Homeಕರ್ನಾಟಕಕಾಲೇಜು ಶಿಕ್ಷಣ ಇಲಾಖೆ ಪುಸ್ತಕ ಖರೀದಿ ಪಟ್ಟಿಯಲ್ಲಿ 'ಸಪ್ನ' ಮೇಲುಗೈ; ಸಣ್ಣ ಪ್ರಕಾಶಕರಿಗೆ ಅನ್ಯಾಯ

ಕಾಲೇಜು ಶಿಕ್ಷಣ ಇಲಾಖೆ ಪುಸ್ತಕ ಖರೀದಿ ಪಟ್ಟಿಯಲ್ಲಿ ‘ಸಪ್ನ’ ಮೇಲುಗೈ; ಸಣ್ಣ ಪ್ರಕಾಶಕರಿಗೆ ಅನ್ಯಾಯ

- Advertisement -
- Advertisement -

ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳಿಗಾಗಿ ‘ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ’ಯು ಟೆಂಡರ್ ಕರೆದು ಖರೀದಿಸಲು ಆಯ್ಕೆ ಮಾಡಿಕೊಂಡಿರುವ ಸುಮಾರು 4400 ಪುಸ್ತಕಗಳ ಪಟ್ಟಿಯಲ್ಲಿ, ರಾಜ್ಯದ ‘ಪ್ರಭಾವಿ ಪ್ರಕಾಶನ’ವೊಂದರ ಶೇ.70ರಷ್ಟು ಪುಸ್ತಕಗಳು ಆಯ್ಕೆಯಾಗುವ ಮೂಲಕ ‘ಮೇಲುಗೈ’ ಸಾಧಿಸಿದೆ. ಶಿಕ್ಷಣ ಇಲಾಖೆಯೆ ನೇರವಾಗಿ ಇ-ಪ್ರಕ್ಯೂರ್‌ಮೆಂಟ್ ಮೂಲಕ ಅವೈಜ್ಞಾನಿಕವಾಗಿ ಪುಸ್ತಕ ಖರೀದಿ ಮಾಡಲು ಮುಂದಾಗಿರುವುದು ‘ಸಣ್ಣ ಪ್ರಕಾಶಕರಿಗೆ’ ಅನ್ಯಾಯವಾಗಲಿದೆ ಎಂಬ ಚರ್ಚೆ ಆರಂಭವಾಗಿದೆ.

ಶಿಕ್ಷಣ ಇಲಾಖೆಯು ಜೂನ್‌ನಲ್ಲಿ ಟೆಂಡರ್ ಕರೆದಿದ್ದು, ಕನ್ನಡ, ಇಂಗ್ಲಿಷ್, ಉರ್ದು ಮತ್ತು ಹಿಂದಿ ಭಾಷೆಯ ಸುಮಾರು 4400 ಟೈಟಲ್‌ನ ಪುಸ್ತಕಗಳನ್ನು (ಪ್ರತಿ ಪುಸ್ತಕಗಳ ಎಷ್ಟು ಪ್ರತಿಗಳನ್ನು ಖರೀದಿಸಲಿದೆ ಎಂಬುದು ತಿಳಿದುಬಂದಿಲ್ಲ) ಪಟ್ಟಿ ಮಾಡಿದೆ. ಇದರಲ್ಲಿ ರಾಜ್ಯದ ಪ್ರಮುಖ ಪ್ರಕಾಶನ ಸಂಸ್ಥೆಯಾದ ‘ಸಪ್ನ’ ಮೇಲುಗೈ ಸಾಧಿಸಿದ್ದರೆ, ‘ಹಿಮಾಲಯ ಪಬ್ಲಿಷಿಂಗ್ ಹೌಸ್ ಮತ್ತು ಎಸ್‌ ಚಾಂದ್ ಪಬ್ಲಿಷಿಂಗ್’ ಎರಡನೇ ಸ್ಥಾನದಲ್ಲಿವೆ. ಸಪ್ನ ಪ್ರಕಾಶನವೊಂದರದ್ದೇ ಶೇ.70 ಕ್ಕಿಂತ ಹೆಚ್ಚು ಪುಸ್ತಕಗಳು ಆಯ್ಕೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ವಿದ್ಯಾರ್ಥಿ ಮತ್ತು ಲೇಖಕರಿಬ್ಬರಿಗೂ ಅನ್ಯಾಯ: 

