Homeಬಹುಜನ ಭಾರತಸಮರಸವ ಸಾರಿದ ಮಾನವಂತ ಪತ್ರಕರ್ತ ಕಮಾಲ್ ಖಾನ್

ಸಮರಸವ ಸಾರಿದ ಮಾನವಂತ ಪತ್ರಕರ್ತ ಕಮಾಲ್ ಖಾನ್

- Advertisement -
- Advertisement -

ಪತ್ರಿಕಾವೃತ್ತಿಯು ಲಜ್ಜೆಗೆಟ್ಟು ಮಾನ ಕಳೆದುಕೊಂಡಿರುವ ಇಂದಿನ ದಿನಮಾನಗಳ ರೊಜ್ಜಿನ ನಡುವೆ ಕಮಲದಂತೆ ಹೊಳೆದ ಹೃದಯವಂತ ಕಮಾಲ್ ಖಾನ್. ಪತ್ರಿಕಾವೃತ್ತಿ ಜನಪರ ನೆಲೆಯದಾಗಿತ್ತೇ ವಿನಾ ಅಧಿಕಾರಕೇಂದ್ರಿತ ಆಗಿರಲಿಲ್ಲ. ಅವರ ಒಟ್ಟಂದದ ವರದಿಗಾರಿಕೆಯು ಭಾರತದ ಬಹುಮುಖೀ ಸಂಸ್ಕೃತಿ ಮತ್ತು ಗಂಗಾ-ಜಮುನಾ ಸಾಮಾಜಿಕ ಸದ್ಭಾವನೆಯ ಸಮರಸದ ಪ್ರತೀಕ.

ಗಂಗೆ ಯಮುನೆ ಹರಿಯುವ ಉತ್ತರ ಭಾರತದ ಕೆಲವು ಸೀಮೆಗಳಲ್ಲಿ ’ಗಂಗಾ-ಜಮುನೀ ತೆಹಜೀಬ್’ ಎಂಬ ಅವಧೀ ನುಡಿಗಟ್ಟಿನ ಕಾವ್ಯಾತ್ಮಕ ರೂಪಕವೊಂದಿದೆ. ಹಿಂದಿಗಿಂತ ಪುರಾತನ ಹಿಂದಿ ನುಡಿಗಟ್ಟು ಅವಧೀ, ಅವಧ ಸೀಮೆಯ ಆಡುನುಡಿ. ಹಿಂದೂ-ಮುಸ್ಲಿಮ್ ಸಂಗಮ ಸಂಸ್ಕೃತಿ ಎಂದು ಇದರ ಅರ್ಥ. ಹಿಂದೂ ಮುಸ್ಲಿಮ್ ಮೈತ್ರಿ- ಸಾಮರಸ್ಯವನ್ನು ಗಂಗೆ-ಯಮುನೆಯರ ಸಂಗಮಕ್ಕೆ ಹೋಲಿಸಲಾಗಿದೆ. ಬನಾರಸಿನ ಹಿಂದೂ-ಮುಸ್ಲಿಮ್ ಸಂಸ್ಕೃತಿ, ಕೊಡಕೊಳುವ ಸಂಬಂಧ ಹಾಗೂ ಜೀವನವಿಧಾನಗಳ ಶಾಂತಿಯುತ ಸಂಗಮ. ಅವಧದ ನವಾಬರು ಈ ಸಂಸ್ಕೃತಿಯ ಪ್ರವರ್ತಕರು. ಅಲಹಾಬಾದ್, ಲಖ್ನೋ, ಕಾನ್ಪುರ್, ಫೈಜಾಬಾದ್-ಅಯೋಧ್ಯ ಹಾಗೂ ವಾರಾಣಸಿ ಈ ಸಂಸ್ಕೃತಿಯ ಪ್ರಮುಖ ಸೀಮೆಗಳು. ದೆಹಲಿ ಕೂಡ ಈ ಸಾಲಿಗೆ ಸೇರುವುದುಂಟು. ಚುಟುಕಾಗಿ ತಕ್ಷಣ ಮನಮುಟ್ಟುವಂತೆ ಹೇಳಬೇಕೆಂದರೆ ಶಹನಾಯ್ ಸಂಗೀತ ಗುರು ಉಸ್ತಾದ್ ಬಿಸ್ಮಿಲ್ಲಾಖಾನ್ ಅವರು ಈ ಸಂಸ್ಕೃತಿಯ ಪ್ರತೀಕಗಳಲ್ಲೊಬ್ಬರು. ಬಿಸ್ಮಿಲ್ಲಾಖಾನ್ ಹೆಜ್ಜೆ ಗುರುತುಗಳನ್ನು ಅನುಸರಿಸಿದವರು ಕಮಾಲ್ ಖಾನ್.

ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಹರಿದ ಕಂಬನಿಯ ಧಾರೆಯೇ ಈ ಮಾತುಗಳಿಗೆ ಸಾಕ್ಷಿ. ಕಮಾಲ್ ಖಾನ್ ಅವರನ್ನು ಖುದ್ದು ಭೇಟಿಯೇ ಆಗಿರದ ಪ್ರಜ್ಞಾವಂತ ನಾಗರಿಕರು, ಪತ್ರಕರ್ತರು ಆತನ ಸಾವಿನ ನಷ್ಟ ತಮಗೇ ಉಂಟಾದ ನಷ್ಟವೆಂದು ಭಾವಿಸಿ ಖಿನ್ನರಾಗಿದ್ದಾರೆ. ಅಂತಹವರ ಸಂಖ್ಯೆ ನಮ್ಮ ನಿಮ್ಮ ಊಹೆಗಿಂತ ಹಲವು ಪಟ್ಟು ದೊಡ್ಡದು.

ಉಸ್ತಾದ್ ಬಿಸ್ಮಿಲ್ಲಾಖಾನ್

ತಥ್ಯಾಂಶಗಳ ಜೊತೆಗೆ ಮಾನವೀಯತೆ ಮತ್ತು ಕಾವ್ಯಾತ್ಮಕ ಭಾಷೆ ಬೆರೆಸಿ ವರದಿಗಾರಿಕೆಯನ್ನು
ಸಂಪನ್ನಗೊಳಿಸುತ್ತಿದ್ದವರು ಕಮಾಲ್. ಸಭ್ಯತೆ ಸತ್ಯಶೀಲತೆ, ಸಮತೂಕ, ಸಂಯಮವನ್ನು ಅವರ ವರದಿಗಳಲ್ಲಿ ಕಾಣಬಹುದಾಗಿತ್ತು. ಇಂದಿನ ಬಹುತೇಕ ಪತ್ರಕರ್ತರು ಮರೆತೇ ಹೋಗಿರುವ ಅಧ್ಯಯನಶೀಲತೆಯ ಗುಣ ಕಮಾಲ್ ಅವರಲ್ಲಿ ಧಾರಾಳವಾಗಿತ್ತು. ಅದು ಅವರ ವರದಿಗಳಲ್ಲಿ ಜಿನುಗುತ್ತಿತ್ತು ಕೂಡ. ಕುರಾನಿನಂತೆ ರಾಮಾಯಣ ಭಗವದ್ಗೀತೆಯ ಶ್ಲೋಕಗಳನ್ನೂ, ದೃಷ್ಟಾಂತಗಳು, ನೀತಿಗಳನ್ನೂ ಸುಲಲಿತವಾಗಿ ಉಲ್ಲೇಖಿಸಬಲ್ಲವರಾಗಿದ್ದರು. ಎಲ್ಲಿಂದಲೋ ಎರಡು ಸಾಲುಗಳ ಕದ್ದು ವರದಿಯೊಂದಿಗೆ ಹೆಣೆಯುವ ಪತ್ರಕರ್ತರಾಗಿರಲಿಲ್ಲ ಅವರು. ತುಳಸೀರಾಮಾಯಣವನ್ನು ಆಳದಿಂದ ಬಲ್ಲವರಾಗಿದ್ದರು. ಉತ್ತರಪ್ರದೇಶದ ಸಮಾಜ ಧರ್ಮದಲ್ಲೇ ಮುಳುಗೇಳುವ ಸಮಾಜವೆಂಬುದು ಅವರಿಗೆ ಚೆನ್ನಾಗಿ ತಿಳಿದಿತ್ತು. ಇಂತಹ ಭೋಳೆತನವನ್ನು ಕೆರಳಿಸಿ ಕುದಿಸುವುದು ರಾಜಕಾರಣಕ್ಕೆ ಚಿಟಿಕೆ ಹೊಡೆದಷ್ಟು ಸಲೀಸು ಕೆಲಸ. ಈ ತೆರನ ಸಮಾಜದೊಡನೆ ಪತ್ರಕರ್ತನಾಗಿ ಸಂವಾದ ನಡೆಸಲು ಅಸಂಖ್ಯ ಧಾರ್ಮಿಕ ಹೊತ್ತಿಗೆಗಳನ್ನು ಅಭ್ಯಾಸ ಮಾಡಿದ್ದರು ಕಮಾಲ್ ಖಾನ್. ಕೇಳುಗರ ಹೃದಯದ ಆಳಕ್ಕೆ ಇಳಿದುಬಿಡುತ್ತಿದ್ದರು. ಎಲ್ಲದರ ಆಳದಲ್ಲಿ ಹುದುಗಿರುವುದು ಸೋದರಭಾವ, ಪ್ರೇಮ ಆದರಗಳೇ ವಿನಾ ದ್ವೇಷ ತಿರಸ್ಕಾರಗಳಲ್ಲ ಎಂದು ಸಾಧಿಸುತ್ತಿದ್ದರು. ಗೂಗಲ್ ಪೂರ್ವಕಾಲದ ವರದಿಗಾರ ಆತ ಎಂಬುದು ಮಹತ್ವಪೂರ್ಣ ಅಂಶ. ಸುದ್ದಿ ನಿರೂಪಣೆಯ ಅವರ ಅನುಪಮ ಶೈಲಿ ಆದರ್ಶಪ್ರಾಯ.

ಪತ್ರಕರ್ತ ಕಮಾಲ್ ಉತ್ತಮ ಕವಿಯಾಗಿದ್ದರು. ಅಸಾಧಾರಣ ಕಥಾನಿರೂಪಣೆಯ ಪ್ರತಿಭೆ ಅವರದಾಗಿತ್ತು. ತಮ್ಮ ನಾಲ್ಕು ಸಾಲುಗಳ ಸ್ಕ್ರಿಪ್ಟ್ ಬರೆಯಲು ತಾಸುಗಟ್ಟಲೆ ಓದುತ್ತಿದ್ದರುಶ್ರ॒ದ್ಧೆಯಿಂದ ಹೆಣಗುತ್ತಿದ್ದರು. ಆಗ ರೂಪು ತಳೆಯುತ್ತಿತ್ತು ಮಾನ ಸಮ್ಮಾನದ ಒಂದು ಮಾನವೀಯ ಒಕ್ಕಣೆ. ಮತ್ತೊಬ್ಬ ಕಮಾಲ್ ಖಾನರನ್ನು ರೂಪಿಸುವ ನೈತಿಕಶಕ್ತಿಯನ್ನು ಈ ದೇಶ ಸದ್ಯಕ್ಕೆ ಕಳೆದುಕೊಂಡಿದೆ ಎನ್ನುತ್ತಾರೆ ಮತ್ತೊಬ್ಬ ಮಾನವೀಯ ಪತ್ರಕರ್ತ ರವೀಶ್ ಕುಮಾರ್.

