Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ರೋಣ-ಗಜೇಂದ್ರಗಡ: ಬರಡು ಊರಿನ ಬೀದಿಯಲ್ಲಿ ಬಿಜೆಪಿ ‘ಬಂಡಿ’ ಬದಲಾದೀತೆ?!

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ರೋಣ-ಗಜೇಂದ್ರಗಡ: ಬರಡು ಊರಿನ ಬೀದಿಯಲ್ಲಿ ಬಿಜೆಪಿ ‘ಬಂಡಿ’ ಬದಲಾದೀತೆ?!

- Advertisement -
- Advertisement -

ಒಳನಾಡು ಬೆಳವಲದ ರೋಣ ಮತ್ತು ಗಜೇಂದ್ರಗಡ ಸುಡುಬಿಸಿಲಿನ ಬಯಲು ಭೂಮಿ. ಐತಿಹಾಸಿಕ, ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಜನಪದೀಯ ಸಿರಿ-ಸಂಪ್ರದಾಯದ ಸೀಮೆ. ಪ್ರಾಕೃತಿಕ ಸೊಬಗು-ಸಂಪತ್ತಿನ ಗುಡ್ಡ-ಬೆಟ್ಟ, ಕೋಟೆ-ಕೊತ್ತಲು, ಸ್ಮಾರಕಗಳಿಗೆ ಹೆಸರಾದ ಈ ಎರಡೂ ತಾಲೂಕುಗಳಿಗೆ ಪ್ರಗತಿ-ಅಭಿವೃದ್ಧಿಯ ಪರಿಚಯ ಮಾತ್ರ ಈವರೆಗೆ ಆಗಿಲ್ಲ! ಸರಕಾರಿ ಕಡತಗಳಲ್ಲೇ ಹಿಂದುಳಿದ ಪ್ರದೇಶವೆಂದು ದಾಖಲಾಗಿರುವ ರೋಣ ವಿಧಾನಸಭಾ ಕ್ಷೇತ್ರದ ಗೋಳು ಹೇಳತೀರದು. ಸಾಮಾಜಿಕ-ಆರ್ಥಿಕ-ರಾಜಕೀಯ-ಶೈಕ್ಷಣಿಕ- ಹೀಗೆ ಅಷ್ಟೂ ಕ್ಷೇತ್ರಗಳಲ್ಲಿ ತೀರಾ ಹಿಂದುಳಿದು ಭಣಗುಡುವ ಒಣ ಪ್ರದೇಶವಿದು; ಮಳೆ ಬಂದರಷ್ಟೇ ಬದುಕು; ಸ್ವಾತಂತ್ರ್ಯ ಬಂದು ಏಳೂವರೆ ದಶಕ ಕಳೆದರೂ ಕ್ಷೇತ್ರ ಬರಡಾಗಿಯೇ ಉಳಿದಿದೆ! ಕನಿಷ್ಠ ಮೂಲಭೂತ ಸೌಕರ್ಯಕ್ಕಾಗಿ ಜನರು ಹೋರಾಡುತ್ತಲೇ ಇದ್ದಾರೆ! ಕ್ಷೇತ್ರದ ದುಃಸ್ಥಿತಿ ಹೇಗಿದೆಯೆಂದರೆ, ಪ್ರತಿದಿನ ಕುಡಿಯಲು ಬೇಕಾದ ಒಂದು ಬಿಂದಿಗೆ ನೀರನ್ನೂ ಖಾಸಗಿಯವರಿಂದ ಕಾಸುಕೊಟ್ಟು ಕೊಂಡುಕೊಳ್ಳಬೇಕು! ದೂರದರ್ಶಿತ್ವದ ನಾಯಕತ್ವ ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಇಡೀ ಕ್ಷೇತ್ರ ದೊಡ್ಡ ಮರುಭೂಮಿಯಂತಾಗಿದೆ.

ಹಾಗಂತ ರಾಜಕೀಯ ಮತ್ತು ಜಾತಿ ಪ್ರತಿಷ್ಠೆಯ ಮೇಲಾಟದಲ್ಲೇನು ಕ್ಷೇತ್ರ ಹಿಂದುಳಿದಿಲ್ಲ. ಲಿಂಗಾಯತ ಏಕಸ್ವಾಮ್ಯದ ರಾಜಕೀಯ-ಸಾಮಾಜಿಕ ವ್ಯವಸ್ಥೆ ಮಡುಗಟ್ಟಿರುವ ರೋಣ-ಗಜೇಂದ್ರಗಡದಲ್ಲಿ ಲಿಂಗಾಯತೇತರರಿಗೆ ಸಿಕ್ಕ ಅವಕಾಶ-ಸ್ಥಾನಮಾನ ಅಷ್ಟಕ್ಕಷ್ಟೆ! ಎರಡೂ ತಾಲೂಕುಗಳಲ್ಲಿ ಪಾಳೆಗಾರಿ “ಪರಾಕ್ರಮ” ಕಂಡೂಕಾಣದಂತೆ ನಾಜೂಕಾಗಿ ನಡೆಯುತ್ತಿದೆ. ರೋಣ ವಿಧಾನಸಭಾ ಕ್ಷೇತ್ರದ ರಾಜಕೀಯ ಇತಿಹಾಸದ ಪುಟಗಳನ್ನೊಮ್ಮೆ ತಿರುವಿಹಾಕಿದರೆ ಜನಸಾಮಾನ್ಯರ ಅಸಹಾಯಕತೆ ಮತ್ತು ಜಾತಿ ಪ್ರತಿಷ್ಠೆಗಳನ್ನು ಬಂಡವಾಳ ಮಾಡಿಕೊಂಡು ದರ್ಬಾರು ನಡೆಸಿರುವುದು ವೇದ್ಯವಾಗುತ್ತದೆ. ಇಲ್ಲಿಂದ ಎಂಪಿ, ಎಮ್ಮೆಲ್ಲೆ ಆದವರ್‍ಯಾರೂ ತಮ್ಮನ್ನು ಅತ್ಯುನ್ನತ ಸ್ಥಾನಕ್ಕೇರಿಸಿದವರ ಋಣ ತೀರಿಸುವ ಕನಿಷ್ಠ ಕೃತಜ್ಞತೆ ತೋರಿಸಿದ ಕುರುಹುಗಳ್ಯಾವುದೂ ಕಾಣಿಸದು.

ಇತಿಹಾಸ-ಸಂಸ್ಕೃತಿ

ಐತಿಹಾಸಿಕ ಪ್ರಾಮುಖ್ಯತೆಯ ರೋಣವನ್ನು ಪ್ರಾಚೀನ ಕಾಲದಲ್ಲಿ “ದ್ರೋಣಪುರ” ಎಂದು ಕರೆಯಲಾಗುತ್ತಿತ್ತು; ಅದು ಕಾಲಕ್ರಮೇಣ ಅಪಭ್ರಂಶವಾಗಿ ರೋಣಪುರವಾಯಿತು. ನಂತರ ರೂಢಿಯಲ್ಲಿ ಪುರ ಕಳಚಿಕೊಂಡು ಕೇವಲ ’ರೋಣ’ವಷ್ಟೆ ಉಳಿಯಿತೆಂಬ ತರ್ಕಗಳಿವೆ. ರೋಣದಲ್ಲಿರುವ ಪ್ರಾಚೀನ ದೇವಾಲಯಗಳನ್ನು ಮಹಾಭಾರತದ ಯೋಧ-ಪುರೋಹಿತ ದ್ರೋಣಾಚಾರ್ಯ ನಿರ್ಮಿಸಿದ್ದೆಂಬ ನಂಬಿಕೆಯಿದೆ. ತಾಲೂಕಿನ ಸೂಡಿ ಕಲ್ಯಾಣಿ ಚಾಲುಕ್ಯರ ಆಳ್ವಿವಿಕೆಗೆ ಒಳಪಟ್ಟಿದ್ದರೆ, ಬೆಳವಣಿಕಿ ಗಂಗರ ಹಿಡಿತದಲ್ಲಿತ್ತು. ಗಂಗರ ಅಧೀನ ಮಹಾಮಂಡಳಿಕ ಬ್ಯೂಟಯ್ಯನನ್ನು ಗಂಗವಾಡಿ-96,000, ಬೆಳ್ವೋಳ-300 ಮತ್ತು ಪುಲಿಗೆರೆ-300 ಪ್ರಾಂತ್ಯಗಳ ಗವರ್ನರ್ ಎಂದು ಕ್ರಿ.ಶ.864ರ ರೋಣ ಶಾಸನಗಳು ಪರಿಚಯಿಸುತ್ತವೆ. ಈ ಗ್ರಾಮದ ಅಸ್ತಿತ್ವವನ್ನು ಕಲ್ಯಾಣಿ ರಾಜವಂಶಗಳ ರಾಷ್ಟ್ರಕೂಟ ಮತ್ತು ಚಾಲುಕ್ಯರ ಧರ್ಮಗ್ರಂಥಗಳು 17 ಮತ್ತು 18ನೇ ಶತಮಾನದ ತನಕ ತೋರಿಸುತ್ತವೆ.