ಕಾಲೇಜು ಶಿಕ್ಷಣ ಇಲಾಖೆಯ ಈ ಕ್ರಮದಿಂದ ಒಂದು ಕಡೆ ಸಣ್ಣ ಪ್ರಕಾಶನಗಳಿಗೆ ಅನ್ಯಾಯವಾಗುತ್ತಿದ್ದು, ಮತ್ತೊಂದು ಕಡೆ, ಪದವಿ ಕಲಿಯುತ್ತಿರುವ ವಿದ್ಯಾರ್ಥಿಗಳು ಮತ್ತು ಲೇಖಕರಿಗೂ ಅನ್ಯಾಯವಾಗಲಿದೆ ಎನ್ನುತ್ತಾರೆ ಹಲವರು. ಏಕೆಂದರೆ, ಒಂದೇ ಪ್ರಕಾಶನ ಪೂರೈಸುವ ಪುಸ್ತಕಗಳಲ್ಲಿ ‘ವೈವಿಧ್ಯತೆ’ ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ಹೊಸ ಓದಿನ ಅನುಭವ ಸಿಗುವುದಿಲ್ಲ. ಜತೆಗೆ, ಹೊಸ ತಲೆಮಾರಿನ ಲೇಖಕರ ಪುಸ್ತಕಗಳು ವಿದ್ಯಾರ್ಥಿಗಳಿಗೆ ತಲುಪುವುದಿಲ್ಲ.

ಇಲಾಖೆಯ ಈ ಕ್ರಮವು ಅವೈಜ್ಞಾನಿಕವಾಗಿದೆ ಮತ್ತು ಪಾರದರ್ಶಕವಾಗಿಲ್ಲ ಎಂದು ಹಲವರು ಆರೋಪಿಸಿದ್ದಾರೆ. ಏಕೆಂದರೆ, ಪುಸ್ತಕಗಳ ಆಯ್ಕೆಗೆ ಸರ್ಕಾರವು ಆಯ್ಕೆ ಸಮಿತಿಯನ್ನೇ ರಚಿಸಿಲ್ಲ. ಹಿಂದಿನ ವರ್ಷ ಯಾವ ಪುಸ್ತಕಗಳನ್ನು ಪೂರೈಕೆ ಮಾಡಲಾಗಿತ್ತು? ಯಾವ ಭಾಷೆಯ ಎಷ್ಟು ಪುಸ್ತಕಗಳನ್ನು ಖರೀದಿಸಲಾಗಿತ್ತು? ವಿದ್ಯಾರ್ಥಿಗಳು ಮತ್ತು ಬೋಧಕರು ಯಾವುದಾದರೂ ನಿರ್ದಿಷ್ಟ ಪುಸ್ತಗಳಿಗೆ ಬೇಡಿಕೆ ಇಟ್ಟಿದ್ದಾರೆಯೇ? ಕಳೆದ ವರ್ಷ ಕಾಲೇಜುಗಳಿಗೆ ಕಳುಹಿಸಿದ ಪುಸ್ತಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗಿದೆಯೇ ಎಂಬ ಯಾವ ಮುಖ್ಯ ಅಂಶಗಳನ್ನೂ ಪರಿಗಣಿಸದೆ ಪುನಃ ಪುಸ್ತಕಗಳನ್ನು ಖರೀದಿಸಲು ಮುಂದಾಗಿದೆ. ಈ ಬಗ್ಗೆ ರಾಜ್ಯದ ಹಲವು ಪ್ರಕಾಶಕರು ‘ನಾನುಗೌರಿ.ಕಾಮ್‘ ಜತೆಗೆ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ.

‘ಸಪ್ನ’ ಏಕಸ್ವಾಮ್ಯ?

ಪುಸ್ತಕ ಪ್ರಕಾಶನ ಕ್ಷೇತ್ರದಲ್ಲಿ ‘ಸಪ್ನ’ ಪ್ರಕಾಶನ ಸಾಕಷ್ಟು ಹೆಸರು ಮಾಡಿದೆ. ಮುದ್ರಣದ ಜತೆಗೆ, ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಪುಸ್ತಕ ವ್ಯಾಪಾರ ಮಳಿಗೆಗಳನ್ನೂ ನಡೆಸುತ್ತಿದೆ. ತನ್ನದೆ ಮುದ್ರಣವೂ ಸೇರಿದಂತೆ ಇತರೆ ಪ್ರಕಾಶಕರ ಪುಸ್ತಕಗಳನ್ನು ಮಾರಾಟ ಮಾಡುತ್ತದೆ. ಆ ಮೂಲಕ ಸಪ್ನ ಸಂಸ್ಥೆಯು ಮುದ್ರಣ, ಮಾರಾಟ ಮತ್ತು ಸರ್ಕಾರಕ್ಕೆ ಪುಸ್ತಕ ಪೂರೈಕೆಯಲ್ಲೂ ‘ಏಕಸ್ವಾಮ್ಯ’ ಸಾಧಿಸುತ್ತಿದೆ ಎಂದು ಹಲವು ಸಣ್ಣಸಣ್ಣ ಪ್ರಕಾಶಕರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ‘ಧ್ವನಿ ಎತ್ತಿದರೆ ತಮ್ಮ ಪುಸ್ತಕಗಳ ಖರೀದಿಯನ್ನು ನಿರಾಕರಿಸಬಹುದು’ ಎಂಬ ಕಾರಣಕ್ಕೆ, ಪ್ರಕಾಶಕರು ಮತ್ತು ಲೇಖಕರು ಈ ಸಂಸ್ಥೆ ವಿರುದ್ಧ ಮಾತನಾಡಲು ಹೆದರುತ್ತಾರೆ’ ಎಂಬ ಮಾತುಗಳು ಸಹ ಕೇಳಿಬಂದಿದೆ.

ಆಯ್ಕೆ ಸಮಿತಿ ರಚಿಸಬೇಕು: ಪ್ರಕಾಶ್ ಕಂಬತ್ತಳ್ಳಿ

“ಮೊದಲಿಗೆ ಶಿಕ್ಷಣ ಇಲಾಖೆ ಒಂದು ಆಯ್ಕೆ ಸಮಿತಿ ರಚಿಸಬೇಕು; ಅದಕ್ಕಿಂತಲೂ ಮೊದಲು ಪುಸ್ತಕಗಳ ಖರೀದಿಗೆ ‘ಆಹ್ವಾನ’ ಹೊರಡಿಸಬೇಕು” ಎಂದು ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷರಾದ ಪ್ರಕಾಶ್ ಕಂಬತ್ತಳ್ಳಿ ಹೇಳಿದರು.

‘ನಾನುಗೌರಿ.ಕಾಮ್’ ಜತೆಗೆ ಮಾತನಾಡಿದ ಅವರು, “ಆಯ್ಕೆ ಸಮಿತಿ ರಚಿಸುವ ಮೂಲಕ, ಗ್ರಂಥಾಲಯ ಇಲಾಖೆ ಮಾದರಿಯಲ್ಲಿ ಪುಸ್ತಕಗಳಿಗೆ ಬೆಲೆ ನಿಗದಿ ಮಾಡಬೇಕು. ಸಮಿತಿ ಆಯ್ಕೆ ಮಾಡಿದ ಪುಸ್ತಗಳನ್ನು ಮಾತ್ರ ಖರೀದಿ ಮಾಡಬೇಕು. ಆದರೆ, ಇವರು ಯಾವುದೇ ನಿಯಮ ಪಾಲಿಸದೆ, ತಮಗೆ ಬೇಕಾದವರಿಗೆ ಹಂಚಿದ್ದಾರೆ. ಇಡೀ ಕರ್ನಾಟಕದಲ್ಲಿ ಇಬ್ಬರಿಗೆ ಅಥವಾ ಮೂವರಿಗೆ ಮಾತ್ರ ಟೆಂಡರ್ ನೀಡುತ್ತಾರೆ. ಇದರಿಂದ, ಒಂದುಕಡೆ ಪ್ರಕಾಶಕರಿಗೆ ಅನ್ಯಾಯವಾದರೆ, ಮತ್ತೊಂದುಕಡೆ ಶಾಲಾ-ಕಾಲೇಜುಗಳಿಗೆ ಉತ್ತಮ ಪುಸ್ತಕಗಳು ತಲುಪುವುದೇ ಇಲ್ಲ. ಒಬ್ಬ ಲೇಖಕರ 11 ಪುಸ್ತಕಗಳನ್ನು ಆಯ್ಕೆ ಮಾಡಿದ್ದಾರೆ, ಅವರು ಕುವೆಂಪು ಅಲ್ಲ, ಅವರ ಪುಸ್ತಕಗಳ ಆಯ್ಕೆಪಟ್ಟಿಯಲ್ಲಿ ಇಲ್ಲವೇ ಇಲ್ಲ. ಆಯ್ಕೆ ಸಮಿತಿ ಇದ್ದಿದ್ದರೆ ಅಗತ್ಯವಿರುವ ಪುಸ್ತಕಗಳನ್ನು ಮಾತ್ರ ತೆಗೆದುಕೊಳ್ಳುತ್ತಾರೆ. ಆದ್ದರಿಂದ, ಮೊದಲು ಪುಸ್ತಕಗಳನ್ನು ಆಹ್ವಾನಿಸಬೇಕು, ಆಯ್ಕೆ ಸಮಿತಿ ರಚಿಸುವ ಮೂಲಕ ಆಯ್ಕೆ ಮಾಡಿದ ಪುಸ್ತಕಗಳನ್ನು ಮಾತ್ರ ಖರೀದಿ ಮಾಡಬೇಕು” ಎಂದರು.