ರಷ್ಯನ್ ಭಾಷೆಯನ್ನು ಓದಿ ಬರೆದು ಮಾತಾಡಬಲ್ಲವರಾಗಿದ್ದ ಕಮಾಲ್, ಪತ್ರಿಕಾವೃತ್ತಿಗೆ ಕಾಲಿಡುವ ಮುನ್ನ ಸಾರ್ವಜನಿಕ ಕ್ಷೇತ್ರದ ಉದ್ಯಮವೊಂದರಲ್ಲಿ ರಷ್ಯನ್ ಅನುವಾದಕರಾಗಿ ಕೆಲಸ ಮಾಡುತ್ತಿದ್ದರು.

ಅವರದು ಅಂತರಧರ್ಮೀಯ ವಿವಾಹ. ಪತ್ರಕರ್ತರೂ ಆಗಿದ್ದ ಪತ್ನಿ ರುಚಿ ಕುಮಾರ್ ಹಿಂದೂ ಕುಟುಂಬಕ್ಕೆ ಸೇರಿದವರು. ಮನೆಯಲ್ಲಿನ ಉದಾರವಾದೀ ವಾತಾವರಣ ಕಸುಬಿನಲ್ಲೂ ಪ್ರತಿಫಲಿಸಿತ್ತು. ಲಖ್ನೋದ ಸಮರಸ ಸಂಸ್ಕೃತಿಯ ಅಸಲು ಪ್ರತಿನಿಧಿಯಾಗಿ ಬದುಕಿದವರು. ಸಾಮಾಜಿಕ ಜಾಲತಾಣಗಳಲ್ಲಿ ಅವರ ಈ ಬಗೆಯ ಪತ್ರಿಕಾವೃತ್ತಿಯ ಝಲಕುಗಳ ಸರಣಿಯನ್ನೇ ಕಾಣಬಹುದು. ದ್ವೇಷದ ಬೆಂಕಿಯನ್ನು ತಣಿಸುವ ಶಕ್ತಿ ಅವರ ಮಾತುಗಳಿಗಿತ್ತು.

ನೋಡುಗರ ಗಮನ ಸೆಳೆದು ಟಿ.ಆರ್.ಪಿ. ಏರಿಸಲು ಟಿವಿ ವರದಿಗಾರಿಕೆ ಏನೆಲ್ಲ ಹುಚ್ಚುಚ್ಚು ಕಸರತ್ತುಗಳನ್ನು ಅಸ್ತ್ರದಂತೆ ಬಳಸುತ್ತದೆ. ಆದರೆ ಭಾರೀ ಎನ್ನಲಾಗುವ ಸುದ್ದಿಗಳ ವರದಿ ಮಾಡುವ ಘಳಿಗೆಗಳಲ್ಲೂ ಕಮಾಲ್ ಭಾವಾವೇಶಕ್ಕೆ ಒಳಗಾದವರಲ್ಲ. ದನಿಯಲ್ಲಿ ಸಮಚಿತ್ತ ಸಂಯಮ ಸಡಿಲುತ್ತಿರಲಿಲ್ಲ. ಟಿವಿ ಮಾಧ್ಯಮದ ನಾಟಕೀಯತೆಯನ್ನು ದೂರ ಇರಿಸಿದ್ದ ಅತಿವಿರಳ ವರದಿಗಾರ.

