ಪೌರತ್ವ ಕಾಯ್ದೆ ಮತ್ತು ಎನ್ಆರ್ಸಿ ವಿರುದ್ಧ ಬಿಹಾರ ಬಂದ್ಗೆ ಕರೆ ನೀಡಿರುವ ಆರ್ಜೆಡಿ ಮುಖಂಡ ತೇಜಶ್ವಿ ಯಾದವ್, ಶಾಂತರೀತಿಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ರಾಜ್ಯದ ಜನರಿಗೆ ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಜನತಾದಳದ ಬೆಂಬಲಿಗರು ಎಮ್ಮೆಗಳನ್ನು ಬಳಸಿ ಹೆದ್ದಾರಿಗಳನ್ನು ನಿರ್ಬಂಧಿಸಿದ್ದಾರೆ. ರೈಲ್ವೆ ಹಳಿಗಳಲ್ಲಿ ಕುಳಿತು ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್ಆರ್ಸಿ) ಯನ್ನು ವಿರೋಧಿಸಿ ಘೋಷಣೆಗಳನ್ನು ಕೂಗಿದ್ದಾರೆ.
“ಸಿಎಎ ಮತ್ತು ಎನ್ಆರ್ಸಿ ವಿರುದ್ಧ ಆರ್ಜೆಡಿ ಡಿಸೆಂಬರ್ 21 ರಂದು ಬಿಹಾರ ಬಂದ್ ಅನ್ನು ಮುನ್ನಡೆಸಲಿದೆ. ಅದರ ಮುನ್ನಾದಿನದಂದು, ಪಕ್ಷವು ಎಲ್ಲಾ ಜಿಲ್ಲೆಗಳಲ್ಲಿ ಪಂಜಿನ ಮೆರವಣಿಗೆಯ ರ್ಯಾಲಿಯನ್ನು ನಡೆಸಿ ಶಾಂತಿಯುತ ಪ್ರತಿಭಟನೆಗೆ ಕರೆ ನೀಡಿತು” ಎಂದು ತೇಜಸ್ವಿ ಯಾದವ್ ಟ್ವೀಟ್ ಮಾಡಿದ್ದಾರೆ.
ದರ್ಬಂಗದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಆರ್ಜೆಡಿಯ ಕಾರ್ಯಕರ್ತರು ಮತ್ತು ಬೆಂಬಲಿಗರು ಟೈರ್ಗಳನ್ನು ಸುಡುವ ಮೂಲಕ ಹೆದ್ದಾರಿಯನ್ನು ನಿರ್ಬಂಧಿಸಿದ್ದಾರೆ. ವೈಶಾಲಿಯಲ್ಲಿ ಆರ್ಜೆಡಿಯ ಕಾರ್ಯಕರ್ತರು ಎಮ್ಮೆಗಳ ಸಹಾಯದಿಂದ ಹೆದ್ದಾರಿಯನ್ನು ನಿರ್ಬಂಧಿಸಿದರು.
ತೇಜಶ್ವಿ ಯಾದವ್ ಉದ್ದೇಶಿತ ಎನ್ಆರ್ಸಿಯನ್ನು ವಿರೋಧಿಸಿದ್ದಾರೆ. ಜನರು ತಮ್ಮ ದಾಖಲೆಗಳನ್ನು ತೋರಿಸಲು ಸಾಧ್ಯವಿಲ್ಲ. ಏಕೆಂದರೆ ಅವರ ಗುರುತಿನ ದಾಖಲೆಗಳು ಆಗಾಗ್ಗೆ ಬರುವ ರಾಜ್ಯದ ಪ್ರವಾಹದಲ್ಲಿ ಕೊಚ್ಚಿ ಹೋಗಿವೆ ಎಂದು ಹೇಳಿದ್ದಾರೆ. “ಬಿಹಾರದಲ್ಲಿ, ಜನರ ದಾಖಲೆಗಳು ಪ್ರವಾಹದಲ್ಲಿ ನಾಶವಾಗಿವೆ. ಅವರು ತಮ್ಮ ಗುರುತನ್ನು ಹೇಗೆ ಸಾಬೀತುಪಡಿಸಬಹುದು? ”ಎಂದು ಯಾದವ್ ಪ್ರಶ್ನಿಸಿದ್ದಾರೆ.
ಭಾರತೀಯ ಜನತಾ ಪಕ್ಷದ ಮಿತ್ರಪಕ್ಷವಾದ ಜೆಡಿಯು ಕೂಡ ಎನ್ಆರ್ಸಿ ಜಾರಿಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರೆ.