ಜಾತಿ ಆಧಾರಿತ ತಾರತಮ್ಯ ಮಾಡಲಾಗ್ತಿದೆ, ಜಾತಿ ನೋಡಿ ಜೈಲುಗಳಲ್ಲಿ ಖೈದಿಗಳನ್ನು ಪ್ರತ್ಯೇಕಿಸಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಬುಧವಾರ ಕೇಂದ್ರ ಮತ್ತು 11 ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.
ಪತ್ರಕರ್ತೆ ಸುಕನ್ಯಾ ಶಾಂತಾ ಅವರು ಪಿಐಎಲ್ ಸಲ್ಲಿಸಿದ್ದು, ಜೈಲು ಕೈಪಿಡಿಗಳ ಮೂಲಕ ಜಾತಿ ಆಧಾರಿತ ತಾರತಮ್ಯ ನಡೆಸಲಾಗ್ತಿದೆ ಎಂದು ಆರೋಪಿಸಿದ್ದಾರೆ. ಈ ಆರೋಪ 2020ರಲ್ಲಿ ಸುಕನ್ಯಾ ಅವರು ಸಂಗ್ರಹಿಸಿದ ವರದಿಯನ್ನು ಆಧರಿಸಿದೆ.
ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಕೇಂದ್ರದ ಪರವಾಗಿ ನ್ಯಾಯಾಲಯಕ್ಕೆ ಸಹಾಯ ಮಾಡಲು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಕೋರಿದ್ದು”ಇದು ಅತ್ಯಂತ ಗಂಭೀರ ವಿಷಯ” ಎಂದಿದ್ದಾರೆ.
ವಕೀಲ ಎಸ್.ಪ್ರಸನ್ನ ಅವರೊಂದಿಗೆ ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಎಸ್.ಮುರಳೀಧರ್, ಜೈಲುಗಳಲ್ಲಿ ಖೈದಿಯ ಜಾತಿಗೆ ಅನುಗುಣವಾಗಿ ಹೇಗೆ ಕೆಲಸ ಹಂಚಿಕೆ ಮಾಡಲಾಗುತ್ತಿದೆ ಎಂಬುವುದನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ಮಧ್ಯಪ್ರದೇಶ, ದೆಹಲಿ ಮತ್ತು ತಮಿಳುನಾಡು ಜೈಲುಗಳ ಕೆಲವು ನಿದರ್ಶನಗಳನ್ನು ಅರ್ಜಿಯು ಎತ್ತಿ ತೋರಿಸಿದ ಅವರು, ಈ ರಾಜ್ಯಗಳ ಜೈಲುಗಳಲ್ಲಿ ಪ್ರಬಲ ಜಾತಿಯ ಖೈದಿಗಳಿಗೆ ಅಡುಗೆ ಕೆಲಸ ಕೊಟ್ಟರೆ, ಗುಡಿಸುವುದು, ಶೌಚಾಲಯ ಸ್ವಚ್ಛಗೊಳಿಸುವಂತಹ ಕೆಲಸಗಳನ್ನು ನಿರ್ದಿಷ್ಟ ದುರ್ಬಲ ಜಾತಿಯ ಖೈದಿಗಳಿಗೆ ನೀಡಲಾಗ್ತಿದೆ ಎಂದು ಹೇಳಿದ್ದಾರೆ.
