Homeಕರೋನಾ ತಲ್ಲಣಕೊರೊನಾಗೆ ಲಸಿಕೆ ವಿಚಾರದಲ್ಲಿ ವಿಜ್ಞಾನಿಗಳನ್ನು ತೆಗಳುವುದು ನಿಲ್ಲಲಿ : ವೆಂಕಿ ರಾಮಕೃಷ್ಣನ್

ಕೊರೊನಾಗೆ ಲಸಿಕೆ ವಿಚಾರದಲ್ಲಿ ವಿಜ್ಞಾನಿಗಳನ್ನು ತೆಗಳುವುದು ನಿಲ್ಲಲಿ : ವೆಂಕಿ ರಾಮಕೃಷ್ಣನ್

- Advertisement -
- Advertisement -

ಮೂಲ: ವೆಂಕಿ ರಾಮಕೃಷ್ಣನ್

ಅನುವಾದ: ಟಿ.ಎಸ್‌ ವೇಣುಗೋಪಾಲ್‌

ಕೆಲವು ದಶಕಗಳ ಹಿಂದೆ ತನ್ನ ಜೀವಸಂಕುಲದ ಗಡಿಯನ್ನು ಜಿಗಿದು ಬಂದಿದ್ದ ವೈರಾಣುವೊಂದು 1981ರಲ್ಲಿ ಮನುಷ್ಯರಲ್ಲಿ ಸೋಂಕು ಹರಡಲು ಪ್ರಾರಂಭಿಸಿತ್ತು. ಅದು ಸ್ಯಾನ್ ಫ್ರಾನ್ಸಿಸ್ಕೋ ಹಾಗೂ ನ್ಯೂಯಾರ್ಕಿನಲ್ಲಿ ಸಲಿಂಗಿಗಳಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿತ್ತು. ಈ ಸೋಂಕಿಗೆ ಮೂಲವನ್ನು ಹುಡುಕುವುದಕ್ಕೆ ಒಂದು ಕಾರ್ಯಪಡೆಯನ್ನು ನೇಮಿಸಲಾಯಿತು. ಏಡ್ಸ್‌ಗೆ ನಿಜವಾದ ಕಾರಣ ಹೆಚ್‌ಐವಿ ವೈರಾಣು ಅಂತ ತಿಳಿಯುವುದಕ್ಕೆ ಹಲವು ವರ್ಷಗಳೇ ಹಿಡಿದವು. ಹಾಗೆಯೇ ಆ ವೈರಾಣುವಿನ ಜಿನೋಮಿನ ಅನುಕ್ರಮಣಿಕೆಯನ್ನು ಪತ್ತೆ ಹಚ್ಚುವುದಕ್ಕೆ ಸಾಕಷ್ಟು ವರ್ಷಗಳು ಬೇಕಾಯಿತು. ಆಮೇಲೆ ಈ ಸೋಂಕೇನು ಮರಣದಂಡನೆ ಆಗಬೇಕಾಗಿಲ್ಲ. ಹಲವು ಔಷಧಿಗಳ ಮಿಶ್ರಣವನ್ನು ಅದರ ಶುಶ್ರೂಷೆಗೆ ಬಳಸಿ ಅದನ್ನು ನಿಯಂತ್ರಿಸಬಹುದು ಅಂತ ಕಂಡುಕೊಳ್ಳುವುದಕ್ಕೆ 15 ವರ್ಷ ಹಿಡಿಯಿತು.