ಕಾಶಿಯ ಸ್ನಾನ ಸೋಪಾನಗಳ ಮೇಲೆ ಗಂಗಾರತಿಯ ಜೊತೆಜೊತೆಯಲ್ಲಿ ಕಮಾಲ್ ಖಾನ್ ಚಿತ್ರಪಟ ಇರಿಸಿ ಹಣತೆಗಳನ್ನು ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗಂಗಾ ಜಮುನಾ ಸಂಸ್ಕೃತಿಯಿದು. ಹಿಂದೂಸ್ತಾನದ ಅಸಲು ಸಂಸ್ಕೃತಿ ಸಹಬಾಳುವೆಯ ಪ್ರತೀಕ. ಬಾಬರಿ ಮಸೀದಿಯನ್ನು ಕೆಡವಿ ವಿವಾದಿತ ಸ್ಥಳದಲ್ಲಿ ರಾಮಲಲ್ಲಾನನ್ನು ಪ್ರತಿಷ್ಠಾಪಿಸಿದ ವರ್ಷಗಳ ನಂತರ ವರದಿ ಮಾಡಲು ಕಮಾಲ್ ಖಾನ್ ಅಯೋಧ್ಯೆಗೆ ತೆರಳಿರುತ್ತಾರೆ. ಪೂಜಾ ಸಾಮಗ್ರಿಗಳ ಸಾಲುಸಾಲು ಮುಂಗಟ್ಟುಗಳು. ಇಂತಹ ಹಿಂದೂ ಪೂಜಾ ಸಾಮಗ್ರಿಗಳ ಮಾರುವ ಒಂದು ಮುಂಗಟ್ಟಿನ ಮೂಲೆಯೊಂದರಲ್ಲಿ ಧೂಳು ಹಿಡಿದ ಅರಬ್ಬಿ ಲಿಪಿಯ ಪಟ್ಟಿಕೆಯೊಂದು ಅವರ ಕಣ್ಣಿಗೆ ಬೀಳುತ್ತದೆ. ಮಾರಾಟಕ್ಕೆ ಕುಳಿತ ಬಾಲಕ ಹೇಳುತ್ತಾನೆ, ಅವನ ಅಪ್ಪ ಇಲ್ಲೇ ಎಲ್ಲೋ ಹೋಗಿದ್ದು ಇದೀಗ ಮರಳುತ್ತಾನೆಂದು. ಮರಳಿದ ಆ ಅಪ್ಪನ ಹೆಸರು ಝಹೂರ್ ಖಾನ್. ತಾನು ಇಲ್ಲಿ ಬಹಳ ಕಾಲದಿಂದ ಇದ್ದೇನೆ ಮತ್ತು ಸುರಕ್ಷಿತವಾಗಿದ್ದೇನೆಂದು ಆತ ಕಮಾಲ್ ಖಾನ್‌ಗೆ ಹೇಳುತ್ತಾನೆ. ಸ್ಥಳೀಯರ್‍ಯಾರೂ ಇಲ್ಲಿನ ಮುಸಲ್ಮಾನರ ಮೈ ಮುಟ್ಟಿಲ್ಲ, ಕೊಂದವರು ಹೊರಗಡೆಯವರು. ನಾವು ಸಾಮರಸ್ಯದಿಂದ ಬಾಳಿದ್ದೇವೆ. ಹದಿನಾಲ್ಕು ವರ್ಷಗಳ ಕಠಿಣ ವನವಾಸದಿಂದ ಅಯೋಧ್ಯೆಗೆ ಮರಳಿದ ಶ್ರೀರಾಮ ಎಲ್ಲಕ್ಕೂ ಮೊದಲು ಹೋಗಿ ನಮಿಸುವುದು ತನ್ನನ್ನು ವನವಾಸಕ್ಕೆ ಕಳಿಸಲು ಮೂಲಕಾರಣಳಾದ ಚಿಕ್ಕಮ್ಮ ಕೈಕೇಯಿಯನ್ನು. ಅಂತಹ ರಾಮನ ನೆಲವಿದು ಎಂಬ ಕತೆಯನ್ನು ಝಹೂರ್ ಖಾನ್ ಹೇಳುತ್ತಾನೆ.

