ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ನಿತ್ಯವೂ ಸೈಬರ್ ಸೆಂಟರ್ ಮತ್ತು ಶಾಲೆಗಳಿಗೆ ತಿರುಗುತ್ತಲೇ ಇದ್ದರು.. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಕೂಡ ವಿದ್ಯಾರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಸುವಂತೆ ಸಮಯವನ್ನೂ ನೀಡಿತ್ತು. ಹೀಗಾಗಿ ವಿದ್ಯಾರ್ಥಿಗಳ ಪೋಷಕರು ಪ್ರತಿದಿನ ಎರಡ್ಮೂರು ಬಾರಿಯಾದರೂ ಸೈಬರ್ ಸೆಂಟರ್ ಮತ್ತು ಶಾಲೆಗಳಲ್ಲಿ ವಿಚಾರಿಸುತ್ತಲೇ ಇದ್ದರು. ಕೊನೆ ಗಳಿಗೆಯಲ್ಲಿ ಮೆಟ್ರಿಕ್ ಪೂರ್ವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನೇ ಬಿಜೆಪಿ ಸರ್ಕಾರ ನಿಲ್ಲಿಸಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತ ಪಿ.ವಸಂತಕುಮಾರ್ ವಿದ್ಯಾರ್ಥಿ ವೇತನ ರದ್ದುಗೊಳಿಸಲಾಗಿದೆ ಎಂಬ ಆದೇಶ ನೀಡಿರುವುದು ಪೋಷಕರನ್ನು ಕೆರಳುವಂತೆ ಮಾಡಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರ ಎಡವಟ್ಟುಗಳ ಮೇಲೆ ಎಡವಟ್ಟು ಮಾಡುತ್ತಲೇ ಬರುತ್ತಿದೆ. ನೆರೆ ಪರಿಹಾರ ಹಣ ಬಿಡುಗಡೆ ಮಾಡಿ ನೆರವು ನೀಡಿಲ್ಲ. ಅಭಿವೃದ್ಧಿ ಕಾಮಗಾರಿಗಳಿಗೂ ಹಣ ಬಿಡುಗಡೆ ಮಾಡುತ್ತಿಲ್ಲ. ಈಗ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವೇತನಕ್ಕೂ ಕತ್ತರಿ ಹಾಕಿದೆ. ತಮ್ಮ ಮಗ/ಳ ಭವಿಷ್ಯಕ್ಕೆ ಸ್ವಲ್ಪ ಮಟ್ಟಿನ ದಾರಿಯಾಗಬಹುದು ಎಂಬ ಪೋಷಕರ ಕನಸಿಗೆ ರಾಜ್ಯ ಸರ್ಕಾರ ತಣ್ಣೀರು ಎರಚಿದೆ. ಆರಂಭದಲ್ಲಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಅಕ್ಟೋಬರ್ 31ರವರೆಗೆ ಅವಧಿ ನೀಡಿ ಈಗ ದಿಢೀರ್ ರದ್ದುಪಡಿಸಿದ್ದೇಕೆ ಎಂಬ ಪ್ರಶ್ನೆ ಎದುರಾಗಿದೆ.
ವಿದ್ಯಾರ್ಥಿಗಳ ಪೋಷಕರು ಸೈಬರ್ ಸೆಂಟರ್ನಲ್ಲಿ ಅರ್ಜಿ ಭರ್ತಿ ಮಾಡಲು ಹೋದರೆ ಅಥವಾ ಭರ್ತಿ ಮಾಡಿಸಲು ಹೋದರೆ ಎಸ್.ಎಸ್.ಪಿ ಕರ್ನಾಟಕ ಡಾಟ್ ಕಾಮ್ ಪೋರ್ಟಲ್ ತೆರೆದುಕೊಳ್ಳುತ್ತಿತ್ತು. ವಿದ್ಯಾರ್ಥಿ ಲಾಗಿನ್ ಇಲ್ಲವೆ ಖಾತೆಯನ್ನು ಸೃಜಿಸಿ ಖಾತೆ ಓಪನ್ ಮಾಡಲು ಹೋದರೆ ವಿದ್ಯಾರ್ಥಿಗಳ ಮಾಹಿತಿಯೇ ಸ್ಕ್ರೀನ್ ಮೇಲೆ ಬರುತ್ತಿರಲಿಲ್ಲ. ಯಾಕೆಂದರೆ ಅರ್ಜಿಯನ್ನು ಬಿಟ್ಟಿದ್ದರೆ ತಾನೆ ಅದು ಸ್ಕ್ರೀನ್ ಮೇಲೆ ವಿದ್ಯಾರ್ಥಿಯ ಮಾಹಿತಿ ಬರುವುದು.. ಅದು ಮಾಹಿತಿ ಬರುತ್ತಿರಲಿಲ್ಲ. ಆದರೆ 2018-19ನೇ ಸಾಲಿನ ವಿದ್ಯಾರ್ಥಿ ವೇತನ ಪಡೆದಿರುವುದನ್ನು ಮಾತ್ರ ತೋರಿಸುತ್ತಿತ್ತು.
