Homeಕರ್ನಾಟಕಪಠ್ಯ ಪರಿಷ್ಕರಣೆ; ಕವಿಶೈಲದ ಜಾಥಾ ಪಡೆಯಬೇಕಿದೆ ಗೋಕಾಕ್ ಚಳವಳಿಯ ತೀವ್ರತೆ

ಪಠ್ಯ ಪರಿಷ್ಕರಣೆ; ಕವಿಶೈಲದ ಜಾಥಾ ಪಡೆಯಬೇಕಿದೆ ಗೋಕಾಕ್ ಚಳವಳಿಯ ತೀವ್ರತೆ

- Advertisement -
- Advertisement -

ರೋಹಿತ್ ಚಕ್ರತೀರ್ಥ ನಾಡಗೀತೆಗೆ ಮಾಡಿದ ಅವಮಾನ ರಸಋಷಿ ಕವಿ ಕುವೆಂಪುರವರಿಗೆ ಮಾಡಿದ ಅವಮಾನವಾಗಿ ಕಂಡ ಕೂಡಲೇ ಮಾಜಿ ಮಂತ್ರಿ ಕಿಮ್ಮನೆ ರತ್ನಾಕರ್ ಕವಿಶೈಲದಿಂದ ತೀರ್ಥಹಳ್ಳಿಗೆ ಪ್ರತಿಭಟನಾ
ಜಾಥಾವನ್ನು ಘೋಷಿಸಿದರು. ಜೊತೆಗೆ, ಹಿಂದಿನ ಸರಕಾರದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದ ಅವರಿಗೆ ಪಠ್ಯ ಪುಸ್ತಕ ಪರಿಷ್ಕರಣೆಯು ಒಂದು ಹಗರಣವಾಗಿ ಕಂಡಿತ್ತು. ಮೊದಲು ಅದರ ಕೂಲಂಕುಷ ಅಧ್ಯಯನ ಮಾಡಿದರು. ಸರಕಾರ ಮಾಡಿರುವ ನಯವಂಚನೆಯ ಕೆಲಸಗಳು ಮತ್ತು ಎಡವಟ್ಟುಗಳನ್ನು ಜನರಿಗೆ ಹೇಳುತ್ತಾ ಬಂದರು. ಇನ್ನೊಂದು ಮುಖ್ಯವಾದ ವಿಷಯವೆಂದರೆ ಕಿಮ್ಮನೆ ರತ್ನಾಕರ್ ಕೇವಲ ರಾಜಕಾರಣಿಯಾಗಿರದೆ ಗಂಭೀರ ಅಧ್ಯಯನಶೀಲ ವಿದ್ವಾಂಸರು. ಅವರು ಕರ್ನಾಟಕ ಸರಕಾರ ಈವರೆಗೆ ಮಂಡಿಸಿರುವ ಎಲ್ಲಾ ಬಜೆಟ್‌ಗಳ ಒಳಹೊರಗಗಳನ್ನು ಅಧ್ಯಯನ ಮಾಡಿರುವ ರಾಜಕಾರಣಿ. ಅವರು ಸಾರ್ವಜನಿಕರಿಗೆ ವಿಧಾನಸೌಧದ ಲೈಬ್ರರಿಯಲ್ಲಿ ಸಿಗುತ್ತಿದ್ದುದೇ ಹೆಚ್ಚು. ಮತ್ತೊಂದು ವಿಶೇಷವೆಂದರೆ ಅವರು ಕೋಣಂದೂರು ಲಿಂಗಪ್ಪನವರು ಶಾಸಕರಾಗಿದ್ದ ಅವಧಿಯಲ್ಲಿ ಅವರ ಸಹಾಯಕರಾಗಿದ್ದು. ಆಗಿನಿಂದಲೇ ವಿಧಾನಸೌಧದ ಗ್ರಂಥಾಲಯವನ್ನ ಉಪಯೋಗಿಸಿಕೊಂಡವರು. ಮತ್ತೊಬ್ಬ ಜನನಾಯಕ ಶಾಂತವೇರಿ ಗೋಪಾಲಗೌಡರ ಕಾರ್ಯಕ್ಷೇತ್ರವಾದ ತೀರ್ಥಹಳ್ಳಿಯಿಂದ ಆರಿಸಿಬಂದರು. ದುರಂತವೆಂದರೆ ಗೋಪಾಲಗೌಡರು ಊರಾದ ಆರಗದಿಂದಲೇ ಆರಸಿಬಂದ ಆರಗ ಜ್ಞಾನೇಂದ್ರರ ಮತೀಯವಾದಿ ರಾಜಕಾರಣ ಎದುರಿಸುವುದು ತುಂಬ ದುಸ್ತರವಾಯಿತು. ಕಿಮ್ಮನೆ ನೈತಿಕ ಜವಾಬ್ದಾರಿಯಿಂದ ರಾಜಕಾರಣ ಮಾಡಿದರೆ, ಆರಗ ಮತೀಯ ಮತ್ತು ಒಡೆಯುವ ರಾಜಕಾರಣ ಮಾಡುತ್ತ ಬಂದರು. ಕ್ರಮೇಣ ಗೋಪಾಲಗೌಡರ ತಲೆಮಾರು ಕರಗುತ್ತ ಬಂದರೆ, ಇತ್ತ ಮತೀಯವಾದ ತಲೆ ಎತ್ತುತ್ತಾ ಬಲಗೊಳ್ಳುತ್ತಾ ಬಂತು. ವಿಚಿತ್ರವೆಂದರೆ ಆರಗ ಮತ್ತು ಕಿಮ್ಮನೆ ಇಬ್ಬರೂ ಕುವೆಂಪು ಕಾವ್ಯದ ನೆಲೆಬೀಡಿನಿಂದ ಬಂದವರೇ ಆದರೂ ಕುವೆಂಪು ಅವರಿಗೆ ಬಿಜೆಪಿ ಮಾಡಿರುವ ಅವಮಾನ ಆರಗರಿಗೆ ಇವತ್ತಿಗೂ ಆಕ್ರೋಶ ತರಿಸಿಲ್ಲ. ಕನಿಷ್ಟ ಪಕ್ಷ ಬೇಸರವೂ ಅವರ ಹತ್ತಿರ ಸುಳಿದಂತೆ ಕಂಡಿಲ್ಲ.