ಗುಡ್ಡಗಳಿಂದ ಆವೃತ್ತವಾಗಿರುವ ಪುಟ್ಟ ಪಟ್ಟಣ ಗಜೇಂದ್ರಗಡ ಬೆಟ್ಟ ಸಾಲು ಮತ್ತು ಗಿರಿಧಾಮಗಳಿಗೆ ಹೆಸರುವಾಸಿಯಾಗಿದೆ; ಚಲನಚಿತ್ರ ತಯಾರಕರ ಆಕರ್ಷಕ ತಾಣವಿದು. ಗಜೇಂದ್ರ (ಆನೆ) ಹಾಗೂ ಗಡ (ಕೋಟೆ) ಶಬ್ದಗಳ ಸಂಯೋಜನೆಯಿಂದ ಗಜೇಂದ್ರಗಡ ಹೆಸರು ವ್ಯುತ್ಪತ್ತಿಯಾಗಿದೆ ಎನ್ನಲಾಗುತ್ತಿದೆ. ನಗರದ ಪಕ್ಷಿ ನೋಟ ಆನೆ ಆಕಾರದಂತಿರುವುದು ಗಜೇಂದ್ರಗಡ ಸ್ಥಳನಾಮ ಪುರಾಣಕ್ಕೆ ಆಧಾರವಾಗಿದೆ. ಸ್ಥಳೀಯರು ಸಾಮಾನ್ಯವಾಗಿ ಇದನ್ನು “ಗಡ” ಎಂದೇ ಕರೆಯುತ್ತಾರೆ. ಮರಾಠರ ಪೇಶ್ವೆಗಳ ಆಡಳಿತಕ್ಕೆ ಒಳಪಟ್ಟಿದ್ದ ಗಜೇಂದ್ರಗಡವನ್ನು ಪ್ರಥಮ ಪೇಶ್ವೆ ದೊರೆ ಬಾಳಾಜಿ ಬಾಜಿರಾವ್ ಆಳಿದ್ದರು. ಪೇಶ್ವೆಗಳು ಕೋಟೆ, ದೇವಾಲಯ ಮತ್ತು ಸ್ಮಾರಕಗಳಿಗೆ ಆದ್ಯತೆ ಕೊಟ್ಟಿದ್ದರು.

ಛತ್ರಪತಿ ಶಿವಾಜಿ ಸತತ 15 ವರ್ಷಗಳ ಪರಿಶ್ರಮದಿಂದ 800 ಅಡಿ ಎತ್ತರದ ಗುಡ್ಡದ ಮೇಲೆ ಸುಸಜ್ಜಿತ-ಸುಭದ್ರ ಕೋಟೆ ಮತ್ತು ಪಟ್ಟಣ ನಿರ್ಮಾಣ ಮಾಡಿದ್ದರು. ಪೂರ್ವಾಭಿಮುಖವಾಗಿರುವ ಮೆಟ್ಟಿಲುಗಳನ್ನು ಏರಿ ತೊಟ್ಟಿಲು ಹುಡೆ ಮತ್ತು ಅಗಸೆ ಬಾಗಿಲು ದಾಟಿ ಕೋಟೆ ಪ್ರವೇಶಿಸಿದರೆ ಕುದುರೆ ಮೇಲೆ ಕುಳಿತು ಖಡ್ಗ ಬೀಸುತ್ತಿರುವ ಭಂಗಿಯ ಬಾಳಾಜಿ ಬಾಜಿರಾವ್ ಪೇಶ್ವೆಯ ಕಲ್ಲಿನ ಪ್ರತಿಮೆ ಕಾಣಿಸುತ್ತದೆ; ಪರಾಕ್ರಮ ಮತ್ತು ನಮ್ರತೆಯ ಸಂಕೇತವಾದ ಹುಲಿ ಹಾಗೂ ನಂದಿ ಒಳಗಿದೆ. ಅಕ್ಕ-ತಂಗಿ ಹೊಂಡ ಎಂಬ ಎರಡು ಕೊಳಗಳಿದ್ದು, ಮಳೆಗಾಲದಲ್ಲಿ ಮೈದುಂಬಿ ಆಕರ್ಷಣೀಯ ಆಗಿರುತ್ತವೆ.

ರೋಣ ಮತ್ತು ಗಜೇಂದ್ರಗಡದಲ್ಲಿ ಹಲವು ಪ್ರವಾಸಿ ಮತ್ತು ಯಾತ್ರಾ ಸ್ಥಳಗಳಿವೆ. ಬಾದಾಮಿ ಚಾಲುಕ್ಯರು ಮತ್ತು ಪಶ್ಚಿಮ ಚಾಲುಕ್ಯರ ಐತಿಹಾಸಿಕ ಸ್ಮಾರಕಗಳಿರುವ ಗಜೇಂದ್ರಗಡದ ದೊಡ್ಡ ಪರ್ವತದ ಮೇಲಿರುವ ಶಿಲೆಯ ಕಾಲಕಾಲೇಶ್ವರ ದೇವಸ್ಥಾನ ಪ್ರಸಿದ್ಧವಾಗಿದೆ. ಆಸ್ತಿಕರ ದಕ್ಷಿಣದ ಕಾಶಿ ಎನಿಸಿರುವ ಈ ದೇಗುಲದ ಆವರಣದಲ್ಲಿ ವೀರಭದ್ರೇಶ್ವರ ದೇವಸ್ಥಾನವಿದೆ. ದೇವಾಲಯವಿರುವ ಬೆಟ್ಟದ ಎದುರಿನ ಗುಡ್ಡದಲ್ಲಿ ಸಾಲಾಗಿ ಪವನ ವಿದ್ಯುತ್‌ನ ಗಾಳಿ ಯಂತ್ರಗಳನ್ನು ಸ್ಥಾಪಿಸಲಾಗಿದೆ. ದೇಗುಲದ ಹೊರಗೆ ’ಅಂತರಗಂಗೆ’ ಎಂದು ಕರೆಯುವ ನಿತ್ಯ ಹರಿವ ನೀರಿನ ಚೌಕಾಕಾರದ ಕೊಳವಿದೆ. ಬೇಸಿಗೆಯಲ್ಲೂ ಹರಿಯುವ ಈ ನೀರಿನ ಮೂಲ ಅಜ್ಞಾತವಾಗಿದೆ. ಬೆಳವಣಿಕಿಯ ವೀರಭದ್ರ ಪ್ರತಿಮೆ ಅಪ್ರತಿಮ ಶಿಲಾ ಕಲಾ ವೈಭವವೆಂದು ಪರಿಗಣಿತವಾಗಿದೆ.

ಸೂಡಿ ಅವಳಿ ಗೋಪುರದ ದೇವಾಲಯ, ಕಲ್ಲಿನ ಕೆತ್ತನೆಯ ಅಸಂಖ್ಯಾತ ಶಿಲಾಕಲೆಗೆ ಹೆಸರುವಾಸಿಯಾಗಿದೆ. ಕೆತ್ತನೆಯ ಕಲ್ಲಿನ ದೊಡ್ಡ ಬಾವಿ, ಕಲ್ಲಿನಿಂದ ನಿರ್ಮಿಸಿದ ನಾಗಕುಂಡ, ಈಶ್ವರ ದೇವಸ್ಥಾನ ಪ್ರಮುಖ ಆಕರ್ಷಣೆಯಾಗಿದೆ. ನರೇಗಲ್‌ನಲ್ಲಿ ದ್ರಾವಿಡ ಶೈಲಿಯ ಪದ್ಮಾಬ್ಬರಸಿ ಬಸದಿಯಿದೆ; ನರೇಗಲ್‌ನ ನಾರಾಯಣ ದೇವಸ್ಥಾನ ಕರ್ನಾಟಕದ ಅತಿ ದೊಡ್ಡ ರಾಷ್ಟ್ರಕೂಟ ದೇವಾಲಯ. ಸಿದ್ಧಾರೂಢ ಸ್ವಾಮಿ ಮಠ-ದೇವಾಲಯದಲ್ಲಿ ವಾರ್ಷಿಕವಾಗಿ ನಡೆಯುವ ಏಳು ದಿನದ ಉತ್ಸವ ಮತ್ತು ವೀರಭದ್ರೇಶ್ವರ ದೇವರ ರಥೋತ್ಸವಕ್ಕೆ ಅಪಾರ ಜನ ಸೇರುತ್ತಾರೆ. ಪಾರ್ಶ್ವನಾಥ ಜೈನ ಬಸದಿ ರೋಣದಲ್ಲಿದೆ. ದೇವಾಲಯಗಳ ಸಮೂಹವೇ ಇರುವ ಡಂಬಳದಲ್ಲಿನ ತೋಂಟದಾರ್ಯ ಮಠ ಮತ್ತು ರಹಮಾನ್ ಶಾ ವಲಿ ದರ್ಗಾ ಕೋಮು ಸೌಹಾರ್ದತೆಯ ಪ್ರತೀಕವಾಗಿವೆ.