ರವೀಶ್ ಕುಮಾರ್

ಅಯೋಧ್ಯೆಯ ಸೈಯದ್ ವಾಡಾ ಎಂಬ ಕೇರಿಯ ಮತ್ತೊಂದು ಕತೆಯನ್ನು ಕಮಾಲ್ ಖಾನ್ ಹೇಳುತ್ತಿದ್ದರು- ಈ ವಾಡಾದಲ್ಲಿ 300-400 ಮುಸಲ್ಮಾನರಿದ್ದರು. 1992ರಲ್ಲಿ ಲಕ್ಷಾಂತರ ಕರಸೇವಕರು ಹೊರಗಿನಿಂದ ಬಂದರು. ಆಗ ಹೆದರಿದ ಈ ಮುಸಲ್ಮಾನರ ಮನೆ ತೊರೆದು ಪಲಾಯನ ಮಾಡಿದ್ದರು. ಇವರ ಮನೆಗಳಿಗೆ ಬೆಂಕಿ ಹಚ್ಚಲಾಯಿತು. ಎದುರಿನಲ್ಲೇ ರಾಮನ ಗುಡಿಯೊಂದಿತ್ತು. ಅಲ್ಲಿನ ಸಾಧುಸಂತರು ಗೋಡೆ ಹಾರಿಬಂದು ಬಾವಿಗಳಿಂದ ನೀರು ಸೇದಿ ತಂದು ಈ ಮನೆಗಳಿಗೆ ಬಿದ್ದಿದ್ದ ಬೆಂಕಿಯನ್ನು ನಂದಿಸಿದರು. ಈ ಪೈಕಿ ಚಾರುಶೀಲ ಎಂಬ ಸಾಧ್ವಿಯೂ ಇದ್ದರು. ಸನಿಹದಲ್ಲೇ ಹೂತೋಟವೊಂದರ ಮಾಲೀಕರು ರಯೀಸ್ ಮತ್ತು ಹಫೀಸ್. ಈ ತೋಟದಲ್ಲಿ ಕಿತ್ತ ಮೊದಲ ಹೂವುಗಳಿಗೆ ಇವರು ಹಣ ಪಡೆಯುತ್ತಿರಲಿಲ್ಲ. ದೇವರ ಮುಡಿಗೇರಿಸಲು ಕಳಿಸುತ್ತಿದ್ದರು. ಮತ್ತೊಂದು ಮೊಹಲ್ಲಾದ ಹೆಸರು ಬೇಗಂಪುರಾ. ಅಲ್ಲೊಬ್ಬ ಮುನ್ನೂ ಮಿಯಾ ಎಂಬ ಶಿಯಾ ಮುಸ್ಲಿಮರೊಬ್ಬರಿದ್ದರು. 1949ರಿಂದ 1999ರಲ್ಲಿ ತಾವು ನಿಧನರಾಗುವ ತನಕ ಅವರು ಸುಂದರಭವನ ಎಂಬ ದೇವಾಲಯದ ಮಹಂತರಾಗಿದ್ದರು.

