ಕಳೆದ ವರ್ಷ ಶಿವಸೇನೆಯೊಂದಿಗಿನ ಗುದ್ದಾಟದಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿಗೆ ಮತ್ತೊಮ್ಮೆ ಮುಖಭಂಗವಾಗಿದೆ. ಮಹಾರಾಷ್ಟ್ರದ ವಿಧಾನಪರಿಷತ್ತಿನ ಶಿಕ್ಷಕ- ಪದವೀಧರ ಕ್ಷೇತ್ರದ 6 ಸ್ಥಾನಗಳಲ್ಲಿ ಆಡಳಿತರೂಢ ಮಹಾವಿಕಾಸ್ ಅಘಾಡಿ 4 ಸ್ಥಾನಗಳಲ್ಲಿ ಜಯ ಸಾಧಿಸಿದೆ.
ಆಡಳಿತಾರೂಢ ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಒಕ್ಕೂಟ ನಾಲ್ಕು ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಉಳಿದ ಒಂದು ಸ್ಥಾನವನ್ನು ಸ್ವತಂತ್ರ ಅಭ್ಯರ್ಥಿ ಪಡೆದುಕೊಂಡಿದ್ದಾರೆ. ಈ ವಾರದ ಆರಂಭದಲ್ಲಿ ಮತದಾನ ನಡೆದಿತ್ತು.
ಆಡಳಿತರೂಢ ಮಹಾವಿಕಾಸ್ ಅಘಾಡಿ ಮೈತ್ರಿ ನಾಲ್ಕು ಸ್ಥಾನ ಗಳಿಸಿದ್ದರೂ ಕೂಡ, ಶಿವಸೇನೆ ಒಂದೇ ಒಂದು ಸ್ಥಾನವನ್ನು ಗೆದಿಲ್ಲ. ಶಿವಸೇನೆಯ ಏಕೈಕ ಅಭ್ಯರ್ಥಿ ಅಮರಾವತಿಯಲ್ಲಿ ಸ್ಪರ್ಧಿಸಿ ಸೋತಿದ್ದಾರೆ. ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ಎನ್ಸಿಪಿ ತಲಾ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಎರಡರಲ್ಲಿಯೂ ಗೆಲುವು ಸಾಧಿಸಿವೆ.
ಇದನ್ನೂ ಓದಿ: ಮಹಾರಾಷ್ಟ್ರ ಎಂಎಲ್ಸಿ ಚುನಾವಣೆ: 4 ಸ್ಥಾನದಲ್ಲಿ ಮಹಾವಿಕಾಸ್ ಅಘಾಡಿ ಮುನ್ನಡೆ- ಬಿಜೆಪಿಗೆ ಮುಖಭಂಗ
ಬಿಜೆಪಿ ತನ್ನ ಭದ್ರಕೋಟೆಗಳೆಂದು ಗ್ರಹಿಸಿದ್ದ ಪದವೀಧರ ಕ್ಷೇತ್ರಗಳಲ್ಲಿ ಸೋತಿದೆ. ಇದರ ದೊಡ್ಡ ನಷ್ಟವೆಂದರೆ ಪಕ್ಷದ ಭದ್ರಕೋಟೆಯಾದ ನಾಗ್ಪುರದಲ್ಲಿ ಸೋತಿರುವುದು. ಈ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ತಂದೆ ಗಂಗಾಧರ್ ರಾವ್ ಫಡ್ನವೀಸ್ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
1989 ರಲ್ಲಿ ಮೊದಲ ಬಾರಿಗೆ ಈ ಕ್ಷೇತ್ರವನ್ನು ಗೆದ್ದಿದ್ದ ಗಡ್ಕರಿ, 2014 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಮುನ್ನ ಇಲ್ಲಿಂದಲೇ ನಾಲ್ಕು ಬಾರಿ ವಿಜಯ ಸಾಧಿಸಿದ್ದರು. ಆ ಗೆಲುವೇ ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿರುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ದೇವೇಂದ್ರ ಫಡ್ನವೀಸ್ ಮತ್ತು ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಸೇರಿದಂತೆ ಬಿಜೆಪಿ ನಾಯಕರು ಪುಣೆಯಲ್ಲಿ ವ್ಯಾಪಕವಾಗಿ ಪ್ರಚಾರ ನಡೆಸಿದ್ದರು, ಆದರೂ ಅಲ್ಲಿ ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ಅಭ್ಯರ್ಥಿ ಗೆದ್ದಿದ್ದಾರೆ.
ಈ ಕುರಿತು ಮಾತನಾಡಿರುವ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ನಮ್ಮ ಲೆಕ್ಕಾಚಾರಕ್ಕೆ ಅನುಗುಣವಾಗಿ ಫಲಿತಾಂಶ ಬಂದಿಲ್ಲ ಎಂದಿದ್ದಾರೆ.
The results of Maharashtra Legislative Council polls are not as per our expectations. We were expecting more seats but won only one. We miscalculated the combined power of the three parties (Maha Vikas Aghadi): Devendra Fadnavis, BJP leader & former Maharashtra CM pic.twitter.com/KtzuS7OwQn
— ANI (@ANI) December 4, 2020
“ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶಗಳು ನಮ್ಮ ನಿರೀಕ್ಷೆಯಂತೆ ಬಂದಿಲ್ಲ. ನಾವು ಹೆಚ್ಚಿನ ಸ್ಥಾನಗಳನ್ನು ನಿರೀಕ್ಷಿಸುತ್ತಿದ್ದೇವು. ಆದರೆ ಒಂದನ್ನು ಮಾತ್ರ ಗೆದ್ದಿದ್ದೇವೆ. ಮೂರು ಪಕ್ಷಗಳ (ಮಹಾ ವಿಕಾಸ್ ಅಘಾಡಿ) ಒಟ್ಟು ಶಕ್ತಿಯನ್ನು ನಾವು ತಪ್ಪಾಗಿ ಲೆಕ್ಕ ಹಾಕಿದ್ದೇವೆ” ಎಂದು ಫಡ್ನವೀಸ್ ಹೇಳಿದ್ದಾರೆ.
ಸೈದ್ಧಾಂತಿಕವಾಗಿ ವಿರುದ್ಧವಾಗಿರುವ ಪಕ್ಷಗಳ ಮಹಾ ವಿಕಾಸ್ ಅಘಾಡಿಯನ್ನು ಬಿಜೆಪಿ ಅಸ್ಥಿರ ಘಟಕವೆಂದು ಪದೇ ಪದೇ ಅಪಹಾಸ್ಯ ಮಾಡಿತ್ತು. ಈ ಒಕ್ಕೂಟಕ್ಕೆ ಇದು ಮೊದಲ ಚುನಾವಣಾ ಪರೀಕ್ಷೆಯಾಗಿದ್ದು, ಇದರಲ್ಲಿ ಮಹಾ ವಿಕಾಸ್ ಅಘಾಡಿ ಗೆಲುವು ಸಾಧಿಸಿದೆ.