ಉತ್ತರ ಕರ್ನಾಟಕದ ಮಣ್ಣಿನ ಸೊಗಡಿನ ಖಡಕ್ ಕನ್ನಡದ ರೋಣ-ಗಜೇಂದ್ರಗಡ ಜಾನಪದ ಸಂಸ್ಕೃತಿ-ಸಂಪ್ರದಾಯದ ಹಿರಿಮೆ-ಗರಿಮೆಗಳ ಸೀಮೆ. ಉರ್ದು, ರಜಪೂತ್, ಲಂಬಾಣಿಯಂಥ ಭಾಷೆಗಳು ಕೇಳಿಬರುವ ಈ ಅವಳಿ ತಾಲೂಕಿ ಬದುಕಲ್ಲಿ ಗೀಗಿ ಪದ, ಹಂತಿ ಪದ, ಲಾವಣಿ, ಜಾನಪದ ಹಾಡು, ಭಜನೆ, ಡೊಳ್ಳು ಕುಣಿತ, ಕಬಡ್ಡಿ, ಎತ್ತಿನ ಗಾಡಿ ಓಟದ ಸ್ಪರ್ಧೆಯಂಥ ಜನಪದ ಕಲೆ-ಕ್ರೀಡೆ ಹಾಸುಹೊಕ್ಕಾಗಿವೆ; ಎರಡು ಹಗಲು-ಎರಡು ರಾತ್ರಿ ನಿರಂತರವಾಗಿ ನಡೆಯುವ ಕೋಲಾಟ ಈ ಭಾಗದಲ್ಲಿ ಪ್ರಸಿದ್ಧಿ ಪಡೆದಿದೆ! ಸಮಕಾಲೀನ ಸಂದರ್ಭಗಳ ಮೇಲೆ ಜಾನಪದ ಹಾಡು ಕಟ್ಟಿ ಹಾಡುವ ಕಲಾವಿದರು ಇಲ್ಲಿದ್ದಾರೆ. ಕೋಟಬಾಳ ಮತ್ತು ಹಿರೇಮಣ್ಣೂರು ಗ್ರಾಮಗಳು ಜಾನಪದ ಕಲಾವಿದರ ತವರೆಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ಹಲವು ಪ್ರತಿಷ್ಠಿತ ಪ್ರಶಸ್ತಿಗಳ ಪುರಸ್ಕೃತ ಕಲಾವಿದ ಶಂಕರಣ್ಣ ಸಂಕಣ್ಣವರ್ ದೇಶದಾದ್ಯಂತ ಜಾನಪದ ಸಿರಿ ಪ್ರದರ್ಶಿಸಿ ಬಂದಿದ್ದಾರೆ. ಲಕ್ಷಾಂತರ ಜನ ಸೇರುವ ಸುಪ್ರಸಿದ್ಧ ಬಾದಾಮಿಯ ಬನಶಂಕರಿ ಜಾತ್ರೆ ರಥ ಎಳೆಯಲು ಬಳಸುವ ಮಜಬೂತ ಹಗ್ಗ ಹೊಸೆಯುವುದು ರೋಣದಲ್ಲಿ.

ಹಿಂದುಸ್ತಾನಿ ಸಂಗೀತದ ಕಿರಾಣಾ ಘರಾಣಾ ಸಂಪ್ರದಾಯದ ಗಾನಗಂಧರ್ವ ಪಂಡಿತ್ ಭೀಮಸೇನ ಜೋಶಿಯವರ ಜನ್ಮಭೂಮಿ ರೋಣ; ಕನ್ನಡ ಕುಲ ಪುರೋಹಿತ ಆಲೂರು ವೆಂಕಟರಾಯರು, ಸಾಹಿತಿ ರಂ.ಶ್ರೀ.ಮುಗಳಿ, ನವ್ಯದ ವಿಮರ್ಶಕ ಗಿರಡ್ಡಿ ಗೋವಿಂದರಾಜ, ಇಬ್ಬರು ಕನ್ನಡ ವಿದ್ವಾಂಸರಾದ ಆರ್.ಸಿ.ಹಿರೇಮಠ್, ಬಿ.ವಿ.ಮಲ್ಲಾಪುರ್, ವಿಜ್ಞಾನಿ-ಸಾಹಿತಿ ರಾಜಶೇಖರ ಬೂಸನೂರುಮಠ್ ಮತ್ತು ಜಾನಪದ ತಜ್ಞ ಸೋಮಶೇಖರ ಇಮ್ರಾಪುರ್ ರೋಣದ ಹಿರಿಮೆ ಹೆಚ್ಚಿಸಿದ್ದಾರೆ; ವೇದ, ವ್ಯಾಕರಣ, ಕಾನೂನು, ಮೀಮಾಂಸೆ ಮತ್ತು ಅಲಂಕಾರದಲ್ಲಿ ಪಾಂಡಿತ್ಯ ಹೊಂದಿದ್ದ ರಾಘವೇಂದ್ರ ಆಚಾರ್ಯ ಹಾಗೂ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಪ್ರಹ್ಲಾದ್ ಬಾಲಾಚಾರ್ಯ ಗಜೇಂದ್ರಗಡಕರ್ ತವರು ಗಜೇಂದ್ರಗಡ.

ಒಣ ಆರ್ಥಿಕತೆ!

ರೋಣ-ಗಜೇಂದ್ರಗಡ ಬರಡು ಪ್ರದೇಶ; ಎಲ್ಲೆಲ್ಲೂ ಒಣ ಭೂಮಿ. ಮಳೆಯಾಧಾರಿತ ಕೃಷಿ. ಮಳೆಯಿಲ್ಲದಿದ್ದರೆ ಭೀಕರ ಬರ. 500 ಅಡಿ ಬೋರ್ ಕೊರೆದರೂ ಹನಿ ನೀರೂ ಸಿಗದು. ಒಣ ಬೇಸಾಯದಿಂದ ಹೊಟ್ಟೆಗೆ ಹಿಟ್ಟು ಗಿಟ್ಟುವುದಿಲ್ಲ! ಕ್ಷೇತ್ರದ ಮುಂಡರಗಿ ಭಾಗದಲ್ಲಿ ಒಂಚೂರು ಹನಿ ನೀರಾವರಿಯಿದೆ; ಹಿರೇಹಳ್ಳದ ಅಂಚಿನಲ್ಲಿ ಕೆಲವು ಕುಟುಂಬಗಳು ಬೇಸಾಯ ಮಾಡಿಕೊಂಡಿವೆ. ಮಲಪ್ರಭಾ ಬಲದಂಡೆ ನಾಲೆ (ಎಂಆರ್‌ಬಿಸಿ) ಹಾದು ಹೋಗಿದೆಯಾದರೂ ನೀರು ಹರಿಯುವುದಿಲ್ಲ. ತಮಾಷೆಯೆಂದರೆ ಈ ನಾಲೆ ಕೆಡವುವ-ಕಟ್ಟುವ ಲಕ್ಷಾಂತರ ರೂ.ಕಾಮಗಾರಿ ಮಾತ್ರ ಕಳೆದ ಮೂವತ್ತು ವರ್ಷದಿಂದ ನಡೆಯುತ್ತಲೆಯಿದೆ. ರೈತರು ಉಪವಾಸ-ವನವಾಸ ಅನುಭವಿಸುತ್ತಿದ್ದಾರೆ; ರೈತರ ಉದ್ಧಾರದ ನೆಪದಲ್ಲಿ ಅಧಿಕಾರಸ್ಥರು ಲೂಟಿ ಮಾಡುತ್ತಿದ್ದಾರೆ! ಮಹದಾಯಿ ನೀರು ಮಲಪ್ರಭೆ ಸೇರಿ ಕಳಸಾ-ಬಂಡೂರಿ ಯೋಜನೆ ಕಾರ್ಯಗತವಾದರೆ ರೋಣ ವಿಧಾನಸಭಾ ಕ್ಷೇತ್ರದ ಒಂದಿಷ್ಟು ಭೂಮಿ ಹಸಿರಾಗುತ್ತದೆ ಎಂಬ ನಿರೀಕ್ಷೆ ರೈತಾಪಿ ವರ್ಗದ್ದು.

ರೈತರು ಹಂಗಾಮಿಗೆ ತಕ್ಕಂತೆ ಕಡಲೆ, ಹತ್ತಿ, ಮೆಣಸಿನಕಾಯಿ, ಗೋಧಿ, ಗೋವಿನ ಜೋಳ, ಉಳ್ಳಗಡ್ಡೆ ಬೆಳೆಯುತ್ತಾರೆ. ರೋಣ-ಗಜೇಂದ್ರಗಡದ ಆರ್ಥಿಕತೆ ನಿಂತಿರುವುದೇ ರೈತರ ಗೇಯ್ಮೆ ಮೇಲೆ. ರೈತರು ನೇಗಿಲು ಹಿಡಿದು ಹೊಲಕ್ಕೆ ಹೋದರಷ್ಟೆ ಈ ಅವಳಿ ತಾಲೂಕಿಗೆ ಆರ್ಥಿಕ ಚೈತನ್ಯ. ಗಜೇಂದ್ರಗಡದಲ್ಲಿ ದೊಡ್ಡ ಎಪಿಎಂಸಿ ಇದೆಯಾದರೂ ಕೃಷಿ ಉತ್ಪನ್ನಗಳಿಲ್ಲದೆ ವ್ಯರ್ಥವಾಗಿದೆ. ಮಳೆಯಾಧಾರಿತ ಬೆಳೆ ಬಂದಾಗ ದಲ್ಲಾಳಿಗಳು ಶೋಷಣೆ ಮಾಡುತ್ತಾರೆ. ಸರಕಾರಿ ಖರೀದಿ ಕೇಂದ್ರಗಳು ಕ್ಲುಪ್ತ ಕಾಲದಲ್ಲಿ ತೆರೆದುಕೊಳ್ಳುವುದಿಲ್ಲ; ಒಂದು ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಸಹ ಅಧಿಕಾರಸ್ಥರಿಂದ ಮಾಡಲಾಗಿಲ್ಲ. ಕೃಷಿ ಪ್ರಧಾನವಾದ ರೋಣ ಮತ್ತು ಗಜೇಂದ್ರಗಡದಲ್ಲಿ ಬೇರ್‍ಯಾವ ಆರ್ಥಿಕ ಮೂಲವೂ ಇಲ್ಲ. ದುಡಿವ ಕೈಗಳಿಗೆ ಕೆಲಸ ಕೊಡುವ ಕೈಗಾರಿಕೆಗಳಿಲ್ಲ. ಒಂದು ಕಾಲದಲ್ಲಿ ನೇಯ್ದ ಸೀರೆ ಮತ್ತು ರವಿಕೆ ಖಣಕ್ಕೆ ಹೆಸರುವಾಸಿಯಾಗಿದ್ದ ಗಜೇಂದ್ರಗಡದಲ್ಲೀಗ ಕೈಮಗ್ಗದ ಕಸುಬಿಲ್ಲ.