ಕಿಮ್ಮನೆ ರತ್ನಾಕರ್

ಕಿಮ್ಮನೆಯವರು ಕುವೆಂಪುರವರ ಸಮಗ್ರ ಸಾಹಿತ್ಯ ಓದಿಕೊಂಡಿರುವುದಲ್ಲದೆ ಕವಿಯ ವಿಚಾರ ಕ್ರಾಂತಿಯನ್ನು ಅಳವಡಿಸಿಕೊಂಡವರು. ಆದ್ದರಿಂದ, ನಾಡಗೀತೆ ತಿರುಚಿ ಆಡಿಕೊಂಡಿದ್ದೂ ಅಲ್ಲದೆ, ಸರ್ವ ಜನಾಂಗದ ಮಕ್ಕಳು ಓದುವಂತಹ ಪಠ್ಯ ತಿರುಚಿದ್ದು ಅವರನ್ನ ಸಹಜವಾಗಿ ಕೆರಳಿಸಿತು. ಕೂಡಲೇ ಈ ಸಂಬಂಧವಾದ ಪ್ರತಿಭಟನೆಯನ್ನು ಮಾಡುವ ತೀರ್ಮಾನ ತೆಗೆದುಕೊಂಡು ಬೆಂಗಳೂರಿಗೆ ಹೋದರು. ಅಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ, ನಿಮ್ಮ ಕಾರ್ಯಕ್ರಮ ಮತ್ತು ಜಾಥಾದಲ್ಲಿ ಸಾಹಿತಿ ಮತ್ತು ಕಲಾವಿದರು ಮುಂಚೂಣಿಯಲ್ಲಿದ್ದು ನೀವು ಹಿನ್ನೆಲೆಯಲ್ಲಿರಿ, ಇದು ಸಾಂಸ್ಕೃತಿಕ ಲೋಕದ ಪ್ರತಿಭಟನೆ ಆದ್ದರಿಂದ ಇಲ್ಲಿ ರಾಜಕಾರಣಿಗಳು ಹಿನ್ನೆಲೆಗೆ ಸರಿದು ಸಾಂಸ್ಕೃತಿಕ ಲೋಕದವರು ಮುಂಚೂಣಿಯಲ್ಲಿರುವಂತೆ ನೋಡಿಕೊಳ್ಳಿ ಎಂದು ಹೇಳಿದರು. ಇದನ್ನು ಒಪ್ಪಿಕೊಂಡು ಬಂದ ಕಿಮ್ಮನೆ 15ನೇ ಜೂನ್ ಮುಂಜಾನೆ ಏಳು ಗಂಟೆಗೆ ಕವಿಶೈಲದಿಂದ ತೀರ್ಥಹಳ್ಳಿಗೆ ಜಾಥಾ ನಿಗದಿಗೊಳಿಸಿದರು. ನಾಡಿನ ಮೂಲೆಮೂಲೆಯಿಂದ ಬರಹಗಾರರು, ಕಲಾವಿದರು, ವಿದ್ವಾಂಸರು ರಾತ್ರಿಯೇ ಬಂದು ಕವಿಶೈಲದಲ್ಲಿ ತಂಗಿದ್ದು, ಜಾಥಾಗೆ ಸಿದ್ಧರಾದರು. ಕವಿಶೈಲ ಒಂದು ರೀತಿ ನಳನಳಿಸುತ್ತಿತ್ತು.

