಲ್ಲಿ ಹೆಣ್ಣು ಮಕ್ಕಳ ಹಾಸ್ಟೆಲ್ಗೂ ಕೂಡ ಯಾವುದೇ ಭದ್ರತೆಯಿಲ್ಲ. ಹಾಸ್ಟೆಲ್ ರೂಂಗಳಿಗೆ ಕಿಟಕಿ ಬಾಗಿಲುಗಳಿಲ್ಲ, ಸಮರ್ಪಕ ಚಿಲಕಗಳಿಲ್ಲ. ಹಾಸ್ಟೆಲ್ ಊಟ ನೀಡುವ ಜವಾಬ್ದಾರಿಯನ್ನು ಗುತ್ತಿಗೆ ನೀಡಲಾಗಿದ್ದು ಅವರು ಅದನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ.. ಹೀಗೆ ಸಮಸ್ಯೆಗಳ ಪಟ್ಟಿ ಬೆಳೆಯುತ್ತಲೇ ಇದೆ.
ವಿದ್ಯಾರ್ಥಿಗಳು ಇಷ್ಟೆಲ್ಲಾ ಕಷ್ಟದ ನಡುವೆ ಹೇಗೆ ಓದುತ್ತಿದ್ದಾರೆ ಎಂದು ನೆನೆಸಿಕೊಂಡರೇ ಕಷ್ಟವಾಗುತ್ತದೆ. ಹಾಗಾಗಿ ಆ ವಿದ್ಯಾರ್ಥಿಗಳು ತಮ್ಮ ಹಕ್ಕೊತ್ತಾಯಗಳನ್ನು ಮುಂದಿಟ್ಟಿದ್ದಾರೆ. ಸಮರ್ಪಕವಾಗಿ ಸ್ಕಾಲರ್ಶಿಪ್ ನೀಡಬೇಕು. ಎಲ್ಲಾ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ನೀಡಬೇಕು, ಇಂಟರ್ನೆಟ್ ಸಂಪರ್ಕ ಒದಗಿಸಬೇಕು. ವಿದ್ಯುತ್ ಕಡಿತದ ಸಮಸ್ಯೆಯಿರುವುದರಿಂದ ಜನರೇಟರ್ ಬೇಕು ಮತ್ತು ಮುಖ್ಯವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೂ ಸಹ ಹಾಸ್ಟೆಲ್ ಸೌಲಭ್ಯ ಸಿಗಬೇಕು.
ನಮಗೇನಾದರೂ ಅನಾಹುತವಾದರೆ ನಾವೇ ಹೊಣೆ!
ಈ ಪಿ.ಜಿ ಸೆಂಟರ್ನ ಹಾಸ್ಟೆಲ್ನಲ್ಲಿ ಒಂದಷ್ಟು ವಿದ್ಯಾರ್ಥಿನಿಯರು ಇದ್ದಾರೆ. ಯಾರಾದರೂ ಇಲ್ಲಿಗೆ ಸೇರಬೇಕಾದರೆ ಅವರೊಂದು ಮುಚ್ಚಳಿಕೆ ಪತ್ರವನ್ನು ಕಡ್ಡಾಯವಾಗಿ ಬರೆದುಕೊಡಬೇಕು. ಅದರಲ್ಲಿ ನಮಗೇನಾದರೂ ಅನಾಹುತವಾದರೆ ನಾವೇ ಹೊಣೆ ಹೊರತು ಇಲ್ಲಿಯ ಆಡಳಿಯ ಮಂಡಳಿಯಲ್ಲ ಎಂದು! ರಾಜ್ಯದ, ದೇಶದ ಯಾವ ವಿ.ವಿಯಲ್ಲಿಯೂ ಇಂತಹ ಮುಚ್ಚಳಿಕೆ ಪತ್ರ ಬರೆಸಿಕೊಳ್ಳುವುದಿಲ್ಲವೇನೋ? ಇಲ್ಲಿಯ ಅನ್ಯಾಯ ಅಕ್ರಮಗಳನ್ನು ವಿದ್ಯಾರ್ಥಿಗಳು ಪ್ರಶ್ನೆ ಮಾಡಬಾರದೆಂದು ಈ ರೀತಿ ಮುಚ್ಚಳಿಕೆ ಪತ್ರ ಬರೆಸಿಕೊಂಡು ವಿದ್ಯಾರ್ಥಿಗಳನ್ನು ಹೆದರಿಸಲಾಗುತ್ತಿದೆ. ಅವರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಈ ವಿಚಾರದ ಕುರಿತು ನಾನುಗೌರಿ.ಕಾಂ ವತಿಯಿಂದ ರಾಯಚೂರು ವಿ.ವಿಯ ವಿಶೇಷಾಧಿಕಾರಿಗಳಾದ ಪ್ರೊ.