ಕ್ಷೇತ್ರದಲ್ಲಿರುವ ’ಕೈಗಾರಿಕೆ’ ಎಂದರೆ ಪ್ರಾಕೃತಿಕ ಸಂಪತ್ತಿಂದ ಲಾಭ ಮಾಡಿಕೊಳ್ಳುವ ಶಾಸಕ ಕಳಕಪ್ಪ ಬಂಡಿ ಬಳಗದ ಜಲ್ಲಿ ಕ್ರಷರ್ ಮತ್ತು ಹೊಳೆಯ ಒಡಲು ಬಗೆಯುವ ಮರಳುಗಾರಿಕೆ ಎಂದು ದೂರುತ್ತಾರೆ ಮತದಾರರು; ಇಲ್ಲೂ ಅಸಹಾಯಕ ಮಂದಿಗೆ ಕೆಲಸ ಸಿಗುತ್ತಿಲ್ಲ. ರೋಣ ಮತ್ತು ಗಜೇಂದ್ರಗಡ ಪೇಟೆಗಳು ವಾಣಿಜ್ಯಿಕವಾಗಿ ಬೆಳವಣಿಗೆಯಾಗಿಲ್ಲ. ರೋಣಕ್ಕಿಂತ ಗಜೇಂದ್ರಗಡದ ಮಾರುಕಟ್ಟೆ ದೊಡ್ಡದು. ಆದರೆ ಕೃಷಿ ಕುಂಠಿತವಾಗಿರುವುದರಿಂದ ಅಲ್ಲೂ ವ್ಯಾಪಾರ-ವಹಿವಾಟು ಅಷ್ಟಕ್ಕಷ್ಟೆ ಆಗಿದೆ. ರೋಣ-ಗಜೇಂದ್ರಗಡದಲ್ಲಿ ಬದುಕು ಕಟ್ಟಿಕೊಳ್ಳಲಾಗದೆ ಎಲ್ಲ ಜಾತಿ-ಧರ್ಮದ ಮಂದಿ ಗೋವಾ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳತ್ತ ತಂಡೋಪತಂಡವಾಗಿ ಗುಳೆ ಹೋಗುತ್ತಾರೆ. ಚುನಾವಣೆ ಬಂದಾಗ ಬಸ್‌ಗಳನ್ನು ಕಳಿಸಿ ವಲಸೆ ಹೋದವರನ್ನು ಕರೆತಂದು ಓಟು ಹಾಕಿಸಿಕೊಂಡು ಕೂಲಿಕೊಟ್ಟು ಕಳಿಸುವ ರಾಜಕಾರಣಿಗಳು ಅಧಿಕಾರ ಸಿಕ್ಕಮೇಲೆ ರೈತರನ್ನು ಸ್ವಾವಲಂಬಿಗಳನ್ನಾಗಿಸುವ ಕೃಷಿ ಉನ್ನತೀಕರಣಕ್ಕೆ ಅಥವಾ ಕೈಗಾರೀಕರಣಕ್ಕೆ ಪ್ರಯತ್ನಿಸುವುದಿಲ್ಲ ಎಂಬ ಬೇಸರ ಬೆರೆತ ಆಕ್ರೋಶದ ಮಾತು ಕೇಳಿಬರುತ್ತದೆ.

ಅಖಾಡದ ಆಕಾರ

ರೋಣ-ಗಜೇಂದ್ರಗಡ ವಿಧಾನಸಭಾ ಕ್ಷೇತ್ರದ ಚುನಾವಣಾ ಚರಿತ್ರೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಇದೊಂದು ಪಕ್ಕಾ ಲಿಂಗಾಯತ ಏಕಸ್ವಾಮ್ಯದ ರಾಜಕೀಯ ಅಖಾಡ ಎಂಬುದು ಮನದಟ್ಟಾಗುತ್ತದೆ. 1957ರ ಮೊದಲ ಚುನಾವಣೆಯಿಂದ ಎಲ್ಲ ಪಕ್ಷಗಳೂ ಲಿಂಗಾಯತರಿಗೆ ಟಿಕೆಟ್ ಕೊಡುತ್ತಾ ಬಂದಿವೆ; ಕಾಂಗ್ರೆಸ್‌ಗೆ ಎದುರಾಳಿ ಪಕ್ಷವಿಲ್ಲದ ಹೊತ್ತಲ್ಲಿ ಗೆದ್ದವರಿಗೆ ಪ್ರಬಲ ಪೈಪೋಟಿ ಕೊಟ್ಟಿದ್ದೂ ಲಿಂಗಾಯತ ಜಾತಿಯ ಪಕ್ಷೇತರರೇ. ಲಾಗಾಯ್ತಿನಿಂದ ಲಿಂಗಾಯತ ಒಳಪಂಗಡದ ಬಣಜಿಗ, ಪಂಚಮಸಾಲಿ, ರಡ್ಡಿಗಳ ಕೈಯಲ್ಲೆ ಶಾಸಕಗಿರಿ ಗಿರಕಿ ಹೊಡೆಯುತ್ತಿದೆ. ಅಹಿಂದ ವರ್ಗದ ಮತಗಳು ಹೆಚ್ಚಿದ್ದರೂ ಸಾಮಾಜಿಕ-ರಾಜಕೀಯ ಎಚ್ಚರ ಮತ್ತು ಹೊಂದಾಣಿಕೆ ಇಲ್ಲದಿರುವುದರಿಂದ ಲಿಂಗಾಯತರು ಮೇಲುಗೈ ಸಾಧಿಸುತ್ತ ಬಂದಿದ್ದಾರೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಅಂದಾನಪ್ಪ ದೊಡ್ಡಮೇಟಿ

ವ್ಯಕ್ತಿಪ್ರತಿಷ್ಠೆಯ ’ಹಣಾ’ಹಣಿಯ ರೋಣ-ಗಜೇಂದ್ರಗಡ ಕ್ಷೇತ್ರ ರಾಜ್ಯದ ಕೆಲವೇ ದೊಡ್ಡ ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದಾಗಿದೆ. ಬಾಗಲಕೋಟೆ ಜಿಲ್ಲೆಯ ಬದಾಮಿವರೆಗೆ ಹಬ್ಬಿರುವ ಈ ಕ್ಷೇತ್ರದ ಹರವು ಒಂದು ತುದಿಯಿಂದ ಮತ್ತೊಂದು ತುದಿಗೆ 110 ಕಿ.ಮೀ.! 2007ರಲ್ಲಿ ಮಾಡಲಾಗಿರುವ ಕ್ಷೇತ್ರಗಳ ಭೌಗೋಳಿಕ ಪರಿಧಿ ಪುನರ್ ನಿಗದಿಯಲ್ಲಿ ರೋಣ ತಾಲೂಕಿನ ರೋಣ ಹಾಗೂ ನರೇಗಲ್, ಗಜೇಂದ್ರಗಡ ತಾಲೂಕಿನ ಗಜೇಂದ್ರಗಡ, ಮುಂಡರಗಿ ತಾಲೂಕಿನ ಡಂಬಳ ಹೋಬಳಿಗಳ ಜೊತೆಗೆ ಗದಗ ತಾಲೂಕಿನ ಕೆಲವು ಹಳ್ಳಿಗಳನ್ನು ಸೇರಿ ರೋಣ ಕ್ಷೇತ್ರ ರಚಿಸಲಾಗಿದೆ. ಒಟ್ಟು 2,29,898 ಮತದಾರರಿರುವ ಈ ಕ್ಷೇತ್ರದಲ್ಲಿ ಒಳ ಪಂಗಡಗಳೆಲ್ಲ ಸೇರಿ ಲಿಂಗಾಯತರು 70 ಸಾವಿರವಿದ್ದಾರೆ ಎನ್ನಲಾಗುತ್ತಿದೆ. ಇದರಲ್ಲಿ ಪಂಚಮಸಾಲಿಗಳು 40 ಸಾವಿರ ಇದ್ದಾರೆಂದು ಅಂದಾಜಿಸಲಾಗಿದೆ. ಜತೆಗೆ ಕುರುಬ ಸಮುದಾಯದ 45 ಸಾವಿರ, ಮುಸ್ಲಿಮ್ 35 ಸಾವಿರ, ಎಸ್‌ಸಿ 30 ಸಾವಿರ, ಎಸ್‌ಟಿ 15 ಸಾವಿರ, ಬ್ರಾಹ್ಮಣ 2 ಸಾವಿರ ಮತ್ತು ಇತರ ಸಣ್ಣ ಸಂಖ್ಯೆಯ ಜಾತಿ ಮತದಾರರಿರುವ ಲೆಕ್ಕಾಚಾರವಿದೆ.