45 ವರ್ಷಗಳ ನಂತರ ವುಹಾನ್‌ನಲ್ಲಿ ಕೋವಿಡ್-19 ವೈರಾಣು ಕಾಣಿಸಿಕೊಂಡಿದೆ. ಆದರೆ ಈಗ ಕೆಲವೇ ವಾರಗಳಲ್ಲಿ ಇದಕ್ಕೆ ಸಾರ್ಸ್‌-ಕೋವ್-2 ಕಾರಣ ಅಂತ ಕಂಡುಹಿಡಿಯುವುದಕ್ಕೆ ಸಾಧ್ಯವಾಗಿದೆ. ಅಷ್ಟೇ ಅಲ್ಲ ಅದರ ಅನುಕ್ರಮಣಿ ಪತ್ತೆ ಹಚ್ಚಲಾಗಿದೆ. ಹಾಗಾಗಿ ಈಗ ಸೋಂಕನ್ನು ಪರೀಕ್ಷಿಸುವುದಕ್ಕೆ ಹೆಚ್ಚು ಸೂಕ್ಷ್ಮವಾದ ವಿಧಾನವನ್ನು ಕಂಡುಹಿಡಿಯಲು ಸಾಧ್ಯವಾಗಿದೆ. ಈಗ ಪ್ರತಿಕಾಯ-ಅಂಟಿಬಾಡೀಸ್‌ಗಾಗಿ ಪರೀಕ್ಷೆ ಮಾಡುವ ಮೂಲಕ ಈ ಮೊದಲೇ ಸೋಂಕು ಬಂದಿದ್ದವರನ್ನು ಗುರುತಿಸಬಹುದು. ವಿಜ್ಞಾನದ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಹೂಡಿಕೆಯಾಗುತ್ತಿರುವುದರಿಂದ ಇಂದು ವಿಜ್ಞಾನ ಆ ಮಟ್ಟಕ್ಕೆ ಬೆಳೆದಿದೆ. ತೀರಾ ಕಡಿಮೆ ಆವಧಿಯಲ್ಲಿ ವೈರಾಣುವಿನ ಬಗ್ಗೆ ಅಷ್ಟೊಂದು ಮಾಹಿತಿಯನ್ನು ಸಂಗ್ರಹಿಸುವುದಕ್ಕೆ ಸಾಧ್ಯವಾಗಿದೆ.
ಆದರೂ ನಮಗೆ ಎಷ್ಟೋ ವಿಷಯಗಳು ಗೊತ್ತಿಲ್ಲ. ಉಳಿದ ವೈರಾಣುವಿಗಿಂತ ಇದು ಏಕೆ ಅಷ್ಟು ಬೇಗ ಹರಡುತ್ತದೆ, ಸೋಂಕಿತರಿಗೆ ರೋಗ ನಿರೋಧಕ ಶಕ್ತಿ ಬರುವುದೇ, ಹಾಗೆ ಬಂದರೆ ಆ ಶಕ್ತಿ ಎಷ್ಟು ಕಾಲ ಉಳಿಯಬಹುದು. ಇದು ಕೆಲವರಲ್ಲಿ ಯಾಕೆ ತೀವ್ರವಾದ ಉರಿಯೂತವನ್ನು ಉಂಟುಮಾಡುತ್ತದೆ, ಕೊನೆಗೆ ಅವರ ಸಾವಿಗೂ ಕಾರಣವಾಗುತ್ತದೆ. ಕೆಲವರು ಮಾತ್ರ ಈ ಸೋಂಕಿನಿಂದ ಯಾಕೆ ಸಾಯುತ್ತಾರೆ? ಹೀಗೆ ಹಲವು ಪ್ರಶ್ನೆಶ್ನೆಗಳು ಹಾಗೆ ಉಳಿದಿವೆ.