ಮುಝಾಫರ್ ಅಸ್ಸಾದಿಯವರನ್ನು ಮಾತಾಡಿಸಲಾಯಿತು. “ಇಲ್ಲಿ ರಾಯಚೂರು ವಿಶ್ವವಿದ್ಯಾನಿಲಯವಾದರೆ ಮಾತ್ರ ಆ ಪಿ.ಜಿ ಸೆಂಟರ್ ನಮ್ಮ ವ್ಯಾಪ್ತಿಗೆ ಬರುತ್ತದೆ. ಸದ್ಯಕ್ಕೆ ಅದು ಗುಲಬರ್ಗಾ ವಿ.ವಿಯ ವ್ಯಾಪ್ತಿಯಲ್ಲಿದ್ದು ಅಲ್ಲಿ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲು ನಮಗೆ ಅಧಿಕಾರವಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.
ಆ ಪಿ.ಜಿ ಸೆಂಟರ್ನ ಕಾರ್ಯಾಧಿಕಾರಿಗಳಾದ ನುಶ್ರತ್ ರವರನ್ನು ಸಂಪರ್ಕಿಸಲು ಪ್ರಯತ್ನಿಸಿದರು ಕೂಡ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ.
ಇನ್ನು ವಿದ್ಯಾರ್ಥಿಗಳು ಬೆಳಿಗ್ಗೆಯಿಂದಲೇ ಪ್ರತಿಭಟನೆ ನಡೆಸಿದರೂ ಯಾವೊಬ್ಬ ಅಧಿಕಾರಿಯೂ ಅತ್ತ ಸುಳಿದಿಲ್ಲ. ವಿಷಯ ತಿಳಿದ ನಂತರ ರವಿ ಪಾಟೀಲ್ ಫೌಂಡೇಶನ್ನ ರವಿ ಪಾಟೀಲ್ರವರು ಸ್ಥಳಕ್ಕೆ ತೆರಳಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ್ದಾರೆ. ನಂತರವಷ್ಟೇ ತಹಶೀಲ್ದಾರ್ ಪಿ.ಜಿ ಸೆಂಟರ್ಗೆ ಭೇಟಿಕೊಟ್ಟು ಮನವಿ ಪತ್ರ ಸ್ವೀಕರಿಸಿದ್ದಾರೆ. ಮತ್ತೆ ಯಥಾಪ್ರಕಾರ ಇದನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದು ಹೇಳಿ ಹೊರಟಿದ್ದಾರೆ.
ರಾಯಚೂರು ವಿಶ್ವವಿದ್ಯಾಲಯವಾಗುವುದೇ ಪರಿಹಾರದ ದಾರಿ: ರವಿ ಪಾಟೀಲ್
ಈ ಕುರಿತು ರವಿ ಪಾಟೀಲ್ರವರು ಮಾತನಾಡಿ, ಈ ಪಿ.ಜಿ ಸೆಂಟರ್ ಬಗ್ಗೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಹಲವಾರು ವಿದ್ಯಾರ್ಥಿಗಳು ಇಲ್ಲಿಗೆ ವಿದ್ಯಾಭ್ಯಾಸಕ್ಕಾಗಿ ಬಂದರೂ ಸಹ ಇಲ್ಲಿನ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಅನುದಾನ ಬಿಡುಗಡೆ ಆಗಿಲ್ಲ. ಇಲ್ಲಿಗೆ ಬರುವ ಇನ್ಚಾರ್ಜ್ಗಲು ಪ್ರತಿ ಮೂರು ತಿಂಗಳಿಗೊಮ್ಮೆ ಬದಲಾಗುತ್ತಿದ್ದಾರೆ. ಈಗ ಇರುವವರು ಸಹ ಡಿಸೆಂಬರ್ನಲ್ಲಿ ನಿವೃತ್ತಿಯಾಗುತ್ತಿದ್ದಾರೆ. ಈಗಾದರೆ ಈ ಪಿ.ಜಿ ಸೆಂಟರ್ ಉದ್ದಾರ ಆಗುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.