ಕಾಂಗ್ರೆಸ್ ಕಾಲ

1957ರ ಮೊದಲ ಚುನಾವಣೆಯಿಂದ 1978ರ ಐದನೇ ಮತ ಸಮರದವರೆಗೆ ಕಾಂಗ್ರೆಸ್‌ಗೆ ರೋಣ ಕ್ಷೇತ್ರದಲ್ಲಿ ಪ್ರಬಲ ಎದುರಾಳಿಯೇ ಇರಲಿಲ್ಲ! ರಡ್ಡಿ ಲಿಂಗಾಯತ ಸಮುದಾಯದ ಅಂದಾನಪ್ಪ ದೊಡ್ಡಮೇಟಿ ಸತತ ಮೂರು ಬಾರಿ ಶಾಸಕನಾಗಿದ್ದರು. ಮೂರು ಬಾರಿಯೂ ದೊಡ್ಡಮೇಟಿಗೆ ಪೈಪೋಟಿ ಕೊಟ್ಟಿದ್ದು ಪಕ್ಷೇತರ ಹುರಿಯಾಳುಗಳು. ಕಾಂಗ್ರೆಸ್‌ನ ದೊಡ್ಡಮೇಟಿ ಮೊದಲ ಹೋರಾಟದಲ್ಲಿ ಎ.ವಿ.ಪಾಟೀಲ್(14,116)ರನ್ನು 3,720 ಮತದಂತರದಿಂದ, ಎರಡನೇ ಬಾರಿ (1962) ಎಸ್.ಎಂ.ಮಠ(8,543)ರನ್ನು 10,097 ಮತದಿಂದ ಮತ್ತು 1967ರಲ್ಲಾದ ಮೂರನೇ ಚುನಾವಣೆಯಲ್ಲಿ ಎಂ.ಎಸ್.ಪಾಟೀಲ್(13,285)ರನ್ನು 8,288 ಮತದಿಂದ ಮಣಿಸಿದ್ದರು. 1972ರಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟಾಗಿದ್ದ ಎ.ವಿ.ಪಾಟೀಲ್ (20,567) ಪಕ್ಷೇತರ ಎದುರಾಳಿ ಎನ್.ಬಿ.ಪೂಜಾರ್‌ರನ್ನು (13,121) ಸೋಲಿಸಿ ಅಸೆಂಬ್ಲಿ ಪ್ರವೇಶಿಸಿದ್ದರು. 1978ರಲ್ಲಿ ಎನ್.ಬಿ.ಪೂಜಾರ್ ಜನತಾ ಪಕ್ಷದಿಂದ ಸ್ಪರ್ಧಿಸಿದ್ದರು. 20,709 ಮತಗಳನ್ನಷ್ಟೆ ಪಡೆಯಲು ಶಕ್ಯರಾದ ಪೂಜಾರ್ ಎದುರು ಕಾಂಗ್ರೆಸ್‌ನ ವಿ.ಎ.ಮತ್ತಿಕಟ್ಟಿ 5,837 ಮತದಂತರದಿಂದ ಗೆಲುವು ಕಂಡರು.

ಹೆಗಡೆ ಹಿಂಬಾಲಕ ದೊಡ್ಡಮೇಟಿ

1980ರ ದಶಕದಾರಂಭದಲ್ಲಿ ಪಕ್ಕದ ನರಗುಂದದಲ್ಲಾದ ರೈತ ಬಂಡಾಯದ ಪರಿಣಾಮ ರೋಣದ 1983ರ ಅಸೆಂಬ್ಲಿ ಅಖಾಡದಲ್ಲಾಯಿತು. ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಜ್ಞಾನದೇವ ದೊಡ್ಡಮೇಟಿ (31,721), ಕಾಂಗ್ರೆಸ್‌ನ ಶಾಸಕ ವಿ.ಎ.ಮತ್ತಿಕಟ್ಟಿಯವರನ್ನು 10,742 ಮತಗಳ ಭರ್ಜರಿ ಅಂತರದಿಂದ ಸೋಲಿಸಿದರು! 1985ರ ನಡುಗಾಲ ಚುನಾವಣೆಯಲ್ಲಿ ಉತ್ತರ ಕರ್ನಾಟಕದ ಲಿಂಗಾಯತರ ಅಖಂಡ ಬೆಂಬಲ ಜನತಾ ಪಕ್ಷದ ಪರವಾಗಿತ್ತು. ಹಾಗಾಗಿ ಶಾಸಕ ದೊಡ್ಡಮೇಟಿಯವರನ್ನು (33,653) ರೋಣದ ಲೋಕಲ್ ರಾಜಕಾರಣದಿಂದ ಪ್ರಭಾವಿ ಎನಿಸಿದ್ದ ಆರ್.ಎಸ್.ಪಾಟೀಲರಿಂದಲೂ (22,911) ಮಣಿಸಲಾಗಲಿಲ್ಲ. ದೊಡ್ಡಮೇಟಿ ಹಿಂದಿನ ಬಾರಿಯಂತೆಯೇ 10,742 ಮತದಂತರದಿಂದ ಚುನಾಯಿತರಾಗಿದ್ದು ಸೋಜಿಗ ಮೂಡಿಸಿತ್ತು. ದೊಡ್ಡಮೇಟಿಯವರನ್ನು ಹೆಗಡೆ ಮಂತ್ರಿ ಮಾಡಿದರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ನರಗುಂದ: ಬಂಡಾಯದ ನೆಲದಲ್ಲಿ ’ನೀರಾವರಿ’ ರಾಜಕೀಯ!

1989ರ ಚುನಾವಣೆ ಹೊತ್ತಲ್ಲಿ ಶಾಸಕ ದೊಡ್ಡಮೇಟಿ ಕಾರ್ಯವೈಖರಿಯಿಂದ ಜನರಿಗೆ ಬೇಸರಬಂದಿತ್ತು; ಹೆಗಡೆ-ದೇವೇಗೌಡರ ದಾಯಾದಿ ಕಲಹದಿಂದ ಜನತಾ ದಳದ ಪ್ರಭಾವ ಕುಂದಿತ್ತು. ಲಿಂಗಾಯತರ ಸರ್ವೋಚ್ಚ ನಾಯಕರಾಗಿ ಅವತರಿಸಿದ್ದ ವೀರೇಂದ್ರ ಪಾಟೀಲ್ ಕಾಂಗ್ರೆಸ್ ಸಿಎಂ ಅಭ್ಯರ್ಥಿಯಾಗಿದ್ದರಿಂದ ಲಿಂಗಾಯತರು ಅತ್ತ ವಾಲಿದ್ದರು. ರೋಣದಲ್ಲಿ ಕಾಂಗ್ರೆಸ್‌ನ ಜಿ.ಎಸ್.ಪಾಟೀಲ್ (32,610) ಜನತಾ ದಳದ ದೊಡ್ಡಮೇಟಿಯವರನ್ನು 11,407 ಮತದಿಂದ ಮಣಿಸಿ ಶಾಸಕನಾದರು. 1994ರ ಚುನಾವಣೆ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಲಿಂಗಾಯತರ ಒಲವು ಪಡೆದಿದ್ದ ಮಾಜಿ ಸಿಎಂ ಹೆಗಡೆ ಮತ್ತು ದೇವೇಗೌಡ ಒಂದಾಗಿದ್ದರಿಂದ ಜನತಾ ದಳ ಬಲಗೊಂಡಿತ್ತು. ವೀರೇಂದ್ರ ಪಾಟೀಲರನ್ನು ಹೀನಾಯವಾಗಿ ಬದಿಗೆ ಸರಿಸಿದ್ದರಿಂದ ಲಿಂಗಾಯತರು ಕಾಂಗ್ರೆಸ್ ಮೇಲೆ ಮುನಿದಿದ್ದರು.ಈ ರಾಜ್ಯ ಮಟ್ಟದ ಲಿಂಗಾಯತ ರಾಜಕಾರಣದ ಸೂತ್ರ-ಸಮೀಕರಣ ಒಂದೆಡೆಯಾದರೆ, ಇತ್ತ ಕ್ಷೇತ್ರದಲ್ಲಿ ಲಿಂಗಾಯತ ಒಳಪಂಗಡ ತಂತ್ರಗಾರಿಕೆಗಳು ನಡೆದವು. ಜನತಾ ದಳದ ಅಭ್ಯರ್ಥಿಯಾಗಿದ್ದ ಬಹುಸಂಖ್ಯಾತ ಪಂಚಮಸಾಲಿ ಪಂಗಡದ ಶ್ರೀಶೈಲಪ್ಪ ಬಿದರೂರುರನ್ನು ಎದುರಿಸಲು ಅಲ್ಪಸಂಖ್ಯಾತ ರಡ್ಡಿ ಸಮುದಾಯದ ಕಾಂಗ್ರೆಸ್ ಶಾಸಕ ಪಾಟೀಲ್‌ಗೆ ಕಷ್ಟವಾಯಿತು. 39,268 ಮತ ಗಳಿಸಿದ ಜನತಾ ದಳದ ಶ್ರೀಶೈಲಪ್ಪ ಬಿದರೂರು ಕಾಂಗ್ರೆಸ್‌ನ ಜಿ.ಎಸ್.ಪಾಟೀಲರನ್ನು 8,604 ಮತಗಳಿಂದ ಪರಾಭವಗೊಳಿಸಿದರು!

ಚಲಿಸದ ’ಬಂಡಿ’

1999ರ ಇಲೆಕ್ಷನ್ ಸಂದರ್ಭದಲ್ಲಿ ಜನತಾ ದಳ ದ್ವಿದಳವಾಗಿತ್ತು. ಜೆಡಿಎಸ್‌ನಿಂದ ಶಾಸಕ ಬಿದರೂರು (18,802) ಅಖಾಡಕ್ಕಿಳಿದರೆ, ಅಶೋಕ್ ನವಲಗುಂದ್ (11,137) ಜೆಡಿಯು ಅಭ್ಯರ್ಥಿಯಾಗಿದ್ದರು. 47,957 ಮತ ಪಡೆದ ಕಾಂಗ್ರೆಸ್‌ನ ಜಿ.ಎಸ್.ಪಾಟೀಲ್ ದೊಡ್ಡ ಅಂತರದ (29,155) ದಿಗ್ವಿಜಯ ಸಾಧಿಸಿದರು! 2004 ಚುನಾವಣಾ ಕದನ ಎದುರಾದಾಗ ಯಡಿಯೂರಪ್ಪ ಕೇಸರೀಕರಣದ ಲಿಂಗಾಯತ ಮುಖಂಡರಾಗಿ ಅವತರಿಸಿದರು. ರೋಣ ಜನರ ಸಂಪರ್ಕ ಕಳೆದುಕೊಂಡ ಬಿದರೂರು ಬಿಜೆಪಿ ಸೇರಿ ಗದಗದಲ್ಲಿ ರಾಜಕಾರಣ ಶುರುಹಚ್ಚಿಕೊಂಡಿದ್ದರು. ಆರೆಸ್ಸೆಸ್‌ನಲ್ಲಿದ್ದ ಕಳಕಪ್ಪ ಬಂಡಿ ಅಂದು ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಬಿಜೆಪಿಯ ಪ್ರಬಲ ನಾಯಕರಾಗಿದ್ದ ಜಗದೀಶ್ ಶೆಟ್ಟರ್ ಮೂಲಕ ಬಿಜೆಪಿ ಟಿಕೆಟ್ ಪಡೆದರು. ಹಿಂದುತ್ವ ಮತ್ತು ಯಡಿಯೂರಪ್ಪ ಫ್ಯಾಕ್ಟರ್ ರೋಣ ರಣರಂಗದಲ್ಲಿ ವರ್ಕ್‌ಔಟ್ ಆಯಿತು. 46,733 ಮತ ಪಡೆದ ಬಿಜೆಪಿಯ ಬಂಡಿ ಎದುರು ಕಾಂಗ್ರೆಸ್‌ನ ಜಿ.ಎಸ್.ಪಾಟೀಲ್ (38,668) ಸೋಲೊಪ್ಪಬೇಕಾಯಿತು.