ಕಟ್ಟಕಡೆಯ ಪ್ರಕಾಶಕರು-ಲೇಖಕರು ಗತಿಯೇನು?

‘ಶೇ. 70ರಷ್ಟು ಅವರೇ (ಸಪ್ನ) ಟೆಂಡರ್ ಪಡೆದುಕೊಂಡರೆ ಉಳಿದ ಕನ್ನಡ ಪ್ರಕಾಶಕರು ಏನು ಮಾಡಬೇಕು? ನಾವೆಲ್ಲಾ ಪುಸ್ತಕ ಮುದ್ರಿಸುವುದಾದರೂ ಯಾಕೆ’ ಎಂದು ಬೆಂಗಳೂರಿನ ‘ಸೃಷ್ಟಿ ಪಬ್ಲಿಕೇಷನ್ಸ್’ ಮಾಲೀಕ ನಾಗೇಶ್ ಬೇಸರ ಹೊರಹಾಕಿದರು.

ನಾನುಗೌರಿ.ಕಾಮ್ ಜತೆಗೆ ಮಾತನಾಡಿದ ಅವರು, “ಬಹುಪಾಲು ಅವಕಾಶ ಪ್ರಬಲ ಪ್ರಕಾಶಕರಿಗೆ ಸಿಗುವುದಾದರೆ, ಬೀದರ್-ಕಲಬುರಗಿಯ ಕಟ್ಟಕಡೆಯ ಪ್ರಕಾಶಕರು, ಲೇಖಕರು ಏನು ಮಾಡಬೇಕು? ಹಿಂದಿನ ವರ್ಷ ಖರೀದಿಸಿದ ಪುಸ್ತಕಗಳನ್ನೇ ಪ್ರತಿ ವರ್ಷ ಕೊಂಡುಕೊಳ್ಳುತ್ತಿದ್ದಾರೆ. ಈ ಉದ್ಯಮದಿಂದ ಲೇಖಕ-ಪ್ರಕಾಶಕರಿಬ್ಬರಿಗೂ ಅನುಕೂಲ ಆಗಬೇಕು, ಪೂರ್ಣಾವಧಿಯಾಗಿ ಬರೆಯುವ ಮತ್ತು ಮುದ್ರಿಸುವ ಹಲವರು ಇದೇ ಕ್ಷೇತ್ರವನ್ನು ನಂಬಿಕೊಂಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆ, ಗ್ರಂಥಾಲಯ, ಆರ್‌ಡಿಪಿಆರ್‌ ಸೇರಿದಂತೆ ಹಲವು ಇಲಾಖೆಗಳಲ್ಲಿ ಇವರೆ ತಿಮಿಂಗಿಲಗಳ ರೀತಿ ಎಲ್ಲವನ್ನೂ ತಿಂದರೆ ಉಳಿದವರು ಏನು ಮಾಡಬೇಕು? ಇವರದ್ದೇ ಪ್ರಕಾಶನದ 500 ಪುಸ್ತಕಗಳು ಪ್ರತಿ ವರ್ಷ ನೀಡುತ್ತಿದ್ದರೆ, ವಿದ್ಯಾರ್ಥಿಗಳಿಗೆ ಹೊಸ ಓದಿನ ಅನುಭವ ಸಿಗುವುದಾದರೂ ಹೇಗೆ? ಕನ್ನಡ ಪ್ರಕಾಶಕರು ನಾವು ಸಂಸ್ಕೃತಿಯ ಭಾಗವಾಗಿ ಕೆಲಸ ಮಾಡುತ್ತಿದ್ದೇವೆ, ಈ ಬೆಳವಣಿಗೆಯಿಂದ ನಮಗೆಲ್ಲಾ ಪಾಪಪ್ರಜ್ಞೆ ಕಾಡುತ್ತಿದೆ” ಎಂದು ತಮ್ಮ ನೋವು ತೋಡಿಕೊಂಡರು.

