Homeಅಂಕಣಗಳುಬಹುಜನ ಭಾರತ; ಫಿರೋಜ್ ಗಾಂಧೀ ಎಂಬ ನೆಹರೂ ಅಳಿಯ ಹೀಗಿದ್ದರು...

ಬಹುಜನ ಭಾರತ; ಫಿರೋಜ್ ಗಾಂಧೀ ಎಂಬ ನೆಹರೂ ಅಳಿಯ ಹೀಗಿದ್ದರು…

- Advertisement -
- Advertisement -

ಆಗಸ್ಟ್ 20 ದಿವಂಗತ ಪ್ರಧಾನಿ ರಾಜೀವ್ ಗಾಂಧೀ ಅವರು ಹುಟ್ಟಿದ ದಿನ. ಅಲ್ಲಿಂದಾಚೆ ಇಪ್ಪತ್ತು ದಿನಗಳ ಅಂತರದಲ್ಲಿ ಎದುರಾಗುವುದು ಸೆಪ್ಟಂಬರ್ 12. ರಾಜೀವ್ ಅವರ ತಂದೆ ಮತ್ತು ಕಾಂಗ್ರೆಸ್ ಪಕ್ಷದ ಗಣ್ಯ ನಾಯಕರಲ್ಲಿ ಒಬ್ಬರಾಗಿದ್ದ ಫಿರೋಜ್ ಗಾಂಧೀ ಜನಿಸಿದ ದಿನ ಅದು. ಅವರು ಗತಿಸಿದ ದಿನ ಕೂಡ ಸೆಪ್ಟಂಬರ್ ಎಂಟು. ಈ ಎರಡೂ ದಿನಗಳು ವರ್ಷವರ್ಷವೂ ಹೇಳ ಹೆಸರಿಲ್ಲದೆ ಸರಿದುಹೋಗುತ್ತವೆ. ನೆಹರೂ ಅಳಿಯನ ಸರಳ ಸಾರ್ವಜನಿಕ ಸ್ಮರಣೆಯೂ ಕಾಂಗ್ರೆಸ್ಸಿಗೆ ಬೇಕಿಲ್ಲ.

ನೆಹರೂ ಮನೆತನಕ್ಕೆ ಗಾಂಧೀ ಎಂಬ ಕುಲನಾಮ ಅಥವಾ ಕುಟುಂಬನಾಮವು ಬಲು ದೊಡ್ಡ ಆಸ್ತಿ. ಈ ಆಸ್ತಿಯ ಕಾರಣಪುರುಷ ಫಿರೋಜ್ ಗಾಂಧೀ. ಇಂದಿರಾ ಪ್ರಿಯದರ್ಶಿನಿ ಎಂಬ ಗಟ್ಟಿಗಿತ್ತಿ ಇಂದಿರಾಗಾಂಧೀ ಎನಿಸಿಕೊಂಡದ್ದು, ಆಕೆಯ ಮಕ್ಕಳು, ಮೊಮ್ಮಕ್ಕಳಾದ ರಾಜೀವ್, ಸಂಜಯ್, ರಾಹುಲ್, ಪ್ರಿಯಾಂಕಾ, ವರುಣ್, ಸೊಸೆಯಂದಿರಾದ ಸೋನಿಯಾ ಮತ್ತು ಮೇನಕಾ ಅವರು ಹೆಸರುಗಳಿಗೆ ಗಾಂಧೀ ಎಂಬ ಕುಟುಂಬನಾಮ ಸೇರಿಕೊಂಡಿರುವ ಕಾರಣ ಫಿರೋಜ್ ಗಾಂಧಿಯೇ.

