ಸುಲಿಗೆ ಮತ್ತು ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿದಂತೆ ಎನ್ಸಿಬಿ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರಿಗೆ ಪೂರ್ವ ಸೂಚನೆ ನೀಡದೆ ಅವರನ್ನು ಬಂಧಿಸುವುದಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಗುರುವಾರ ಬಾಂಬೆ ಹೈಕೋರ್ಟ್ಗೆ ತಿಳಿಸಿದೆ.
ಈ ಹಿನ್ನೆಲೆ ತನ್ನ ವಿರುದ್ಧ ಮತ್ತು ಎನ್ಸಿಬಿ ಅಧಿಕಾರಿಗಳ ವಿರುದ್ಧದ ಸುಲಿಗೆ ದೂರುಗಳ ಕುರಿತು ಮುಂಬೈ ಪೊಲೀಸರು ನಡೆಸುತ್ತಿರುವ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಕೋರಿ ಸಮೀರ್ ವಾಂಖೆಡೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಬಂಧಿಸಿದ ಹೈ-ಪ್ರೊಫೈಲ್ ಕ್ರೂಸ್ ಹಡಗು ಡ್ರಗ್ಸ್ ಪ್ರಕರಣದಲ್ಲಿ ಸಮೀರ್ ವಾಂಖೆಡೆ ವಿರುದ್ಧ ಸುಲಿಗೆ ಆರೋಪ ಕೇಳಿಬಂದಿದೆ. ಅಧಿಕಾರಿ ವಿರುದ್ಧ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಸತತವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ.
ಇದನ್ನೂ ಓದಿ: ವಂಚನೆ ಪ್ರಕರಣ: ಆರ್ಯನ್ ಖಾನ್ ಪ್ರಕರಣದ ಸಾಕ್ಷಿ ಕೆ.ಪಿ ಗೋಸಾವಿ ಬಂಧನ
ಮುಂಬೈನ ಕ್ರೂಸ್ ಹಡಗು ಡ್ರಗ್ಸ್ ಪ್ರಕರಣದ ಸಾಕ್ಷಿಯಾಗಿರುವ ಪ್ರಭಾಕರ್ ಸೈಲ್, ’ಆರ್ಯನ್ ಖಾನ್ ಅವರನ್ನು ಬಿಟ್ಟುಕೊಡಲು ಏಜೆನ್ಸಿ ಅಧಿಕಾರಿಗಳು ಮತ್ತು ಸ್ವತಂತ್ರ ಸಾಕ್ಷಿಗಳು 25 ಕೋಟಿ ರೂಪಾಯಿಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದರು’ ಎಂದು ಆರೋಪ ಮಾಡಿದ್ದಾರೆ. ಇದರಿಂದ ವಾಂಖೆಡೆ ಎನ್ಸಿಬಿ ವಿಜಿಲೆನ್ಸ್ ತನಿಖೆಯನ್ನು ಎದುರಿಸುತ್ತಿದ್ದಾರೆ.
“ನನ್ನ ವಿರುದ್ಧ ವಿಜಿಲೆನ್ಸ್ ತನಿಖೆಗೆ ಆದೇಶಿಸಲಾಗಿದೆ. ನಾನು ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರ ಸರ್ಕಾರದ ಅಧಿಕಾರಿಯಾಗಿದ್ದರೂ ರಾಜ್ಯವು ತನ್ನ ಕರ್ತವ್ಯವನ್ನು ಮೀರುತ್ತಿದೆ. ನಾನು ಎನ್ಸಿಬಿಗೆ ಸಹಕರಿಸುತ್ತೇನೆ, ಆದರೆ ರಾಜ್ಯ ಸರ್ಕಾರವು ಎಸ್ಐಟಿ ರಚಿಸಿದೆ. ರಾಜ್ಯವು ನನ್ನ ಮೇಲೆ ವೈಯಕ್ತಿಕವಾಗಿ ದಾಳಿ ನಡೆಸುತ್ತಿದೆ. ಅವರು ನನ್ನನ್ನು ಯಾವುದೇ ದಿನವಾದರೂ ಬಂಧಿಸುತ್ತಾರೆ. ಆದ್ದರಿಂದ ನನಗೆ ಮಧ್ಯಂತರ ರಕ್ಷಣೆಯ ಅಗತ್ಯವಿದೆ” ಎಂದು ವಾಂಖೆಡೆ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ವಾಂಖೆಡೆ ಪರ ವಕೀಲರು ನ್ಯಾಯಮೂರ್ತಿ ನಿತಿನ್ ಎಂ ಜಮ್ದಾರ್ ಮತ್ತು ನ್ಯಾಯಮೂರ್ತಿ ಸಾರಂಗ್ ವಿ ಕೊತ್ವಾಲ್ ಅವರ ವಿಭಾಗೀಯ ಪೀಠಕ್ಕೆ ಹೇಳಿದ್ದಾರೆ.
ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದ ಚೀಫ್ ಪಬ್ಲಿಕ್ ಪ್ರಾಸಿಕ್ಯೂಟರ್ ಅರುಣಾ ಪೈ, ವಾಂಖೆಡೆ ಅವರ ಅರ್ಜಿ ಅಕಾಲಿಕವಾಗಿದ್ದು, ಅವರ ವಿರುದ್ಧ ಇನ್ನೂ ಯಾವುದೇ ಎಫ್ಐಆರ್ ದಾಖಲಾಗಿಲ್ಲ ಎಂದು ಹೇಳಿದ್ದಾರೆ. “ಕಿರಣ್ ಗೋಸಾವಿ ಸೇರಿದಂತೆ ಖಾಸಗಿ ವ್ಯಕ್ತಿಗಳ ವಿರುದ್ಧ ನಾಲ್ಕು ಅರ್ಜಿಗಳನ್ನು ಸ್ವೀಕರಿಸಿದ್ದೇವೆ. ಇನ್ನು ಪ್ರಾಥಮಿಕ ವಿಚಾರಣೆಯನ್ನು ನಡೆಸುತ್ತಿದ್ದೇವೆ ಮತ್ತು ಯಾವುದೇ ಎಫ್ಐಆರ್ ದಾಖಲಿಸಿಲ್ಲ” ಎಂದು ಪೈ ಸ್ಪಷ್ಟಪಡಿಸಿದ್ದಾರೆ.
ಇತ್ತ ಮತ್ತೆ ಬಿಜೆಪಿ ವಿರುದ್ಧ ಕಿಡಿ ಕಾರಿರುವ ಸಚಿವ ನವಾಬ್ ಮಲಿಕ್, “ಬಿಜೆಪಿ ಕೇಂದ್ರ ತನಿಖಾ ಏಜೆನ್ಸಿಗಳನ್ನು ಬಳಸಿ ಮಹಾರಾಷ್ಟ್ರ, ಮುಂಬೈ , ಬಾಲಿವುಡ್ ಹೆಸರು ಕೆಡೆಸಲು ಬಿಜೆಪಿ ಯತ್ನಿಸುತ್ತಿದೆ. ಈಗಾಗಲೇ ಯೋಗಿ ಆದಿತ್ಯನಾಥ್ ನೋಯಿಡಾದಲ್ಲಿ ಫಿಲಂ ಸಿಟಿ ಕಟ್ಟಲು ಬಯಸಿದ್ದಾರೆ’ ಎಂದು ಆರೋಪಿಸಿದ್ದಾರೆ.
#WATCH | Maharashtra min N Malik says, "I've been saying conspiracy to defame Maharashtra's govt&people is being executed via Wankhede. It's BJP conspiracy.Yogi Maharaj wants a Film City in Noida. It's their misconception if they think 'UPwood' will come up by defaming Bollywood" pic.twitter.com/WI3UdkdaMH
— ANI (@ANI) October 29, 2021
ಇದನ್ನೂ ಓದಿ: ಡ್ರಗ್ಸ್ ಪ್ರಕರಣ: ಮೂರು ವಾರಗಳ ಬಳಿಕ ಆರ್ಯನ್ ಖಾನ್ಗೆ ಜಾಮೀನು ಮಂಜೂರು