“ಇವರ ವಿರುದ್ಧ ಧ್ವನಿ ಎತ್ತುವುದು ಅಪಾಯಕಾರಿ ಎನ್ನುವ ಸ್ಥಿತಿಯಲ್ಲಿದ್ದೇವೆ, ಐದು ವರ್ಷದ ಹಿಂದೆ ಸಮಾಜ ಕಲ್ಯಾಣ ಇಲಾಖೆಯ ಟೆಂಡರ್ ಒಂದನ್ನು ನಾನು ನಿಲ್ಲಿಸಿದ್ದೆ, ಇದೇ ಕಾರಣಕ್ಕೆ ಸಪ್ನ ನನ್ನ ಪುಸ್ತಕಗಳನ್ನೇ ಖರೀದಿ ಮಾಡುತ್ತಿಲ್ಲ. ಈ ರೀತಿ ಹಗೆತನ ಸಾಧಿಸುವವರು ಪುಸ್ತಕ ಸೇವೆ ಮಾಡುತ್ತಾರೆ ಎಂದು ನಂಬುದು ಹೇಗೆ? ಅವರು ವಿಷ ಬೀಜ ಬಿತ್ತುತ್ತಿದ್ದಾರೆ. ಇದು ಕನ್ನಡಿಗರಿಗೆ ಮಾಡುತ್ತಿರುವ ದ್ರೋಹ. ಸರ್ಕಾರ ಇದನ್ನು ಗಂಭೀರವಾಗಿ ಗಮನಿಸಬೇಕು. ಆಯ್ಕೆ ಸಮಿತಿ ಅಥವಾ ಬೋಧಕರನ್ನು ಪುಸ್ತಕ ಆಯ್ಕೆಗೆ ನೇಮಿಸಬೇಕು. ಕಾಲೇಜಿನ ವಿಭಾಗವಾರು ಮುಖಸ್ಥರು ಬಂದು ತಮಗೆ ಅಗತ್ಯವಿರುವ ಪುಸ್ತಕಗಳನ್ನು ಖರೀದಿ ಮಾಡಬೇಕು” ಎಂದು ಸಲಹೆ ನೀಡಿದರು.

“ಆದರೆ, ಇಲಾಖೆಯ ಈ ಕ್ರಮದಿಂದ ಕೊಡುವವರು ಮತ್ತು ತೆಗೆದುಕೊಳ್ಳುವವವ ನಡುವೆ ಸಂವಹನವೇ ಇಲ್ಲದಂತಾಗಿದೆ. ಚಿತ್ರದುರ್ಗದ ಯಾವುದೋ ಒಂದು ಕಾಲೇಜಿನಲ್ಲಿ ಒಂದೇ ಟೈಟಲ್‌ನ 40 ಪ್ರತಿಗಳು ಇವೆಯಂತೆ, ಪ್ರತಿ ವರ್ಷ ಐದೈದು ಪ್ರತಿಗಳನ್ನು ಕಳುಹಿಸುತ್ತಾರೆ. ಕಳುಹಿಸಿದ ಪುಸ್ತಕಗಳನ್ನು ಸ್ವೀಕರಿಸಬೇಕು, ಅವರಿಗೆ ಬೇರೆ ಆಯ್ಕೆ ಮತ್ತು ಸ್ವಾತಂತ್ರ್ಯ ಇರುವುದಿಲ್ಲ” ಎಂದು ಪ್ರಕಾಶಕ ನಾಗೇಶ್ ವಿವರಿಸಿದರು.

ಕಾಂಗ್ರೆಸ್ ಸರ್ಕಾರವಾದರೂ ಈ ಕ್ರಮ ಬದಲಿಸಬೇಕಿತ್ತು: ಬಸವರಾಜ ಸೂಳಿಬಾವಿ

ಗದಗದ ‘ಲಡಾಯಿ ಪ್ರಕಾಶನ’ನ ಬಸವರಾಜ್ ಸೂಳಿಬಾವಿ ಮಾತನಾಡಿ, “ಪದವಿ ಕಾಲೇಜುಗಳಿಗೆ ಬೆಂಗಳೂರಿನ ಸಪ್ನ ಮತ್ತು ಬೇರೆ ಪ್ರಕಾಶನಗಳಿಂದ ಪುಸ್ತಕ ತೆಗೆದುಕೊಳ್ಳುವ ಪದ್ಧತಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಅಲ್ಲಿನ ಪ್ರಕಾಶಕರು ಮತ್ತು ಅಧಿಕಾರಿಗಳ ನಡುವಿನ ಹೊಂದಾಣಿಗೆ ಎಲ್ಲ ಕಾಲಕ್ಕೂ ಇದೆ. ಆ ಮೂಲಕ ಅದೊಂದು ಏಕಸ್ವಾಮ್ಯ ಆಗಿದೆ. ಅದು ಸರಿಯಾದ ಕ್ರಮವಲ್ಲ, ಕಾಂಗ್ರೆಸ್‌ ಸರ್ಕಾರ ಬಂದಾದಮೇಲಾದರೂ ಈ ಕ್ರಮ ಬದಲಿಸಬೇಕಿತ್ತು. ಆದರೆ, ಸಾಧ್ಯತೆಗಳನ್ನು ನಾವು ಕಾಣುತ್ತಿಲ್ಲ. ಬದಲಿಗೆ, ಪದವಿ ಕಾಲೇಜುಗಳಿಗೆ ಯಾವ ಪುಸ್ತಕ ಬೇಕು ಎಂಬ ಬಗ್ಗೆ ಒಂದು ತಜ್ಞರ ಸಮಿತಿ ರಚಿಸಬೇಕು. ಆ ಸಮಿತಿ ಶಿಫಾರಸು ಮಾಡಿದ ಪುಸ್ತಕಗಳನ್ನು ಕರ್ನಾಟಕದ ಎಲ್ಲ ವಲಯದ ಪ್ರಕಾಶಕರಿಂದ ತರಿಸಿಕೊಳ್ಳುವ ಪದ್ಧತಿ ಜಾರಿ ಮಾಡಬೇಕು. ಈ ರೀತಿಯ ಯೋಚನೆ ನಮ್ಮ ಅಧಿಕಾರಿಗಳಿಗೆ ಬರುವುದೇ ಇಲ್ಲ. ಹಿಂದಿನ ಹಾಗೆಯೇ ಅವರು ಬೆಂಗಳೂರಿನ ಪ್ರಕಾಶಕರಿಂದ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ; ಇದೊಂದು ರೀತಿಯ ದೊಡ್ಡ ಮಾಫಿಯಾ ಆಗಿದೆ. ಈ ಮಾಫಿಯಾಗಳನ್ನು ಮುರಿದು, ಒಂದು ಹೊಸ ಪದ್ಧತಿಯನ್ನು ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಬೇಕು” ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

ಟೆಂಡರ್ ಕೊಟ್ಟ ಮಾಹಿತಿಯೇ ಸಿಗುವುದಿಲ್ಲ: ಸುಬ್ರಮಣಿ

ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದ ಮಾಲೀಕರಾದ ಸುಬ್ರಮಣಿ ಮಾತನಾಡಿ, “ನಾವು ಹುಬ್ಬಳ್ಳಿಯಲ್ಲೇ ಇರುತ್ತೇವೆ, ಪುಸ್ತಕ ಆಯ್ಕೆ ಮಾಡಿಕೊಳ್ಳವು ದಿನಪತ್ರಿಕೆಗಳ ಸಾರ್ವಜನಿಕ ನೋಟಿಸ್‌ಗಳು ಬೆಂಗಳೂರು ಕೇಂದ್ರಿತವಾಗಿರುತ್ತವೆ. ಮಧ್ಯ ಕರ್ನಾಟಕ ಅಥವಾ ಉತ್ತರ ಕರ್ನಾಟಕದ ಎಡಿಷನ್‌ಗಳಲ್ಲಿ ಪ್ರಕಟ ಆಗುವುದೇ ಇಲ್ಲ. ‘ಪ್ರತಿಷ್ಟಿತ’ ಪ್ರಕಾಶಕರು ಎಂದು ಕರೆಸಿಕೊಳ್ಳುವರು ಅಲ್ಲಿ ಹೊಂದಾಣಿಕೆ ಮೂಲಕ ಆಯ್ಕೆಯಾಗುತ್ತಾರೆ. ಒಂದು ಕೋಟಿ ರೂಪಾಯಿ ಬಜೆಟ್ ಇದ್ದರೆ, ಅದರಲ್ಲಿನ ಬಹುಪಾಲು ಹಣ ಪ್ರಬಲ ಪ್ರಕಾಶಕರಿಗೆ ಹೋಗುತ್ತದೆ. ಉಳಿದ ಹಣದಲ್ಲಿ ಉತ್ತರ ಕರ್ನಾಟಕ ಭಾಗದ ಪ್ರಕಾಶಕರಿಗೆ ಸಿಗುವುದೇ ಇಲ್ಲ. ಪದವಿ ಕಾಲೇಜುಗಳಿಗೆ ಪುಸ್ತಕ ಪೂರೈಸುವ ವಿಚಾರವೇ ನಮಗೆ ಗೊತ್ತಿರಲಿಲ್ಲ” ಎಂದರು.