ಪಾಕಿಸ್ತಾನದ ಪ್ರಮುಖ ರಾಜಕೀಯ ಕುಟುಂಬದ ಅಳಿಯ ಆಸೀಫ್ ಅಲಿ ಜರ್ದಾರಿ. ಹತ್ಯೆಗೀಡಾಗುವ ಮುನ್ನ ಆ ದೇಶದ ಪ್ರಧಾನಿಯಾಗಿದ್ದ ಬೆನಜೀರ್ ಭುಟ್ಟೋ ಅವರ ಪತಿ. ಬೆನಜೀರ್ ಹತ್ಯೆಯ ನಂತರ ಪಾಕಿಸ್ತಾನದ ಪ್ರಧಾನಿಯಾಗಿ ಮೆರೆದರು. ಚಾಣಾಕ್ಷ ಚಂದ್ರಬಾಬು ನಾಯ್ಡು ಮಗಳ ಕೊಟ್ಟ ಮಾವ ಎನ್.ಟಿ.ಆರ್. ಅವರನ್ನೇ ನುಂಗಿ ನೀರು ಕುಡಿದು ಅಧಿಕಾರದ ಗದ್ದುಗೆಯನ್ನು ಕೈವಶ ಮಾಡಿಕೊಂಡವರು. ಶಿವಸೇನೆಯ ಮನೋಹರ ಜೋಷಿ ಅವರ ರಾಜಕೀಯ ಭವಿಷ್ಯಕ್ಕೆ ಬೆಂಕಿ ಇಕ್ಕಿದ್ದವರು ಅವರ ರಿಯಲ್ ಎಸ್ಟೇಟ್ ಉದ್ಯಮಿ ಆಳಿಯನ ಹೆಸರು ಗಿರೀಶ್ ವ್ಯಾಸ್. ಬಿಜೆಪಿಯ ಅಂತಃಪುರದಲ್ಲಿ ಗುಸುಗುಸುವಿಗೆ ಕಾರಣರಾಗಿದ್ದವರು ಅಟಲ್ ಬಿಹಾರಿ ವಾಜಪೇಯಿ ಅಳಿಯ ರಂಜನ್ ಭಟ್ಟಾಚಾರ್ಯ ಅವರು. ದೇವರಾಜ ಅರಸು ಅವರ ಅಳಿಯ ಎಂ.ಡಿ.ನಟರಾಜ್ ಮತ್ತು ರಾಮಕೃಷ್ಣ ಹೆಗಡೆ ಅಳಿಯ ಮನು ನಿಚ್ಚಾನಿ ಒಂದು ಕಾಲದಲ್ಲಿ ಸುದ್ದಿ ಮಾಡಿದ್ದ ರಾಜಕೀಯ ಕುಟುಂಬಗಳ ಅಳಿಯಂದಿರು. ಸೋನಿಯಾ ಗಾಂಧೀ ಅವರ ಅಳಿಯ ರಾಬರ್ಟ್ ವಾಡ್ರಾ ಅವರೂ ವಿವಾದದ ರಾಡಿ ಎಬ್ಬಿಸಿದ್ದವರೇ.

ಅಳಿಯಂದಿರು ರಾಜಕಾರಣದ ಕನಸು ಕಾಣುವುದನ್ನು ತಪ್ಪೆಂದು ಹೇಳಲಾಗದು. ನೆಲದ ಕಾನೂನೂ ಅದಕ್ಕೆ ಅಡ್ಡಬಾರದು. ಆದರೆ ರಾಜಕೀಯ ಅಧಿಕಾರವು ಉಳ್ಳವರಲ್ಲೇ ಹೆಪ್ಪುಗಟ್ಟಿರುವ ಪರಂಪರೆಯೊಂದು ಈ ದೇಶದಲ್ಲಿದೆ. ದೊಡ್ಡವೂ ಸಣ್ಣವೂ ಸೇರಿ 100-200 ಕುಟುಂಬಗಳೇ ಈ ದೇಶವನ್ನು ಆಳುತ್ತಿವೆ ಎಂಬುದು ಸಮೀಕ್ಷೆಯೊಂದರಿಂದ ಹೊರಬಿದ್ದಿರುವ ಸಂಗತಿ. ಜನತಂತ್ರದ ಹೆಸರಿನಲ್ಲಿ ನಡೆಯುತ್ತಿರುವ ಕುಚೋದ್ಯ. ಬಿಜೆಪಿ ಸೇರಿದಂತೆ ಯಾವ ಪಕ್ಷವೂ ಈ ಮಾತಿಗೆ ಹೊರತಲ್ಲ. ಒಂದು ಪಕ್ಷ ಹೆಚ್ಚು ಅಪರಾಧಿ ಇದ್ದೀತು, ಮತ್ತೊಂದು ಕಡಿಮೆ ಇದ್ದೀತು. ಆದರೆ ಎಲ್ಲ ಪಕ್ಷಗಳೂ ಅಪರಾಧಿಗಳೇ. ಸ್ನಾನದ ಕೋಣೆಯಲ್ಲಿ ಎಲ್ಲರೂ ಬೆತ್ತಲೆ (ಹಮಾಮ್ ಮೇಂ ಸಬ್ ನಂಗಾ) ಎಂಬ ಗಾದೆ ಮಾತಿನಂತೆ.

