ಹಿರಿಯ ಸಮಾಜವಾದಿ ಹೋರಾಟಗಾರ ಪ.ಮಲ್ಲೇಶ್ರವರು (85) ಹೃದಯಾಘಾತದಿಂದಾಗಿ ಇಂದು ಗುರುವಾರ ಮಧ್ಯಾಹ್ನ ಮೈಸೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೈಸೂರಿನ ರಾಮಕೃಷ್ಣ ನಗರದಲ್ಲಿ ಅವರ ನಿವಾಸದಲ್ಲಿ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದರು. ಆ ನಂತರ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ನಿಧನರಾಗಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
ಸಮಾಜವಾದಿ ನಿಲುವಿನ ಪಲ್ಲೇದ ಮಲ್ಲೇಶ್ರವರು ಕೋಮುವಾದದ ವಿರುದ್ಧ ನಿರಂತರ ಹೋರಾಟ ನಡೆಸಿದ್ದರು. ಸಮಾನ ಶಿಕ್ಷಣಕ್ಕಾಗಿ ದನಿಯೆತ್ತಿದ್ದ ಇವರು ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ವಿಷಯಗಳನ್ನು ಕಲಿಸುವ ಶಾಲಾ-ಕಾಲೇಜು ಸ್ಥಾಪಿಸಿದ್ದರು. ಮೈಸೂರಿನ ಎಲ್ಲಾ ಜನಪರ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಮಲ್ಲೇಶ್ರವರ ನಿಧನಕ್ಕೆ ಹಲವು ಹೋರಾಟಗಾರರು, ಸ್ನೇಹಿತರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. “ಹಿರಿಯ ಸಮಾಜವಾದಿ ಚಿಂತಕ, ಪ್ರಗತಿಪರ ಹೋರಾಟಗಾರ ಮತ್ತು ನನ್ನ ಬಹುಕಾಲದ ಆತ್ಮೀಯ ಸ್ನೇಹಿತ ಪ.ಮಲ್ಲೇಶ್ ಅವರ ಹಠಾತ್ ನಿಧನದಿಂದ ಆಘಾತಕ್ಕೀಡಾಗಿದ್ದೇನೆ. ಅವರ ಸಾವು ಕರ್ನಾಟಕದ ಪಾಲಿಗೆ ತುಂಬಲಾರದ ನಷ್ಟ.
ಮಲ್ಲೇಶ್ ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ” ಎಂದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಮಾಜವಾದಿ ಕನ್ನಡ ಹೋರಾಟಗಾರ ಪ(ಲ್ಲೇದ) ಮಲ್ಲೇಶ್ ಈಗ ಸ್ವಲ್ಪ ಹೊತ್ತಿನ ಹಿಂದೆ ನಿಧನರಾದರೆಂಬ ದೂರವಾಣಿ ಸಂದೇಶಗಳು ಬರುತ್ತಿವೆ. ಮೈಸೂರಿನ ಸಮಾಜವಾದಿ ಹಿರಿಯ ಹೋರಾಟಗಾರ ಮಲ್ಲೇಶ್ ಅವರ ಜೊತೆ ಹೆಚ್ಚಿನವುಗಳಲ್ಲಿ ಭಾಗವಹಿಸಿದ ನೆನಪಿಗಳಲ್ಲಿ ಅವರು ನಮ್ಮೊಂದಿಗೆ ಉಳಿದಿರುತ್ತಾರೆ. ಅವರಿಗೆ ಗೌರವಪೂರ್ವಕ ನಮನಗಳು ಎಂದು ಹೋರಾಟಗಾರರ ಪಂಡಿತಾರಾಧ್ಯರವರು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರ: ಕಥುವಾ ಅತ್ಯಾಚಾರ ಆರೋಪಿಗಳ ಪರ ಪ್ರತಿಭಟನೆ ನಡೆಸಿದ್ದ ವ್ಯಕ್ತಿ ಭಾರತ್ ಜೋಡೋ ಯಾತ್ರೆಯಲ್ಲಿ!