“ಯಾವುದೇ ಲೈಬ್ರರಿ, ಕಾಲೇಜುಗಳಿಗೆ ಹೋದರೂ ಅವರದ್ದೇ ಪುಸ್ತಕ ಇರುತ್ತವೆ, ಬೆಂಗಳೂರಿನ ಇತರೆ ಪ್ರಕಾಶಕರು ನಮಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡುತ್ತಾರೆ. ನಾವು ಕರ್ನಾಟಕದಲ್ಲೇ ಸೇವೆ ಮಾಡುತ್ತಿದ್ದರೂ, ಸರ್ಕಾರದ ಯಾವುದೇ ಸಹಕಾರವಿಲ್ಲದೆ ಪ್ರಕಾಶನವನ್ನು 1934ರಿಂದಲೂ ನಡೆಸುತ್ತಾ, ಓದುಗರನ್ನೇ ನೆಚ್ಚಿಕೊಂಡು ಪುಸ್ತಕ ಪ್ರಕಟ ಮಾಡುತ್ತಿದ್ದೇವೆ” ಎಂದು ವಿವರಿಸಿದರು.

ಈ ಬಗ್ಗೆ ಸ್ಪಷ್ಟನೆ ಪಡೆಯಲು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ದೂರವಾಣಿಗೆ ಕರೆ ಮಾಡಲಾಯಿತಾದರೂ, ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.

ಇದನ್ನೂ ಓದಿ; ನಿರ್ದೇಶಕರ ಕೊಠಡಿ ಬಿಟ್ಟುಕೊಡದೆ ದಲಿತ ಅಧಿಕಾರಿಗೆ ಕಿರುಕುಳ; ದೂರದರ್ಶನ ಕಚೇರಿ ಕಾರಿಡಾರ್‌ನಲ್ಲಿ ಕುಳಿತು ಕೆಲಸ ಮಾಡುತ್ತಿರುವ ಭಾಗ್ಯವಾನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೊಸ ಕಾರ್ಮಿಕ ಕಾನೂನು ಶ್ರಮಿಕರ ಮೂಲಭೂತ ಹಕ್ಕುಗಳಿಗೆ ಕತ್ತರಿ!

"8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿಶ್ರಾಂತಿ" ಎಂಬ ತತ್ವವು ಸುಲಭವಾಗಿ ದೊರೆತದ್ದಲ್ಲ, ಇದು ದೀರ್ಘಕಾಲದ ಹೋರಾಟ, ತ್ಯಾಗ ಮತ್ತು ಏಕತೆಯ ಫಲವಾಗಿದೆ. ಕೆಲಸದ ಹೊರೆ ಅತಿಯಾಗಿ ಇದ್ದ...

ಮನರೇಗಾ ಯಶೋಗಾಥೆ: ಭಾಗ-1 ದಲಿತರು-ಮಹಿಳೆಯರಿಗೆ ಆರ್ಥಿಕ ಭದ್ರತೆ; ಗ್ರಾಮ ಸಬಲೀಕರಣಕ್ಕೆ ಮನರೇಗಾ ಕೊಟ್ಟ ಕೊಡುಗೆ ಅಪಾರ

2001-2004 ರವರೆಗಿನ ನಿರಂತರ ಬರ ಕರ್ನಾಟಕದ ಬಹುತೇಕ ಹಳ್ಳಿಗಳನ್ನು ಕಂಗಾಲಾಗಿಸಿದ್ದಂತೂ ನಿಜ. ಎಲ್ಲ ಕೆರೆಗಳು ಬತ್ತಿಹೋಗಿದ್ದರಿಂದ ದನಕರುಗಳಿಗೆ ನೀರು ಕುಡಿಸಲೂ ಜನ ಅಲೆದಾಡುತ್ತಿದ್ದರು. ಜನರಿಗೆ ಕುಡಿಯುವ ನೀರು ಪೂರೈಕೆ ಸಹ ಆ ಸಂದರ್ಭದಲ್ಲಿ...