ಕವಿವರ್ಣನೆಯ ಕಗ್ಗಾಡಿನ ನಡುವೆ ತೇಜಸ್ವಿ, ಸಿದಾರ್ಥ, ಕೆ.ಟಿ ಶಿವಪ್ರಸಾದ್ ಮತ್ತು ಅಂದಿನ ಸರಕಾರದ ನೆರವಿನಿಂದ ರಚನೆಗೊಂಡ ಕವಿ ಸಮಾಧಿಯ ಸುತ್ತ ನೆರೆದಿರುವ ಸಸ್ಯರಾಶಿಯ ದೆಸೆಯಿಂದ ಇಲ್ಲೊಂದು ಆಹ್ಲಾದಕರ ತಂಪು ಆವರಿಸಿದೆ. ಇಲ್ಲಿ ಮಾತುಗಳು ಏಕಾಂತವನ್ನು ಕಲಕುವಂತೆ ಕಾಣುವುದರಿಂದ ಯಾರೂ ಮಾತನಾಡುವುದಿಲ್ಲ. ಆದ್ದರಿಂದ ಕವಿ ಸಮಾಧಿಯ ಎದುರು ಸಿಕ್ಕಿದ ಹಂಸಲೇಖ, ಎಸ್. ಜಿ. ಸಿದ್ದರಾಮಯ್ಯ, ದಿನೇಶ್ ಅಮೀನ್ ಮಟ್ಟು, ರುದ್ರಪ್ಪ, ಅಕ್ಷತಾ, ಕಿಮ್ಮನೆ ಅಲ್ಲದೆ ಇನ್ನು ಹತ್ತಾರು ಜನ ಕವಿ ಸಮಾಧಿಗೆ ಪುಷ್ಪಾರ್ಚನೆ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್‌ನ ಮಂಜುನಾಥ್, ದಲಿತ ಸಂಘರ್ಷ ಸಮಿತಿ ಗುರುಮೂರ್ತಿ, ರೈತ ಸಂಘದ ಕೆ.ಟಿ.ಗಂಗಾಧರ್ ಹೀಗೆ ಹಲವು ಸಂಘಟನೆಗಳ ಅಧ್ಯಕ್ಷರು-ಸಂಚಾಲಕರು ಕವಿಸಮಾಧಿಗೆ ನಮಿಸಿ ಹೊರಟಾಗ ಅದೊಂದು ನದಿಮೂಲದ ಸೆಲೆಯಂತೆ ಕಂಡಿತು. ಕವಿಶೈಲದ ಕೆಳಗಿಳಿದು ಬಂದ ಕೂಡಲೇ ಕಾಣುವ ತೇಜಸ್ವಿಯ ಸಮಾಧಿಯ ಸ್ಥಂಭಗಳು ಆಯ್ತು ಹೋಗಿ ಬನ್ನಿ ಎನ್ನುವಂತಿದ್ದವು.