ಇಂದು ಇದರ ಲಸಿಕೆಗಾಗಿ ಜಗತ್ತಿನಾದ್ಯಂತ ಹುಡುಕಾಟ ನಡೆದಿದೆ. ಇಷ್ಟೊಂದು ವ್ಯಾಪಕವಾದ ಅನ್ವೇಷಣೆ ಹಿಂದೆಂದೂ ಆಗಿರಲಿಲ್ಲ. ಆದರೆ ಇನ್ನೊಂದು ಸತ್ಯವನ್ನು ಈ ಸಮಯದಲ್ಲಿ ಮರೆಯಬಾರದು. ಏಡ್ಸ್ ಅಥವಾ ಇತರ ಹಲವು ವೈರಾಣುವಿನ ಸೋಂಕಿಗೆ ನಮಗೆ 40ವರ್ಷಗಳ ನಂತರವೂ ಲಸಿಕೆಯನ್ನು ಕಂಡುಹಿಡಿಯುವುದಕ್ಕೆ ಸಾಧ್ಯವಾಗಿಲ್ಲ. ಇದು ಕಟು ವಾಸ್ತವ. ಅದರಿಂದ ಹೊಸ ಔಷಧಿಗಳನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ಹಾಗೂ ಈಗ ಲಭ್ಯವಿರುವ ಔಷಧಿಗಳನ್ನು ಇದಕ್ಕೆ ಬಳಸುವ ಸಾಧ್ಯತೆಯತ್ತ ಪ್ರಯತ್ನಿಸುವುದು ತುಂಬಾ ಮುಖ್ಯ.

ಹೊಸ ಪುರಾವೆಗಳು ಸಿಕ್ಕಾಗ ವಿಜ್ಞಾನಿಗಳು ತಮ್ಮ ತೀರ್ಮಾನಗಳಲ್ಲಿ ಆಗಿರಬಹುದಾದ ತಪ್ಪನ್ನು ಒಪ್ಪಿಕೊಳ್ಳಬೇಕು. ತಪ್ಪಿನಿಂದ ಹೊಸಪಾಠವನ್ನು ಕಲಿಯುವುದಕ್ಕೆ ತಯಾರಿರಬೇಕು. ವಿಜ್ಞಾನದ ಒಳಗೇ ಅಂತಹ ಅನಿಶ್ಚಿತತೆ ಇದೆ. ನಿಧಾನವಾಗಿ ಪುರಾವೆಗಳು ಸೇರಿಕೊಳ್ಳುತ್ತಾ ಹೋದಂತೆ ಮತ್ತು ಸಮುದಾಯದ ಪರಿಶೀಲನೆಗೆ ಒಳಗಾದಂತೆ ತಪ್ಪುಗಳು ಕಮ್ಮಿಯಾಗುತ್ತಾ, ಅಂತಿಮವಾಗಿ ಒಂದು ಒಮ್ಮತ ಮೂಡುತ್ತದೆ. ವಿಜ್ಞಾನದಲ್ಲಿ ಈ ಕ್ರಮ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಾ ಬಂದಿದೆ. ಆದರೆ ಈಗ ಎಲ್ಲರ ದೃಷ್ಟಿಯೂ ವಿಜ್ಞಾನದ ಮೇಲಿದೆ. ಎಲ್ಲರಿಗೂ ತಕ್ಷಣ ಪರಿಹಾರ ಬೇಕು. ಹಾಗಾಗಿ ವಿಜ್ಞಾನದ ಮೇಲೆ ಒತ್ತಡ ಹೆಚ್ಚಾಗಿದೆ. ಅವರ ನಿರ್ಧಾರಗಳಲ್ಲಿ ಅನಿಶ್ಚತತೆ ಅನಿವಾರ್ಯ. ಅದನ್ನು ವಿಜ್ಞಾನಿಗಳು ಸ್ಪಷ್ಟಪಡಿಸಬೇಕು. ಸ್ವಾಭಾವಿಕವಾಗಿಯೇ ಇಷ್ಟೊಂದು ಅನಿಶ್ಚಿತತೆ ಇದ್ದಾಗ ಮುಂದಿರುವ ಸಾಧ್ಯತೆಗಳ ಬಗ್ಗೆ ಒಂದು ಒಮ್ಮತದ ತೀರ್ಮಾನ ಸಾಧ್ಯವಿಲ್ಲ. ಹಲವು ವಿಭಿನ್ನವಾದ ತೀರ್ಮಾನಗಳು ಸಾಧ್ಯ. ಇದು ವಾಸ್ತವ, ಇದನ್ನು ಎಲ್ಲರೂ ಒಪ್ಪಿಕೊಳ್ಳಬೇಕು.