ವಂಶಪಾರಂಪರ್ಯ ರಾಜಕಾರಣದ ಈ ಅನಿಷ್ಟ ದಿಲ್ಲಿಯಿಂದ ಹಳ್ಳಿಯತನಕ ಬೇರು ಬಿಟ್ಟಿದೆ. ಹೇರಳ ಹಣಗಳಿಸಲು ರಾಜಕಾರಣವೇ ರಾಜಮಾರ್ಗ ಎಂಬುದು ಜನಜನಿತ ಸಂಗತಿ. ಈ ಕಾರಣದಿಂದಾಗಿಯೇ ರಾಜಕಾರಣವು ಕೌಟುಂಬಿಕ ವ್ಯಾಪಾರ-ವ್ಯವಹಾರದ ರೂಪ ತಳೆದಿದೆ.

ಅಳಿಯಂದಿರ ಮಾತಿಗೆ ಮರಳೋಣ. ಮೇಲೆ ಹೇಳಿದ ಅಳಿಯಂದಿರ ಸಾಲಿನಲ್ಲಿ ಭಿನ್ನವಾಗಿ ನಿಲ್ಲುವವರು ಜವಾಹರಲಾಲ್ ನೆಹರೂ ಅವರ ಅಳಿಯ ಫಿರೋಜ್ ಗಾಂಧೀ. ಇಂದಿರಾ ಪ್ರಿಯದರ್ಶಿನಿ ಅವರ ಪತಿ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುತ್ತಾರೆ. 1930ರಲ್ಲಿ ಫೈಜಾಬಾದ್ ಜೈಲಿನಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರೊಂದಿಗೆ 19 ತಿಂಗಳ ಕಾಲ ಜೈಲುವಾಸ ಅನುಭವಿಸಿದ್ದರು (ಯೋಗಿ ಆದಿತ್ಯನಾಥ್ ಸರ್ಕಾರ ಫೈಜಾಬಾದನ್ನು ಅಯೋಧ್ಯೆ ಎಂದು ಮರುನಾಮಕರಣ ಮಾಡಿದೆ). ಇಂದಿರಾ ಪ್ರಿಯದರ್ಶಿನಿ ಅವರೊಡನೆ ವಿವಾಹದ ನಂತರ ಸ್ವತಂತ್ರ ಭಾರತದ ಲೋಕಸಭೆಯ ಸದಸ್ಯರಾಗಿ ಆರಿಸಿ ಬಂದಿದ್ದರು. ನೆಹರೂ ನೇತೃತ್ವದ ಸರ್ಕಾರದ ಹಣಕಾಸು ಮಂತ್ರಿ ಟಿ.ಟಿ.ಕೃಷ್ಣಮಾಚಾರಿ ಅವರ ಮೇಲೆ ಆರ್ಥಿಕ ಅವ್ಯವಹಾರದ ಆಪಾದನೆಗಳನ್ನು ಮಾಡಿ ಅಲ್ಲೋಲಕಲ್ಲೋಲ ಉಂಟು ಮಾಡಿದ್ದರು. ಲೋಕಸಭೆ ಬೆಕ್ಕಸ ಬೆರಗಾಗಿತ್ತು. ಕೃಷ್ಣಮಾಚಾರಿ ಅವರು ರಾಜೀನಾಮೆ ನೀಡಬೇಕಾಗಿ ಬರುತ್ತದೆ.

ಉತ್ತರಪ್ರದೇಶದ ರಾಯಬರೇಲಿಯಿಂದ ಕಾಂಗ್ರೆಸ್ ಸಂಸದನಾಗಿ 1952ರಲ್ಲಿ ಆರಿಸಿ ಬರುವ ಫಿರೋಜ್ ಗಾಂಧೀ ಮೊದಲ ಕೆಲವು ವರ್ಷಗಳ ಕಾಲ ಹಿಂದಿನ ಬೆಂಚಿನ ಸದಸ್ಯರಾಗಿ ಕಾಲ ಕಳೆಯುತ್ತಾರೆ. 1956 ಮತ್ತು 1957ರಲ್ಲಿ ಭ್ರಷ್ಟಾಚಾರ ವಿರೋಧೀ ಆಂದೋಲನದ ಮುಂಚೂಣಿಯಲ್ಲಿ ನಿಲ್ಲುತ್ತಾರೆ.

