Homeಮುಖಪುಟಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಅಂದು ಆರ್‌ಎಸ್‌ಎಸ್‌ ಹುಟ್ಟಿರಲಿಲ್ಲ: ಬಿ.ಎಲ್.ಸಂತೋಷ್

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಅಂದು ಆರ್‌ಎಸ್‌ಎಸ್‌ ಹುಟ್ಟಿರಲಿಲ್ಲ: ಬಿ.ಎಲ್.ಸಂತೋಷ್

ಬ್ರಿಟಿಷರಲ್ಲಿ ಕ್ಷಮೆಯಾಚಿಸುವಂತೆ ಗಾಂಧೀಜಿಯವರೇ ಸಾವರ್ಕರ್‌ ಅವರಿಗೆ ಸಲಹೆ ನೀಡಿದ್ದರು ಎಂದು ರಾಜನಾಥ್‌ ಸಿಂಗ್‌ ಅವರು ಕಳೆದ ಅಕ್ಟೋಬರ್‌‌ನಲ್ಲಿ ಸುಳ್ಳು ಹೇಳಿದ್ದರು. ಈಗ ಬಿ.ಎಲ್‌.ಸಂತೋಷ್‌ ಅವರ ಸರದಿ...

- Advertisement -
- Advertisement -

ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಆರ್‌ಎಸ್‌ಎಸ್‌ ಹುಟ್ಟಿರಲಿಲ್ಲ. ಹೀಗಾಗಿ ನಾವು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿರಲಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ ಹೇಳಿರುವ ವಿಡಿಯೊ ವೈರಲ್ ಆಗಿದೆ.

ಮಂಗಳೂರಿನ ರಾಜ್ಯ ಪ್ರಕೋಷ್ಠಗಳ ಚಿಂತನಾ ವರ್ಗದಲ್ಲಿ ಮಾತನಾಡಿರುವ ಅವರ ಸರಣಿ ವಿಡಿಯೊಗಳನ್ನು ಬಿಜೆಪಿಯ ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಳ್ಳಲಾಗುತ್ತಿದ್ದು, “ನಮ್ಮ ರಾಜ್ಯದ ಅನೇಕ ರಾಜಕಾರಣಿಗಳು, ನಮ್ಮ ರಾಜ್ಯದ ಸಿದ್ದರಾಮಯ್ಯನವರು, ಸ್ವಾತಂತ್ರ್ಯಕ್ಕಾಗಿ ಏನ್ ಬಲಿದಾನ ಮಾಡಿದ್ದಾರಾ ಎಂದು ಕೇಳುತ್ತಿದ್ದಾರೆ. ಆದರೆ ನಾವು ಹುಟ್ಟಿರಲಿಲ್ಲ. ಹುಟ್ಟಿದ್ದರೆ ನಾವು ಬಲಿದಾನ ಮಾಡುತ್ತಿದ್ದೆವು. ನಾವು ಆ ಸಂದರ್ಭದಲ್ಲಿ ಹುಟ್ಟಿರಲಿಲ್ಲ ಎಂಬುದು ಭಗವಂತನ ನಿಯಮ” ಎಂದು ಹೇಳಿದ್ದಾರೆ.

“ಹುಟ್ಟಿದ್ದವರ ಹೆಸರಲ್ಲಿ ಕಾಂಗ್ರೆಸ್‌ನಲ್ಲಿ ಎಷ್ಟು ಮಂದಿ ಅಂಗಡಿ ಇಟ್ಟುಕೊಂಡಿದ್ದಾರೆಂಬುದು ಇಲ್ಲಿರುವವರಿಗೆ ಚೆನ್ನಾಗಿ ಗೊತ್ತು. ಗಾಂಧೀಜಿ ಹೆಸರಲ್ಲಿ ಊರೂರಲ್ಲಿ ಅಂಗಡಿ ಇಟ್ಟುಕೊಂಡಿದ್ದಾರೆ. ಗಾಂಧೀಜಿಗೆ ಹೆಸರಲ್ಲಿ ಪಾಪವನ್ನು ಯಾರಾದರೂ ಮಾಡಿದ್ದರೆ ಅದು ಕಾಂಗ್ರೆಸ್‌ನವರೇ. ಇದು ಸಿದ್ದರಾಮಯ್ಯನವರಿಗೆ ಯಾವತ್ತೂ ಅರ್ಥವಾಗುವುದಿಲ್ಲ. ನಾವು ಹುಟ್ಟಿರಲಿಲ್ಲ. ಹಾಗಾಗಿ ಬಲಿದಾನ ಮಾಡಲಿಲ್ಲ. ಬಲಿದಾನ ಮಾಡುವ ವಿಚಾರ ಬಂದಾಗ, ನಮ್ಮಷ್ಟು ಬಲಿದಾನ ಇನ್ನಾರೂ ಮಾಡಲಿಲ್ಲ” ಎಂದಿದ್ದಾರೆ.