ತೀರ್ಮಾನಗಳಲ್ಲಿನ ವೈವಿಧ್ಯತೆ ಅವರು ಕೊಡುವ ಸಲಹೆಯನ್ನೂ ಪ್ರಭಾವಿಸುತ್ತದೆ. ಹೊಸ ಪುರಾವೆಗಳು ಸಿಕ್ಕಾಗ ತಮ್ಮ ನಿರ್ಧಾರದ ತಪ್ಪುಗಳು ಅವರಿಗೆ ಕಾಣಿಸಬಹುದು. ತಮ್ಮ ತಪ್ಪನ್ನು ಅವರು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು. ಮತ್ತು ಅದರಿಂದ ಕಲಿಯಲು ಸಿದ್ದರಿರಬೇಕು. ಸಾಮಾನ್ಯವಾಗಿ ಹೆಚ್ಚಿನ ಉದ್ದಿಮೆಗಳಲ್ಲಿ ಒಂದು ಗುಂಪಾಗಿ ನಿರ್ಧಾರ ತೆಗೆದುಕೊಳ್ಳುವ ಪರಿಪಾಠ ಇರುತ್ತದೆ. ಅದು ತಪ್ಪಬೇಕು. ನಿರ್ಧಾರಗಳಿಗೆ ಜೋತುಬೀಳಬಾರದು. ಆಂತರಿಕ ಚರ್ಚೆ ತುಂಬಾ ಸಕ್ರಿಯವಾಗಿ ನಡೆಯಬೇಕು. ತಮ್ಮ ಪುರಾವೆಗಳು ಮತ್ತು ನಿರ್ಧಾರಗಳ ಬಗ್ಗೆ ಮುಕ್ತವಾಗಿರಬೇಕು. ಆಗಷ್ಟೇ ಅವುಗಳನ್ನು ಪರಿಶೀಲಿಸುವುದಕ್ಕೆ ಸಾಧ್ಯವಾಗುತ್ತದೆ. ಆದರೆ ತೀರಾ ಕ್ಲಿಷ್ಟವಾದ ನೀತಿಗಳಿಗೆ ಸಂಬಂಧಿಸಿದ ನಿರ್ಧಾರಗಳಿಗೆ ವಿಜ್ಞಾನಿಗಳನ್ನು ಬಲಿಪಶುಗಳನ್ನಾಗಿ ಮಾಡಬಾರದು. ತಾವು ಬಲಿಪಶುಗಳಾಗುತ್ತೇವೆ ಎಂಬ ಭಾವನೆ ವಿಜ್ಞಾನಿಗಳಲ್ಲಿ ಬಂದರೆ ಅವರಿಗೆ ಮುಕ್ತವಾಗಿ ಸಲಹೆಗಳನ್ನು ಕೊಡುವುದಕ್ಕೆ ಸಾಧ್ಯವಾಗುವುದಿಲ್ಲ.

