Homeಕರ್ನಾಟಕಸೌಜನ್ಯ ಪ್ರಕರಣದ ನೈಜ ಅಪರಾಧಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ: ಮಹೇಶ್‌ ಶೆಟ್ಟಿ ತಿಮರೋಡಿ ಆಕ್ರೋಶ

ಸೌಜನ್ಯ ಪ್ರಕರಣದ ನೈಜ ಅಪರಾಧಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ: ಮಹೇಶ್‌ ಶೆಟ್ಟಿ ತಿಮರೋಡಿ ಆಕ್ರೋಶ

- Advertisement -
- Advertisement -

ಸೌಜನ್ಯ ಪ್ರಕರಣದ ನೈಜ ಅಪರಾಧಿಗಳು ಮತ್ತು ಅವರ ರಕ್ಷಕರು ಧರ್ಮಸ್ಥಳದಲ್ಲಿ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ, ಶಿಕ್ಷೆ ವಿಧಿಸಬೇಕು ಎಂದು ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ ಆಗ್ರಹಿಸಿದರು.

ಸೌಜನ್ಯ ಪ್ರಕರಣವನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ದಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಹೋರಾಟ ಸಮಿತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಮ್ಮ ತೆರಿಗೆ ಹಣದಲ್ಲಿ ಸಂಬಳ ಪಡೆದು, ಸೌಜನ್ಯಳ ಅತ್ಯಾಚಾರ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿರುವ ಸರ್ಕಾರ ಮತ್ತು ಪೊಲೀಸ್‌ ಅಧಿಕಾರಿಗಳಿಗೆ ಧಿಕ್ಕಾರ. ಸೌಜನ್ಯ ಪ್ರಕರಣವನ್ನು ಮುಚ್ಚಿಹಾಕಿ, ಅಪರಾಧಿಗಳನ್ನು ರಕ್ಷಿಸುತ್ತಿರುವವರಿಗೆ ನಮ್ಮ ಶಾಪ ತಟ್ಟುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯವು ತನಿಖಾಧಿಕಾರಿಗಳು ಆರೋಪಿಯೆಂದು ಬಂಧಿಸಿದ್ದ ಅಮಾಯಕನನ್ನು ನಿರಪರಾಧಿಯೆಂದು ಘೋಷಿಸಿ, ಖುಲಾಸೆಗೊಳಿಸಿದೆ. ಅಲ್ಲದೆ, ‘ಪ್ರಕರಣದ ತನಿಖೆಯು ಲೋಪಗಳಿಂದ ಕೂಡಿದ್ದು, ಮರು ತನಿಖೆಗೆ ಅರ್ಹವಾಗಿದೆ’ ಎಂದೂ ಹೇಳಿದೆ. ನ್ಯಾಯಾಲಯವೇ ಹೇಳುವಂತೆ ಪ್ರಕರಣವನ್ನು ಸಿಬಿಐ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸಿಲ್ಲ. ಹೀಗಾಗಿ, ಪ್ರಕರಣವನ್ನು ನ್ಯಾಯಾಂಗದ ನೇರ ತಪಾಸಣೆಯ ಅಡಿಯಲ್ಲಿ ಎಸ್‌ಐಟಿ ಮೂಲಕ ಮರುತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ನಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಎಂತಹ ಸಮಾಜವನ್ನು ಬಿಟ್ಟು ಹೋಗುತ್ತಿದ್ದೇವೆ ಎಂದು ಯೋಚಿಸದರೆ ದುಗುಡವಾಗುತ್ತದೆ. ಜನತೆ ಈ ರಾಜ್ಯ ಸರ್ಕಾರದ ಬಗ್ಗೆ ಅಪಾರವಾದ ಭರವಸೆ ಇಟ್ಟುಕೊಂಡಿದ್ದಾರೆ. ಅದನ್ನು ಉಳಿಸಿಕೊಳ್ಳುವಂತೆ ಸೌಜನ್ಯ ಪ್ರಕರಣದ ಅಪರಾಧಿಗಳನ್ನು ಹಿಡಿದು ಶಿಕ್ಷಿಸಬೇಕು. ಮನುಷ್ಯತ್ವದ ನೆಲೆಯಲ್ಲಿ ಸರ್ಕಾರ ಆಲೋಚಿಸಬೇಕು ಎಂದು ಹಿರಿಯ ಚಿಂತಕರಾದ ಎಸ್.ಜಿ ಸಿದ್ಧರಾಮಯ್ಯ ಒತ್ತಾಯಿಸಿದರು.

ಮಹಿಳೆಯರ ಮೇಲೆ ನಡೆಯುತ್ತಿರುವ ನಿರಂತರವಾದ, ಅಮಾನುಷವಾದ ಹಿಂಸೆ, ದೌರ್ಜನ್ಯ ಗಳ ಈ ಕಾಲದಲ್ಲಿ ಸರ್ಕಾರಗಳು ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳುವ ಮೂಲಕ ಮಹಿಳೆಯರಲ್ಲಿ ಬದುಕಿನ ಬಗ್ಗೆ, ಈ ರಾಜ್ಯದ ಸರ್ಕಾರದ ಬಗ್ಗೆ ಭರವಸೆ ಮೂಡಿಸಬೇಕು. ಇಲ್ಲವಾದರೆ ಇಡೀ ಮಹಿಳಾ ಸಮೂಹ ಭರವಸೆಯೇ ಇಲ್ಲದೆ ತತ್ತರಿಸಿಹೋಗುತ್ತದೆ ಎಂದು ಎನ್.ಎಫ್.ಐ.ಡಬ್ಲ್ಯು ಸಂಘಟನೆಯ ಎ. ಜ್ಯೋತಿ ಅಭಿಪ್ರಾಯಪಟ್ಟರು.