“ತುರ್ತು ಪರಿಸ್ಥಿತಿ ಕಾಲದಲ್ಲಿ ಜೈಲಿಗೆ ಹೋದವರಲ್ಲಿ ಹೆಚ್ಚು ಜನ ನಮ್ಮವರು. ಹೆದರಿಕೊಂಡು ಕರ್ನಾಟಕದ ರಾಜಕಾರಣಿಗಳು ಊರೂರು ಅಲೆದಾಡುತ್ತಿದ್ದಾಗ ಧೈರ್ಯಕೊಟ್ಟು ರಾಜಕೀಯ ಕ್ಷೇತ್ರದಲ್ಲಿ ಉಳಿಸಿದ್ದು ಇದೇ ಬಿಜೆಪಿಯವರು, ಇದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು. ಅದನ್ನು ಖಾಸಗಿಯಾಗಿ ಅವರೂ ಒಪ್ಪಿಕೊಳ್ಳುತ್ತಾರೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ: 1947 ರಲ್ಲಿ ದೇಶಕ್ಕೆ ಸಿಕ್ಕಿದು ಸ್ವತಂತ್ರವಲ್ಲ ಭಿಕ್ಷೆ ಎಂಬ ಕಂಗನಾ ಹೇಳಿಕೆ: ಇದು ಹುಚ್ಚುತನವೋ..ದೇಶದ್ರೋಹವೋ- ವರುಣ್ ಗಾಂಧಿ ಪ್ರಶ್ನೆ

ಬಿಜೆಪಿ ಪೋಸ್ಟ್ ಮಾಡಿರುವ ಮತ್ತೊಂದು ವಿಡಿಯೊದಲ್ಲಿ, “ಬೇರೆ ಬೇರೆ ಹೆಸರಲ್ಲಿ ರಾಜಕಾರಣ ಮಾಡಿದ್ದಾರೆ. ಸೋಶಿಯಲಿಸಂ, ಸೆಕ್ಯುಲರಿಸಂ ಹೆಸರಲ್ಲಿ ರಾಜಕಾರಣ ಮಾಡಿದ್ದಾರೆ. ಸೆಕ್ಯುಲರ್‌ ಎಂದು ಜೆಡಿಎಸ್‌ನವರು ಇಟ್ಟುಕೊಂಡಿದ್ದಾರೆ. ಏನ್ ಸೆಕ್ಯುಲರ್‌ ಇದೆ ಎಂದು ಈವತ್ತಿನವರೆಗೂ ನಮಗೆ ಗೊತ್ತಿಲ್ಲ. ದೇವಸ್ಥಾನಕ್ಕೆ ಹೋಗೋದೇ ಸೆಕ್ಯುಲರಿಸಂ, ಯಾಗ ಮಾಡೋದೆ ಸೆಕ್ಯುಲರಿಸಂ ಎಂದು ತಿಳಿದರೆ ಅದಕ್ಕಿಂತ ದೊಡ್ಡ ಭ್ರಮೆ ಇನ್ಯಾವುದೂ ಇಲ್ಲ” ಎಂದು ಪ್ರತಿಪಾದಿಸಿದ್ದಾರೆ.