ಆಗ ತಾನೇ ಕಣ್ಣು ಬಿಟ್ಟಿದ್ದ ಸರ್ಕಾರಿ ಸಂಸ್ಥೆ ಭಾರತೀಯ ಜೀವವಿಮಾ ನಿಗಮ ತನ್ನ ಐವತ್ತೈದು ಲಕ್ಷ ಪಾಲಿಸಿದಾರರ ಹಣದ ದುರುಪಯೋಗದ ಹಗರಣದ ಕೇಂದ್ರಬಿಂದು ಆಗುತ್ತದೆ. ಷೇರು ಮಾರುಕಟ್ಟೆ ಜೂಜು ಷೋಕಿಗೆ ಕುಖ್ಯಾತನಾಗಿದ್ದ ಹರಿದಾಸ್ ಮುಂಧ್ರಾ ಎಂಬಾತನ ಕಂಪನಿಗಳ ಷೇರುಗಳನ್ನು ಮಾರುಕಟ್ಟೆ ದರಕ್ಕಿಂತಲೂ ಹೆಚ್ಚು ದರ ತೆತ್ತು ಖರೀದಿಸಲು ಎಲ್‌ಐಸಿ ಪಾಲಿಸಿದಾರರ ಕಂತುಗಳ ಹಣವಾದ 144 ಲಕ್ಷ ರುಪಾಯಿಯನ್ನು ಬಳಸಲಾಗುತ್ತದೆ.

ಆಡಳಿತ ಪಕ್ಷದ ಸದಸ್ಯನಾಗಿ ಫಿರೋಜ್ ಲೋಕಸಭೆಯಲ್ಲಿ ನಿಂತು ತಮ್ಮ ಮಾವನ ಸರ್ಕಾರದ ಹುಳುಕನ್ನು ಬಯಲಿಗೆಳೆಯುತ್ತಾರೆ. ಈ ಹಗರಣ ಸಾರ್ವಜನಿಕ ಗದ್ದಲ ಆಗುವುದು ನೆಹರೂಗೆ ಬೇಕಿರಲಿಲ್ಲ. ಸರ್ಕಾರದ ವರ್ಚಸ್ಸಿಗೆ ಹೊಡೆತ ಬೀಳುತ್ತದೆಂಬ ಆಶಂಕೆ ಅವರದು. ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಎಂ.ಸಿ.ಛಾಗ್ಲಾ ಬಹಿರಂಗ ಬೈಠಕ್ಕುಗಳಲ್ಲಿ ನಡೆಸುವ ನ್ಯಾಯಾಂಗ ತನಿಖೆಯನ್ನು ನೋಡಲು ಜನ ದೊಡ್ಡ ಸಂಖ್ಯೆಯಲ್ಲಿ ನೆರೆಯುತ್ತಾರೆ. 1958ರಲ್ಲಿ ಹಗರಣದ ಆಪಾದನೆಗಳು ಸಾಬೀತಾಗುತ್ತವೆ. ಅಂದಿನ ಹಣಕಾಸು ಸಚಿವ ಟಿ.ಟಿ.ಕೃಷ್ಣಮಾಚಾರಿ ರಾಜೀನಾಮೆ ಕೊಡಬೇಕಾಗುತ್ತದೆ. ಹರಿದಾಸ್ ಮುಂಧ್ರಾನನ್ನು ದಿಲ್ಲಿಯ ಪ್ರತಿಷ್ಠಿತ ಹೊಟೆಲ್ ಕ್ಲ್ಯಾರಿಡ್ಜಸ್‌ನ ವಿಲಾಸೀ ಕೋಣೆಯಿಂದ ಬಂಧಿಸಿ ಕಾರಾಗೃಹಕ್ಕೆ ಕಳಿಸಲಾಗುತ್ತದೆ.

