ತಮಿಳುನಾಡಿನಲ್ಲಿ 6.5 ಎಕರೆ ಜಮೀನು ಹೊಂದಿರುವ ಇಬ್ಬರು ರೈತರಿಗೆ ಜಾರಿ ನಿರ್ದೇಶನಾಲಯ (ಇಡಿ) ನೋಟಿಸ್ ನೀಡಿರುವ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಮುಂದಿನ ತಿಂಗಳು ನಿವೃತ್ತರಾಗಲಿರುವ ಭಾರತೀಯ ಕಂದಾಯ ಸೇವೆ (ಐಆರ್ಎಸ್) ಅಧಿಕಾರಿಯೊಬ್ಬರು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.
ಚೆನ್ನೈ (ಉತ್ತರ) ಜಿಎಸ್ಟಿ ಮತ್ತು ಸೆಂಟ್ರಲ್ ಎಕ್ಸೈಸ್ನ ಡೆಪ್ಯುಟಿ ಕಮಿಷನರ್ ಬಿ ಬಾಲಮುರುಗನ್ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದು, ನಿರ್ಮಲಾ ಸೀತಾರಾಮನ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಕೋರಿದ್ದಾರೆ.
ರೈತರು ತಮ್ಮ ಜಮೀನು ಕಬಳಿಸುವ ಪ್ರಯತ್ನವನ್ನು ವಿರೋಧಿಸಿದ್ದಕ್ಕೆ ಟಾರ್ಗೆಟ್ ಮಾಡಲಾಗಿದೆ ಎಂದು ಅಧಿಕಾರಿ ಆರೋಪಿಸಿದ್ದಾರೆ.
ಈ ಪ್ರಕರಣವು ಜಾರಿ ನಿರ್ದೇಶನಾಲಯವು ಹೇಗೆ ಬಿಜೆಪಿಯ ವಿಸ್ತೃತ ಅಂಗವಾಗಿದೆ ಎಂಬುವುದನ್ನು ತೋರಿಸುತ್ತದೆ. ವಾಸ್ತವವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಧಿಕಾರ ವಹಿಸಿಕೊಂಡ ನಂತರ ಜಾರಿ ನಿರ್ದೇಶನಾಲಯವನ್ನು ಬಿಜೆಪಿ ನೀತಿ ಜಾರಿ ನಿರ್ದೇಶನಾಲಯವನ್ನಾಗಿ ಪರಿವರ್ತಿಸಿದ್ದಾರೆ ಎಂದು ಬಾಲಮುರುಗನ್ ಹೇಳಿದ್ದಾರೆ.
ಬಡ ದಲಿತ ರೈತರಿಗೆ ನ್ಯಾಯ ಒದಗಿಸಲು ಮತ್ತು ಜಾರಿ ನಿರ್ದೇಶನಾಲಯವನ್ನು ಉಳಿಸಲು ಸೀತಾರಾಮನ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ರಾಷ್ಟ್ರಪತಿಯನ್ನು ಒತ್ತಾಯಿಸಿದ್ದಾರೆ.
ಅಧಿಕಾರಿ ಬಾಲಮುರುಗನ್ ಅವರು ಈ ಹಿಂದೆ ತನ್ನ ಸಾರ್ವಜನಿಕ ಸೇವೆಯಿಂದ ಸ್ವಯಂ ನಿವೃತ್ತಿ (ವಿಆರ್ಎಸ್) ಕೋರಿದ್ದರು. ಆದರೆ, ಹಣಕಾಸು ಇಲಾಖೆ ಅದನ್ನು ಮಾನ್ಯ ಮಾಡಿರಲಿಲ್ಲ. ಇದೇ ಜನವರಿ 31ರಂದು ಅವರು ವಯೋ ನಿವೃತ್ತಿ ಹೊಂದಲಿದ್ದಾರೆ.
2020ರಲ್ಲಿ ತನ್ನ ಸಹೋದ್ಯೋಗಿಗಳ ಮೇಲೆ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಅಧಿಕಾರಿ ಬಾಲಮುರುಗನ್ ಸುದ್ದಿಯಾಗಿದ್ದರು. ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಸಾವಿನ ಬಗ್ಗೆಯೂ ಇವರು ಅನುಮಾನ ವ್ಯಕ್ತಪಡಿಸಿದ್ದರು.
ತಮಿಳುನಾಡಿನ ಸೇಲಂ ಜಿಲ್ಲೆಯ ಅತ್ತೂರಿನ ಕಣ್ಣಯ್ಯನ್ ಮತ್ತು ಕೃಷ್ಣನ್ ಎಂಬ ಇಬ್ಬರು ರೈತರಿಗೆ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಇಡಿ ನೋಟಿಸ್ ನೀಡಿದೆ. ಇವರ ವಿರುದ್ಧ ಎರಡು ಭಾರತೀಯ ಕಾಡೆಮ್ಮೆಗಳ ಸಾವಿಗೆ ಕಾರಣವಾದ ಅಕ್ರಮ ವಿದ್ಯುತ್ ಬೇಲಿಯನ್ನು ನಿರ್ಮಿಸಿದ್ದಕ್ಕಾಗಿ 2017 ರಲ್ಲಿ ವನ್ಯಜೀವಿ (ರಕ್ಷಣೆ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಆದರೆ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅತ್ತೂರಿನ ಸ್ಥಳೀಯ ನ್ಯಾಯಾಲಯವು ಇಬ್ಬರನ್ನು ಖುಲಾಸೆಗೊಳಿಸಿತ್ತು. ವನ್ಯಜೀವಿ (ರಕ್ಷಣೆ) ಕಾಯ್ದೆಯಡಿ ದಾಖಲಿಸಲಾದ ಪ್ರಕರಣಗಳನ್ನು ತನಿಖೆ ಮಾಡಲು ಇಡಿಗೆ ಅಧಿಕಾರವಿದ್ದರೂ, 2021 ರಲ್ಲಿ ರೈತರನ್ನು ಬಿಡುಗಡೆ ಮಾಡುವಂತೆ ನ್ಯಾಯಾಲಯಕ್ಕೆ ಸೂಚಿಸಿದೆ. ಇದಾಗಿ ಎರಡು ವರ್ಷಗಳ ನಂತರ ಇಡಿ ನೋಟಿಸ್ ನೀಡಿದೆ ಎಂದು ಅಧಿಕಾರಿ ಬಾಲಮುರುಗನ್ ಹೇಳಿದ್ದಾರೆ.
ಜೂನ್ 2023ರಲ್ಲಿ ಇಬ್ಬರು ರೈತ ಸಹೋದರರಿಗೆ ಇಡಿ ನೋಟಿಸ್ ಜಾರಿ ಮಾಡಿತ್ತು. ಈ ಸಂಬಂಧ ಸ್ಥಳೀಯ ವಕೀಲರ ಸಹಾಯದಿಂದ ಇಬ್ಬರು ಇಡಿ ಮುಂದೆ ಹಾಜರಾಗಿದ್ದರು. ಇಡಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಚೆನ್ನೈನ ನುಂಗಂಬಾಕ್ಕಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ನಂತರ ಈ ವಿಷಯ ಬಯಲಾಗಿತ್ತು.
ಇದನ್ನೂ ಓದಿ : ಮೋದಿ 3D ಸೆಲ್ಫಿ ಬೂತ್ ನಿರ್ಮಾಣ ವೆಚ್ಚದ ಮಾಹಿತಿ ನೀಡಿದ ಅಧಿಕಾರಿ ದಿಡೀರ್ ವರ್ಗಾವಣೆ