“ಸೋಶಿಯಲಿಸಂ, ಸೆಕ್ಯುಲರಿಸಂ ಹೆಸರಲ್ಲಿ ದೇಶದ ರಾಜಕೀಯ ರಂಗದಲ್ಲಿ ಪ್ರವರ್ಧಮಾನಕ್ಕೆ ಬಂದ ಅನೇಕ ರಾಜಕಾರಣಿಗಳ ಹೆಸರುಗಳು ಕೇಳಿಬರುತ್ತವೆ. ಮೊದಲು ಜಯಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ಸಮಗ್ರ ಕ್ರಾಂತಿ ಎಂದು ಆರಂಭಿಸಿದರು. ಅದಾದ ಮೇಲೆ ಜಾತಿವಾದಿಗಳಾದರು. ಈಗ ಕುಟುಂಬವಾದಿಗಳಾಗಿದ್ದಾರೆ. ಜಾತಿವಾದಿಗಳಾದರೂ ಸಹಿಸಿಕೊಳ್ಳಬಹುದು. ಯಾಕೆಂದರೆ ಕೋಟ್ಯಂತರ ಜನರಿಗೆ ಅವರು ಸಹಾಯ ಮಾಡುತ್ತಾರೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಆರ್‌ಎಸ್‌ಎಸ್‌ ಕುರಿತಂತೆ ಬಿ.ಎಲ್.ಸಂತೋಷ್‌ ಹೇಳಿರುವ ಮಾತುಗಳು ಇತಿಹಾಸವನ್ನು ತಿರುಚಲು ಯತ್ನಿಸಿವೆ ಎಂಬ ಆರೋಪಗಳು ಬಂದಿವೆ. 1925ರಲ್ಲಿ ಆರ್‌ಎಸ್‌ಎಸ್‌ ಸ್ಥಾಪನೆಯಾಗಿದೆ ಎಂದು ಇತಿಹಾಸ ಹೇಳುತ್ತದೆ. ಸಂಘ ಪರಿವಾರದ ಪ್ರಮುಖ ನಾಯಕರಲ್ಲಿ ಒಬ್ಬರಾದ ವಿ.ಡಿ.ಸಾವರ್ಕರ್‌ ಬ್ರಿಟಿಷರಲ್ಲಿ ಕ್ಷಮೆಯಾಚಿಸಿದ್ದರು ಎಂಬ ಕುರಿತು ಸಾಕಷ್ಟು ಚರ್ಚೆಗಳಾಗಿವೆ. “ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌‌ಎಸ್‌ಎಸ್ ಭಾಗಹಿಸಿರಲಿಲ್ಲ” ಎಂಬುದನ್ನು ಬಿ.ಎಲ್‌.ಸಂತೋಷ್ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂಬುದು ಅನೇಕರ ಅಭಿಪ್ರಾಯ.