ಇಂದಿರಾ-ಫಿರೋಜ್ ಬದುಕಿನಲ್ಲಿ ಆ ವೇಳೆಗಾಗಲೇ ಬಿರುಕುಗಳು ಹಿರಿದಾಗಿರುತ್ತವೆ. ಪರಸ್ಪರರ ನಿಷ್ಠೆಯ ಕುರಿತು ಒಡಕು ಮಾತುಗಳು ದಿಲ್ಲಿ ರಾಜಕಾರಣದ ಮೊಗಸಾಲೆಯಲ್ಲಿ ಆ ಹೊತ್ತಿಗಾಗಲೆ ಗಡಚಿಕ್ಕತೊಡಗಿರುತ್ತವೆ. ಫಿರೋಜ್ ಅವರನ್ನು ನೆಹರೂ ಮತ್ತು ಇಂದಿರಾ ದೂರವೇ ಇಟ್ಟಿದ್ದು ಜನಜನಿತ.

ಫಿರೋಜ್ ಗಾಂಧೀ ಹುಟ್ಟಿದ್ದು ಮುಂಬಯಿಯಲ್ಲಿ. 1912ರ ಸೆಪ್ಟಂಬರ್ 12ರಂದು. ಗುಜರಾತೀ ಅಡ್ಡಹೆಸರಿದ್ದ ಜಹಾಂಗೀರ್ ಫೆರಾದೂನ್ ಗಾಂಧೀ ಮತ್ತು ರತ್ತೀಮಾಯಿ ಗಾಂಧೀ ಫಿರೋಜ್ ತಂದೆ ತಾಯಿ. ನಾಲ್ಕು ಮಕ್ಕಳ ತಂದೆ ಫೆರಾದೂನ್ ನೌಕಾವಿಷಯದ ಎಂಜಿನಿಯರ್. ಅಕಾಲ ಮರಣಕ್ಕೆ ತುತ್ತಾಗುತ್ತಾರೆ. ಅನಾಥ ಕುಟುಂಬ ಅಲಹಾಬಾದಿನಲ್ಲಿದ್ದ ಫೆರಾದೂನ್ ಗಾಂಧೀಯ ಚಿಕ್ಕಮ್ಮನ ಆಶ್ರಯಕ್ಕೆ ಸರಿಯುತ್ತದೆ. ಅಲ್ಲಿ ಬೆಳೆಯುವ ಫಿರೋಜ್ ಮತ್ತು ಇಂದಿರಾ ಪ್ರೀತಿಸಿ ಮದುವೆ ಆಗುತ್ತಾರೆ. ಅದು 1942ರ ಮಾರ್ಚ್ 26. ರಾಮನವಮಿಯ ದಿನ. (ಯೋಗಿ ಆದಿತ್ಯನಾಥ್ ಅವರ ಸರ್ಕಾರ ಅಲಹಾಬಾದಿನ ಹೆಸರನ್ನು ಪ್ರಯಾಗರಾಜ ಎಂದು ಬದಲಾಯಿಸಿದೆ).

ಮಹಾತ್ಮಾಗಾಂಧೀ ಮುಂದೆ ನಿಂತು ಈ ಮದುವೆ ಮಾಡಿಸುತ್ತಾರೆ. ಗಾಂಧೀಜಿ ಪ್ರಭಾವಕ್ಕೊಳಗಾಗುವ ಫಿರೋಜ್ ಗಾಂಧೀ ತಮ್ಮ ಕುಲನಾಮದ ಕಾಗುಣಿತವನ್ನು Gandhyಗೆ ಬದಲಾಗಿ Gandhi ಎಂದು ಬದಲಾಯಿಸಿಕೊಳ್ಳುತ್ತಾರೆ.

ಫಿರೋಜ್ ಹೃದಯಾಘಾತದಿಂದ 1960ರ ಸೆಪ್ಟಂಬರ್ ಎಂಟರಂದು ಕಡೆಯುಸಿರೆಳೆಯುತ್ತಾರೆ. ಆಗ ಅವರಿಗೆ ವಯಸ್ಸು 48 ಕೂಡ ಆಗಿರುವುದಿಲ್ಲ. ಮೂರು ದಿನ ಬಾಕಿ ಇರುತ್ತವೆ. ಅವರ ಅಂತ್ಯಸಂಸ್ಕಾರ ಪಾರ್ಸಿ ಮತ್ತು ಹಿಂದೂ ಪದ್ಧತಿಗಳ ಪ್ರಕಾರ ನಡೆಯುತ್ತದೆ. ದಿಲ್ಲಿಯ ನಿಗಮಬೋಧ್ ಘಾಟ್‌ನಲ್ಲಿ ತಂದೆಯ ಚಿತೆಗೆ ಕೊಳ್ಳಿ ತಗುಲಿಸುತ್ತಾರೆ ಎಳೆಯ ರಾಜೀವಗಾಂಧೀ. ಚಿತಾಭಸ್ಮದ ಅರ್ಧದಷ್ಟನ್ನು ಅಲಹಾಬಾದಿನ ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸಿದರೆ ಇನ್ನರ್ಧವನ್ನು ಅದೇ ನಗರದ ಪಾರ್ಸೀ ರುದ್ರಭೂಮಿಯಲ್ಲಿ ಹುಗಿದು ಕಟ್ಟಿದ ಸಮಾಧಿಯನ್ನು ಈಗಲೂ ಕಾಣಬಹುದು.