ರಾಜ್ಯಗಳ ಜೈಲು ಕೈಪಿಡಿಗಳು ಕೆಲಸ ನೀಡುವಲ್ಲಿ ಮತ್ತು ಬ್ಯಾರಕ್ಗಳ ಹಂಚಿಕೆ ವೇಳೆ ಖೈದಿಗಳನ್ನು ಜಾತಿ ಆಧಾರರ ಮೇಲೆ ಪ್ರತ್ಯೇಖಿಸಲು ಉತ್ತೇಜನ ನೀಡುವಂತಿದೆ. ಅಲ್ಲದೆ, ದುರ್ಬಲ ಜಾತಿಯ ಖೈದಿಗಳಿಂದ ಬಲವಂತದ ದುಡಿಮೆ ಮಾಡಿಸಿಕೊಂಡು ದೌರ್ಜನ್ಯ ಎಸಗುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ತಮಿಳುನಾಡಿನ ಪಾಲಯಂಕೊಟ್ಟೈ ಕೇಂದ್ರ ಕಾರಾಗೃಹದಲ್ಲಿ ತೇವರ್, ನಾಡಾರ್ ಮತ್ತು ಪಲ್ಲರ್ ಖೈದಿಗಳನ್ನು ಅವರ ಜಾತಿಯ ಆಧಾರದ ಮೇಲೆ ವಿವಿಧ ಬ್ಯಾರಕ್ಗಳಲ್ಲಿ ಪ್ರತ್ಯೇಕಿಸಿರುವುದು ಕಾರಾಗೃಗಳಲ್ಲಿ ಜಾತಿ ಆಧಾರಿತ ತಾರತಮ್ಯಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ. ಜೈಲಿನೊಳಗೆ ಕಾಲಿಟ್ಟ ಕೂಡಲೇ ಕೈದಿಗಳು ಇಂತಹ ತಾರತಮ್ಯವನ್ನು ಎದುರಿಸುತ್ತಿದ್ದಾರೆ ಎಂದು ವಕೀಲ ಮುರಳೀಧರ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಜೈಲುಗಳಲ್ಲಿ ಜಾತಿ ಆಧಾರಿತ ಖೈದಿ ಕಾರ್ಮಿಕರ ಪ್ರತ್ಯೇಕತೆಯು ವಸಾಹತುಶಾಹಿ ಭಾರತದ ಅವಶೇಷವಾಗಿದೆ. ಜಾತಿ ಆಧಾರಿತ ಖೈದಿ ಕಾರ್ಮಿಕರ ಹಂಚಿಕೆ ಅವಮಾನಕರ ಮತ್ತು ಅನಾರೋಗ್ಯಕರವಾಗಿದೆ. ಇದು ಘನತೆಯಿಂದ ಬದುಕುವ ಕೈದಿಗಳ ಹಕ್ಕಿನ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
2003ರ ಮಾದರಿ ಜೈಲು ಕೈಪಿಡಿಯು ಭದ್ರತೆ, ಶಿಸ್ತು ಮತ್ತು ಸಾಂಸ್ಥಿಕ ಕಾರ್ಯಕ್ರಮದ ಆಧಾರದ ಮೇಲೆ ವರ್ಗೀಕರಣವನ್ನು ಮಾಡಬೇಕು ಎಂದು ಸ್ಪಷ್ಟವಾಗಿ ಹೇಳುತ್ತದೆ. ಆದರೆ, ಸಾಮಾಜಿಕ-ಆರ್ಥಿಕ ಸ್ಥಿತಿ, ಜಾತಿ ಅಥವಾ ವರ್ಗದ ಆಧಾರದ ಮೇಲೆ ಖೈದಿಗಳನ್ನು ವರ್ಗೀಕರಣ ಮಾಡಬೇಕು ಎಂದಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಅಪರಾಧಿಗಳು ಮತ್ತು ವಿಚಾರಣಾಧೀನ ಕೈದಿಗಳ ಆಧಾರದ ಮೇಲೆ ಜೈಲುಗಳಲ್ಲಿ ಪ್ರತ್ಯೇಕತೆಯ ಬಗ್ಗೆ ತಾನು ಕೇಳಿದ್ದೇನೆ. ಆದರೆ, ಜಾತಿ ಆಧಾರಿತ ಪ್ರತ್ಯೇಕತೆ ಇದ್ದರೆ, ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆಬಿ ಪಾರ್ಧಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, ಉತ್ತರ ಪ್ರದೇಶ, ಒಡಿಶಾ, ಜಾರ್ಖಂಡ್, ಕೇರಳ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಪಂಜಾಬ್ ಮತ್ತು ತಮಿಳುನಾಡು ಸೇರಿದಂತೆ ಒಟ್ಟು 11 ರಾಜ್ಯಗಳಿಗೆ ನೋಟಿಸ್ ಜಾರಿ ಮಾಡಿದೆ. ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.
ಇದನ್ನೂ ಓದಿ : ನಿರ್ಮಲಾ ಸೀತಾರಾಮನ್ ವಜಾಗೊಳಿಸಿ, ಇಡಿ ರಕ್ಷಿಸಿ: IRS ಅಧಿಕಾರಿಯಿಂದ ರಾಷ್ಟ್ರಪತಿಗೆ ಆಗ್ರಹ