ಜ್ಞಾನದೇವ ದೊಡ್ಡಮೇಟಿ

2008ರಲ್ಲಿ ಲಿಂಗಾಯತ ವಲಯದಲ್ಲಿ ಬೀಸಿದ ಯಡಿಯೂರಪ್ಪ ಹವಾದಲ್ಲಿ ತೇಲಿದ ಕಳಕಪ್ಪರ ’ಬಂಡಿ’ ವಿಧಾನಸೌಧ ತಲುಪಿತು. ಬಿಜೆಪಿಯ ಬಂಡಿ (50,145) ಮತ್ತು ಕಾಂಗ್ರೆಸ್‌ನ ಜಿ.ಎಸ್.ಪಾಟೀಲ್ (48,315) ನಡುವೆ ಕತ್ತುಕತ್ತಿನ ಕದನವೇ ನಡೆದುಹೋಯಿತು. ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ರವಿ ದಂಡಿನ್ (10,577) ಸೆಕ್ಯುಲರ್ ಮತಗಳನ್ನು ವಿಭಜಿಸಿದ್ದರಿಂದ ಕಾಂಗ್ರೆಸ್ ಕೇವಲ 1,838 ಮತದಿಂದ ಸೋಲುವಂತಾಯಿತೆಂದು ವಿಶ್ಲೇಷಿಸಲಾಗುತ್ತಿದೆ. ಸತತ ಒಂಬತ್ತು ವರ್ಷ ಶಾಸಕನಾಗಿದ್ದ ಕಳಕಪ್ಪ ಬಂಡಿಗೆ 2013ರ ಅಸೆಂಬ್ಲಿ ಚುನಾವಣೆ ವೇಳೆ ಎಂಟಿಇನ್‌ಕಂಬೆನ್ಸ್ ಸುತ್ತಿಕೊಂಡಿತ್ತು; ಜತೆಗೆ ಯಡಿಯೂರಪ್ಪ ಕೆಜೆಪಿ ಕಟ್ಟಿದ್ದರಿಂದ ’ಬಂಡಿ’ ಲಿಂಗಾಯತ ವಲಯದಲ್ಲಿ ಮುಗ್ಗರಿಸಿತು. 74,593 ಮತ ಪಡೆದ ಕಾಂಗ್ರೆಸ್‌ನ ಜಿ.ಎಸ್.ಪಾಟೀಲ್ 18,227 ಮತಗಳಿಂದ ಗೆಲುವು ಕಂಡರು. 2018ರಲ್ಲಿ ಬಿಜೆಪಿಯ ಬಂಡಿ (83,735) ಮತ್ತು ಕಾಂಗ್ರೆಸ್‌ನ ಪಾಟೀಲ (76,401) ಮತ್ತೆ ಮುಖಾಮುಖಿಯಾದರು. ಆ ಇಲೆಕ್ಷನ್ ಮೊದಲು ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನ ಮಾಡಿದ ಯಡಿಯೂರಪ್ಪ ಲಿಂಗಾಯತ ವಲಯದಲ್ಲಿ ಮತ್ತೆ ಚಲಾವಣೆಗೆ ಬಂದರು; ಇದರ ಲಾಭ ಬಿಜೆಪಿ ಕ್ಯಾಂಡಿಡೇಟ್ ಕಳಕಪ್ಪ ಬಂಡಿಗಾಯಿತು; ಕಾಂಗ್ರೆಸ್‌ನ ಜಿ.ಎಸ್.ಪಾಟೀಲರೇ ಬೆಟರ್ ಎಂಬ ಭಾವನೆ ಕ್ಷೇತ್ರದಲ್ಲಿದ್ದರೂ ಸ್ವಜಾತಿಯ ಪ್ರತಿಷ್ಠಿತ ಮುಖಂಡ ಯಡಿಯೂರಪ್ಪ ಮತ್ತೆ ಸಿಎಂ ಆಗುತ್ತಾರೆಂಬ ಒಂದೇ ಕಾರಣಕ್ಕೆ ಲಿಂಗಾಯತರು ಒಲ್ಲದ ಮನಸ್ಸಿನಿಂದ ಬಂಡಿಯನ್ನು ಬಚಾವು ಮಾಡಿದರೆಂಬ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತದೆ.

ಬಡತನ-ಬವಣೆಯ ಕ್ಷೇತ್ರ!

ರೋಣ-ಗಜೇಂದ್ರಗಡ ವಿಧಾನಸಭಾ ಕ್ಷೇತ್ರ ಹಿಂದುಳಿದಿರುವಿಕೆ ಹಾಗೂ ಅಸಹನೀಯ ಜನ ಜೀವನ ಜೀವಂತ ಪ್ರಾತ್ಯಕ್ಷಿಕೆಯಂತಿವೆ! ಹಳ್ಳಿಗಳಲ್ಲಿ ರಸ್ತೆಗಳಿಲ್ಲ; ಹೊಲಗಳಿಗೆ ಹೋಗಿಬರಲು ದಾರಿಗಳಿಲ್ಲ. ಹಲವು ಹಳ್ಳಿಗಳಿಗೆ ಬಸ್‌ಗಳಂತೂ ಬರುವುದೇ ಇಲ್ಲ. ಚರಂಡಿ ವ್ಯವಸ್ಥೆಯಿಲ್ಲ. ಹಳ್ಳಿಗಳಲ್ಲಿ ಶೌಚಾಲಯಗಳಿಲ್ಲ. ಗ್ರಾಮೀಣ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ; ಸೂರಿಲ್ಲದವರಿಗೆ ವಸತಿ ಯೋಜನೆ ಕೈಗೆಟುಕುತ್ತಿಲ್ಲ. ಬೀದಿ ದೀಪಗಳಿಲ್ಲ. ಸಾಮಾನ್ಯ ಬಜೆಟ್ ಕಾಮಗಾರಿಗಳೂ ಕಮಿಷನ್ ವ್ಯವಹಾರದಿಂದ ಕಳಪೆಯಾಗಿವೆ. ರೋಣಕ್ಕೆ ಮಂಜೂರಾದ ಪದವಿ ಕಾಲೇಜು ಗುಳೇದಗುಡ್ಡಕ್ಕೆ ವರ್ಗಾಯಿಸಲಾಗಿದೆ. ತಾಂತ್ರಿಕ ಇನ್ನಿತರ ವೃತ್ತಿಪರ ಕೋರ್ಸುಗಳ ಸೌಲಭ್ಯವಿಲ್ಲ. ಶೈಕ್ಷಣಿಕ ಲಾಬಿಯ ರಾಜಕಾರಣಿಗಳು ಲಾಭ ಮಾಡಿಕೊಳ್ಳುತ್ತಿದ್ದಾರೆ. ಇದೆಲ್ಲ ತನಗೆ ಸಂಬಂಧಿಸಿದ್ದಲ್ಲ ಎಂಬಂತೆ ಶಾಸಕ ಕಳಕಪ್ಪ ಬಂಡಿ ಆರಾಮವಾಗಿದ್ದಾರೆ; ಚುನಾವಣೆ ಹೊತ್ತಲ್ಲಷ್ಟೆ ಬರುವ ಸಂಸದ (ಶಿವಕುಮಾರ್ ಉದಾಸಿ) ಇದ್ದೂ ಇಲ್ಲದಂತಾಗಿದ್ದಾರೆ ಎಂಬ ಆಕ್ಷೇಪದ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತವೆ.

ರೋಣ ಮತ್ತು ಗಜೇಂದ್ರಗಡ ಪಟ್ಟಣಗಳಿಗೆ 8-10 ದಿನಕ್ಕೊಮ್ಮೆ ಕುಡಿಯುವ ನೀರು ಬರುತ್ತದೆ; ಹಳ್ಳಿಗಳಲ್ಲಿ ಅದಕ್ಕೂ ತತ್ವಾರ. ಹಳ್ಳಿಗರು ಕಾಸು ಕೊಟ್ಟು ನೀರು ಕೊಂಡುಕೊಳ್ಳಬೇಕು. ಕ್ಷೇತ್ರದ ನಾಲ್ಕು ಹೋಬಳಿಗಳಲ್ಲಿ ತಲಾ ಶೆಕಡಾ ಇಪ್ಪತ್ತರಷ್ಟು ನೀರು ಮಾರಾಟ ಅಂಗಡಿಗಳಿವೆ. ಕಪ್ಪು ಮಣ್ಣಿನ ಫಲವತ್ತಾದ ಭೂಮಿಯಿದ್ದರೂ ಬೆಳೆತೆಗೆಯಲು ನೀರಿಲ್ಲ. ಬಂಜರು ಭೂಮಿಯಲ್ಲಿ ಬದುಕು ಕಟ್ಟಿಕೊಳ್ಳಲಾಗದೆ ಅಸಹಾಯಕ ಮಂದಿ ಅನ್ನ ಅರಸುತ್ತ ಗುಳೆ ಹೋಗುತ್ತಿದ್ದಾರೆ. ಒಟ್ಟಿನಲ್ಲಿ ರೋಣ-ಗಜೇಂದ್ರಗಡ ಒಂಥರಾ ಶಾಪಗ್ರಸ್ತ ಊರಿನಂತಿದೆ ಎಂದು ಜನರು ಬೇಸರ-ಸಿಟ್ಟಿನಿಂದ ಹೇಳುತ್ತಾರೆ!

