Homeಮುಖಪುಟಸುಪ್ರೀಂ ಕೋರ್ಟ್ ಮುಸ್ಲಿಂ ಪಕ್ಷಪಾತಿಯಾಗಿದೆ: ದ್ವೇಷಭಾಷಣಕಾರ ಚವ್ಹಾಂಕೆ ಬೆಂಬಲಿಗರ ಆರೋಪ

ಸುಪ್ರೀಂ ಕೋರ್ಟ್ ಮುಸ್ಲಿಂ ಪಕ್ಷಪಾತಿಯಾಗಿದೆ: ದ್ವೇಷಭಾಷಣಕಾರ ಚವ್ಹಾಂಕೆ ಬೆಂಬಲಿಗರ ಆರೋಪ

- Advertisement -
- Advertisement -

ಮುಸ್ಲಿಂ ವಿರುದ್ಧ ದ್ವೇಷ ಭಾಷಣ ಮಾಡುತ್ತಾ ಕೋಮುಗಲಭೆ ಸೃಷ್ಟಿಸಲು ಯತ್ನಿಸುವ ಸುದರ್ಶನ್ ಟಿವಿ ಮುಖ್ಯಸ್ಥ ಮತ್ತು ಹಿಂದುತ್ವ ಮುಖಂಡ ಸುರೇಶ್ ಚವ್ಹಾಂಕೆ ಬೆಂಬಲಿಗರು ಸುಪ್ರೀಂಕೋರ್ಟ್ ಬಗ್ಗೆ ಹಗುರವಾಗಿ ಮಾತನಾಡಿದ್ದು, “ಸರ್ವೊಚ್ಚ ನ್ಯಾಯಾಲಯ ಮುಸ್ಲಿಮರ ಪಕ್ಷಪಾತಿಯಾಗಿದೆ” ಎಂದು ಆರೋಪಿಸಿದ್ದಾರೆ.

ಫೆಬ್ರವರಿ 5ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನೇಕ ಹಿಂದುತ್ವ ಮುಖಂಡರು ಹಾಗೂ ಚವ್ಹಾಂಕೆ ಬೆಂಬಲಿಗರು ಪಾಲ್ಗೊಂಡಿದ್ದರು. ಚವ್ಹಾಂಕೆ ವಿರುದ್ಧ ಸುಪ್ರೀಂ ಕೋರ್ಟ್ ಜರುಗಿಸಿರುವ ಕ್ರಮಗಳನ್ನು ಖಂಡಿಸಿದ್ದಾರೆ.

2021ರಲ್ಲಿ ಸಾರ್ವಜನಿಕವಾಗಿ ಮಾತನಾಡುತ್ತಾ, ಹಿಂದೂ ರಾಷ್ಟ್ರ ನಿರ್ಮಾಣ ಮತ್ತು ಮುಸ್ಲಿಮವರನ್ನು ಕೊಲ್ಲುವ ಕುರಿತು ಚವ್ಹಾಂಕೆ ಹೇಳಿದ್ದನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. “ಅನಗತ್ಯ ಕಾನೂನು ಕಿರುಕುಳ ನೀಡುತ್ತಿರುವ ಕೋರ್ಟ್‌ ಮುಸ್ಲಿಮರ ಪರವಾಗಿದೆ” ಎಂದು ಚವ್ಹಾಂಕೆ ಬೆಂಬಲಿಗರು ದೂರಿದ್ದಾರೆ.

2002ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಸ್ಥಾಪಿಸಿದ ‘ಹಿಂದೂ ಯುವ ವಾಹಿನಿ’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚವ್ಹಾಂಕೆ ಮಾಡಿದ ದ್ವೇಷ ಭಾಷಣವನ್ನು ಕಳೆದ ವರ್ಷದ ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್ ಟೀಕಿಸಿತ್ತು.

“ಕಾರ್ಯಕ್ರಮದಲ್ಲಿ ಯಾವುದೇ ದ್ವೇಷ ಭಾಷಣವನ್ನು ಮಾಡಲಾಗಿಲ್ಲ” ಎಂದು ನ್ಯಾಯಾಲಯಕ್ಕೆ ದೆಹಲಿ ಪೊಲೀಸರು ಸಲ್ಲಿಸಿದ ಅಫಿಡವಿಟ್ ನೋಡಿ ಕೋರ್ಟ್ ಗರಂ ಆಗಿತ್ತು.