ಅಷ್ಟೇ ಅಲ್ಲ ವೈಜ್ಞಾನಿಕ ಸಲಹೆಗಳನ್ನು ಒಂದು ನೀತಿಯಾಗಿ ರೂಪಿಸುವುದಕ್ಕೆ ಹಲವು ದಾರಿಗಳು ಸಾಧ್ಯ. ಜಗತ್ತಿನಾದ್ಯಂತ ಕೋವಿಡ್-19ಕ್ಕೆ ಕಾಣುತ್ತಿರುವ ವಿಭಿನ್ನ ಪ್ರತಿಕ್ರಿಯೆಗಳನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ. ಯಾಕೆಂದರೆ ನೀತಿಗಳನ್ನು ರೂಪಿಸುವುದರಲ್ಲಿ ವೈಜ್ಞಾನಿಕ ಸಲಹೆಗಳು ಒಂದು ಅಂಶ ಅಷ್ಟೆ. ವಿಜ್ಞಾನದ ಸಂದಿಗ್ಧತೆಯನ್ನು ಸರ್ಕಾರ ಒಪ್ಪಿಕೊಳ್ಳಬೇಕು. ಅಷ್ಟೇ ಅಲ್ಲ ಅವುಗಳ ಸಾಧ್ಯತೆಯನ್ನೂ ಸೇರಿದಂತೆ, ಇತರ ಹಲವು ಪ್ರಾಯೋಗಿಕ ಅಂಶಗಳನ್ನು ಗಮನಿಸಬೇಕು. ಈ ಎಲ್ಲಾ ವಿಷಯಗಳಲ್ಲೂ ಅವರು ವಿಜ್ಞಾನಿಗಳಿಂದ ಒಂದು ನಿಖರವಾದ ಹಾಗೂ ನಿಶ್ಚಿತವಾದ ಉತ್ತರ ನಿರೀಕ್ಷಿಸುತ್ತಾರೆ. ಆಗ ಅವರು “ನಾವು ವಿಜ್ಞಾನವನ್ನು ಅನುಸರಿಸುತ್ತಿದ್ದೇವೆ” ಅಂದುಕೊಳ್ಳಬಹುದು ಅಥವಾ ಹೇಳಿಕೊಳ್ಳಬಹುದು. ಆದರೆ ಬಯಸಿದ್ದು ಆಗಬೇಕಾಗಿಲ್ಲ.
ನಾವು ಏನು ಮಾಡುತ್ತಿದ್ದೇವೆ ಎಂಬುದನ್ನು ನಿರಂತರವಾಗಿ ಹೊಸದಾಗಿ ಸಿಗುತ್ತಿರುವ ಪುರಾವೆಗಳ ಬೆಳಕಿನಲ್ಲಿ ಪರಿಶೀಲಿಸುತ್ತಾ ಹೋಗುತ್ತಿರಬೇಕು. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಇದು ತುಂಬಾ ಮುಖ್ಯ.

ನಮ್ಮ ನಿಲುವು ಸರಿ ಅಲ್ಲ ಅಂತ ತಿಳಿದ ತಕ್ಷಣ, ಕಚ್ಚಾಡುತ್ತಾ, ಬೇರೆಯವರ ಮೇಲೆ ಆರೋಪ ಹೊರಿಸುತ್ತಾ ಪ್ರಶಸ್ತವಾದ ಸಮಯ ಹಾಳುಮಾಡುತ್ತಾ ಹೋಗಬಾರದು. ಅದರಲ್ಲೂ ಇಂತಹ ಆನಿಶ್ಚಿತತೆಯ ಸಂದರ್ಭದಲ್ಲಿ ವಿಜ್ಞಾನಿಗಳನ್ನು, ಅವರು ನೀಡಿರುವ ಸಲಹೆಗಳಿಗಾಗಿ ಟೀಕಿಸುವುದು ಸರಿಯಲ್ಲ. ಹಾಗೆ ಟೀಕಿಸುವುದು, ವಿಜ್ಞಾನ ಹೇಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ಅವರಿಗಿರುವ ಮೂಲಭೂತ ತಪ್ಪುಕಲ್ಪನೆಯನ್ನು ತೋರಿಸುತ್ತದೆ.