ರೋಣ-ಗಜೇಂದ್ರಗಡ ಕ್ಷೇತ್ರದಲ್ಲಿ ಮನುಷ್ಯರಂತೆ ಪ್ರಾಣಿ-ಪ್ರಕೃತಿಯೂ ಗಂಡಾಂತರಕ್ಕೀಡಾಗಿವೆ. ಅಧಿಕಾರಸ್ಥರೇ ಮುಂದೆ ನಿಂತು ಪ್ರಕೃತಿ ಸಂಪತ್ತು ಲೂಟಿ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಅಕ್ರಮವಾಗಿ ಗುಡ್ಡ ಬಗೆದು ಮಣ್ಣು ತೆಗೆಯುವುದು, ಜಲ್ಲಿ ಕಲ್ಲಿನ ಗಣಿಗಾರಿಕೆ ಮತ್ತು ಮರಳುಗಾರಿಕೆ ನಡೆಯುತ್ತಿದೆ; ಪವನ ವಿದ್ಯುತ್ ಯೋಜನೆಗಾಗಿ ಸ್ಥಾಪಿಸಲಾಗಿರುವ ಗಾಳಿ ಯಂತ್ರಗಳಿಂದ ರೈತರಿಗೆ ತೊಂದರೆ ಆಗುತ್ತಿದೆ. ಗಾಳಿ ಯಂತ್ರದ ಸದ್ದಿಗೆ ಅಳಿವಿನಂಚಿನಲ್ಲಿರುವ ಪಟ್ಟೆ ಕತ್ತೆ ಕಿರುಬ ಮತ್ತು ಬೂದು ತೋಳದ ಸಂತತಿ ದಿಕ್ಕೆಟ್ಟಿದೆ. ಗಜೇಂದ್ರಗಡ ಪ್ರತ್ಯೇಕ ತಾಲೂಕ್ಕೆಂದು ಘೋಷಿಸಲಾಗಿದ್ದರೂ ಜನರಿಗೇನೂ ಅನುಕೂಲವಾಗಿಲ್ಲ. ತಾಲೂಕಿಗೆ ಬೇಕಾದ ಸರಕಾರಿ ಕಚೇರಿ ಮತ್ತಿತರ ಸೌಕರ್ಯಗಳಿನ್ನೂ ಮಂಜೂರಾಗಿಲ್ಲ.

ನೀರಾವರಿ ಯೋಜನೆ ಮತ್ತು ಕೈಗಾರಿಕೆ ಬಂದರೆ ಕ್ಷೇತ್ರದ ದೆಸೆ ಬದಲಾಗುತ್ತದೆ. ಕೆರೆ ತುಂಬಿಸುವ ಯೋಜನೆ ತಯಾರಾಗಬೇಕು. ಜಿ.ಎಸ್.ಪಾಟೀಲ್ ಶಾಸಕರಾಗಿದ್ದಾಗ 500 ಎಕರೆ ವಿಸ್ತೀರ್ಣದ ಜಗಳೂರು ಕೆರೆಗೆ ಮಲಪ್ರಭೆಯ ನೀರನ್ನು ತುಂಬಿಸಿ ಕೃಷಿಗೆ ಒದಗಿಸುವ ಯೋಜನೆಗೆ ಚಾಲನೆ ಕೊಡಲಾಗಿತ್ತು. ಆದರೆ ಪಾಟೀಲರು ಮಾಜಿಯಾದ ಬಳಿಕ ಆ ಯೋಜನೆ ಹಳ್ಳಹಿಡಿಯಿತು. ಇನ್ನು ಮೂರು ತಿಂಗಳಲ್ಲಿ ಬರುವ ಹೊಸ ಶಾಸಕನ ಮೊದಲ ಆದ್ಯತೆ ದುಡಿವ ಕೈಗಳಿಗೆ ಕೆಲಸ ಕೊಡುವ ಕೃಷಿ ಉನ್ನತೀಕರಣ ಮತ್ತು ಕೈಗಾರೀಕರಣ ಆಗಬೇಕು; ರೋಣ-ಗಜೇಂದ್ರಗಡವನ್ನು ಸಿಂಗಾಪುರ ಮಾಡುವುದು ಬೇಕಾಗಿಲ್ಲ; ಕ್ಷೇತ್ರವಾಸಿಗಳು ನೆಮ್ಮದಿಯಿಂದ ಬದುಕುವ ಅವಕಾಶ ಕಲ್ಪಿಸುವ ಇಚ್ಛಾಶಕ್ತಿ ತೋರಿಸಿದರೆ ಸಾಕು ಎನ್ನುತ್ತಾರೆ ಕ್ಷೇತ್ರದ ಜನ.

ಬಿಜೆಪಿ ಕಪ್ಪು ಕುದುರೆ ಯಾರು?!

ರಾಜಕೀಯ ಪ್ರಜ್ಞೆಯ ವಿಧಾನಸಭಾ ಕ್ಷೇತ್ರವೆಂದು ಪರಿಗಣಿತವಾಗಿರುವ ರೋಣ-ಗಜೇಂದ್ರಗಡ ಕಾಂಗ್ರೆಸ್-ಬಿಜೆಪಿ ಸಮಬಲದ ಸಮರಾಂಗಣ. ಎರಡೂ ಕಡೆ ಜಿದ್ದಿಗೆ ಬಿದ್ದು ಹೋರಾಡುವ ಪಕ್ಷ ನಿಷ್ಠ, ನಾಯಕ ನಿಷ್ಠ ಕಾರ್ಯಕರ್ತರ ದೊಡ್ಡ ಪಡೆಯೇ ಇದೆ.

ಬಿಜೆಪಿಯಲ್ಲಿ ಹಾಲಿ ಶಾಸಕ ಕಮ್ ಮಾಜಿ ಮಂತ್ರಿ ಕಳಕಪ್ಪ ಬಂಡಿ ಬಗ್ಗೆ ಅಸಮಾಧಾನ ಬುಸುಗುಡುತ್ತಿದೆ. ಯಡಿಯೂರಪ್ಪರಂಥ ದೊಡ್ಡವರ ಕೆಂಗಣ್ಣಿಗೆ ತುತ್ತಾಗಿರುವ ಕಳಕಪ್ಪ ಬಂಡಿಗೆ ಕೇಸರಿ ಟಿಕೆಟ್ ಸಿಗಲಾರದೆಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿವೆ. ಕೆಲವು ದಿನದ ಹಿಂದೆ ಗದಗಿಗೆ ಬಂದಿದ್ದ ಯಡಿಯೂರಪ್ಪ, “ಬಂಡಿ ಬೇಡವೆಂದು ಜನ ಹೇಳುತ್ತಿದ್ದಾರೆ” ಎಂದಿದ್ದರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶಿಗ್ಗಾವಿ-ಸವಣೂರು: ಸಾಮ್ರಾಜ್ಯ ಉಳಿಸಿಕೊಳ್ಳುವರಾ ಸಿಎಂ ಬೊಮ್ಮಾಯಿ?!

ಶಾಸಕರು ಸರಕಾರಿ ಗುಡ್ಡ ಕೊರೆದು ಐದು ಸಾವಿರ ಲೋಡ್ ಮಣ್ಣನ್ನು ತಮ್ಮ ಕೈಗಾರಿಕಾ ಸೈಟ್ ಸಮತಟ್ಟು ಮಾಡಲು ಸಾಗಿಸಿದ್ದಾರೆ; ಅಕ್ರಮ ಜಲ್ಲಿ ಕಲ್ಲಿನ ಗಣಿಗಾರಿಕೆಯನ್ನು ಶಾಸಕರ ಪುತ್ರ ನಡೆಸುತ್ತಿದ್ದಾರೆ ಎಂಬ ಆರೋಪ ಕ್ಷೇತ್ರದಲ್ಲಿದೆ. ಹಿರೇಹಳ್ಳದ ಉದ್ದಕ್ಕೂ ಶಾಸಕರ ಸೋದರಳಿಯ ಶಿವರಾಮ ದೇಸಾಯಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ ಎಂದು, ಇದರಿಂದ ತೊಂದರೆಗೀಡಾದ ಜನರು ಪ್ರತಿಭಟನೆ ಮಾಡಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರುಕೊಟ್ಟಿದ್ದರು. ಕಾನೂನುಬಾಹಿರ ಮರಳುಗಾರಿಕೆ ಬಂದ್ ಮಾಡಲು ಬಂದ ಅಧಿಕಾರಿಗೆ ಶಾಸಕರು ಆವಾಜ್ ಹಾಕಿ ಹಿಮ್ಮೆಟ್ಟಿಸಿದ್ದರು. ಈ ಘಟನೆ ಬಗ್ಗೆ ಜಿಲ್ಲಾ ಮಂತ್ರಿ ಸಿ.ಸಿ.ಪಾಟೀಲ್ ಮತ್ತು ಶಾಸಕ ಬಂಡಿ ಕೆಡಿಪಿ ಮೀಟಿಂಗ್‌ನಲ್ಲಿ ಬಹಿರಂಗವಾಗಿ ಬೈದಾಡಿಕೊಂಡಿದ್ದ ಆಡಿಯೋ ವೈರಲ್ ಆಗಿತ್ತು; ಶಾಸಕರ ಅಳಿಯ, ಬಾಳಗೋಡು ಎಂಬ ಹಳ್ಳಿಯ ದಲಿತರ ಮನೆ ಮುಂದೆ ಕೊಳಚೆ ನೀರು ನಿಲ್ಲುವಂತೆ ಮಾಡಿ ಕಾಡಿದ್ದು ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಈಚೆಗೆ ಶಾಸಕ ಬಂಡಿಯನ್ನು ಹೊರಗಿಟ್ಟೇ ರೋಣದಲ್ಲಿ ಜಯಮೃತ್ಯುಂಜಯ ಸ್ವಾಮಿ ಪಂಚಮಸಾಲಿ ಸಮಾವೇಶ ನಡೆಸಿದ್ದಾರೆ. ಮಠಾಧೀಶರಿಗೂ ಶಾಸಕರ ಬಗ್ಗೆ ಸದಭಿಪ್ರಾಯವಿಲ್ಲ. ಇಂಥ ಪ್ರತಿಕೂಲ ಘಟನಾವಳಿಗಳಿಂದ ಪಾರ್ಟಿಗೆ ರಿಪೇರಿ ಮಾಡಲಾಗದಂಥ ಡ್ಯಾಮೇಜ್ ಆಗಿದೆ ಎಂದು ಬಿಜೆಪಿ ಕಾರ್ಯಕರ್ತರೇ ಹೇಳುತ್ತಾರೆ.