ಮಣಿಪುರ: ಬುಡಕಟ್ಟು ಚರ್ಚ್ ನಾಯಕರ ಮೇಲೆ ಉಗ್ರ ದಾಳಿ:  ಹಲವೆಡೆ ಮೇಣದ ಬತ್ತಿಯ ಜೊತೆಗೆ ಶೋಕ ವ್ಯಕ್ತ ಪಡಿಸಿದ ಕುಕಿ ಸಮುದಾಯ 

ಇಂಫಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಪ್ರಮುಖ ಕುಕಿ ಚರ್ಚ್ ನಾಯಕರನ್ನು ಹೊಂಚು ಹಾಕಿ ದಾಳಿ ನಡೆಸಿ ಕೊಲ್ಲಲಾಗಿದೆ. ಈ ಘಟನೆಯು ರಾಜ್ಯದಲ್ಲಿ ಜನಾಂಗೀಯ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.  ಮೇ 13ರಂದು ಬೆಳಿಗ್ಗೆ ಚುರಾಚಂದ್‌ಪುರನಲ್ಲಿ...

ಗುಜರಾತ್| ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದ ದಲಿತ ವರನ ಮೇಲೆ ಹಲ್ಲೆ

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮಡಿ ಗ್ರಾಮದಲ್ಲಿ ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುತ್ತಿದ್ದ ದಲಿತ ವರನ ಮೇಲೆ ಮೇಲ್ಜಾತಿಯ ಪುರುಷರ ಗುಂಪೊಂದು ಜಾತಿ ನಿಂದನೆ ಮಾಡಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೇ 10 ರಂದು...

ಆತಂಕಕಾರಿಯಾದ ಆನೆ ದಾಳಿ

ಆನೆ ದಾಳಿ ಹಿಂದೆಂದಿಗಿಂತಲೂ ದುಪ್ಪಟ್ಟಾಗಿದೆ. ಅರಣ್ಯಮಂತ್ರಿ ಈಶ್ವರ್ ಖಂಡ್ರೆಯವರ ಪ್ರಕಾರ ಆನೆಗಳ ಸಂಖ್ಯೆ ದುಪ್ಪಟ್ಟಾಗಿದೆ. ಕಾಡಿನ ಪ್ರಮಾಣ ಅಷ್ಟೆ ಇದೆ. ಅಂದರೆ ಕಾಡಿನ ಪ್ರಮಾಣ ಹೆಚ್ಚು ಮಾಡಬೇಕೆಂದರೆ ಮನುಷ್ಯರ ಆವಾಸ ಇಲ್ಲದೆ ಆನೆಗಳಿಗಾಗಿ...

ವೈದ್ಯಕೀಯ ಸೀಟುಗಳ ಹಂಚಿಕೆ ಕೇಂದ್ರೀಕರಣಕ್ಕೆ ದಕ್ಷಿಣದ ವಿರೋಧ; ನೀಟ್ ಪರೀಕ್ಷೆಯನ್ನೇ ರದ್ದುಗೊಳಿಸಲು ಇದು ಸಕಾಲ

ರಾಜ್ಯಪಟ್ಟಿಯಲ್ಲಿದ್ದ ಶಿಕ್ಷಣದ ಹಕ್ಕನ್ನು ನೀಟ್‌ ಹೆಸರಿನಲ್ಲಿ ಕೇಂದ್ರದ ಜಂಟಿ ಪಟ್ಟಿಗೆ ಸೇರಿಸುವ ಒಕ್ಕೂಟ ಸರ್ಕಾರದ ನಿರ್ಧಾರದಿಂದ ದಕ್ಷಿಣದ ರಾಜ್ಯಗಳು ಭಾರಿ ನಷ್ಟ ಅನುಭವಿಸುತ್ತಿವೆ. ಜೊತೆಗೆ, ನೀಟ್ ಪಾಸ್‌ ಮಾಡುವ ಒತ್ತಡ ತಾಳಲಾರದೆ ದೇಶದಾದ್ಯಂತ...

‘ಮತ’ ವ್ಯರ್ಥ ಮಾಡದ ಮತದಾರ: 2026ರಲ್ಲಿ ಕುಸಿಯಿತು ‘ನೋಟಾ’ ಅಬ್ಬರ

2026ರ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಾದ್ಯಂತ ಸುಮಾರು 10.9 ಲಕ್ಷ ಮತಗಳು 'ನೋಟಾ' (ಯಾರಿಗೂ ಮತವಿಲ್ಲ) ಪಾಲಾಗಿವೆ. ಆದರೆ, 2016 ಮತ್ತು 2021ರ ಚುನಾವಣೆಗಳಿಗೆ ಹೋಲಿಸಿದರೆ...

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...