ಬಿ.ಎಲ್‌.ಸಂತೋಷ್ ವಿಡಿಯೊವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಹಿರಿಯ ಪತ್ರಕರ್ತರಾದ ದಿನೇಶ್ ಅಮೀನ್‌ಮಟ್ಟು ಅವರು, “ಸರಿಯಾಗಿ ಕೇಳಿಸಿಕೊಳ್ಳಿ. ನಮ್ಮ‌‌ ಸಂತೋಷಣ್ಣನವರು ಅಪರೂಪಕ್ಕೆ ಸತ್ಯ‌ ಮಾತನಾಡಿದ್ದಾರೆ. ಕೇಳಿ: `ಆರ್ ಎಸ್ ಎಸ್ ನವರು ಎಂದಾದರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಾರಾ ಎಂದು‌ ನಮ್ಮ ಸಿದ್ದರಾಮಯ್ಯನವರು ಆಗಾಗ ಕೇಳ್ತಿರ್ತಾರೆ. ಆ ಕಾಲದಲ್ಲಿ ನಾವು ಹುಟ್ಟಿರ್ಲಿಲ್ಲ, ಅದಕ್ಕೆ‌‌ ಭಾಗವಹಿಸಿಲ್ಲ.‌ಅದು ಭಗವಂತನ ಮಹಿಮೆ ನಾವೇನು‌ ಮಾಡ್ಲಿಕ್ಕಾಗುತ್ತೆ….’ ಅರೆರೆ ಇವರಿಗೇನಾಗಿದೆ? ಆರ್‌‌ಎಸ್‌ಎಸ್ ಹುಟ್ಟಿದ್ದು 1925ರಲ್ಲಿ. ಅದನ್ನು ಸ್ಥಾಪಿಸಿದ್ದ ಕೇಶವ ಬಲಿರಾಮ್ ಹೆಗಡೆ ಹುಟ್ಟಿದ್ದು 1889 ಏಪ್ರಿಲ್ ಒಂದರಂದು. ಅವರ ಗುರು ಮೂಂಜೆ ಹುಟ್ಟಿದ್ದು1872 ಡಿಸೆಂಬರ್ 12ರಂದು. ಸಂತೋಷಜ್ಜನವರು ಕಂಗನಾ ಸಿಂಡ್ರೋಮ್ ನಲ್ಲಿದ್ದಾರಾ?” ಎಂದು ಪ್ರಶ್ನಿಸಿದ್ದಾರೆ. ದಿನೇಶ್ ಮಟ್ಟು ಅವರ ಪೋಸ್ಟ್‌ಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬಿಜೆಪಿ ನಾಯಕರು ಸುಳ್ಳುಗಳನ್ನು ತೇಲಿಬಿಡುವುದು ಹೆಚ್ಚಾಗುತ್ತಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕಳೆದ ಅಕ್ಟೋಬರ್‌ನಲ್ಲಿ, “ವಿ.ಡಿ.ಸಾವರ್ಕರ್‌‌ ಅವರು ಅಂಡಮಾನ್‌ ಜೈಲಿನಿಂದ ಹೊರಬರಲು ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆಯುವಂತೆ ಮಹಾತ್ಮ ಗಾಂಧೀಜಿಯವರು ಸಲಹೆ ನೀಡಿದ್ದರು. ಆದರೆ ಸಾವರ್ಕರ್‌ ಅವರನ್ನು ವಿರೋಧಿಸುವ ಸಿದ್ಧಾಂತಿಗಳು ಸಾವರ್ಕರ್‌ ಅವರು ಸ್ವಾತಂತ್ರ್ಯ ಹೋರಾಟಕ್ಕಾಗಿ ನೀಡಿದ ಕೊಡುಗೆಯನ್ನು ನಿಂದಿಸಿದ್ದು, ಅದನ್ನು ಇನ್ನು ಮುಂದೆ ಸಹಿಸುವುದಿಲ್ಲ” ಎಂದಿದ್ದರು. ಇವರ ಹೇಳಿಕೆಯನ್ನು ಇತಿಹಾಸಕಾರರು ಅಲ್ಲಗಳೆದಿದ್ದರು.

ಬಿಜೆಪಿಯ ಕಟ್ಟಾ ಬೆಂಬಲಿಗರಲ್ಲಿ ಒಬ್ಬರಾದ ನಟಿ ಕಂಗನಾ ರಣಾವತ್ ಅವರು ಟೈಮ್ಸ್ ನೌ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, “1947ರಲ್ಲಿ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ, ಅದು ಭಿಕ್ಷೆ. ದೇಶಕ್ಕೆ ನಿಜವಾದ ಸ್ವಾತಂತ್ರ್ಯ 2014ರಲ್ಲಿ ಬಂದಿದೆ” ಎಂದು ಹೇಳಿದ್ದರು. ಅಲ್ಲದೆ, “ಯಾರಾದರೂ ನನ್ನ ಹೇಳಿಕೆ ತಪ್ಪೆಂದು ಸಾಬೀತುಪಡಿಸಿದರೆ ಪದ್ಮಶ್ರೀ ವಾಪಸ್ ಮಾಡುತ್ತೇನೆ” ಎಂದೂ ಉಡಾಫೆಯಾಗಿ ಪ್ರತಿಕ್ರಿಯಿಸಿದ್ದರು.


ಇದನ್ನೂ ಓದಿರಿ: ಸ್ವಾತಂತ್ರ್ಯ ಹೋರಾಟಗಾರರಿಗೆ ನಟಿ ಕಂಗನಾ ಅವಮಾನ: ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...