ಕವಿಯ ಶತಮಾನ ಭವನದ ಎದುರು ಎಲ್ಲರೂ ತಿಂಡಿತಿಂದು ಹೊರಟರು. ಕವಿಶೈಲದಿಂದ ತೀರ್ಥಹಳ್ಳಿಗೆ ಹದಿನೆಂಟು ಕಿಲೋಮೀಟರ್ ದೂರವಿದ್ದುದರಿಂದ ಜಾಥ ಅಕ್ಷೋಹಿಣಿ ಸೈನ್ಯದಂತಾಯಿತು. ತೀರ್ಥಹಳ್ಳಿಯ ಸುತ್ತಮುತ್ತಲ ಊರಿನ ಜನರು ಜೊತೆಗೆ ಬಂದು ಸೇರಿಕೊಂಡಿದ್ದಲ್ಲದೆ ನಾಡಿನ ಮೂಲೆಮೂಲೆಯಿಂದ ಬಂದವರೆಲ್ಲಾ ಸೇರುತ್ತಾ ಕೇವಲ 50 ಜನರಿಂದ ಆರಂಭಗೊಂಡ ಜಾಥಾ ಸಾವಿರಾರು ಜನರೊಡಗೂಡಿ ಮೈಲಿಗಟ್ಟಲೆ ವಿಸ್ತರಿಸಿತು. ಕವಿಶೈಲದಿಂದ ದೇವಂಗಿವರೆಗೆ 9 ಕಿಲೋಮೀಟರ್. ಅಲ್ಲಿ ಎಲ್ಲರಿಗೂ ತಿಂಡಿ ಮತ್ತು ಕಾಫಿ ಟೀ ವ್ಯವಸ್ಥೆ ಮಾಡಿದ್ದರು. ಆ ಪ್ರದೇಶಕ್ಕೆ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮತ್ತು ಬಿ.ಕೆ.ಹರಿಪ್ರಸಾದ್ ಬಂದು ಸೇರಿಕೊಂಡಿದ್ದರಿಂದ, ನಡಿಗೆಯವರ ಕಾಲಿಗೆ ಮತ್ತಷ್ಟು ಬಿರುಸು ಬಂತು. ದೇವಂಗಿಯಿಂದ ಹೊರಟವರಿಗೆ ತೀರ್ಥಹಳ್ಳಿ ಬಂದಿದ್ದೇ ತಿಳಿಯಲಿಲ್ಲ. ಕವಿ ಸಿದ್ದರಾಮಯ್ಯ, ದಿನೇಶ್ ಅಮೀನ್ ಮಟ್ಟು ಮತ್ತು ಅಕ್ಷತಾ ಜಾಥಾ ಆರಂಭಿಸಿದಾಗಿನ ನಡಿಗೆಯ ಉತ್ಸಾಹವನ್ನು ತೀರ್ಥಹಳ್ಳಿ ತಲುಪಿದರೂ ಕಳೆದುಕೊಂಡಿರಲಿಲ್ಲ. ಕಿಮ್ಮನೆಯವರು ತೀರ್ಥಹಳ್ಳಿಯಿಂದ ಕವಿಶೈಲಕ್ಕಿರುವ ದೂರ ಮತ್ತು ಜಾಥಾ ಹೊರಡುವ ಸಮಯ ಹಾಗೂ ಚಳವಳಿಗಾರರು ತೀರ್ಥಹಳ್ಳಿ ತಲುಪಿದ ಕೂಡಲೇ ಊಟ ಮಾಡಿ ಸಭಾಂಗಣಕ್ಕೆ ಬರುವ ಸಮಯವನ್ನು ಕರಾರುವಾಕ್ಕಾಗಿ ನಿಗದಿ ಮಾಡಿದ್ದರಿಂದ ಎಲ್ಲವೂ ನಿಗದಿಯಂತೆ ನಡೆಯಿತು.