“ತಮ್ಮ ಸಮುದಾಯದ ನೈತಿಕತೆಯನ್ನು ಉಳಿಸಲು ಪ್ರೇರಣೆಗೊಂಡಿರುವ ಜನರಿಂದ ಸಭೆ ನಡೆಸಲಾಗಿದೆ” ಎಂದು ಪೊಲೀಸರು ಆರಂಭದಲ್ಲಿ ಹೇಳಿದ್ದರು.

ಸಮಾರಂಭದಲ್ಲಿ ‘ಪ್ರಮಾಣ ವಚನ’ ಬೋಧಿಸಿದ್ದ ಚವ್ಹಾಂಕೆ, “ಬೇಕಾದರೆ, ನಾವು ಅದಕ್ಕಾಗಿ ಕೊಲ್ಲುತ್ತೇವೆ. ಆದರೆ ನಾವು ಯಾವುದೇ ಬೆಲೆ ತೆತ್ತಾದರೂ ದೇಶವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುತ್ತೇವೆ. ನಮ್ಮ ಪೂರ್ವಜರು ಮತ್ತು ದೇವತೆಗಳು ನಮ್ಮ ಗುರಿಯನ್ನು ಸಾಧಿಸುವ ಶಕ್ತಿಯನ್ನು ನಮಗೆ ನೀಡಲಿ” ಎಂದಿದ್ದರು.

ಭಾನುವಾರ (ಫೆಬ್ರವರಿ 5) ನಡೆದ ಕಾರ್ಯಕ್ರಮದಲ್ಲಿ ಚವ್ಹಾಂಕೆಯವರ ಬೆಂಬಲಿಗರು (ಅವರಲ್ಲಿ ಅನೇಕ ಹಿಂದುತ್ವ ನಾಯಕರು) ಮಾತನಾಡುತ್ತಾ, “ಚವ್ಹಾಂಕೆ ಮಾಡಿರುವ ಭಾಷಣದಲ್ಲಿ ಯಾವುದೇ ತಪ್ಪಿಲ್ಲ. ಸುಪ್ರೀಂ ಕೋರ್ಟ್ ಮುಸ್ಲಿಂ ತುಷ್ಟೀಕರಣ ಮಾಡುತ್ತಿದೆ. ಹಿಂದೂಗಳ ಮೇಲೆ ಕಠಿಣವಾಗಿ ವರ್ತಿಸಿದರೆ, ಇತರ ಧರ್ಮಗಳೊಂದಿಗೆ ಕೋರ್ಟ್ ಉದಾರವಾಗಿದೆ” ಎಂದು ಆರೋಪಿಸಿದ್ದಾರೆ.

ಭಾಷಣಕಾರರಲ್ಲಿ ಒಬ್ಬರಾದ ರಾಷ್ಟ್ರ ನಿರ್ಮಾಣ ಪಕ್ಷದ ಅಧ್ಯಕ್ಷ, ನಿವೃತ್ತ ಐಪಿಎಸ್ ಅಧಿಕಾರಿ ಆನಂದ್ ಕುಮಾರ್, “ತನಿಖೆಯನ್ನು ನಡೆ‌ಸಲಾಗಿದ್ದು ಚವ್ಹಾಂಕೆ ಅವರ ವಿರುದ್ಧ ಯಾವುದೇ ಅಪರಾಧಗಳು ಕಂಡು ಬಂದಿಲ್ಲ ಎಂದು ಪೊಲೀಸರು ಹೇಳಿದರೂ ಕೋರ್ಟ್ ಸುಮ್ಮನೆ ಬಿಟ್ಟಿಲ್ಲ. ನೀವು ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಅಥವಾ ಯಾರನ್ನಾದರೂ ಬಂಧಿಸುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ಪೊಲೀಸರನ್ನು ಕೇಳುತ್ತಿರುವುದು ವಿಚಿತ್ರವಾಗಿದೆ” ಎಂದಿದ್ದಾರೆ.

ಸುಪ್ರೀಂ ಕೋರ್ಟ್ ಇಸ್ಲಾಂ ಪರವಾಗಿ ಪಕ್ಷಪಾತಿಯಾಗಿದೆ ಎಂದು ಅಭಿಪ್ರಾಯ ತಾಳಿದ ಅವರು, “ಮುಸ್ಲಿಂ ತುಷ್ಟೀಕರಣದಲ್ಲಿ ಸುಪ್ರೀಂ ಕೋರ್ಟ್ ತೊಡಗಿದೆ” ಎಂದು ಹೇಳಿದ್ದಾರೆ.