ಇತ್ತೀಚೆಗೆ ಮಂತ್ರಿಯೊಬ್ಬರು ವಿಜ್ಞಾನಿಗಳನ್ನು ಟೀಕಿಸಿದಾಗ ಉಳಿದವರು ಆ ಟೀಕೆಯಿಂದ ದೂರ ಉಳಿದದ್ದು ಸಮಾಧಾನದ ಸಂಗತಿ. ಇಂತಹ ಪರಿಸ್ಥಿತಿಯಲ್ಲಿ ಅದು ವಿಜ್ಞಾನಿಗಳಲ್ಲಿ ವಿಶ್ವಾಸವನ್ನು ಮೂಡಿಸುತ್ತದೆೆ.
ನಾವು ಭಿನ್ನವಾದ ಅಥವಾ ಇನ್ನೂ ಸುಧಾರಿತ ಹಾದಿಯನ್ನು ಹಿಡಿಯಬೇಕು ಅಂತ ಪುರವೆಗಳು ಸೂಚಿಸಿದರೆ ಸರ್ಕಾರ ಹಾಗೂ ವಿಜ್ಞಾನಿಗಳು ಅದನ್ನು ಒಪ್ಪಿಕೊಳ್ಳಬೇಕು. ಅದಕ್ಕೆ ಸರಿಯಾಗಿ ಕಾರ್ಯ-ನೀತಿಯನ್ನು ಬದಲಾಯಿಸಿಕೊಳ್ಳಬೇಕು. ಜನರಿಗೆ ಅದನ್ನು ವಿವರಿಸಬೇಕು. ಜನರು ಅರ್ಥ ಮಾಡಿಕೊಳ್ಳುತ್ತಾರೆ. ಹಿಂದೆ ಲಭ್ಯವಿದ್ದ ಮಾಹಿತಿಯನ್ನು ಆಧರಿಸಿ ಹಾಗೆ ಮಾಡಲಾಗಿತ್ತು. ಅದು ಆ ಪರಿಸ್ಥಿತಿಯಲ್ಲಿ ತೆಗೆದುಕೊಳ್ಳಬಹುದಾಗಿದ್ದ ಒಳ್ಳೆಯ ನಿರ್ಧಾರ ಅನ್ನುವುದು ಜನರಿಗೂ ಅರ್ಥವಾಗುತ್ತದೆ. ಆದರೆ ಅದು ತಪ್ಪು ಎಂದು ಗೊತ್ತಾದಾಗ ಆದಷ್ಟು ಬೇಗ ಅದನ್ನು ಸರಿಪಡಿಸಬೇಕು.

ವೈರಾಣುವಿನ ಪಿಡುಗು ನಮ್ಮ ಎದುರಿಗಿನ ಅತ್ಯಂತ ದೊಡ್ಡ ಅಪಾಯ ಅನ್ನುವುದು ಗೊತ್ತಿತ್ತು. ಅದನ್ನು ಎದುರಿಸಲು ತಾನು ಸಂಪೂರ್ಣ ತಯಾರಾಗಿದ್ದೇನೆ ಅಂತ ಇಂಗ್ಲೆಂಡ್ ಭಾವಿಸಿತ್ತು. ಆದರೆ ನಿಜವಾಗಿ ಸಿದ್ಧವಾಗಿರಲಿಲ್ಲ. ಅದು ಸ್ಪಷ್ಟ. ನಾವು ಈ ಪಿಡುಗಿಗೆ ಸಂಬಂಧಿಸಿದಂತೆ ನಮ್ಮ ಸೋಲು ಗೆಲುವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಅದರಿಂದ ಪಾಠ ಕಲಿಯಬೇಕು. ಆಗ ಮುಂದೆ ಅಂತಹ ಪಿಡುಗು ಮತ್ತೆ ಬಂದಾಗ- ಬರುವುದು ಅನಿವಾರ್ಯ- ಅದನ್ನು ಎದುರಿಸಲು ಹೆಚ್ಚು ಪರಿಣಾಮಕಾರಿಯಾಗಿ ಸಿದ್ದತೆ ಮಾಡಿಕೊಳ್ಳಬಹುದು.

ಕೃಪೆ: ದಿ ಗಾರ್ಡಿಯನ್

(ಲೇಖಕರು ರಸಾಯನಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ ವಿಜೇತರು)


ಇದನ್ನೂ ಓದಿ: ಇದು ಅತ್ಯಾಚಾರದ ಕಥೆಯಲ್ಲ, ವಸಾಹತುವಾಗಿಯೇ ಉಳಿದಿರುವ ‘ಈ ಭಾರತ’ದ ಕಥನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...