ಆನೆಕಲ್ ದೊಡ್ಡಯ್ಯ

ಋಣಾತ್ಮಕ ಅಂಶಗಳ ನಡುವೆ ಕಳೆಗುಂದಿರುವ ಶಾಸಕ ಬಂಡಿಯನ್ನು ಮತ್ತೆ ಅಭ್ಯರ್ಥಿ ಮಾಡಿದರೆ ಗೆಲುವು ಸಾಧ್ಯವಿಲ್ಲವೆಂದು ಕಟ್ಟರ್ ಬಿಜೆಪಿ ತಂಡ ಹೈಕಮಾಂಡ್ ಎದುರು ವಾದಿಸುತ್ತಿದೆ ಎನ್ನಲಾಗಿದೆ. ಇದಕ್ಕೆ ಸಮಾನಾಂತರವಾಗಿ ಶಾಸಕ ಬಂಡಿ ತಮ್ಮ ಗಾಡ್ ಫಾದರ್-ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ ಮತ್ತು ಆರೆಸ್ಸೆಸ್ ಸೂತ್ರಧಾರರನ್ನು ಹಿಡಿದುಕೊಂಡು ಟಿಕೆಟ್‌ಗೆ ಪ್ರಯತ್ನ ಮಾಡುತ್ತಿದ್ದಾರೆ; ಆರೆಸ್ಸೆಸ್ ಬಂಡಿ ಪರವಾಗಿದೆ ಎಂಬ ವದಂತಿ ರಾಜಕೀಯ ವಲಯದಲ್ಲಿದೆ. ಈ ಬಂಡಿ ಪರ-ವಿರೋಧದ ಕಾರ್ಯಾಚರಣೆ ನಡುವೆ ಮುಂಡರಗಿ ಭಾಗದ ಹೇಮಗಿರಿ ಶಾವಿನಾಳ್, ಕುರುಬ ಸಮುದಾಯದ ರವಿ ದಂಡಿನ್, ಎಮ್ಮೆಲ್ಸಿ ಎಸ್.ವಿ.ಸಂಕನೂರ್ ಸಂಬಂಧಿ ಅಂದಪ್ಪ ಸಂಕನೂರ್ ಹೆಸರು ಬಿಜೆಪಿ ವಲಯದಲ್ಲಿ ಓಡಾಡುತ್ತಿದೆ.

ಬೆಂಗಳೂರು ಮೂಲದ ಆನೆಕಲ್ ದೊಡ್ಡಯ್ಯ ರೋಣದ ಎಮ್ಮೆಲ್ಲೆಯಾಗುವ ಆಸೆಯಿಂದ ಹಲವು ತಿಂಗಳಿಂದ ’ಹಣಾ’ಹಣಿ ನಡೆಸಿದ್ದಾರೆ. ಮಾಜಿ ಆರೆಸ್ಸೆಸ್-ಬಿಜೆಪಿಗ ದೊಡ್ಡಯ್ಯ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿಯಾಗುವ ಸಿದ್ಧತೆಯಲ್ಲಿದ್ದಾರೆ. ದೊಡ್ಡಯ್ಯ ರಿಯಲ್ ಎಸ್ಟೇಟ್ ದಂಧೆಯಲ್ಲಿ ದುಡಿದ ದುಡ್ಡನ್ನು ಕಬಡ್ಡಿ, ಕ್ರಿಕೆಟ್ ಮತ್ತಿತರ ಸಭೆ-ಸಮಾರಂಭಕ್ಕೆ ಧಾರಾಳವಾಗಿ ಹಂಚುತ್ತಿದ್ದಾರೆ. ಕ್ಷೇತ್ರದಲ್ಲಿ ಗಣನೀಯವಾಗಿರುವ ಸ್ವಜಾತಿ ಕುರುಬರ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟು ದೊಡ್ಡಯ್ಯ ರೋಣಕ್ಕೆ ಬಂದಿದ್ದರು. ಆದರೆ ಈ ಬಾರಿ ಕುರುಬರ ಓಟು ಸಿದ್ದರಾಮಯ್ಯನವರಿಂದ ಕಾಂಗ್ರೆಸ್ ಪಾಲಾಗುವುದರಿಂದ ದೊಡ್ಡಯ್ಯರ ಕನಸು ಈಡೇರುವುದು ಕಷ್ಟ ಎಂಬ ಲೆಕ್ಕಾಚಾರ ರಾಜಕೀಯ ವಿಶ್ಲೇಷಕರದ್ದಾಗಿದೆ.

ಕಾಂಗ್ರೆಸ್‌ನಲ್ಲಿ ಮಾಜಿ ಶಾಸಕ ಜಿ.ಎಸ್.ಪಾಟೀಲ್ ಅವರಿಗೆ ಟಿಕೆಟ್ ಪೈಪೋಟಿ ಇಲ್ಲ. ಬಾಗಲಕೋಟೆಯ ಮಾಜಿ ಸಂಸದ ಆರ್.ಎಸ್.ಪಾಟೀಲ್, ಕರ್ನಾಟಕ ಸರಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಬಿ.ಎಸ್.ಪಾಟೀಲ್ ಸಹೋದರರಾದ ಜಿ.ಎಸ್.ಪಾಟೀಲ್ ಕುಟುಂಬಕ್ಕೆ ರೋಣದ ರಾಜಕಾರಣದಲ್ಲಿ ವರ್ಚಸ್ಸಿದೆ. ಸಜ್ಜನ-ಸೌಮ್ಯ ಪಾಟೀಲ್ ಜನರನ್ನು ಹಚ್ಚಿಕೊಳ್ಳುತ್ತಾರೆ; ಬಿಜೆಪಿ ಶಾಸಕ ಕಳಕಪ್ಪ ಬಂಡಿಗೆ ಹೋಲಿಸಿದರೆ ಫಾರ್ ಬೆಟರ್ ಎಂಬ ಅನಿಸಿಕೆ ಕ್ಷೇತ್ರದಲ್ಲಿದೆ. ರಡ್ಡಿ ಲಿಂಗಾಯತರಾದರೂ ಬಹುಸಂಖ್ಯಾತ ಪಂಚಮಸಾಲಿಗಳ ವಿಶ್ವಾಸ ಗಳಿಸಿರುವ ಪಾಟೀಲ್ ಮಾಜಿ ಸಿಎಂ ಸಿದ್ದು ಬೆಂಬಲಿಗರಾದ್ದರಿಂದ ಕುರುಬರ ಓಟು ಏಕಗಂಟಿನಲ್ಲಿ ಪಡೆಯುತ್ತಾರೆನ್ನಲಾಗುತ್ತಿದೆ; ಈ ವ್ಯಕ್ತಿ-ಜಾತಿ ಕೇಂದ್ರಿತ ಸೂತ್ರ-ಸಮೀಕರಣದಿಂದ ಕಾಂಗ್ರೆಸ್‌ನ ಪಾಟೀಲರಿಗೆ ರೋಣ ರಣರಂಗ ಅನುಕೂಲಕರವಾಗುತ್ತಿದೆ ಎಂಬ ಚರ್ಚೆ ರಾಜಕೀಯ ಕಟ್ಟೆಯಲ್ಲಿ ನಡೆದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಸಂಘರ್ಷಕ್ಕೆ ಒಂದು ವರ್ಷ: ಮೈತೈ, ಕುಕಿ ಸಮುದಾಯಗಳಿಂದ ಪ್ರತ್ಯೇಕ ಕಾರ್ಯಕ್ರಮ

0
ದೇಶವನ್ನೇ ತಲ್ಲಣಗೊಳಿಸಿದ್ದ ಮಣಿಪುರ ಜನಾಂಗೀಯ ಸಂಘರ್ಷಕ್ಕೆ ಒಂದು ವರ್ಷವಾಗಿದೆ. ಕಳೆದ 2023ರ ಮೇ.3ರಂದು ಮಣಿಪುರ ಜನಾಂಗೀಯ ಸಂಘರ್ಷಕ್ಕೆ ಸಾಕ್ಷಿಯಾಗಿತ್ತು. ಇದರ ನೆನಪಿಗಾಗಿ ಸಂಘರ್ಷದ ಭಾಗವಾಗಿದ್ದ ಕುಕಿ-ಜೋ ಮತ್ತು ಮೈತೈ ನಾಗರಿಕ ಸಮಾಜ ಸಂಘಟನೆಗಳು ಮೇ...