ಎಸ್.ಎಸ್.ಪಿಯಡಿಯಲ್ಲಿ ಮೆಟ್ರಿಕ್ ಪೂರ್ವ ಅಂದರೆ 1 ರಿಂದ 10ನೇ ತರಗತಿ ಒಳಗಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿತ್ತು. ಈಗ ಅದಕ್ಕೂ ಕುತ್ತು ಬಂದಿದೆ.
ಅಷ್ಟೇ ಅಲ್ಲ ವಿದ್ಯಾರ್ಥಿ ಮುಂದಿನ ತರಗತಿಗೆ ಹೋಗಿರುವ ವಿಷಯವನ್ನೇ ಅಪ್ ಡೇಟ್ ಮಾಡಿರಲಿಲ್ಲ. ಯಾವುದೇ ವಿದ್ಯಾರ್ಥಿಯ ಮಾಹಿತಿ ಹುಡುಕಿದರೆ ವಿದ್ಯಾರ್ಥಿಯ ಹಿಂದಿನ ವರ್ಷದ ಮಾಹಿತಿ ಮತ್ತು ಪಡೆದಿರುವ ಹಣ ಮಾತ್ರ ತೋರಿಸುತ್ತಿತ್ತು. ಹಿಂದುಳಿದ ವರ್ಗಗಳ ವಿದ್ಯಾರ್ಥಿ ವೇತನಕ್ಕಾಗಿ ವಿದ್ಯಾರ್ಥಿಗಳ ಮಾಹಿತಿ ಅಪ್ ಡೇಟ್ ಮಾಡಬೇಕಾಗಿದ್ದ ಇಲಾಖೆ ಮೌನವಹಿಸಿತ್ತು. ಇಲಾಖೆಗೆ ಮೊದಲೇ ಈ ಬಾರಿ ವಿದ್ಯಾರ್ಥಿ ವೇತನ ಬಿಡುಗಡೆಯಾಗುವುದಿಲ್ಲ ಎಂಬುದು ಗೊತ್ತಿತ್ತು. ಹೀಗಾಗಿ ವಿಷಯವನ್ನು ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಮುಚ್ಚಿಟ್ಟು ಅರ್ಜಿ ಮಾತ್ರ ಆಹ್ವಾನಿಸುವ ನಾಟಕ ಮಾಡಿತು ಇಲಾಖೆ. ಇಲಾಖೆಯ ನಾಟಕದ ಪಾತ್ರಧಾರಿಗಳು ಕೊನೆಯವರೆಗೂ ರಂಗಕ್ಕೆ ಬರಲೇ ಇಲ್ಲ. ಆದರೆ ನಾಟಕ ಮಾತ್ರ ಮುಕ್ತಾಯವಾಗಿತ್ತು. ಹಣ ಬರುತ್ತದೆ. ವಿದ್ಯಾರ್ಥಿಗೆ ಯಾವುದಾದರೂ ಉಪಯೋಗಕ್ಕೆ ಬರುತ್ತದೆ ಎಂದು ಕಾಯುತ್ತಿದ್ದವರಿಗೆ ನಿರಾಸೆ ಉಂಟು ಮಾಡಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯವರನ್ನು ವಾರದ ಹಿಂದೆಯೇ ಸಂಪರ್ಕಿಸಲಾಗಿತ್ತು. ವಿದ್ಯಾರ್ಥಿಯ ಮಾಹಿತಿ ಅಪ್ ಡೇಟ್ ಆಗಿಲ್ಲ, ವಿದ್ಯಾರ್ಥಿಯ ಹೊಸ ಖಾತೆಯೂ ಸೃಜನೆಯಾಗುತ್ತಿಲ್ಲ. ವಿದ್ಯಾರ್ಥಿಯ ಲಾಗಿನ್ ಕೂಡ ಆಗುತ್ತಿಲ್ಲ ಎಂದು ಪ್ರಶ್ನೆ ಮಾಡಿದರೆ ಅವರಿಂದ ಬಂದ ಉತ್ತರ ‘ಇನ್ನು ಎರಡು ಮೂರು ದಿನ ಕಾಯಿರಿ. ಅರ್ಜಿಯನ್ನು ಅಪ್ ಲೋಡ್ ಮಾಡಿಲ್ಲ’ ಎಂದು ಭರವಸೆಯನ್ನೂ ನೀಡಿದ್ದರು. ಆದರೆ ಆ ಅಧಿಕಾರಿ ಸುಳ್ಳು ಹೇಳಿದ್ದಾರೆ ಎಂಬುದು ಎರಡು ವಾರದ ನಂತರ ಈಗ ಗೊತ್ತಾಗಿದೆ. ಅಧಿಕಾರಿಗಳು ಹೀಗೆ ಮಾಹಿತಿ ಮುಚ್ಚಿಡುವ ಮೂಲಕ ವಿದ್ಯಾರ್ಥಿ ಮತ್ತು ಪೋಷಕರಿಗೆ ವಂಚನೆ ಮಾಡಿದ್ದಾರೆ. ಮೊದಲೇ ಮಾಹಿತಿ ನೀಡಿದ್ದರೆ ವಿದ್ಯಾರ್ಥಿ ಪೋಷಕರು ಶಾಲೆ, ಸೈಬರ್ ಸೆಂಟರ್ ಅಲೆಯುವುದು ತಪ್ಪುತ್ತಿತ್ತು. ಹೀಗೆ ದಿಢೀರ್ ವಿದ್ಯಾರ್ಥಿ ವೇತನ ರದ್ದುಪಡಿಸಲಾಗಿದೆ ಎಂದರೆ ಹೇಗೆ ಎಂದು ಪೋಷಕರು ಪ್ರಶ್ನಿಸಿದ್ದಾರೆ.