ಕವಿಶೈಲ

ಸಮಯಕ್ಕೆ ಸರಿಯಾಗಿ ಆಕಾಶ ಮಾರ್ಗದಿಂದ ಇಳಿದು ಬಂದ ಸಿದ್ದರಾಮಯ್ಯ, ತೀರ್ಥಹಳ್ಳಿ ಬಸ್ಟಾಂಡಿನಲ್ಲಿ ಜಾಥಾ ಸೇರಿಕೊಂಡರು. ಆ ಕೂಡಲೇ ಮೈಕಿನವರು ಟಗರು ಹಾಡನ್ನ ಹಾಕಿದರು. ಸಿದ್ದು ಹಿಂಬಾಲಕರು ಕುಣಿದು ಶಿಳ್ಳೆ ಹೊಡೆದರು. ತೀರ್ಥಹಳ್ಳಿ ಪಟ್ಟಣದ ಪಕ್ಕದ ಮೈದಾನದಲ್ಲಿ ಸಭೆ ಏರ್ಪಾಟಾಗಿದ್ದರಿಂದ ಎಲ್ಲಾ ಸಂಘಟನೆಯ ಲೀಡರುಗಳಲ್ಲದೆ, ನಿರಂಜನಾರಾಧ್ಯ, ವೈ.ಎಸ್.ವಿ ದತ್ತ ಬಂದು ವೇದಿಕೆ ಮೇಲೆ ಕುಳಿತಾಗ, ಜಾಥಾದ ರೂವಾರಿ ಕಿಮ್ಮನೆ ಜನರ ಮಧ್ಯೆ ಕುಳಿತಿದ್ದರು. ಅವರನ್ನ ಬಲವಂತವಾಗಿ ವೇದಿಕೆಗೆ ಕರೆದಾಗ ಪ್ರಾಸ್ತಾವಿಕವಾಗಿ ಮಾತನಾಡಿದ ಕಿಮ್ಮನೆ, ಮೊದಲ ಬಾರಿಗೆ ಭಾವುಕರಾದರು. ಜೊತೆಗೆ ಕಾರ್ಯಕ್ರಮಕ್ಕೆ ಯಾರಿಂದಲೂ ಒಂದು ರೂಪಾಯಿ ದೇಣಿಗೆ ಪಡೆಯದೆ ತಾನೇ ಏರ್ಪಾಟು ಮಾಡಿರುವುದರಿಂದ ಸಾಹಿತಿಗಳು-ಕಲಾವಿದರು-ಸಾಮಾಜಿಕ ಕಾರ್ಯಕರ್ತರು ಯಾವುದೇ ಅಂಜಿಕೆಯಿಲ್ಲದೆ ಮುಕ್ತವಾಗಿ ಮಾತನಾಡಬಹುದೆಂದು ಹೇಳಿದರು. ಸುಮಾರು ಮೂರು ಗಂಟೆ ನಡೆದ ಸಮಾರಂಭದಲ್ಲಿ ಎಲ್ಲ ಸಂಘಟನೆಯವರೂ ಮಾತನಾಡಿದರೆ, ನಿರಂಜನಾರಾಧ್ಯರ ಭಾಷಣ ಜಾಥಾ ಜನಗಳನ್ನ ಚಿಂತನೆಗೆ ಹಚ್ಚಿ, ಸರಕಾರ ಮತ್ತು ಪಠ್ಯ ತಿರುಚಿದವರ ಭಂಡತನವನ್ನು ಅನಾವರಣ ಮಾಡಿತು.