ನೆಹರೂ- ಗಾಂಧೀ ವಂಶದ ಮೂಲ ನೆಲೆ ಅಲಹಾಬಾದಿನ ’ಆನಂದಭವನ’. ಫಿರೋಜ್ ಗಾಂಧೀ ಸಮಾಧಿಗೆ ಅಲ್ಲಿಂದ ಕೆಲವೇ ಕಿಲೋಮೀಟರುಗಳ ದೂರ. ಈ ಸಂಗತಿ ಆನಂದಭವನಕ್ಕೆ ಹರಿಯುವ ಬಹುತೇಕ ಪ್ರವಾಸಿಗಳಿಗೆ ತಿಳಿಯದು. ತಿಳಿಯುವಂತೆ ಮಾಡುವ ಪ್ರಯತ್ನವನ್ನು ನೆಹರೂ-ಗಾಂಧೀ ಮನೆತನ ಮಾಡಿಲ್ಲ.


ಇದನ್ನೂ ಓದಿ: ಸರ್ಕಾರಿ ದರೋಡೆಗೆ ತೆರಿಗೆ ಎಂದು ಹೆಸರು: ಬೆಲೆ ಏರಿಕೆಗೆ ಕಾಂಗ್ರೆಸ್‌ ಕಿಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಪೆಂಗ್ವಿನ್ ಇಂಡಿಯಾ ಹಿಂದೆ ಸರಿದ ನಂತರ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ‘ಬಿಲಾಂಗಿಂಗ್’ ಅನ್ನು ಪ್ರಕಟಿಸಲಿರುವ ‘ಹಾರ್ಪರ್‌ಕಾಲಿನ್ಸ್’ 

ನವದೆಹಲಿ: ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಇದೀಗ ಭಾರತದಲ್ಲಿ ಹಾರ್ಪರ್‌ಕಾಲಿನ್ಸ್ ಇಂಡಿಯಾ ಮೂಲಕ ಪ್ರಕಟವಾಗಲಿದೆ. ಪೆಂಗ್ವಿನ್ ರ‍್ಯಾಂಡಮ್ ಹೌಸ್ ಇಂಡಿಯಾ...

ಜೈಲಿನಲ್ಲಿ ಕಂಬಿ ಎಣಿಸುತ್ತಿರುವ 25 ಕ್ರಿಮಿನಲ್‌ಗಳು, ದೆಹಲಿಯ ಜಂತರ್-ಮಂತರ್‌ಗೆ ಬರುಲು ಹೇಗೆ ಸಾಧ? ತನಿಖಾ ವರದಿಯಲ್ಲಿ ಬಯಲಾಯ್ತು ಪೊಲೀಸರ ಕುತಂತ್ರ

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮ ವಿರೋಧಿ ಪ್ರತಿಭಟನೆ ವೇಳೆ ದೆಹಲಿ ಪೊಲೀಸರು ಬಳಸಿದ್ದ ‘ಅಟೋಮೇಟೆಡ್ ಫೇಶಿಯಲ್ ರೆಕಗ್ನಿಷನ್ ಸಿಸ್ಟಮ್’ (AFRS - ಮುಖಚರ್ಯೆ ಗುರುತಿಸುವ ತಂತ್ರಜ್ಞಾನ) ಗಂಭೀರ...