ನೂರು ದಿನಗಳನ್ನು ಪೂರೈಸಿರುವ ಬಿ.ಎಸ್.ಯಡಿಯೂರಪ್ಪ ಸರ್ಕಾರ ಹಿಂದುಳಿದ ವಿದ್ಯಾರ್ಥಿಗಳಿಗೆ ದ್ರೋಹ ಎಸಗಿದೆ. ವಿದ್ಯಾರ್ಥಿ ವಿರೋಧಿ ನೀತಿ ಅನುಸರಿಸಿದೆ. ವಿದ್ಯಾರ್ಥಿಗಳಿಗೆ ಮೊದಲೇ ಮಾಹಿತಿ ನೀಡಿದರೆ ಪ್ರತಿಭಟನೆ ನಡೆಸಬಹುದು ಎಂಬ ಕಾರಣಕ್ಕೆ ಈ ರೀತಿ ಮಾಡಲಾಗಿದೆ. 1 ರಿಂದ 10 ತರಗತಿಯವರೆಗಿನ ಲಕ್ಷಾಂತರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯುವುದರಿಂದ ವಂಚಿತರಾಗುತ್ತಾರೆ. ಬಹುಸಂಖ್ಯಾತ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಮತ್ತು ಇಲಾಖೆ ದ್ರೋಹ ಬಗೆದಿದೆ. ಇದು ವಿದ್ಯಾರ್ಥಿಗಳ ವಿರೋಧಿ ನೀತಿಯಾಗಿದೆ. ವಿದ್ಯಾರ್ಥಿ ವೇತನ ನಿಲ್ಲಿಸುವ ಮೂಲಕ ಸರ್ಕಾರ ಅವರ ಭವಿಷ್ಯಕ್ಕೆ ಕೊಡಲಿ ಪೆಟ್ಟು ನೀಡಿದಂತಾಗಿದೆ. ವಿದ್ಯಾರ್ಥಿ ವೇತನ ನೀಡದಿದ್ದರೆ ಹೋರಾಟ ಸಂಘಟಿಸುತ್ತೇವೆ. ಸೋಮವಾರ ಇಲ್ಲವೇ ಮಂಗಳವಾರ ರಾಜ್ಯಾದ್ಯಂತ ವಿದ್ಯಾರ್ಥಿಗಳನ್ನು ಸಂಘಟಿಸಿ ಹೋರಾಡುತ್ತೇವೆ ಎನ್ನುತ್ತಾರೆ ಭಾರತ ವಿದ್ಯಾರ್ಥಿ ಫೆಡರೇಷನ್ ರಾಜ್ಯಾಧ್ಯಕ್ಷ ಗುರುರಾಜ್ ದೇಸಾಯಿ.
ಹಿಂದುಳಿದ ವರ್ಗಗಳ ಅದೆಷ್ಟೋ ಬಡ ಕುಟುಂಬಗಳು ತಮ್ಮ ಮಕ್ಕಳಿಗೆ ವಿದ್ಯಾರ್ಥಿ ವೇತನದ ಹಣದಿಂದ ಪುಸ್ತಕ, ಬಟ್ಟೆ ಮೊದಲಾದ ಸಾಮಗ್ರಿ ಗಳನ್ನು ಕೊಡಿಸುತ್ತಿದ್ದವು. ಭವಿಷ್ಯ ರೂಪಿಸಿಕೊಳ್ಳಲು ವಿದ್ಯಾರ್ಥಿ ವೇತನ ಅನುಕೂಲವಾಗುತ್ತಿತ್ತು. ಆದರೆ ಈಗ ಸರ್ಕಾರ ಕುಂಟು ನೆಪ ಹೇಳಿಕೊಂಡು ವಿದ್ಯಾರ್ಥಿ ವೇತನ ನಿಲ್ಲಿಸಿರುವುದು ನಾಚಿಕೆಗೇಡಿನ ಸಂಗತಿ.
Sarkar yella nillsli but tarthmma madod matra kandita kett nde bekadre MLA .MP bekadre salary kodli an aagol adn bitt mkll duddu upyoga madod kett nde