ಸಿದ್ದರಾಮಯ್ಯನವರು ಭಾಷಣ ಮಾಡುತ್ತ, ’ಕಿಮ್ಮನೆ ಅತ್ಯಂತ ಸಜ್ಜನ ರಾಜಕಾರಣಿ, ಅವರನ್ನು ಸಂಪುಟದಿಂದ ತೆಗೆದಾಗ ಸರಕಾರದ ಎಲ್ಲ ಸವಲತ್ತನ್ನು ತ್ಯಜಿಸಿ, ಸ್ವಂತ ಕಾರಿನಲ್ಲಿ ಮನೆಗೆ ಹೋದವರು. ನಾನು ಭೇಟಿ ಮಾಡಿ ಬೇಸರವಾಯ್ತೆ ಎಂದು ಕೇಳಿದಾಗ, ಬೇಸರವೇನು ಇಲ್ಲ ಸಾರ್, ಬೇರೆಯವರಿಗೂ ಅನುಕೂಲ ಆಯ್ತಲ್ಲ ಬಿಡಿ ಎಂದರು’ ಎಂದು ಹೇಳಿದ್ದಲ್ಲದೆ, ’ಈ ಸಮಾವೇಶವನ್ನು ಕೂಡ ಅವರು ರಾಜಕಾರಣಕ್ಕಾಗಿ ಏರ್ಪಡಿಸಿದವರಲ್ಲ. ಇದರಿಂದ ತಮ್ಮ ಚುನಾವಣೆಗೆ ಅನುಕೂಲವಾಗುತ್ತದೆಂದು ಅವರು ಭಾವಿಸಿಲ್ಲ’ ಎಂದರು.

ತೀರ್ಥಹಳ್ಳಿ ಕಾರ್ಯಕ್ರಮದ ಸಮಯದಲ್ಲೇ ಬೆಂಗಳೂರಲ್ಲಿ ನಡೆಯುವ ಪ್ರತಿಭಟನೆಗೆ ದೇವೇಗೌಡರು ಬರುತ್ತಾರೆಂಬ ಸುದ್ದಿ ಸಂಚಲನವುಂಟು ಮಾಡಿತು. ಅದರಂತೆ ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ದೇವೆಗೌಡರು, ಗೋಕಾಕ್ ಚಳವಳಿ ಮಾದರಿಯ ಹೋರಾಟದ ಅಗತ್ಯವಿದೆ ಎಂದು ಹೇಳಿದ್ದಾರೆ. ಆದ್ದರಿಂದ ನಾಡಿನ ಜನತೆ ಗೋಕಾಕ್ ಮಾದರಿಯ ಚಳವಳಿಗೆ ತಯಾರಾಗಬೇಕಿದೆ; ಅದೀಗ ಅನಿವಾರ್ಯ.

ಬಿ. ಚಂದ್ರೇಗೌಡ

ಬಿ. ಚಂದ್ರೇಗೌಡ
ಲಂಕೇಶರ ಪತ್ರಿಕೆಯಲ್ಲಿ ಬಯಲುಸೀಮೆಯ ಕಟ್ಟೆ ಪುರಾಣದ ಮೂಲಕ ಕನ್ನಡಿಗರೆಲ್ಲರ ಗಮನಕ್ಕೆ ಬಂದ ಚಂದ್ರೇಗೌಡರು, ನಾಟಕಕಾರರು, ನಟರಷ್ಟೇ ಅಲ್ಲ ವಿಶಿಷ್ಟ ರಾಜಕೀಯ ನೋಟವುಳ್ಳವರೂ ಸಹಾ.ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸದ ಆಗುಹೋಗುಗಳು ಅವರಲ್ಲಿ ದಾಖಲಾಗಿರುವ ಬಗೆಯೂ ವಿಶಿಷ್ಟವೇ..


ಇದನ್ನೂ ಓದಿ: ಪಠ್ಯಪುಸ್ತಕ ರಚನೆಯಲ್ಲಿ ಸಮಿತಿ ಸದಸ್ಯರ ಅಭಿಪ್ರಾಯ ತಿರಸ್ಕರಿಸಿ ಏಕಪಕ್ಷೀಯ ಪಠ್ಯ ರಚಿಸಿದ ಚಕ್ರತೀರ್ಥ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...