ಪಶ್ಚಿಮ ಬಂಗಾಳ: ವರ್ಷದಲ್ಲಿ 1,000 ಆರ್‌ಎಸ್‌ಎಸ್‌ ಶಾಲೆ: ಶಿಕ್ಷಣ ವ್ಯವಸ್ಥೆಯನ್ನೇ ‘ರಾಷ್ಟ್ರೀಯತಾವಾದಿ’ಗೊಳಿಸುವುದಾಗಿ ಘೋಷಿಸಿದ ಸುವೇಂದು ಅಧಿಕಾರಿ

ಕೋಲ್ಕತ್ತಾ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶೈಕ್ಷಣಿಕ ವಿಭಾಗವಾಗಿರುವ ವಿದ್ಯಾ ಭಾರತಿಯ ಶಾಲೆಗಳ ಸಂಖ್ಯೆಯನ್ನು ಪಶ್ಚಿಮ ಬಂಗಾಳದಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಘೋಷಿಸಿದ್ದಾರೆ. ರಾಜ್ಯದ ಪ್ರತಿಯೊಂದು ಜಿಲ್ಲೆ, ಪುರಸಭೆ...

SIR ನ್ಯಾಯಸಮ್ಮತವಾಗಿಲ್ಲ ಮಾಜಿ ಚುನಾವಣಾ ಆಯುಕ್ತ ಅಶೋಕ್ ಲಾವಾಸ ಆತಂಕ

ಭಾರತೀಯ ಚುನಾವಣಾ ಆಯೋಗವು (ಇಸಿಐ) ದೇಶಾದ್ಯಂತ ಕೈಗೊಂಡಿರುವ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯು ಶಾಸನಾತ್ಮಕವಾಗಿ ಕಾನೂನುಬದ್ಧವಾಗಿದ್ದರೂ, ನೈತಿಕವಾಗಿ ನ್ಯಾಯಸಮ್ಮತವಾಗಿಲ್ಲ ಎಂದು ಮಾಜಿ ಚುನಾವಣಾ ಆಯುಕ್ತ ಅಶೋಕ್ ಲಾವಾಸ ತೀವ್ರ...

ಜಂತರ್ ಮಂತರ್ ಹಲ್ಲೆ: ‘ತಲೆಬುರುಡೆ ಒಡೆದೆ, ಜೈಲಿಗೆ ಹೋಗಲಿಲ್ಲ; ಕಪಿಲ್ ಮಿಶ್ರಾ ನನ್ನ ಅಣ್ಣ’: ಬಿಜೆಪಿ ಬೆಂಬಲದ ಬಗ್ಗೆ ದಾಳಿ ಆರೋಪಿ ಬಹಿರಂಗ ಹೇಳಿಕೆ

ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರಿಯ ತಂದೆಯ ಮೇಲೆ ನಡೆದ ಹಲ್ಲೆ ಪ್ರಕರಣ ಇದೀಗ ರಾಜಕೀಯ ವಿವಾದದ ಕೇಂದ್ರವಾಗಿದೆ. ಪ್ರಕರಣದ ಆರೋಪಿಯಾಗಿರುವ ಸ್ವತಃ ಬಲಪಂಥೀಯ ಹಾಗೂ ಹಿಂದೂತ್ವ ಕಾರ್ಯಕರ್ತ...

ದೆಹಲಿ: ‘ಖಾನ್’ ಎಂಬ ಹೆಸರಿನ ಕಾರಣಕ್ಕೆ ಪತ್ರಕರ್ತೆಯರ ಮೇಲೆ ಹಲ್ಲೆ ಆರೋಪ, FIR ದಾಖಲಿಸುವಂತೆ ಸಾಕೇತ್ ಠಾಣೆಯಲ್ಲಿ ಧರಣಿ

ದೆಹಲಿಯ ಸಾಕೇತ್ ಮ್ಯಾಕ್ಸ್ ಆಸ್ಪತ್ರೆಯ ಹೊಸ ವಿಭಾಗದ ಉದ್ಘಾಟನಾ ಕಾರ್ಯಕ್ರಮದ ವರದಿಗೆ ತೆರಳಿದ್ದ '4PM ನ್ಯೂಸ್ ನೆಟ್‌ವರ್ಕ್'ನ ಮುಸ್ಲಿಂ ಮಹಿಳಾ ಪತ್ರಕರ್ತೆಯರಾದ ಶಾಹೀನ್ ಖಾನ್ ಮತ್ತು ನಫೀಸಾ ಖಾನ್ ಅವರ ಮೇಲೆ ದಿಲ್ಲಿ...

ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದಕ್ಕೆ ದೆಹಲಿ ಪೊಲೀಸರಿಂದ ಬಂಧನ-ಹಲ್ಲೆ: ಇಬ್ಬರು ಪತ್ರಕರ್ತೆಯರ ಆರೋಪ

ಸುದ್ದಿ ಮಾಡುತ್ತಿದ್ದಾಗ ದಕ್ಷಿಣ ದೆಹಲಿಯಲ್ಲಿ ದೆಹಲಿ ಪೊಲೀಸ್ ಸಿಬ್ಬಂದಿ ತಮ್ಮನ್ನು ವಶಕ್ಕೆ ಪಡೆದು ಥಳಿಸಿದ್ದಾರೆ ಎಂದು ಇಬ್ಬರು ಮುಸ್ಲಿಂ ಸ್ವತಂತ್ರ ಮಹಿಳಾ ಪತ್ರಕರ್ತೆಯರು ಆರೋಪಿಸಿದ್ದಾರೆ. '4 ಪಿಎಮ್ ನ್ಯೂಸ್ ನೆಟ್‌ವರ್ಕ್' (4 PM News...

ತ್ರಿಪುರಾ: ‘ದನ ಕಳ್ಳ’ ಎಂದು, ಖರೀದಿಸಿದ ದನಗಳೊಂದಿಗೆ ಹಿಂತಿರುಗುತ್ತಿದ್ದ ಮುಸ್ಲಿಂ ವ್ಯಾಪಾರಿ ಮೇಲೆ ಗುಂಪು ಹಲ್ಲೆ: 46 ವರ್ಷದ ಜಲೀಲುರ್ ರೆಹಮಾನ್ ಸಾವು

ಅಗರ್ತಲಾ: ಖರೀದಿಸಿದ ಎರಡು ದನಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಮುಸ್ಲಿಂ ದನ ವ್ಯಾಪಾರಿಯೊಬ್ಬರನ್ನು ‘ದನ ಕಳ್ಳ’ ಎಂದು ಆರೋಪಿಸಿ ಗುಂಪೊಂದು ಥಳಿಸಿದ ಪರಿಣಾಮ ಅವರು ಮೃತಪಟ್ಟಿರುವ ಘಟನೆ ತ್ರಿಪುರಾದ ಕಲ್ಯಾಣಪುರ ಪೊಲೀಸ್ ಠಾಣೆ ವ್ಯಾಪ್ತಿಯ...

ಪ್ರಶ್ನಿಸುವವರನ್ನು ‘ದಿಮಾಗಿ ನಕ್ಸಲ್’ ಎಂದು ಕರೆಯುವುದು ಸೂಕ್ಷ್ಮತೆಯಿಲ್ಲದ ನಡವಳಿಕೆ: ಗೀತಾಂಜಲಿ ಅಂಗಮೋ

ಪ್ರಶ್ನೆ ಕೇಳುವ ವ್ಯಕ್ತಿಯನ್ನು ‘ದಿಮಾಗಿ ನಕ್ಸಲ್’ (ಬುದ್ಧಿಜೀವಿ ನಕ್ಸಲರು) ಎಂದು ಕರೆಯುವುದು ಅತ್ಯಂತ ಸೂಕ್ಷ್ಮತೆಯಿಲ್ಲದ ರೀತಿಯಾಗಿದೆ ಎಂದು ಪ್ರಸಿದ್ಧ ಹವಾಮಾನ ಕಾರ್ಯಕರ್ತ ಮತ್ತು ಶಿಕ್ಷಣ ತಜ್ಞ ಸೋನಂ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ...

ಬಸವರಾಜ ಕನ್ನಾಳೆ ಸಿಂಡಿಕೇಟ್ ಸದಸ್ಯತ್ವ ರದ್ದಾಗುತ್ತಾ? ರಾಜಭವನದ ಮೌನಕ್ಕೆ ಮೂಡಿದ ಅನುಮಾನ

ತುಮಕೂರು ವಿಶ್ವವಿದ್ಯಾಲಯದ ರಾಜ್ಯಪಾಲರ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯ ಬಸವರಾಜ ಕನ್ನಾಳೆ ಬಂಧನದ ಬೆನ್ನಲ್ಲೇ, ತನಿಖಾ ಸಂಸ್ಥೆಗಳು ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ವಿವಿಯ ಪ್ರಭಾರ ಕುಲಪತಿ ಪ್ರೊ. ನಾಗಭೂಷಣ ಅವರಿಂದ...