600 ಜನಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಇಲ್ಲ ಕೇವಲ 6 ಜನ ಮಾತ್ರ ಕಾಯಂ ಉಪನ್ಯಾಸಕರಿದ್ದಾರೆ. ಉಳಿದವರೆಲ್ಲಾ ಅಥಿತಿ ಉಪನ್ಯಾಸಕರಾಗಿರುವುದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಹಾಗಾಗಿ ಈ ತಿಂಗಳ 28 ರಂದು ಅಂತಿಮ ಮಾತುಕತೆ ನಡೆಸುತ್ತೇವೆ. ಆನಂತರ ಇದಕ್ಕಾಗಿ ಬೆಂಗಳೂರಿನಲ್ಲಿ ಒತ್ತಡ ತರುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಹೋರಾಟ ತೀವ್ರಗೊಳಿಸುತ್ತೇವೆ
ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಲಕ್ಷ್ಮಣ್ ಮಂಡಲಗೇರಾ ಮಾತನಾಡಿ, ಪಿ.ಜಿ ಸೆಂಟರ್ ಸಣ್ಣ ಪುಟ್ಟ ಸಮಸ್ಯೆಗಳೇ ಇದ್ದರೂ ಸಹ ಬಗೆಹರಿಯುತ್ತಿಲ್ಲ. ಇಲ್ಲಿ ಹೇಳುವವರು ಕೇಳುವವರು ಯಾರು ಇಲ್ಲ. ಈ ಭಾಗದ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಎಲ್ಲಾ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾಗಿ ಹೋರಾಟವನ್ನು ತೀವ್ರಗೊಳಿಸಲು ತೀರ್ಮಾನಿಸಿದ್ದೇವೆ ಎಂದಿದ್ದಾರೆ.
ರಾಯಚೂರು ವಿ.ವಿ ಆಗಬೇಕು ಎಂಬುದು ನಮ್ಮ ಬಹುದಿನದ ಬೇಡಿಕೆ. ಆದರೆ ಆ ಕಡತವನ್ನು ರಾಜ್ಯಪಾಲರು ಎರಡು ಬಾರಿ ಕಾರಣವಿಲ್ಲದೆ ತಿರಸ್ಕರಿದ್ದಾರೆ. ಈ ಪಿ.ಜಿ ಸೆಂಟರ್ ಗುಲಬರ್ಗಾ ವಿ.ವಿ ವ್ಯಾಪ್ತಿಗೆ ಬರಲಿದ್ದು, ಇಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ರಾಯಚೂರು ನಗರದಿಂದ 15 ಕಿ.ಮಿ ದೂರದಲ್ಲಿದೆ. ಸಮರ್ಪಕ ಬಸ್ ವ್ಯವಸ್ಥೆ ಕೂಡ ಇಲ್ಲ. ಕಷ್ಟಪಟ್ಟು ಬಂದರೂ ಸಹ ನಿಗಧಿತವಾಗಿ ಕ್ಲಾಸ್ ನಡೆಯುವುದಿಲ್ಲ. ಇಲ್ಲಿ ಒಂದು ಝೆರಾಕ್ಸ್ ಅಂಗಡಿ ಸಹ ಇಲ್ಲ. ಇಲ್ಲಿನ ವಿಶೇಷ ಅಧಿಕಾರಿಗಳು ರಬ್ಬರ್ ಸ್ಟ್ಯಾಂಪ್ ರೀತಿ ವರ್ತಿಸುತ್ತಾರೆ. ನಾವು ಕಟ್ಟಿದ ಶುಲ್ಕಕ್ಕೆ ರಶೀದಿ ಸಹ ನೀಡದೆ ವಂಚನೆ ನಡೆಯುತ್ತಿದೆ. ಹಾಗಾಗಿ ಪ್ರತಿಭಟನೆ ನಮಗೆ ಅನಿವಾರ್ಯವಾಗಿದೆ
-ಮಲ್ಲನಗೌಡ, ಪ್ರಥಮ ಎಂ.ಎ, ರಾಜ್ಯಶಾಸ್ತ್ರ ವಿಭಾಗ.