ರಾಗಿಣಿ ತಿವಾರಿ, ಸೂರಜ್ ಪಾಲ್ ಅಮ್ಮು, ಆಸ್ತಾ ಮಾ ಮತ್ತು ಅನ್ನಪೂರ್ಣ ಭಾರತಿ ಅವರಂತಹ ಹಿಂದುತ್ವ ಮುಖಂಡರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಚವ್ಹಾಂಕೆ ಇಲ್ಲಿ ಇರಲಿಲ್ಲ. ಸರಿಸುಮಾರು 300-400 ಜನ ಸೇರಿದ್ದರು, ಅದರಲ್ಲಿ ಮೂರನೇ ಒಂದು ಭಾಗದಷ್ಟು ಶಾಲಾ ವಿದ್ಯಾರ್ಥಿಗಳಿದ್ದರು ಎಂದು ‘ದಿ ವೈರ್‌’ ವರದಿ ಮಾಡಿದೆ.

“ನಮ್ಮ ಗುರುಗಳು (ಶಿಕ್ಷಕರು) ನಮ್ಮನ್ನು ಇಲ್ಲಿಗೆ ಕರೆತಂದಿದ್ದಾರೆ. ನಾವು ಏಕೆ ಬಂದಿದ್ದೇವೆ ಎಂಬ ಕಾರಣ ನನಗೆ ತಿಳಿದಿಲ್ಲ” ಎಂದು ಹರಿಯಾಣದ ಪಲ್ವಾಲ್‌ನಿಂದ ಬಂದಿದ್ದ 8ನೇ ತರಗತಿಯ ವಿದ್ಯಾರ್ಥಿಯೊಬ್ಬ ಹೇಳಿದ್ದಾನೆ.

ಸುಪ್ರೀಂ ಕೋರ್ಟ್‌ನ ವಾಗ್ದಂಡನೆಯ ನಂತರ, ದೆಹಲಿ ಪೊಲೀಸರು ಸುರೇಶ್ ಚವ್ಹಾಂಕೆ ವಿರುದ್ಧ ಮೇ 4, 2022 ರಂದು ಐಪಿಸಿ ಸೆಕ್ಷನ್ 153A (ಧರ್ಮ, ಜನಾಂಗ, ಜನ್ಮ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 295A (ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದ ಕೃತ್ಯಗಳು)  298 (ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಲು ಪದಗಳನ್ನು ಉಚ್ಚರಿಸುವುದು) ಮತ್ತು 34 (ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಜನವರಿ 10, 2023ರಂದು ಸುಪ್ರೀಂ ಕೋರ್ಟ್ ಮತ್ತೊಮ್ಮೆ ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತ್ತು. “ಕಳೆದ ವರ್ಷ ಎಫ್‌ಐಆರ್ ದಾಖಲಿಸಿದ ಎಂಟು ತಿಂಗಳ ನಂತರವೂ ಯಾವುದೇ ಬಂಧನವಿಲ್ಲ ಮಾಡಲಾಗಿಲ್ಲ, ಯಾವುದೇ ಆರೋಪಪಟ್ಟಿ ಸಲ್ಲಿಸಿಲ್ಲ, ಪ್ರಕರಣದಲ್ಲಿ ಪ್ರಗತಿ ಸಾಧಿಸಿಲ್ಲ” ಎಂದು ಉಲ್ಲೇಖಿಸಿತ್ತು.

ಜಂತರ್ ಮಂತರ್ ಕಾರ್ಯಕ್ರಮಕ್ಕೂ ಮುನ್ನ ಚವ್ಹಾಂಕೆ ಅವರು ಟ್ವಿಟರ್‌ನಲ್ಲಿ “ಹಿಂದೂ ರಾಷ್ಟ್ರದ ಪ್ರಮಾಣ ವಚನ ಸ್ವೀಕಾರ ಮಾಡುವುದು ಹೇಗೆ ಅಪರಾಧ?” ಎಂಬ ಪೋಸ್ಟರ್ ಅನ್ನು ಟ್ವೀಟ್ ಮಾಡಿದ್ದರು.

ಕಾರ್ಯಕ್ರಮದ ನಂತರ ಅವರು ಮತ್ತಷ್ಟು ಟ್ವೀಟ್‌ಗಳನ್ನು ಮಾಡಿದ್ದು, ಕಾರ್ಯಕ್ರಮದಲ್ಲಿ ಮಕ್ಕಳು ಪಾಲ್ಗೊಂಡಿರುವುದು ಸೇರಿದಂತೆ ಕೆಲವು ದೃಶ್ಯಗಳನ್ನು ಹಂಚಿಕೊಂಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...