ಪ್ರತಿಭಟನೆಯಲ್ಲಿ ಮಾತನಾಡಿದ ಸಿಎಐಟಿಯು ಮುಖಂಡ ಪ್ರಕಾಶ್, “ನಮ್ಮ ಅಳತೆಗೂ ಮೀರಿದ ಸಮಸ್ಯೆಗಳು ಸೌಜನ್ಯ ಪ್ರಕರಣವನ್ನು ಸುತ್ತುವರಿದಿವೆ. ಸರ್ಕಾರದ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯಿಂದ ಧರ್ಮಸ್ಥಳದ ಆದಾಯ ಹೆಚ್ಚಿದೆ. ಅದನ್ನು ಸಂಭ್ರಮಿಸಿ ಧರ್ಮಸ್ಥಳದ ಹೆಗ್ಗಡೆ ಮುಖ್ಯ ಮಂತ್ರಿಗಳಿಗೆ ದೀರ್ಘ ಪತ್ರ ಬರೆದಿದ್ದಾರೆ. ಬಿಜೆಪಿಯು ಅವರನ್ನು ರಾಜ್ಯ ಸಭೆ ಸದಸ್ಯ ಮಾಡಿದೆ.  ಇದರ ಜೊತೆಗೆ ಧರ್ಮಸ್ಥಳದ ಮೈಕ್ರೊ ಫೈನಾನ್ಸ್ ಯೋಜನೆ ರಾಜ್ಯಾದ್ಯಂತ ಮಹಿಳೆಯರನ್ನು ಸಾಲದ ಬಲೆಯೊಳಗೆ ಸಿಲುಕಿಸಿದೆ. ಇಂತಹ ರಾಜಕೀಯ ಪರಿಸ್ಥಿತಿಯಲ್ಲಿ ನಾವು ಸೌಜನ್ಯಳ ದಾರುಣ ಸಾವಿಗೆ ಹೊಣೆಗಾರರನ್ನು ಹುಡುಕುತ್ತಿದ್ದೇವೆ” ಎಂದರು.

ಪ್ರತಿಭಟನಾಕಾರರ ಹಕ್ಕೊತ್ತಾಯಗಳು

  • ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕು. ಎಸ್‌ಐಟಿ ರಚಿಸಿ, ನಿಷ್ಪಕ್ಷಪಾತ ತನಿಖೆ ನಡೆಸಬೇಕು.
  • ಶಂಕಿತ ಆರೋಪಿಗಳಾದ ಉದಯ್ ಜೈನ್, ಮಲಿಕ್ ಜೈನ್ ಹಾಗೂ ಧೀರಜ್‌ ಜೈನ್‌ನನ್ನು ಬಂಧಿಸಿ, ವಿಚಾರಣೆ ನಡೆಸಬೇಕು.
  • ಸೌಜನ್ಯಳ ಮೃತದೇಹವನ್ನು ಪರೀಕ್ಷಿಸಿ, ಸರಿಯಾದ ಮರಣೋತ್ತರ ಪರೀಕ್ಷಾ ವರದಿ ನೀಡದ ಬೆಳ್ತಂಗಡಿ ವೈದ್ಯಕೀಯ ಆಸ್ಪತ್ರೆಯ ಸ್ತ್ರೀರೋಗತಜ್ಞ ಡಾ ರಶ್ಮಿ ಎನ್, ಡಾ. ಆಡಂ ವಿರುದ್ಧ ಕ್ರಮ ಕೈಗೊಳ್ಳಬೇಕು.
    ಮೊದಲಿಗೆ ಪ್ರಕರಣದ ತನಿಖೆ ನಡೆಸಿದ್ದ ತನಿಖಾಧಿಕಾರಿ ಯೋಗೀಶ್ ಕುಮಾರ್, ಅಂದಿನ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.
  • ಸಂತೋಷ್ ರಾವ್ ಅವರನ್ನು ಪರೀಕ್ಷಿಸಿದ ಫೋರೆನ್ಸಿಕ್ ಮೆಡಿಸಿನ್ ಪ್ರಾಧ್ಯಾಪಕ ಡಾ. ಮಹಾಬಲ ಶೆಟ್ಟಿ ಅವರನ್ನೂ ತನಿಖೆಗೆ ಒಳಪಡಿಸಿ, ಕ್ರಮ ಕೈಗೊಳ್ಳಬೇಕು.
  • ನಿರಪರಾಧಿಯಾಗಿದ್ದರೂ ಪೊಲೀಸ್ ದೌರ್ಜನ್ಯಕ್ಕೆ ತುತ್ತಾದ ಸಂತೋಷ್ ರಾವ್‌ ಮತ್ತು ಕುಟುಂಬಕ್ಕೆ ಪರಿಹಾರ ನೀಡಬೇಕು.
  • ಕಲಬುರಗಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿರುವ ಕಾಮುಕರನ್ನು ಬಂಧಿಸಿಬೇಕು.
  • ರಾಜಸ್ಥಾನದಲ್ಲಿ ಹೆಣ್ಣು ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಕಾಮುಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಅವಹೇಳನಕಾರಿ ಪೋಸ್ಟ್: ಬಿಜೆಪಿ ನಾಯಕಿ ಶಕುಂತಲಾ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬಿಜೆಪಿಗೆ ಮತ ಹಾಕುವಂತೆ...

0
ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹಿರಿಯ ರಾಜಕಾರಣಿ ಅಧೀರ್ ರಂಜನ್ ಚೌಧರಿ ಅವರಿ ಬಿಜೆಪಿ ಪರ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ " ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷಕ್ಕೆ ಮತ...