ಅಲ್ಲಿಯೇ ಸನಿಹದಲ್ಲಿ ದಂತಧವನ ಕುಂಡ… ಖುದ್ದು ಶ್ರೀರಾಮಚಂದ್ರನೇ ಇಲ್ಲಿ ಹಲ್ಲುಜ್ಜುತ್ತಿದ್ದನೆಂಬ ಪ್ರತೀತಿ. ಪಕ್ಕದಲ್ಲೇ ಸತ್ಯಸ್ನೇಹಿ ಮಂದಿರ. 70-80 ವಯಸ್ಸಿನ ವೃದ್ಧ ಪೂಜಿಸುತ್ತಿದ್ದ ಅಲ್ಲಿನ ಗರ್ಭಗೃಹದಲ್ಲಿ ಹಲವು ಧರ್ಮಗಳ ಪೂಜೆ ನಡೆಯುತ್ತಿತ್ತು. ರಾಮ ಲಕ್ಷ್ಮಣ ಸೀತೆಯರೊಂದಿಗೆ, ಬುದ್ಧ, ಮಹಾವೀರ, ಶಿಲುಬೆಗೇರಿಸಿದ್ದ ಕ್ರಿಸ್ತ ಹಾಗೂ ಕಾಬಾದ ಪಟಗಳಿದ್ದವು. ಮಹಾಕುಂಭದಲ್ಲೊಮ್ಮೆ ಹಿಂದೂ ಗುರುವಿನ ಅನುಯಾಯಿ ರಷ್ಯನ್ ಮಹಿಳೆ ಕಮಾಲ್ ಖಾನ್‌ಗೆ ಎದುರಾಗಿದ್ದಳು. ಬೊಲ್ಷೆವಿಕ್ ಕ್ರಾಂತಿಯಲ್ಲಿ ಭಾಗವಹಿಸಿದ್ದ ತಂದೆಯ ಮಗಳು ಆಕೆ. ಕಲ್ಪವಾಸ ಮಾಡಲು ಬಂದಿದ್ದೇನೆಂದಳು. ದ್ವಾಪರದಲ್ಲಿ ಶ್ರೀಕೃಷ್ಣ ಹೇಳಿದ್ದ ಪ್ರಕಾರ ಮೋಕ್ಷಪ್ರಾಪ್ತಿಗೆ ಬಂದಿದ್ದೇನೆಂದಳು. ರಾಮಜನ್ಮಭೂಮಿ- ಬಾಬರಿ ಮಸೀದಿ ವಿವಾದದ ಮೊಕದ್ದಮೆಯಲ್ಲಿ ಎದುರಾಳಿಗಳಾಗಿದ್ದ ಹಾಶೀಮ್ ಅನ್ಸಾರಿ ಮತ್ತು ರಾಮಚಂದ್ರ ಪರಮಹಂಸ ಒಟ್ಟಿಗೆ ನ್ಯಾಯಾಲಯಕ್ಕೆ ತೆರಳುತ್ತಿದ್ದ ಗೆಳೆಯರು. ಬಾಬರಿ ಮಸೀದಿ ಉರುಳಿದ ನಂತರ ಖಾನ್‌ಗೆ ನೀಡಿದ್ದ ಸಂದರ್ಶನವೊಂದರಲ್ಲಿ ರಾಮಲಲ್ಲಾ ಟೆಂಟಿನಲ್ಲಿದ್ದಾನೆಂದೂ, ಆತನಿಗೆ ಬೇಗನೆ ಮಂದಿರ ನಿರ್ಮಿಸಬೇಕೆಂದೂ ಭಾವುಕರಾಗಿ ಅತ್ತುಬಿಟ್ಟಿದ್ದರು ಹಾಶೀಮ್ ಅನ್ಸಾರಿ. ಈ ವಿಡಿಯೋ ಈಗಲೂ ನೋಡಸಿಗುತ್ತದೆ. ಈ ಝಹೂರ್ ಖಾನ್, ಹಾಶೀಮ್ ಅನ್ಸಾರಿ, ರಷ್ಯನ್ ಮಹಿಳೆ ನಮಗೆ ಅಗತ್ಯವಾಗಿ ನೆನಪಾಗಬೇಕು. ಈ ಭೂಮಿಯ ಮೇಲೆ ಘನ ಸೌಂದರ್ಯವಿದೆ, ಅಪಾರ ಪ್ರೇಮವೂ ಇದೆ. ದ್ವೇಷವನ್ನು ದೂರವಿಡಬೇಕಿದೆ ಎನ್ನುತ್ತಿದ್ದರು ಕಮಾಲ್ ಖಾನ್.

ಸ್ತ್ರೀದ್ವೇಷ, ಗಂಡಾಳಿಕೆಯ ಕಡು ವಿರೋಧಿಯಾಗಿದ್ದವರು. ಗಂಡಾಳಿಕೆಯ ಬೇರುಬಿಳಿಲುಗಳ ಕುರಿತು ತಮ್ಮ ಸಾವಿನ ಹಿಂದಿನ ದಿನವಷ್ಟೇ ಅದೆಷ್ಟು ಘನತೆಯಿಂದ ಮಾತಾಡಿದ್ದರು!

ಇಂತಹ ಕಮಾಲ್ ಖಾನ್ ಸಾಯುವುದಿಲ್ಲ…


ಇದನ್ನೂ ಓದಿ: ಯೋಗಿ ವಿರುದ್ಧ ಗೋರಕ್‌ಪುರ ಕ್ಷೇತ್ರದಿಂದ ಭೀಮ್‌ ಆರ್ಮಿಯ ಚಂದ್ರಶೇಖರ್‌ ಆಜಾದ್‌ ಸ್ಪರ್ಧೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...